ಮಹಾಮಹಿಮ ನಾರಸಿಂಹ

ಮಹಾಮಹಿಮ ನಾರಸಿಂಹ

ಕವನ

ಶುಕ್ಲಪಕ್ಷದ ವೈಶಾಖ ಚತುರ್ದಶಿ

ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/

ಕೃಪೆ ದೋರು ಮಹಾಮಹಿಮ ನಾರಸಿಂಹ

ಜಗದ ಜೀವರ ಉಸಿರ ರಕ್ಷಿಸು ಘನಮಹಿಮ//

 

ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ

ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/

ಹಿರಣ್ಯಕಶ್ಯಪುವಿಗೆ ಮೋಕ್ಷದಾರಿ ತೋರಿದೆ

ಮುದ್ದು ಬಾಲಕ ಪ್ರಹ್ಲಾದನ ರಕ್ಷಿಸಿದೆ//

 

ಅಹಂಕಾರ ಮದಗಳ ಕುಟ್ಟಿ ಪುಡಿ ಗೈದೆ

ನಾನೇ ಎಂಬ ಅಹಮನ್ನು ನಾಶ ಮಾಡಿದೆ/

ತಾಯಿ ಕಯಾದು ದೇವಿಗೆ ಅಭಯ ನೀಡಿದೆ

ಲೋಕೋತ್ತರ ಪುಣ್ಯ ಪಾಪಗಳ ಎಣಿಸಿ ಪೊರೆದೆ//

 

ಮಹಾಬಲ ದಿವ್ಯರೂಪ ಕ್ರೋಧದಿ ರೌದ್ರತಾಳಿದೆ

ವಜ್ರನಖಗಳ ಪುರುಷೋತ್ತಮ ಸ್ವಾಮಿ ಸುರೇಶ್ವರ ಎನಿಸಿದೆ/

ಸಜ್ಜನ ಬಂಧು ಮಿತ್ರ ದುರಿತ ನಿವಾರಣ

ಉಗ್ರನರಸಿಂಹ ಅರಿಷಡ್ವರ್ಗ ನಾಶ ಪೊರೆ ಕರುಣ//

 

ಸಿಹಿ ಹಣ್ಣು ಕೇಸರಿ ಹಾಲ ನೈವೇದ್ಯ ನಿನಗೆ

ಕೈಮುಗಿದು ಬೇಡುವುದ ಮನುಜಕುಲ ಒಂದಾಗಿ/

ಮಾತೆ ಲಕ್ಷ್ಮಿಯ ಅಭಯವಿರಲೆಮಗೆ

ಕೃಪೆದೋರು ಕರುಣಾಳು ಭಕ್ತಬಂಧು ನಮಗೆ//

 

(ನರಸಿಂಹ ಜಯಂತಿಯ (21-05-2024) ದಿನ ವಿಶೇಷ)

-ರತ್ನಾ ಕೆ.ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್