ಮಾನವೀಯತೆಯ ಹಿಂದೆ…

ಮಾನವೀಯತೆಯ ಹಿಂದೆ…

ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಅವರು ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು ಹಾಗೂ ಅವರು ಒಂದು ಸಣ್ಣ ಕೈಚೀಲ ಹಿಡಿದು ಕೊಂಡಿದ್ದರು. ಅವರನ್ನು ಗಮನಿಸಿದರೆ, ದೂರದಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವ ಹಾಗನಿಸಿತು. ಅವರ ಕೈಯಲ್ಲಿ ಹಿಡಿದಿದ್ದ ಒಂದು ಚೂರು ಕಾಗದ ನೋಡುತ್ತಾ, *"ಇದು ಆನಂದ್ ಅವರ ಮನೇನಾ, ಯೋಗಾನಂದ ರಸ್ತೇನಾ"* ಅಂತ ಕೇಳಿದರು. 

"ಹೌದು ನಾನೇ ಆನಂದ್, ಇದೇ ನೀವು ಹುಡುಕುತ್ತಿರುವ ವಿಳಾಸ", ತಾವು ಯಾರು ಎಂದು ಬಡಬಡಿಸಿದೆ. ಅವರ ಕೈಗಳು ನಡುಗುತ್ತಾ ಇದ್ದವು, ತುಟಿ ಒಣಗಿತ್ತು, ನಾಲಿಗೆಯಿಂದ ತುಟಿ ಸವರುತ್ತಾ, ಅವರು ಒಂದು ಪತ್ರವನ್ನು ನನಗೆ ಕೊಡುತ್ತಾ ಹೀಗೆಂದರು:

"ನಾನು ನಿಮ್ಮ ತಂದೆಯ ಸ್ನೇಹಿತ. ನಿಮ್ಮ ಹಳ್ಳಿಯಿಂದ ಬರುತ್ತಿದ್ದೇನೆ. ನಿಮ್ಮ ತಂದೆಯವರು ಈ ಪತ್ರವನ್ನು ನಿಮಗೆ ತಲುಪಿಸಿ, ನನ್ನ ಮಗ ನಿಮಗೆ ಸಹಾಯ ಮಾಡುತ್ತಾನೆ" ಎಂದು ತಿಳಿಸಿದರು. 

*ನಾನು ಆಶ್ಚರ್ಯದಿಂದ "ತಂದೆಯವರ"* ಎಂದು ಕೇಳಿದೆ. ನಾನು ಪತ್ರವನ್ನು ಓದಿದೆ. " ಪ್ರೀತಿಯ ಆನಂದ,  ನಿನಗೆ ಆಶೀರ್ವಾದಗಳು. ಈ ಪತ್ರವನ್ನು ನಿನಗೆ ಕೊಡುತ್ತಾ ಇರುವವರು ನನ್ನ ಸ್ನೇಹಿತರು. ಇವರ ಹೆಸರು ರಾಮಯ್ಯ. ಬಹಳ ಪ್ರಾಮಾಣಿಕ ವ್ಯಕ್ತಿ. ಕೆಲವು ದಿನಗಳ ಹಿಂದೆ ಇವರ ಒಬ್ಬನೇ ಮಗ ರಸ್ತೆ ಅಪಘಾತದಲ್ಲಿ ಸತ್ತುಹೋದ. ಇವರು ಅಪಘಾತಕ್ಕೆ ಸಿಗುವ ಪರಿಹಾರವನ್ನು ಪಡೆಯಲು ಒಪ್ಪಿರಲಿಲ್ಲ. ನಾನೇ ಅವರನ್ನು ಒತ್ತಾಯಿಸಿ ಪರಿಹಾರ ಪಡೆಯಲು ಒಪ್ಪಿಸಿದೆ. ಪರಿಹಾರದ ಹಣ ಅವರ ಮತ್ತು ಪತ್ನಿಯ ಜೀವನಕ್ಕೆ ಆಧಾರವಾಗುತ್ತೆ. ಅವರಿಗೆ ಬೇರೆ ಯಾವ ಆದಾಯವೂ ಜೀವನ ನಡೆಸಲು ಸಾಕಾಗುವದಿಲ್ಲ. ಅಪಘಾತಕ್ಕೆ ಸಂಬಂಧಪಟ್ಟ ಎಲ್ಲಾ ಕಾಗದ ಪತ್ರಗಳನ್ನು ಕಳಿಸಿದ್ದೇನೆ. ಅವರ ಮಗ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯ ಕಚೇರಿ ಹೈದರಾಬಾದ್ ನಲ್ಲಿದೆ ಮತ್ತು ಇವರು ಹೈದರಾಬಾದಿಗೆ ಎಂದೂ ಬಂದವರಲ್ಲ. ಅವರಿಗೆ ನೀನು ಸಹಾಯ ಮಾಡುವೆ ಎಂದು ನಂಬಿರುತ್ತೇನೆ. 

ನಿನ್ನ ಆರೋಗ್ಯವನ್ನು ನೋಡಿಕೋ. ಸಮಯ ಸಿಕ್ಕಾಗ ಬಂದು ನಮ್ಮನ್ನು ಭೇಟಿ ಮಾಡು. ಇಂತಿ, ನಿನ್ನ ಪ್ರೀತಿಯ ತಂದೆ".

ರಾಮಯ್ಯನವರು ನನ್ನನ್ನೇ ನೋಡುತ್ತಾ ಇದ್ದರು. ಒಂದು ಕ್ಷಣ ಯೋಚಿಸಿದ ಮೇಲೆ, ಅವರನ್ನು ಒಳಗೆ ಕರೆದೆ. ಕುಡಿಯಲು ನೀರು ಕೊಟ್ಟು, ಏನಾದ್ರೂ ತಿಂದಿದ್ದೀರಾ ಎಂದು ಕೇಳಿದೆ. ಇಲ್ಲಾ ಎಂದರು. ನಾನೇ ದೋಸೆ ಮಾಡಿ, ಉಪ್ಪಿನಕಾಯಿ ಜೊತೆ ತಿನ್ನಲು ಕೊಟ್ಟೆ. ನಾನು ಒಳಗೆ ಹೋಗಿ ಕೆಲವರಿಗೆ ಫೋನ್ ಮಾಡಿ ಬಂದೆ. ಅಷ್ಟರಲ್ಲಿ ಅವರು ದೋಸೆ ತಿಂದು ಮುಗಿಸಿದ್ದರು.

ಅವರು ಕೆಲವು ಕಾಗದ ಪತ್ರಗಳನ್ನು ನನಗೆ ಕೊಡುತ್ತಾ, ಅವರ ಮಗ ಸತ್ತುಹೋದ ಬಗ್ಗೆ ತಿಳಿಸುತ್ತಾ  ಮಗನ ಫೋಟೋ ಒಂದು ಕೊಟ್ಟರು. 22 ವರ್ಷದ ಮುದ್ದಾದ ಹುಡುಗ. ನನ್ನ ಕಣ್ಣುಗಳು ತೇವವಾದವು. ಅವರು ಮುಂದುವರಿಸುತ್ತಾ ‘ನನ್ನ ಒಬ್ಬನೇ ಸಂತಾನ, ಮಹೇಶ ಅಂತ. ಚೆನ್ನಾಗಿ ಓದಿದ, ಒಳ್ಳೇ ಕೆಲಸ ಸಿಕ್ಕಿತು. ನಮ್ಮ ಜೀವನದ ಕೊನೆಯಲ್ಲಿ ನಮಗೆ ಆಸರೆಯಾಗುವ ಭರವಸೆ ಕೊಟ್ಟ. ಆದರೇ ರಸ್ತೆ ಅಪಘಾತದಲ್ಲಿ ಸತ್ತೋದ. ನಿಮ್ಮ ತಂದೆಯವರ ಒತ್ತಾಯದ ಮೇಲೆ ಪರಿಹಾರದ ಹಣ ಪಡೆಯಲು ಬಂದಿದ್ದೇನೆ. ನನಗೂ ವಯಸ್ಸಾಯಿತು, ನನ್ನ ಹೆಂಡತಿಗೆ ಆರೋಗ್ಯ ಸಮಸ್ಯೆ ಇದೆ.’ ಎಂದು ಹೇಳಿ ಮುಗಿಸಿದರು.

ಬೆಳಗ್ಗೆ ಎದ್ದು, ಹೋಟೆಲ್ ನಲ್ಲಿ ಟಿಫಿನ್ ಮಾಡಿ ಅವರನ್ನು ಮುಖ್ಯ ಆಫೀಸ್ ಬಳಿ ಕರೆದೊಯ್ದೆ. ಆಗ ಅವರು, "ನೀನು ನಿನ್ನ ಆಫೀಸ್ ಗೆ ಹೋಗಿ ಬಾರಪ್ಪ, ತುಂಬಾ thanks ಎಂದರು." ಇಲ್ಲಾ ನಾನು ಈ ದಿನ ರಜ ಹಾಕಿದ್ದೇನೆ. ನಿಮ್ಮ ಕೆಲಸ ಮುಗಿಯುವವರೆಗೂ ಜೊತೆ ಇರುತ್ತೇನೆ ಎಂದೆ.

ಸಂಜೆ ಅಷ್ಟೊತ್ತಿಗೆ ಅವರಿಗೆ ಪರಿಹಾರದ ಚೆಕ್ ಸಿಕ್ಕಿತು. ನನಗೆ ವಂದನೆ ತಿಳಿಸುತ್ತಾ, ಪತ್ನಿ ಒಬ್ಬಳೇ ಹಳ್ಳಿಯಲ್ಲಿ ಇದ್ದಾರೆ, ನಾನು ಈಗ ಹಳ್ಳಿಗೆ ವಾಪಸ್ಸು ಹೋಗುತ್ತೇನೆ ಎಂದರು. ಬನ್ನಿ ನಾನು ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದು ಆಟೋ ಹತ್ತಿದೆವು. ಬಸ್ಸಿನ ಟಿಕೆಟ್ ತೆಗೆದು ಕೊಟ್ಟೆ, ದಾರಿಯಲ್ಲಿ ತಿನ್ನಲು ಸ್ವಲ್ಪ ಹಣ್ಣುಗಳನ್ನು ತೆಗೆದು ಕೊಟ್ಟೆ. ಅವರು ಕಣ್ಣೀರು ಹಾಕುತ್ತಾ, "ಆನಂದ್ ನಿಮ್ಮಿಂದ ನನಗೆ ಬಹಳ ಉಪಕಾರ ಆಯಿತು. ಇದೆಲ್ಲವನ್ನೂ ನಾನು ನಾಳೆ ನಿನ್ನ ತಂದೆಗೆ ತಿಳಿಸಿ ಅವರಿಗೂ ಧನ್ಯವಾದ ಹೇಳುತ್ತೇನೆ" ಎಂದರು. 

ಆಗ ನಾನು ‘ಹಿರಿಯರೇ, ನಾನು ನಿಮ್ಮ ಸ್ನೇಹಿತರ ಮಗ ಆನಂದ ಅಲ್ಲ, ನನ್ನ ಹೆಸರು ಅರವಿಂದ. ನೀವು ತಪ್ಪು ವಿಳಾಸಕ್ಕೆ ಬಂದಿದ್ದಿರಿ. ನೀವು ಕೇಳಿದ ವಿಳಾಸ ಇನ್ನೂ ೨ ಕಿ.ಮೀ. ದೂರ ಇತ್ತು. ನೀವು ಅದಾಗಲೇ ಸುಸ್ತಾಗಿದ್ದಿರಿ, ಕತ್ತಲು ಆಗಿತ್ತು. ನಿಮ್ಮನ್ನು ಮತ್ತೆ ೨ ಕಿ.ಮೀ. ದೂರ ನಡೆಸಲು ನನಗೆ ಮನಸ್ಸಾಗಲಿಲ್ಲ. ನಾನೇ ಆನಂದ್ ಅಂತ ಹೇಳಿಬಿಟ್ಟೆ.’ ಎಂದು ತಿಳಿಸಿದೆ.

ನಂತರ ನಿಮ್ಮ ಮಗನ ಬಗ್ಗೆ ಹೇಳಿದಾಗ ನನ್ನ ಮನಸ್ಸಿಗೆ ಬಹಳ ಖೇದವಾಯಿತು. ನೀವು ಕಳೆದುಕೊಂಡ  ಮಗನನ್ನು ನೀವು ಮತ್ತೆ ಪಡೆಯಲು ಸಾಧ್ಯವಿಲ್ಲ. ಅದನ್ನು ಅರಿತು ನಿಮಗೆ ನನ್ನ ಕೈಲಾದ ಸಹಾಯ ಮಾಡಿದೆ. ಇದರಿಂದ ನನ್ನ ಮನಸ್ಸಿಗೂ ತೃಪ್ತಿ ಆಯಿತು.

ಅಷ್ಟರಲ್ಲಿ ಬಸ್ ಹೊರೆಟಿತು. ಅವರು ನನ್ನ ಕೈ ಹಿಡಿದು *"ವಂದನೆಗಳು ಮಗುವೇ, ದೇವರು ನಿನಗೆ ಒಳ್ಳೆಯದು ಮಾಡಲಿ"* ಎಂದರು.

ನನ್ನ ತಂದೆಯವರು ತೀರಿಹೋಗಿ 15 ವರ್ಷಗಳು ಆಗಿತ್ತು. ರಾಮಯ್ಯ ಅವರನ್ನು ನೋಡಿದಾಗ, ನನ್ನ ತಂದೆಯವರು ವಾಪಸ್ಸು ಬಂದಿದ್ದಾರೆ ಎನ್ನಿಸಿತು. ‘ತಂದೆ, ನೀವು ಈ ರೀತಿಯಲ್ಲಿ ಬಂದು, ನಾನು ಸಹಾಯ ಮಾಡುತ್ತೀನೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡಿದಿರಾ?’ ಎಂದು ಆಕಾಶ ನೋಡಿ ಒಮ್ಮೆ ಕೇಳಿದೆ.

‘ನಿಮ್ಮಂತಹ ಒಳ್ಳೆಯ ತಂದೆಗೆ ಮಗನಾಗಿ ಹುಟ್ಟಿದ ನಾನು ನನ್ನ ಕರ್ತವ್ಯವನ್ನು ಮಾಡಲು ಹೇಗೆ ಮರೆಯಲಿ, ತಂದೆ ನಿಮಗೆ ಸಂತೋಷ ಆಯಿತೇ’ ಎಂದು ಕೇಳುತ್ತಾ ಇರುವಾಗ ನನಗೆ ತಿಳಿಯದ ಹಾಗೇ ಕಣ್ಣಲ್ಲಿ ಕಣ್ಣೀರು ಸುರಿಯಿತು.

****

ಈ ಕಥೆ ನಾನು ಬರೆದುದಲ್ಲ. ಮೊನ್ನೆ ವಾಟ್ಸಾಪ್ ನಲ್ಲಿ ಫಾರ್ವರ್ಡ್ ಆಗಿ ಬಂದದ್ದು. ನೀವೂ ಈಗಾಗಲೇ ಓದಿರಲೂ ಬಹುದು. ಬರೆದ ವ್ಯಕ್ತಿ ಹೆಸರು ಅದರಲ್ಲಿ ಬರೆದಿಲ್ಲ. ಆದರೆ ಅವರ ಬರಹ ಮಾತ್ರ ಗ್ರೇಟ್. ಕಥೆ ಓದಿ ಮುಗಿಸುವಷ್ಟರಲ್ಲಿ ನನ್ನ ಕಣ್ಣಾಲಿಗಳು ತುಂಬಿ ಬಂದಿದ್ದವು. ನಿಜಕ್ಕೂ ಹೃದಯವನ್ನು ತಾಕುವ ಕಥೆ. ಮಾನವೀಯ ಸಂಬಂಧಗಳು ಮಾಯವಾಗುತ್ತಿರುವ ಈ ಕಾಲದಲ್ಲಿ ಈ ಕಥೆಯ ನಾಯಕ ಅರವಿಂದರಂಥಹ ಮನುಷ್ಯರ ಅಗತ್ಯ ಈ ಸಮಾಜಕ್ಕೆ ಬಹಳ ಇದೆ. ಈ ಸಮಾಜದಲ್ಲೂ ಆಗೊಮ್ಮೆ ಈಗೊಮ್ಮೆ ಮಾನವೀಯ ಮುಖಗಳ ದರ್ಶನವಾಗುತ್ತಲೇ ಇರುತ್ತದೆ. ಒಳ್ಳೆಯ ಮನಸ್ಸು ಹೊಂದಲು ಏನು ವೆಚ್ಚವಾಗುತ್ತದೆ? ಏನಿಲ್ಲ. ಎರಡು ಸವಿನುಡಿಗಳು ಮಾತ್ರ. ಅದಕ್ಕೂ ನಾವು ಜುಗ್ಗತನ ತೋರಿಸಿದರೆ ಹೇಗೆ? ನಮ್ಮ ಮಾನವೀಯ ಮುಖಗಳ ಅನಾವರಣವೂ ಆಗಲಿ.