ಮಾಯಾಲೋಕದ ಕವನಗಳ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ

ಕವನಗಳ ಮೂಲಕ ಮಾಯಾಲೋಕ ಸೃಷ್ಟಿಸಿದ ಕನ್ನಡದ ಸುಪ್ರಸಿದ್ಧ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಮ್ಮನ್ನು ಅಗಲಿದ್ದಾರೆ. ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 80 ವರುಷ ವಯಸ್ಸಿನ ಅವರು ಚಿಕಿತ್ಸೆ ಫಲಿಸದೆ ಇವತ್ತು (30 - 5 -2025) ಮುಂಜಾನೆ ತೀರಿಕೊಂಡರು.
ತಮ್ಮ ಕವನಗಳು, ಶಿಶುಗೀತೆಗಳು, ಚಲನಚಿತ್ರ ಗೀತೆಗಳು, ನಾಟಕಗಳು ಹಾಗೂ ಇತರ ಸಾಹಿತ್ಯಕೃತಿಗಳ ಮೂಲಕ ಕನ್ನಡಿಗರ ಮನಗೆದ್ದ ಜನಪ್ರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ. ಅವರ ಜನನ 23-6-1944ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ. ನಾರಾಯಣ ಭಟ್ ಮತ್ತು ನಾಗರತ್ನಮ್ಮ ಅವರ ಮಗನಾದ ಎಚ್. ಎಸ್. ವಿ. ಆರಂಭದ ಮೂವತ್ತು ವರುಷಗಳಲ್ಲಿ ಗ್ರಾಮೀಣ ಪರಿಸರದಲ್ಲಿ ಬದುಕಿ ಬಾಳಿದವರು. ಬಾಲ್ಯದಲ್ಲಿ ಅವರ ಮೇಲೆ ಗಾಢ ಪ್ರಭಾವ ಬೀರಿದ ಆ ಗ್ರಾಮೀಣ ಪರಿಸರದ ಬದುಕು ಹಾಗೂ ಸಂಸ್ಕೃತಿಯ ಛಾಯೆ ಅವರ ಹಲವು ಬರಹಗಳಲ್ಲಿ ಕಾಣಿಸುತ್ತದೆ.
ಅವರು ಮಲ್ಲಾಡಿ ಹಳ್ಳಿಯ ಶಾಲೆಯಲ್ಲಿ ತಮ್ಮ ಅಧ್ಯಾಪನ ವೃತ್ತಿ ಶುರು ಮಾಡಿದರು. ನಂತರ ಮೂರು ದಶಕಗಳ ಅವಧಿ ಬೆಂಗಳೂರಿನ ಸೈಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದ ಎಚ್.ಎಸ್. ವೆಂಕಟೇಶಮೂರ್ತಿ ಅವರು ಅನಂತರ “ಕನ್ನಡದಲ್ಲಿ ಕಥನ ಕವನಗಳು” ಎಂಬ ಮಹಾಪ್ರಬಂಧಕ್ಕೆ ಪಿಎಚ್ ಡಿ ಗಳಿಸಿದರು.
“ಒಣ ಮರದ ಗಿಳಿಗಳು”, ಸೌಗಂಧಿಕ”, “ಪರಿವೃತ್ತ”, “ಮೂವತ್ತು ಮಳೆಗಾಲ” ಇತ್ಯಾದಿ ಅವರ ಪ್ರಸಿದ್ಧ ಕವನ ಸಂಕಲನಗಳು. “ಹಕ್ಕಿ ಸಾಲು” ಅವರ ಹೆಸರುವಾಸಿ ಶಿಶು ಗೀತೆಗಳ ಸಂಕಲನ. “ಅನಾತ್ಮ ಕಥನ” ಎಂಬ ಆತ್ಮಕಥೆಯನ್ನೂ ಬರೆದಿದ್ದಾರೆ. ಆತ್ಮಕಥೆಯ ಬರಹಗಳಿಗೆ ಪೀಠಿಕೆಯಾಗಿ ಎಚ್.ಎಸ್.ವಿ. ಅವರ ಮಾತುಗಳು ಹೀಗಿವೆ: "ನನ್ನ ಬಗ್ಗೆ ನಾನೇ ಆತ್ಮಕಥನದ ಶೈಲಿಯಲ್ಲಿ ಏನನ್ನಾದರೂ ಬರೆಯುವುದು ಎಂದರೆ ತೀವ್ರವಾದ ಎದೆಗುದಿಯ ಸಂಗತಿ. ಅಪ್ರಯತ್ನವಾಗಿ ಅಲ್ಲಿಲ್ಲಿ ಅಂಥ ಬರವಣಿಗೆ ನನ್ನ ಕವಿತೆ ಕಥೆ ನಾಟಕಗಳ ಮೂಲಕ ಛದ್ಮವೇಷದಲ್ಲಿ ಆಗುತ್ತಲೇ ಬಂದಿದೆ. ಇಷ್ಟಾಗಿಯೂ ನನ್ನ ಸುತ್ತಲ ಜಗತ್ತಿನ ಬಗ್ಗೆ ಬೆಟ್ಟಿಟ್ಟು ಬರೆಯಲಿಕ್ಕಿದೆ ಎಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಈ ಜಗತ್ತಲ್ಲಿ ನನ್ನ ಆತ್ಮೀಯ ವ್ಯಕ್ತಿಗಳಿದ್ದಾರೆ; ಘಟನೆಗಳಿದ್ದಾವೆ; ರಸ ರುಚಿ ಸ್ಪರ್ಶಗಳಿದ್ದಾವೆ. ಆ ಸುತ್ತುಗೊಟ್ಟ ಜಗತ್ತಲ್ಲಿ ನಾನೂ ಇದ್ದೇನೆ ಎಂದರೆ ಇದ್ದೇನೆ. ನನ್ನನ್ನು ರೂಪಿಸಿದ ಸಂದರ್ಭಗಳು ಇವು.”
ಕಲಬುರಗಿಯಲ್ಲಿ ಜರಗಿದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರ ಕನ್ನಡ ಸಾಹಿತ್ಯ ಸೇವೆಗೆ ಸಂದ ಗೌರವ.“ಕಥನ ಕವನ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಸಹಿತ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಅವರದು.
ಕನ್ನಡ ಚಿತ್ರರಂಗಕ್ಕೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ಕೊಡುಗೆ ಗಮನಾರ್ಹ. “ಅಮೆರಿಕಾ, ಅಮೆರಿಕಾ” (ಹಾಡು: ಬಾನಲ್ಲಿ ಓಡೋ ಮೇಘ), “ಕೋಟ್ರೇಶಿ ಕನಸು”, ಕಿರಿಕ್ ಪಾರ್ಟಿ” (ಹಾಡು: ತೂಗು ಮಂಚದಲ್ಲಿ ಕೂತು) ಇತ್ಯಾದಿ ಚಲನಚಿತ್ರಗಳಿಗೆ ಅವರು ರಚಿಸಿದ ಕೆಲವು ಹಾಡುಗಳು ಅತ್ಯಂತ ಜನಪ್ರಿಯ. ಕೆಲವು ಚಲನಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ಹೆಸರುವಾಸಿ ಧಾರಾವಾಹಿ “ಮುಕ್ತ”ದ ಶೀರ್ಷಿಕೆ ಹಾಡು ಅವರ ಸುಪ್ರಸಿದ್ಧ ರಚನೆ.
“ಲೋಕದ ಕಣ್ಣಿಗೆ ರಾಧೆಯು ಕೂಡ” - ಇದು ಅವರ ಪ್ರಖ್ಯಾತ ಭಾವಗೀತೆಗಳಲ್ಲೊಂದು. “ಅಮ್ಮ ನಾನು ದೇವರಾಣೆ” ಎಂಬ ಅವರ ಕವನ ಕೇಳುಗರ ಮನದಲ್ಲಿ ಅಮ್ಮನ ಬಗ್ಗೆ ತುಂಬುವ ಗಾಢಭಾವ ಎಲ್ಲೆಯಿಲ್ಲದ್ದು. “ಐದು ಬೆರಳು ಕೂಡಿ” ನಮ್ಮಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬಿತ್ತುವ ಕವನ. ಇಂತಹ ಹತ್ತುಹಲವು ಜನಜನಿತ ಕವನಗಳ ಮೂಲಕ ಕನ್ನಡಿಗರ ಮನೆಮನೆಗಳನ್ನು ಮುಟ್ಟಿದವರು ಎಚ್.ಎಸ್. ವೆಂಕಟೇಶಮೂರ್ತಿ.
ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಎಚ್.ಎಸ್. ವೆಂಕಟೇಶಮೂರ್ತಿ ಅವರ “ಒಣ ಮರದ ಗಿಳಿಗಳು”. ಕನ್ನಡದ ಮೇರುಕೃತಿಗಳ ಆ ಮಾಲೆಗೆ ಇದು ಆಯ್ಕೆಯಾದದ್ದು ಅವರ ಪ್ರತಿಭೆಯ ದ್ಯೋತಕ. ಆ ಸಂಕಲನದ ಒಂದು ಪುಟ್ಟ ಕವನ ಇಲ್ಲಿದೆ:
ಹುಡುಕಿಕೊಂಡು ಹೋದವರು
ಬೆಳಕು ಹುಡುಕಿಕೊಂಡು ಹೋದ ಮಂದಿ
ಖುದ್ದು ತಾವೇ ನಕ್ಷತ್ರಗಳಾಗಿ ಹೋದರು
ಕತ್ತಲನ್ನು ಶೋಧಿಸ ಹೊರಟ ಸಾಹಸಿಗಳು
ಕಾಳಗರ್ಭದಲ್ಲಿ ಮಿಡಿಯುವ ಅವೇ
ನಕ್ಷತ್ರ ಬೀಜಗಳ ಕಂಡರು.
ನಮಗೆ ಇಂತಹ ಅದ್ಭುತ ಕವನಗಳನ್ನು ಕೊಡುಗೆಯಾಗಿತ್ತ ಎಚ್.ಎಸ್. ವೆಂಕಟೇಶಮೂರ್ತಿಯವರು ಇಂದು “ಬೆಳಕು ಹುಡುಕಿಕೊಂಡು ಹೋಗಿ ಖುದ್ದು ತಾವೇ ನಕ್ಷತ್ರ”ವಾಗಿದ್ದಾರೆ.