ಮಾವೋನ ಕೊನೆಯ ನರ್ತಕ
ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು ಅದರದೆ ಆದ ಸಸಿಗಳ ಬಾಯಿಂದ ಪರಿಚಯಿಸುವ ಮೂಲಕ. ಚೀಣಿ ಜೀವನದ ಕುರಿತು ನಮಗಿರುವ ಸೀಮಿತ ಅರಿವು, ಪರಿಜ್ಞಾನ, ಮತ್ತು ಗುರುತೆ ಸಿಗದಂತೆ ಬದಲಾಗಿ ಹೋದ ಈಗಿನ ಚೀನದ ಆರ್ಥಿಕ, ಸಾರ್ವಜನಿಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕಣ್ಮರೆಯಾಗಿ, ಮುಚ್ಚಿದ ಬಾಗಿಲ ನೀತಿಯಿಂದ ಕಳೆದು / ಬದಲಾಗಿ ಹೋದ ಆಚಾರ, ವಿಚಾರ, ಸಂಪ್ರದಾಯಗಳ ತುಣುಕುಗಳು ಹೇರಳವಾಗಿ ಸಿಗುವ ಈ ಕಥಾನಕ ಆ ಮಟ್ಟಿಗೆ ಕನ್ನಡಕ್ಕೆ ವಿಶಿಷ್ಟ ಕೊಡುಗೆಯೆಂದೆ ಹೇಳಬೇಕು.
ಇಡಿ ಕಥಾನಕದ ವೈಶಿಷ್ಟ್ಯವೆಂದರೆ ಆತ್ಮಕಥನದ ಹುರುಪಿನಲ್ಲಿ ತನ್ನಂತಾನೆ ಬಿಚ್ಚಿಕೊಳ್ಳುತ್ತ ಹೋಗುವ 'ಲೀ' ಎಂಬ ಈ ಶ್ರೇಷ್ಟ ಬ್ಯಾಲೆ ಡ್ಯಾನ್ಸರೊಬ್ಬನ ಜೀವನ ಕಥನ; ಆತನ ಬಡ ಹಾಗೂ ದೊಡ್ಡ ಕುಟುಂಬದ ಹಿನ್ನಲೆ, ಹಳ್ಳಿಗಾಡಿನ ಮೂಲೆಯಲೆಲ್ಲೊ ಕುಗ್ರಾಮದಿಂದ ಬೆಳಕಿಗೆ ಬಂದ ಪ್ರತಿಭೆ. ನಮ್ಮ ಊರು ಹಳ್ಳಿಗಳಲ್ಲಿನ ಜನ ಜೀವನದ ರೀತಿ ನೀತಿಗಳ ಜತೆಗೆ ಹಳೆ ಚೀನಿ ಜೀವನ ಶೈಲಿಯ ಜತೆಗಿರುವ ಸಾಮ್ಯತೆ, ಎರಡು ಮಹಾನ್ ಸಂಸ್ಕೃತಿಯ ಸಂಪ್ರದಾಯ - ಪದ್ದತಿಗಳಲ್ಲಿರುವ ಅಸಾಮಾನ್ಯ ಹಾಗೂ ಅಚ್ಚರಿಯ ಹೋಲಿಕೆ, ಬಾಲ್ಯ ಜೀವನದ ನಡೆ, ನುಡಿ, ನಡುವಳಿಕೆ ಚಿಂತನೆಗಳಲ್ಲಿರುವ ಸಾಮ್ಯತೆ - ಹೀಗೆ ಎಲ್ಲವು ದಂಗು ಬಡಿಸುತ್ತವೆ. ಒಂದೆಡೆ ಕಟ್ಟುನಿಟ್ಟು ಕಟ್ಟುಪಾಡಿನ, ಹಳತಿನ ವಿಚಾರಧಾರೆಗಳನ್ನೆಲ್ಲ ತುಳಿದು ಹೊಸತಿನ ಮಾವೊ ವಿಚಾರಧಾರೆಗೆ ಬಲವಂತಿಕೆಯಿಂದ ಆದರೆ ಅಷ್ಟೆ ಶಿಸ್ತುಬದ್ಧ ಕ್ರಮದಲ್ಲಿ ಒಗ್ಗಿಸುವ ಹುನ್ನಾರದ ಪರಿಚಯವಾದರೆ, ಮತ್ತೊಂದೆಡೆ ಆ ವೈಚಾರಿಕ ನೆಲೆಗಟ್ಟಿನ ಹಿನ್ನಲೆ ಮತ್ತು ಕಾರ್ಯಸೂಚಿಗಳು, ಎಲೆ ಮರೆಯ ಕಾಯಾಗಿ ಎಲ್ಲೊ ಮರೆತು ಹೂತು ಹೋಗಬಹುದಾದಂತಿದ್ದ 'ಲೀ' ನಂತಹ ಪ್ರತಿಭೆಗಳನ್ನು ಹೊರ ತರುವುದು ವಿಪರ್ಯಾಸವೆನಿಸುತ್ತದೆ. ಹಾಗೆಯೆ, ಅದನ್ನು ನನಸಾಗಿಸುವ ಭರದಲ್ಲಿ ಅನುಸರಿಸುವ ಶಿಕ್ಷಣ ಕ್ರಮ, ನಿರೀಕ್ಷೆ, ಪಟ್ಟುಗಳು ಮತ್ತು ಅದರ ಸಾಧನೆಗಾಗಿ ಬಲವಂತದಿಂದಲಾದರೂ ಮಾಡಿಸುವ ವ್ಯಕ್ತಿಗತ ತ್ಯಾಗಗಳು ಈ ತರದ ಅನೇಕ ವಿಪರ್ಯಾಸದ ತುಣುಕುಗಳನ್ನು ಪುಸ್ತಕದುದ್ದಕ್ಕೂ ಪರಿಚಯಿಸುತ್ತಾ ಸಾಗುತ್ತದೆ. ಹೀಗೆ ಬದುಕು ಬವಣೆಯೊಂದಿಗೆ ಆರಂಭವಾಗುತ್ತ ಸಾಗುವ ಚಿತ್ರಣ ನಿಧಾನವಾಗಿ ಕಲೆಯ ಪೋಷಾಕಿನೊಳಗೆ ಹುದುಗುತ್ತ ಸಾಗಿದರೂ, ಪ್ರತಿ ಹೆಜ್ಜೆಯಲ್ಲು ಚೀನಿ ಜಗತ್ತಿನ ಆ ದಿನಗಳ ಪರಿಚಯ ಮಾಡಿಕೊಡುತ್ತ ಸಾಗುವುದು ಮತ್ತೊಂದು ವಿಶೇಷ. ಇದು 'ಲೀ'ಯ ಬರಿಯ ಚೀನದಲ್ಲಿರುವತನಕದ ಜೀವನಕ್ಕೆ ಮಾತ್ರ ಸೀಮಿತವಾಗದೆ, ಅವನು ಅಮೇರಿಕದಂತಹ ವಿದೇಶಿ ನೆಲ ತುಳಿದ ಮೇಲು ಮುಂದುವರೆಯುತ್ತ ಸಾಗುವುದು, ಬರಿಯ ಪೇಲವವಾಗಬಹುದಾಗಿದ್ದ ಆತ್ಮಕಥನವೊಂದನ್ನು ಉನ್ನತ್ತ ಮಟ್ಟಕ್ಕೇರಿಸಿದ ಸಾಮಾಜಿಕ ದಾಖಲೆಯಾಗಿಸಿಬಿಡುತ್ತದೆ. ಆ ದೃಷ್ಟಿಯಿಂದ ಇದೊಂದು ಕನ್ನಡಿಗರು ಓದಲೇಬೇಕಾದ ಪುಸ್ತಕವೆನ್ನಬಹುದು. ಓದುತ್ತಿದ್ದ ಹಾಗೆಯೆ, 'ಅರೆರೆ..ಇದೊಂದು ನಮ್ಮ ಊರಿನಲ್ಲೊ, ಪಕ್ಕದ ಹಳ್ಳಿಯಲ್ಲೊ ನಡೆದ ಘಟನೆ, ವಿವರದಂತೆ ಇದೆಯಲ್ಲಾ, ನಮ್ಮ ಪದ್ದತಿಯ ಹಾಗೆ ಕಾಣಿಸುವುದಲ್ಲ..' ಅನಿಸಿದರೆ ಅಲ್ಲಿ ಕಾಕತಾಳಿಯತೆಗಿಂತ ಹೆಚ್ಚು ಏಶಿಯಾದ ಎರಡು ದೊಡ್ಡ ಸಂಸ್ಕೃತಿಗಳಲ್ಲಿರಬಹುದಾದ ಸಮಾನತೆ, ಸಾಮೀಪ್ಯತೆ ಕಾರಣವೆನ್ನಬಹುದು.
ಇನ್ನು ಜಯಶ್ರೀಯವರ ಅನುವಾದದ ಕುರಿತು ಹೇಳುವುದಾದರೆ, ಸೊಗಸಾಗಿ ಓದಿಸಿಕೊಂಡು ಹೋಗುವ ಅನುವಾದ. ಸರಳ ಶೈಲಿಯಲ್ಲಿ ಯಾವುದೆ ಆಡಂಬರಕ್ಕಿಳಿಯದೆ, ಮೂಲ ಸರಕನ್ನು ಇದ್ದ ಹಾಗೆ ಹೇಳುತ್ತ ಹೋಗುವುದರ ಜತೆಗೆ, ಕನ್ನಡದ ಭಾಷಾಂತರ - ಭಾವಾಂತರದ ಗೊಂದಲದ ನಡುವೆ ಮೂಲ ವಸ್ತುವಿನ ಸಮಗ್ರತೆ, ಓಟಕ್ಕೆ ಧಕ್ಕೆ ಬರದಂತೆ, ಕಥೆಯ ಮೂಲೋದ್ದೇಶಕ್ಕೆ ಲೋಪ ಬರದಂತೆ ಭಾಷಾಂತರಿಸಿದ್ದಾರೆ. ವೈಭವಿಕರಣಕ್ಕಿಳಿಯದೆ ಮೂಲಕ್ಕೆ ಅನ್ಯಾಯವಾಗದ ಹಾಗೆ ಅನುವಾದಿಸಿದ್ದರಿಂದಲೊ ಏನೊ, ಪುಸ್ತಕವನ್ನು ಕನ್ನಡದಲ್ಲಿ ಓದಿದರೂ 'ಚೀನಿ ಕಲೆಗಾರನೊಬ್ಬನ' ಆತ್ಮಕಥನವನ್ನು 'ಚೀನಿ ಕಲೆಗಾರನೊಬ್ಬನ' ಬಾಯಿಂದಲೊ ಬರಹದಿಂದಲೊ ಓದಿ, ಕೇಳಿದ ಅನುಭವವಾಗುವುದು ಮಾತ್ರವಲ್ಲದೆ, ಎಲ್ಲೂ ವಿದೇಶಿಯೊಬ್ಬ ಬರೆದ ಕಥಾನಕದಂತೆ ಅನಿಸುವುದಿಲ್ಲ. ಅಷ್ಟರ ಮಟ್ಟಿಗೆ ಜಯಶ್ರೀ ಭಟ್ ರವರ ಅನುವಾದ ಸತ್ವಪೂರ್ಣ ಮತ್ತು ಪರಿಣಾಮಕಾರಿ.
ಇಂಗ್ಲೀಷಿನ ಮೂಲದಿಂದ ಅನುವಾದಿಸಿದ ಕಾರಣಕ್ಕೊ, ಅಥವಾ ಚೀಣಿ ಉಚ್ಚಾರಣೆಯ ಗಮನ ಕನ್ನಡ ಅವತರಣಿಕೆಯಲ್ಲಿ ಪ್ರಾಮುಖ್ಯವಲ್ಲದ್ದು ಎಂದೊ, ಕೆಲವು ಉಚ್ಚಾರಣಾ ದೋಷಗಳು ನುಸುಳಿಕೊಂಡಿವೆ. ಕಾರಣಗಳೇನೆ ಇರಲಿ ಇದೊಂದು ಚೀನಿ ಕಥೆಯಾದ ಕಾರಣ ಹೆಸರುಗಳಲ್ಲಿ ಮತ್ತು ತುಂಬಾ ಹೆಚ್ಚು ಬಳಕೆಯಾಗುವ ಪದಗಳ ಉಚ್ಚಾರಣೆಯಲ್ಲಿ ಚೀನಿ ಸ್ವಂತಿಕೆಯನ್ನು ಉಳಿಸಿಕೊಂಡಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಉದಾಹರಣೆಗೆ ಅನುವಾದದಲ್ಲಿ ಅಕ್ಷರಶಃ 'ನೀ ಹಾವೊ' ಆಗುವ ಚೀನಿ ನಮಸ್ಕಾರ, ಉಚ್ಚಾರಣೆಯಲ್ಲಿ 'ನೀ ಹಾವ್' ಆಗುತ್ತದೆ; ಚೀನಿ ಭಾಷೆಯಲ್ಲಿ ಇಂಗ್ಲಿಷ್ ಅಕ್ಷರ 'ಕ್ಯು' ಅನ್ನು 'ಚ್' ಅನ್ನುವ ಉಚ್ಚಾರಣೆಯಾಗಿ ಬಳಸುವುದರಿಂದ ಊರಿನ ಹೆಸರು 'ಕಿಂಗ್ ದಾವ್' ಆಗದೆ 'ಚಿಂಗ್ ದಾವ್' ಆಗುತ್ತದೆ; ಹಾಗೆಯೆ ಅಸಾಧಾರಣ ನರ್ತಕ 'ಲೀ'ಯ ಪೂರ್ತಿ ಹೆಸರು ಮೂಲ ಚೀನಿ ಉಚ್ಚಾರಣೆಯಲ್ಲಿ 'ಲೀ ಶ್ವಿನ್ ಸಿನ್ಗ್' ಆಗುತ್ತದೆ (ಹೆಚ್ಚಿನ ಮಾಹಿತಿಗೆ ಲೀಯವರ ಅಧಿಕೃತ ವೆಬ್ ಸೈಟ್ ಗಮನಿಸಿ : http://www.licunxin.com); ಹಾಗೆಯೆ ಚೀನಿಯಲ್ಲಿ 'ಚಿಯರ್ಸ್'ಗೆ ಬಳಸುವ 'ಗ್ಯಾನ್ ಬೀ' ಉಚ್ಚಾರಣೆಯಲ್ಲಿ ' ಗನ್ಬೇ' ಆಗುತ್ತದೆ.
ಆದರೆ ಈ ಉಚ್ಚಾರಣ ಕಂದಕಗಳು ಕೇವಲ ಚೀನಿ ಭಾಷೆಯನ್ನು ಬಲ್ಲ, ಮಾತಡಲರಿತವರಿಗೆ ಮಾತ್ರ ಗಮನಕ್ಕೆ ಬರುವುದರಿಂದ ಆ ಭಾಷೆ ಬರದ ಕನ್ನಡ ಓದುಗರಿಗೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ ಮತ್ತು ಓದುವ ಓಟಕ್ಕೆ ಯಾವ ಧಕ್ಕೆಯು ಉಂಟಾಗುವುದಿಲ್ಲ. ಚೀನಿ ಭಾಷೆ ಕಲಿಯಲು ಸಾಕಷ್ಟು ಕಷ್ಟಕರ ಭಾಷೆಯೂ ಆದ ಕಾರಣ, ಭಾವಾನುವಾದದ ನಕ್ಷೆಯಲ್ಲಿ ಬರಿಯ ಪುಸ್ತಕ ಓದುವ ಸೀಮಿತ ಪರಿಸರದಲ್ಲಿ ಉಚ್ಚಾರಣೆಯ ಪಾತ್ರ ಗೌಣ ಮತ್ತು ಪ್ರಮುಖವಲ್ಲದ್ದಾಗಿರುವುದರಿಂದ ಪುಸ್ತಕವನ್ನು ಸೊಗಸಾಗಿ ಅಸ್ವಾದಿಸಬಹುದು.
ಒಟ್ಟಾರೆಯಾಗಿ ವಿದೇಶಿ ಸಾಹಿತ್ಯದ ಪರಿಚಯದ ದೃಷ್ಟಿಯಿಂದ ಇದೊಂದು ಅಪರೂಪದ ಮತ್ತು ಗಮನಾರ್ಹ ಪ್ರಯತ್ನ. ಅದರಲ್ಲು ಇದು ಜಯಶ್ರೀ ಭಟ್ ರವರ ಮೊದಲ ಪುಸ್ತಕವೆಂಬ ಅವಗಾಹನೆಯಲ್ಲಿ ಪರಿಗಣಿಸಿದರೆ, ನಮ್ಮ ನೆಲಕ್ಕಪರಿಚಿತವಾದ ಸಾಹಿತ್ಯವನ್ನು ಕನ್ನಡಿಕರಿಸುವ ಅವರ ಈ ಪ್ರಯತ್ನ ಸ್ತ್ಯುತಾರ್ಹ ಹಾಗೂ ಅಭಿನಂಧನಾರ್ಹ. ಅಷ್ಟು ಮಾತ್ರವಲ್ಲ - ಈ ಕಥಾನಕದ ನಾಯಕನಾಗಿ 'ಲೀ' ತೋರುವ ಸರಳತೆ, ಛಲ, ಹಂಬಲ, ಕಷ್ಟ-ನೋವುಗಳ ನಡುವೆಯು ಗೆದ್ದೆ ಗೆಲ್ಲುವ ಹುಮ್ಮಸ್ಸು, ಬಲಿದಾನ, ತ್ಯಾಗಗಳು ನಮ್ಮ ಎಷ್ಟೊ ಬಾಲಕರಿಗೆ, ಯುವಪೀಳಿಗೆಗೆ ಮಾದರಿಯಾಗಬಲ್ಲವು. ಆ ದೃಷ್ಟಿಯಿಂದ ಬರಿ ವಿದೇಶಿ ರಾಜಕೀಯ, ಸಾಮಾಜಿಕ, ಸಾಂಸ್ಖೃತಿಕತೆಗಳನ್ನು ಪಸರಿಸುವ ಕಥಾನಕ ಮಾತ್ರವಲ್ಲದೆ ಬಾಲ-ಯುವ ಪೀಳಿಗೆಯ ಮೇಲೆ ಪರಿಣಾಮ ಬೀರಬಲ್ಲ ಸಾಧನೆಯ ಸ್ತರವನ್ನು ಒಳಗೊಂಡಿರುವುದರಿಂದಾಗಿ ಈ ಪುಸ್ತಕದ ಮಹತ್ವ ಮತ್ತಷ್ಟು ಹೆಚ್ಚುತ್ತದೆ. ಆ ದೃಷ್ಟಿಯಿಂದಲು ಓದುಗರು ತಪ್ಪದೆ ಓದಬೇಕಾದ ಪುಸ್ತಕವಿದು.
ಮೂಲ ಲೇಖಕ : 'ಲೀ ಶ್ವಿನ್ ಸಿನ್ಗ್'ರ ಆತ್ಮಕಥೆ 'ಮಾವೋ'ಸ್ ಲಾಸ್ಟ್ ಡಾನ್ಸರ'ನ ಕನ್ನಡ ಅನುವಾದ (ಪುಟಗಳು: 278)
ವಿಮರ್ಶೆ: ನಾಗೇಶ ಮೈಸೂರು, ಸಿಂಗಪುರ (nageshamysore.wordpress.com)
Comments
ನಮಸ್ಕಾರ ಪಾರ್ಥ ಮತ್ತು ಶ್ರೀಧರ
ನಮಸ್ಕಾರ ಪಾರ್ಥ ಮತ್ತು ಶ್ರೀಧರ ರವರಿಗೆ,
ನಾನು ನಿನ್ನೆ ಹೆಸರಿಸಿದ ಚೀನಿ ಬದುಕಿನ ಪುಸ್ತಕದ ವಿಮರ್ಶೆ ಇದು. ಚೀನಾದ ಮಾವೋನ ಮತ್ತು ತದನಂತರದ ಸ್ಥಿತ್ಯಂತರ ಕಾಲದ ಚಿತ್ರಣವನ್ನು ಅದ್ಭುತ ಕಲೆಗಾರನೊಬ್ಬನ ಕಣ್ಣಲ್ಲಿ ಮನೋಜ್ಞವಾಗಿ ಕಟ್ಟಿಕೊಡುವ ಚಿತ್ರಣ ಇದರಲ್ಲಿದೆ. ಈ ಕಲಾವಿದ ಲೀ ತನ್ನ ದೇಶಕ್ಕೆ ಹಿಂದಿರುಗದೆ ಅಮೇರಿಕದಲ್ಲೆ ನೆಲೆಸಲು ಪಟ್ಟ ಪಾಡೂ ಇಲ್ಲಿ ದಾಖಲಾಗಿದೆ. ಸದ್ಯಕ್ಕೆ ಈತ ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾನೆ. ಪುಸ್ತಕವನ್ನು ಬರೆದು ಪ್ರಕಟಿಸಿದ್ದು ಅಲ್ಲಿಂದಲೆ. ಚೀನಿ ಬದುಕಿನ ಒಳನೋಟಕ್ಕೆ ಬೆಳಕು ಚೆಲ್ಲುವ ಈ ಕಥನ ತಮಗೂ ಕುತೂಹಲ ಮೂಡಿಸಬಹುದೆಂಬ ಅನಿಸಿಕೆ ನನಗೆ. ವಿಮರ್ಶೆಯನ್ನು ಆಗಲೆ ನೋಡಿ ಆಗಿದ್ದರೆ ಈ ಮಾಹಿತಿಯನ್ನು ದಯವಿಟ್ಟು ನಿರ್ಲಕ್ಷಿಸಿ.
- ನಾಗೇಶ ಮೈಸೂರು, ಸಿಂಗಪುರದಿಂದ
In reply to ನಮಸ್ಕಾರ ಪಾರ್ಥ ಮತ್ತು ಶ್ರೀಧರ by nageshamysore
ಉತ್ತಮ ಪುಸ್ತಕವೊಂದನ್ನು
ಉತ್ತಮ ಪುಸ್ತಕವೊಂದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು, ನಾಗೇಶರೆ. ನಿಮ್ಮ ವಿಮರ್ಶಾ ಶೈಲಿ ಎಷ್ಟೊಂದು ಪ್ರಬುದ್ಧವಾಗಿದೆ ಮತ್ತು ರಸವತ್ತರವಾಗಿದೆ ಎಂದರೆ ಅದನ್ನು ಒಮ್ಮೆ ಖಂಡಿತಾ ಓದಲೇ ಬೇಕೆನಿಸುವಷ್ಟು. ಜಯಶ್ರೀಯವರ ಭಾಷಾಂತರದ ಶೈಲಿಯನ್ನು ಹೊಗಳುತ್ತಾ ಸೂಕ್ಷ್ಮವಾಗಿ ಅದರಲ್ಲಿರುವ ದೋಷಗಳನ್ನೂ ಸಹ ತಿಳಿಸಿಕೊಟ್ಟಿದ್ದೀರ; ಹಾಗೆಯೇ ಕನ್ನಡ ಸಾಹಿತ್ಯಕ್ಕೆ ವಿದೇಶಿ ಕಥಾವಸ್ತುವಿರುವ ಅತ್ಯುತ್ತಮ ಪುಸ್ತಕವೆಂದು ಹೇಳಿರುವುದರಿಂದ ಇದನ್ನು ಓದಲು ಖಂಡಿತಾ ಪ್ರಯತ್ನಿಸುತ್ತೇನೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಈ ಪುಸ್ತಕದ ಪರಿಚಯ
ಈ ಪುಸ್ತಕದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್. ನಾನು ಅದರ ಪರಿಚಯ ಲೇಖನ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನೀವು ಬರೆದಿರಿ. ಅನುವಾದದ ಬಗ್ಗೆ ಬಹಳ ಮುಖ್ಯವಾದ ಮಾತುಗಳನ್ನು ಹೇಳಿದ್ದೀರಿ ಸರ್.
In reply to ಈ ಪುಸ್ತಕದ ಪರಿಚಯ by hema hebbagodi
ಧನ್ಯವಾದಗಳು ಹೇಮರವರೆ,
ಧನ್ಯವಾದಗಳು ಹೇಮರವರೆ,
ನೀವೂ ಪರಿಚಯ ಮಾಡಹೊರಟಿದ್ದಿರೆಂದ ಮೇಲೆ ನಿಮ್ಮ ಅಭಿಪ್ರಾಯದ ಕೆಲ ತುಣುಕುಗಳು ನನ್ನದಕ್ಕಿಂತ ಬೇರೆಯದಾಗಿರಲು ಸಾಧ್ಯವಿದೆ. ಪುಸ್ತಕದ ಒಟ್ಟಾರೆ ವಿಮರ್ಶೆಗೆ ವಿಭಿನ್ನ ದೃಷ್ಟಿಕೋನಗಳು ಒಟ್ಟಾಗಿ ಸೇರಿದರೆ ಹೆಚ್ಚು ಸೂಕ್ತವೆನಿಸುತ್ತದೆ. ಆದಕಾರಣ ತಮಗೆ ಸಮ್ಮತವಿದ್ದಲ್ಲಿ ನಿಮ್ಮ ವಿಭಿನ್ನವಿರುವ ಅಂಶಗಳನ್ನು ಇಲ್ಲೆ ಪ್ರತಿಕ್ರಿಯೆಯಾಗಿ ಸೇರಿಸಿರೆಂದು ನನ್ನ ಸಲಹೆ. ಅದರಿಂದ ಪ್ರಯೋಜನವಾಗುವುದು ಓದುವ ಓದುಗರಿಗೆ - ಎರಡು ಕಡೆ ಅಭಿಪ್ರಾಯ ಸಿಕ್ಕಂತೆ ಆಗುತ್ತದೆ, ಮತ್ತು ನಾನು ಬರೆಯದೆ ಬಿಟ್ಟ ವಿಷಯಗಳೂ ಸೇರಿದಂತಾಗುತ್ತದೆ - ಒಂದು ರೀತಿ - ಬೈ ವನ್ ಗೆಟ್ ವನ್ ಫ್ರಿ ಅಂದ ಹಾಗೆ :-) ಮತ್ತೊಂದು ಸಾಧ್ಯತೆಯೆಂದರೆ ನಿಮ್ಮ ವಿಮರ್ಶೆಯನ್ನು ಮತ್ತೊಂದು ಲೇಖನವಾಗಿ ಪ್ರಕಟಿಸುವುದು. ಹೇಗೆ ಮಾಡಿದರೂ ಓದುಗರಿಗೆ ಉಪಯೋಗ!
ನಾಗೇಶ ಮೈಸೂರು, ಸಿಂಗಾಪುರದಿಂದ
In reply to ಧನ್ಯವಾದಗಳು ಹೇಮರವರೆ, by nageshamysore
ನಾಗೇಶ ಮೈಸೂರು ಮತ್ತು ಹೇಮಾ ಮೇಡಂ
ನಾಗೇಶ ಮೈಸೂರು ಮತ್ತು ಹೇಮಾ ಮೇಡಂ ರವರಿಗೆ ವಂದನೆಗಳು
ಪುಸ್ತಕ ವಿಮರ್ಶೆ ಚೆನ್ನಾಗಿ ಬಂದಿದೆ, ಆಗಲೆ ಪ್ರತಿಕ್ರಿಒಯಿಸಿದ ಮಿತ್ರರು ಹೇಳಿದ ಹಾಗೆ ತಮ್ಮ ವಿಮರ್ಶೆ ಪುಸ್ತವನ್ನು ಓದಿ ಆಸ್ವಾದಿಸ ಬೇಕೆಂಬ ಆಕಾಂಕ್ಷೆಯನ್ನು ಹುಟ್ಟು ಹಾಕಿದೆ. ಮೇಡಂ ನಾಗೇಶರವರು ವಿಮರ್ಶೆ ಬರೆದರೆ ಏನಾಯಿತು ತಾವೂ ಬರಯಿರಿ, ವಿಮರ್ಶೆಗಳ ಭಿನ್ನತೆ ಕೃತಿಯ ಆಳವಾದ ಗ್ರಹಿಕೆಗೆ ಕೃತಿಯ ಒಳನೋಟಗಳ ಅರಿಯುವಿಕೆಗೆ ಪೂರಕ ವಾಗುತ್ತವೆ, ತಮಗೆ ವಿಮರ್ಶೆಯಲ್ಲಿ ಪರಿಣಿತಿಯಿದೆ ಬರೆಯಿರಿ, ಇಬ್ಬರಿಗೂ ಧನ್ಯವಾದಗಳು.
In reply to ನಾಗೇಶ ಮೈಸೂರು ಮತ್ತು ಹೇಮಾ ಮೇಡಂ by H A Patil
ಪಾಟೀಲರಿಗೆ ನಮಸ್ಕಾರ,
ಪಾಟೀಲರಿಗೆ ನಮಸ್ಕಾರ,
ತಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ನನ್ನ ವಿಮರ್ಶೆ ತಮಗೂ ಪುಸ್ತಕ ಓದುವ ಆಸಕ್ತಿ ಮೂಡಿಸಿದ್ದು ನಿಜಕ್ಕೂ ಹರ್ಷದ ವಿಷಯ. ಪುಸ್ತಕ ತಮಗೂ ಇಷ್ಟವಾಗಲೆಂದು ಆಶಿಸುತ್ತೇನೆ.
ಹೇಮಾರವರ ವಿಮರ್ಶೆಯ ಕುರಿತು ನಿಮ್ಮ ಅಭಿಪ್ರಾಯವೆ ನನ್ನ ಅಭಿಪ್ರಾಯವೂ ಸಹ. ತಮ್ಮ ಎಂದಿನ ಪ್ರೋತ್ಸಾಹಕ್ಕೆ ಕೃತಜ್ಞ.
- ನಾಗೇಶ ಮೈಸೂರು, ಸಿಂಗಪುರದಿಂದ
ನಾಗೇಶಮೈಸೂರು ನಮಸ್ಕಾರ, ಪುಸ್ತಕ
ನಾಗೇಶಮೈಸೂರು ನಮಸ್ಕಾರ, ಪುಸ್ತಕ ಪರಿಚಯ ಓದಿದೆ, ಒಳ್ಳೆಯ ಬರಹ. ಹಾಗೆ ನೀವು ಹೇಳಿರುವ ಎರಡು ಸಂಸ್ಕೃತಿಗಳಲ್ಲಿನ ಸಾಮ್ಯತೆ ! ಹೌದು ನಾನು ಕೆಲವು ಸಾರಿ ಗಮನಿಸಿದ್ದೆ, ಎಲ್ಲಿ ಅನ್ನುವಿರ ಕೆಲವೆ ಚೀನ ಸಿನಿಮಾಗಳನ್ನು ಗಮನಿಸಿ, ಅದರ ಅಂಗ್ಲ ಅಥವ ಇಲ್ಲಿಯ ಬಾಷೆಯ ಸಬ್ ಟೈಟಲ್ ಇರುತ್ತದೆ, ಅಲ್ಲಿಯ ಸಂಭಾಷಣೆಗಳನ್ನು ಗಮನಿಸುವಾಗಲೆ ನಾನು ಅಂದುಕೊಳ್ಳುತ್ತಿದ್ದೆ, ಹೆಚ್ಚು ಕಡಿಮೆ ಹಳೆಯ ರಾಜಕೂಮಾರ್ ಚಿತ್ರದ ಉದಯಕುಮಾರ್ ಶೈಲಿಯ ಸಂಬಾಷಣೆಗಳು, ಅದು ಹೇಗೆ ಅವರದು ನಮ್ಮದು ಒಂದೆ ಸಂಸ್ಕೃತಿಗಳಂತೆ ಇವೆಯಲ್ಲ ಎಂದು ಕೊಳ್ಳುತ್ತಿದ್ದೆ, ಆದರೆ ಈಗ ನಿಮ್ಮ ಬರಹ ಓದಿದ ನಂತರ ನನ್ನ ಅಭಿಪ್ರಾಯಕ್ಕೆ ಪುಷ್ಟಿ ದೊರೆಯಿತು. . ವಂದನೆಗಳು
In reply to ನಾಗೇಶಮೈಸೂರು ನಮಸ್ಕಾರ, ಪುಸ್ತಕ by partha1059
ಪಾರ್ಥ ಸಾರ್, ನಮಸ್ಕಾರ. ಕೆಲವು
ಪಾರ್ಥ ಸಾರ್, ನಮಸ್ಕಾರ. ಕೆಲವು ಸಾಮ್ಯತೆಗಳನ್ನು ನಾನು ಕಣ್ಣಾರೆ ನೋಡುವ ಅವಕಾಶ ನನಗೆ ಸಿಕ್ಕಿತ್ತು. ಅದರಲ್ಲೂ ಸುಮಾರು ಐಟಿ ಪ್ರಾಜೆಕ್ಟುಗಳಲ್ಲಿ ಅವರುಗಳೆ ಕೀಯುಸರುಗಳಾಗಿದ್ದರಿಂದ, ಅವರ ಜತೆ ಭಾಷೆಯ ಪಾಂಡಿತ್ಯವಿಲ್ಲದೆಯೂ ಹೆಣಗುವ, ಒದ್ದಾಡುವ, ಸಂಭಾಳಿಸಿ, ನಿಭಾಯಿಸುವ ಅನಿವಾರ್ಯ. ಹಾಗಾಗಿ ಕೆಲವು ಸಂಸ್ಕೃತಿಯ ತುಣುಕುಗಳ ಪರಿಚಯವೂ ಆಯ್ತು - ಉದಾಹರಣೆಗೆ ನಮ್ಮಲ್ಲಿರುವ ಹಿರಿಯರಿಗೆ ಗೌರವಿಸುವ / ಎದುರಾಡದ ಪರಂಪರೆ, ನೋವು ಆಗದಿರಲೆಂದು ಸುಳ್ಳು ಹೇಳುವ ವಿಧಾನ ( ಪ್ರಾಜೆಕ್ಟಿಗೆ ಆಯ್ಕೆಯಾಗಿ ಬಂದಿದ್ದ ಕೆಲವು ಕನ್ಸಲ್ಟೆಂಟುಗಳು, ಅರ್ಧಕ್ಕರ್ಧ ಜನ ಬಂದ ವಾರದಲ್ಲೆ ಪ್ರಾಜೆಕ್ಟು ಬಿಟ್ಟು ಹೋಗಿಬಿಟ್ಟರು - ಒಬ್ಬನ ಕಾರಣ - ಅಪ್ಪನಿಗೆ ಸೀರಿಯಸ್ಸು, ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ, ಇನ್ನೊಬ್ಬಾಕೆ - ಅವಳಿಗೆ ಮುಂದಿನ ವಾರವೆ ಆಪರೇಷನ್ ಆಗಬೇಕಿದೆ ಎಂದಳು, ಮತ್ತೊಬ್ಬ ಹೆಂಡತಿಗೆ ಸೀರಿಯಸ್ಸು ಎಂದು ಓಡಿದ...ಹೀಗೆ ಒಬ್ಬೊಬ್ಬರು ಒಂದೊಂದು ಸುಳ್ಳು ಹೇಳಿ ಜಾಗ ಖಾಲಿ ಮಾಡಿದರು (ನಿಜವಾದ ಕಾರಣ ಹೇಳಿ ನನಗೆ ಬೇಸರವಾಗಬಾರದೆಂದು)! ನಮ್ಮ ಕೆಲಸಗಾರರಲ್ಲಿ ಇಂತದ್ದೆ ವರ್ತನೆ ಗಮನಿಸಿದ್ದ ನನಗೆ ಅಚ್ಚರಿಯಾಗಿದ್ದು ಅವರು ಸುಳ್ಳು ಹಎಳಿದರೆಂದಲ್ಲ - ಇವರೂ ನಮ್ಮ ಹಾಗೆಯೆ ಎಂದು! )
ಈ ಪುಸ್ತಕ ಓದುವಾಗ ಇದೆ ತರಹದ ಒಂದು ಘಟನೆಯ ವಿವರವಿದೆ; ಸಾವೊಂದರ ಕುರಿತಾದ ಚಿತ್ರಣ. ಅದರಲ್ಲಿ ಶವಸಂಸ್ಕಾರ ಮಾಡುವಾಗ ನೀರು ತುಂಬಿದ ಮಡಿಕೆಯನ್ನು ಹೊತ್ತುಕೊಂಡು ಹೋಗಿ, ಹಾದಿಯಲ್ಲಿ ಒಡೆದುಹಾಕುವ ವರ್ಣನೆಯಿದೆ. ನಮ್ಮ ಸಾವುಗಳಲ್ಲು ಅದೆ ರೀತಿಯ ಶಾಸ್ತ್ರವಿರುವುದರ ಸಾಮ್ಯತೆ ತುಂಬಾ ಅಚ್ಚರಿ ತರಿಸಿತು. ಹೀಗೆ ಎಷ್ಟೊ ಸಾಮ್ಯತೆಗಳ ಬೇರು ಹುಡುಕಿದರೆ ಇನ್ನೇನೇನು ವಿಸ್ಮಯಗಳು ಹೊರಬರುವುದೊ?
-ನಾಗೇಶ ಮೈಸೂರು, ಸಿಂಗಾಪುರದಿಂದ