ಮಾನವೀಯ ಮೌಲ್ಯ ಮತ್ತು ರಾಕ್ಷಸತ್ವದ ನಡುವೆ ನಮ್ಮ ಆಯ್ಕೆ…!

ಮಾನವೀಯ ಮೌಲ್ಯ ಮತ್ತು ರಾಕ್ಷಸತ್ವದ ನಡುವೆ ನಮ್ಮ ಆಯ್ಕೆ…!

ನಿಲ್ಲಿಸಿ  ನಿಮ್ಮ ಆಕ್ರಮಣವನ್ನು ಇಸ್ರೇಲಿಗರೇ, ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ ಪ್ಯಾಲಿಸ್ಟೈನ್ ಹೋರಾಟಗಾರರೇ… ಒಮ್ಮೆ ನೋಡಿ ಭಾರತದತ್ತ, ಭಾರತದ ಸ್ವಾತಂತ್ರ್ಯ ಹೋರಾಟದತ್ತ, ಭಾರತದ ಬುದ್ದ - ಗಾಂಧಿಯ  ಆತ್ಮದ ಚಿಂತನೆಗಳತ್ತ, ಕನಿಷ್ಠ ನಿಮ್ಮ ಎರಡೂ ರಾಷ್ಟ್ರಗಳ ಭವಿಷ್ಯವಾದರೂ ಉಳಿದೀತು, ಇಲ್ಲದಿದ್ದರೆ....

ಬೇಡ ಬೇಡವೆಂದರು ಮನಸ್ಸು ಇಸ್ರೇಲ್ - ಪ್ಯಾಲಿಸ್ಟೈನ್ ಯುದ್ಧದ ಬಗ್ಗೆಯೇ ಹರಿಯುತ್ತಿದೆ. ನಮ್ಮಿಂದ ಆ ದೇಶಗಳು ಸಾಕಷ್ಟು ದೂರದಲ್ಲಿದ್ದರು, ಅವರು ನಮಗೆ ನೇರ ಸಂಬಂಧಪಟ್ಟವರು ಆಗಿರದೇ ಇದ್ದರು ಆ ಬೆಂಕಿಯ ಜ್ವಾಲೆಗಳು ಸದ್ಯಕ್ಕೆ ಮನಸ್ಸನ್ನು ಸುಡುತ್ತಿದೆ. ಅದು ದೇಹ ಸುಡುವ ಮುನ್ನ ಜಗತ್ತಿನ ಸಾಮಾನ್ಯ ಜನ ಎಚ್ಚೆತ್ತುಕೊಳ್ಳಬಹುದೇ ಎಂಬ ಕಾತುರ ಕಾಡುತ್ತಿದೆ.....

ಕಾರಣ - ಸಮಸ್ಯೆ ಏನೇ ಇರಬಹುದು, ಆದರೆ ಈ ಕ್ಷಣದ ಬಲಿಷ್ಠ ಇಸ್ರೇಲ್ ಮುನ್ನುಗ್ಗುತ್ತಿರುವ ರೀತಿ ಅದರ ವಿಜಯದ ಸಂಕೇತ ಎಂದು ಕೆಲವರು  ಭಾವಿಸಿರಬಹುದು. ಆದರೆ ಅದರ ಜೊತೆಯಲ್ಲಿ ಅದರ ವಿನಾಶವೂ ಅಡಗಿರಬಹುದು. ಜಗತ್ತಿನ ಯುದ್ದ ಇತಿಹಾಸವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರೆ ಈ ವಿಷಯ ಸ್ವಲ್ಪ ಸ್ಪಷ್ಟವಾಗುತ್ತದೆ. ಇವತ್ತು ಇಸ್ರೇಲ್ ಹಮಾಸ್ ದಾಳಿಕೋರರನ್ನು ಸಂಪೂರ್ಣ ನಾಶ ಮಾಡಬಹುದು. ಆದರೆ ಮುಂದೊಂದು ದಿನ ಪ್ಯಾಲಿಸ್ಟೈನ್ ಜನತೆ ಮತ್ಯಾವುದೋ ಭಯಂಕರ ಅಸ್ತ್ರವನ್ನೋ, ವೈರಸ್ ಅನ್ನೋ ಅಥವಾ ಊಹೆಗೂ ನಿಲುಕದ ವಿನಾಶಕಾರಿ ಬಾಂಬನ್ನು ತಯಾರಿಸಿ ಅಥವಾ ಬೇರೆ ದೇಶದಿಂದ ಎರವಲು ಪಡೆದು ಇಡೀ ಇಸ್ರೇಲ್ ದೇಶವನ್ನು ನಾಶಪಡಿಸುವ ಸಾಧ್ಯತೆಯೂ ಇರುತ್ತದೆಯಲ್ಲವೇ?

ಅದಕ್ಕಾಗಿಯೇ ಹೇಳುತ್ತಿರುವುದು ಎರಡೂ ರಾಷ್ಟ್ರಗಳು ಒಂದು ಹೊಂದಾಣಿಕೆಯ ಸೂತ್ರ ಹಣೆದು ಅದಕ್ಕೆ ಬದ್ದರಾಗಿ ಬದುಕಿದರೆ ಶಾಶ್ವತ ನೆಮ್ಮದಿ ನೆಲೆಸಬಹುದು. ಏಕೆಂದರೆ ಯಾವುದೋ ಹಂತದಲ್ಲಿ ಒಂದು ಸರ್ವ ಸಮ್ಮತ ಸೂತ್ರ ಇದ್ದೇ ಇರುತ್ತದೆ ಮತ್ತು ಅದು ಅನಿವಾರ್ಯ ಕೂಡ. ಜೀವಗಳ ಉಳಿವಿಗಾಗಿ ಅದು ತೀರಾ ಅವಶ್ಯಕ. ಭಾರತದ ಸ್ವಾತಂತ್ರ್ಯ ಹೋರಾಟ ಪ್ರಾರಂಭದಲ್ಲಿ ಶಸ್ತ್ರಾಸ್ತ್ರಗಳಿಂದ ಪ್ರಾರಂಭವಾದರು ಮಹಾತ್ಮ ಗಾಂಧಿಯವರ ನೇತೃತ್ವ ದೊರೆತ ನಂತರ ಅಹಿಂಸಾತ್ಮಕ ಚಳವಳಿ ಮತ್ತು ಸತ್ಯಾಗ್ರಹಗಳು ಹಾಗು ಇಡೀ ದೇಶದ ಅಸಹಕಾರ ಚಳವಳಿ ಬ್ರಿಟೀಷರನ್ನು ಅಲುಗಾಡಿಸಿದ್ದು ಇತಿಹಾಸದ ವಾಸ್ತವ. ಅದರಿಂದಾಗಿಯೇ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಡಿಮೆ ರಕ್ತಪಾತ ದಾಖಲಾಗಿದೆ. ಪ್ಯಾಲಿಸ್ಟೈನ್ ಸಹ ತಮ್ಮ ನೆಲದ ರಕ್ಷಣೆಗಾಗಿ ಅಹಿಂಸಾತ್ಮಕ ಹೋರಾಟ ಪ್ರಾರಂಭಿಸಿದರೆ ವಿಶ್ವ ಸಮುದಾಯ ಅದರ ಪರವಾಗಿ ನಿಲ್ಲುತ್ತದೆ. ಅಹಿಂಸೆ ಯಾವಾಗಲೂ ಉತ್ತಮ ಫಲಿತಾಂಶಗಳನ್ನೇ ನೀಡುತ್ತದೆ.

ಈಗ ಹಮಾಸ್ ದಾಳಿಕೋರರು ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಿದ್ದರಿಂದಾಗಿ ವಿಶ್ವ ಸಮುದಾಯದ ಸಹಾನುಭೂತಿ ಅಷ್ಟಾಗಿ ದೊರೆಯಲಿಲ್ಲ. ಒತ್ತೆಯಾಳುಗಳ ಜೀವವೂ ಮುಖ್ಯವಾದ್ದರಿಂದ ಇಸ್ರೇಲ್ ದಾಳಿಯನ್ನು ನೇರವಾಗಿ ವಿರೋಧಿಸುವ ನೈತಿಕತೆ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ವಾಸ್ತವವಾಗಿ ಈ ಕ್ಷಣದ ಇಸ್ರೇಲ್ - ಪ್ಯಾಲಿಸ್ಟೈನ್ ವಿವಾದ ಕೆಲವು ಚದರ ಕಿಲೋಮೀಟರ್ ಗಳ ಜಾಗದ ವಿಷಯ ಮಾತ್ರ. ಇತಿಹಾಸ ಏನೇ ಇದ್ದರು ಯಹೂದಿಗಳು ಮತ್ತು ಪ್ಯಾಲಿಸ್ಟೈನಿಯರು ಅಕ್ಕಪಕ್ಕದಲ್ಲಿ ಸ್ವತಂತ್ರವಾಗಿ ಬದುಕಲೇ ಬೇಕು. ಯಾರೋ ಒಬ್ಬರು ಅದರ ಸಂಪೂರ್ಣ ಒಡೆಯರಾಗಲು ಸಾಧ್ಯವಿಲ್ಲ. ಇಷ್ಟು ಅರ್ಥಮಾಡಿಕೊಂಡು ವಿವಾದ  ಬಗೆಹರಿಸಿಕೊಂಡರೆ ಅಲ್ಲಿನ ಜನರ ಬದುಕಿಗೆ ಒಂದಷ್ಟು ನೆಮ್ಮದಿ ಸಿಗಬಹುದು. ಪವಿತ್ರ ಎಂದು ಭಾವಿಸುವ ಜರುಸಲೇಂ ಭಾಗದ ಮಸೀದಿ ಮತ್ತು ಚರ್ಚಿನ ಜಾಗವನ್ನು ತಟಸ್ಥ ಎಂದು ಘೋಷಿಸಿ ಇಬ್ಬರಿಗೂ ಸಮಾನ ಹಕ್ಕು ದೊರೆಯುವಂತೆ ಮಾಡಿದರೆ ವಿವಾದ ತಣ್ಣಗಾಗಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ನಾಯಕತ್ವಕ್ಕೆ ಸಮಸ್ಯೆಯ ಪರಿಹಾರದ ಸೂತ್ರ ಇನ್ನೂ ಸ್ಪಷ್ಟವಾಗಿ ತಿಳಿದಿರುತ್ತದೆ. ಆದರೆ ಬೇಕಾಗಿರುವುದು ಅಹಿಂಸಾತ್ಮಕ ಮನೋಭಾವ ಮತ್ತು ಹೊಂದಾಣಿಕೆಯ ವಾಸ್ತವ ಪ್ರಜ್ಞೆ. ಅದನ್ನು ಹೊರತುಪಡಿಸಿ ಕೇವಲ ನಮ್ಮ ಜಯ ಮತ್ತು ವಿರೋಧಿಗಳ ನಾಶ ಎಂಬುದೇ ಇಬ್ಬರ ಅಂತಿಮ ಉದ್ದೇಶ ಆಗುವುದಾದರೆ ಸರಿ ತಪ್ಪುಗಳನ್ನು ಮರೆಯದಿದ್ದರೆ ವಿನಾಶ ನಿಶ್ಚಿತ.

ವಿಷಯ ಎಷ್ಟೇ ಸಂಕೀರ್ಣವಾಗಿದ್ದರು ಮಾನವ ಧರ್ಮದ ಸರಳ ಸೂತ್ರಗಳಾದ ಪ್ರೀತಿ ಸಹಕಾರ ಸಮನ್ವಯ ಕರುಣೆ ಕ್ಷಮಾಗುಣಗಳೆಂಬ ಮಾನವೀಯ ಮೌಲ್ಯಗಳನ್ನು ವಾಸ್ತವ ಪ್ರಜ್ಞೆಗೆ ಇಳಿಸಿದರೆ ಪರಿಹಾರ ಖಂಡಿತ ಸಾಧ್ಯವಿದೆ. ಕೆಲವರು ಹೇಳುತ್ತಾರೆ ಅದೆಲ್ಲವೂ ಹಾಸ್ಯಾಸ್ಪದ. ಅದನ್ನು ಅನುಸರಿಸಿದರೆ ನಾವು ಸರ್ವನಾಶ ಆಗುವುದು ಖಚಿತ ಎಂದು. ಆದರೆ ಈಗ ಅದಕ್ಕೆ ವಿರುದ್ಧ ದ್ವೇಷ ಅಸೂಯೆ ಸೇಡುಗಳಿಂದಲೂ ವಿನಾಶ ಆಗುತ್ತಿಲ್ಲವೇ. ಕನಿಷ್ಠ ಮಾನವೀಯ ಮೌಲ್ಯಗಳಿಂದ ಜೀವಗಳಾದರು ಉಳಿಯುತ್ತದೆ. ಯೋಚಿಸುವ ಸರದಿ ನಮ್ಮದು...

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ