ಮಿತ ಆಹಾರದಿಂದ ಉತ್ತಮ ಆರೋಗ್ಯ

ಮಿತ ಆಹಾರದಿಂದ ಉತ್ತಮ ಆರೋಗ್ಯ

ಆಹಾರದಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ನೀರು ಮೊದಲಾದ ಅಂಶಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಕ್ಕಿದರೆ ಮಾತ್ರ ದೇಹವು ಸಮತೋಲನವಾಗಿರುತ್ತದೆ. ಮನುಷ್ಯನ ಜೀವನದಲ್ಲಿ ಆಹಾರ ಅತಿ ಮುಖ್ಯ. ನಮ್ಮ ಶರೀರದ ಬೆಳವಣಿಗೆಗೆ, ಶಕ್ತಿಗೆ, ಮಾನಸಿಕ, ದೈಹಿಕ ಆರೋಗ್ಯಗಳು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಆಹಾರದಲ್ಲಿ ಇರುವಷ್ಟು ವೈವಿಧ್ಯ ಬೇರೆ ಯಾವುದರಲ್ಲಿಯೂ ಇರಲಿಕ್ಕಿಲ್ಲವೇನೋ? ಆಹಾರವು ಆಯಾ ಪ್ರದೇಶದ ಜನಜೀವನ, ಸಂಸ್ಕೃತಿ, ಆಚಾರ-ವಿಚಾರ, ಹವಾಗುಣಕ್ಕೆ ಅನುಗುಣವಾಗಿ ಇರುತ್ತದೆ. ನಾವು ಸೇವಿಸುವ ಆಹಾರ ಹೇಗಿರಬೇಕು, ಎಷ್ಟು ಆಹಾರ ಒಬ್ಬ ಮನುಷ್ಯನಿಗೆ ಅಗತ್ಯ, ಎಂತಹ ಆಹಾರ ಮುಖ್ಯ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ರಾಗಿ, ಗೋಧಿ, ಧವಸ-ಧಾನ್ಯಗಳು, ಸೊಪ್ಪು, ತರಕಾರಿಗಳು, ಹಣ್ಣು-ಹಂಪಲುಗಳ ಅವಶ್ಯಕತೆಯಿರುತ್ತದೆ. ಹಾಲು, ಹಾಲಿನ ಉತ್ಪನ್ನಗಳು ಹಿತ-ಮಿತ ಪ್ರಮಾಣದಲ್ಲಿ ಹಾಗೂ ಎಣ್ಣೆ, ಸಿಹಿ ಪದಾರ್ಥಗಳು, ಚೀಸ್, ಪನ್ನೀರ್, ಕುರುಕಲು ತಿಂಡಿಗಳು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕಾಗುತ್ತದೆ. ವಿಟಮಿನ್, ಪ್ರೊಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ನೀರು ಮೊದಲಾದ ಅಂಶಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಕ್ಕಿದರೆ ಮಾತ್ರ ದೇಹವು ಸಮತೋಲನವಾಗಿರುತ್ತದೆ. ಬೇಳೆ, ಕಾಳು, ಹಣ್ಣುಗಳಲ್ಲಿ, ಸಕ್ಕರೆ. ಹಾಲು, ಅಕ್ಕಿ, ರಾಗಿ, ಗೋಧಿ, ತರಕಾರಿಗಳಾದ ಬಟಾಟೆ, ಗೆಣಸುಗಳಲ್ಲಿ ಕಾರ್ಬೋಹೈಡ್ರೇಟ್ ಹೇರಳವಾಗಿರುತ್ತದೆ. ಇವು ದೇಹಕ್ಕೆ ಶಕ್ತಿ ನೀಡುತ್ತವೆ. ನಮ್ಮ ದೇಹಕ್ಕೆ ಪ್ರೊಟೀನ್ ಅತೀ ಅಗತ್ಯ. ಎಲ್ಲಾ ಬೇಳೆ-ಕಾಳುಗಳಲ್ಲಿ, ನೆಲ್ಲಿಕಾಯಿ, ಅಕ್ಕಿ, ರಾಗಿ, ಗೋಧಿಗಳಲ್ಲಿ ಪ್ರೊಟೀನ್ ಹೆಚ್ಚು ಇರುತ್ತವೆ. ಮೀನು, ಮೊಟ್ಟೆ, ಮಾಂಸಗಳಲ್ಲಿ ಹೆಚ್ಚು ಪ್ರೊಟೀನ್ ದೇಹಕ್ಕೆ ದೊರಕುತ್ತದೆ.

ಹಿತವಾದ ಕೊಬ್ಬು: ಕೊಬ್ಬು ಸಹ ದೇಹಕ್ಕೆ ಹಿತ-ಮಿತ ಪ್ರಮಾಣದಲ್ಲಿ ಸಿಗಬೇಕು. ಎಣ್ಣೆ ಪದಾರ್ಥಗಳು, ಬೆಣ್ಣೆ, ತುಪ್ಪ, ಮಾಂಸಗಳಲ್ಲಿ ಕೊಬ್ಬು ಇರುತ್ತದೆ. ಘನ ಪದಾರ್ಥಗಳಂತೆ ದ್ರವ ಪದಾರ್ಥಗಳು ದೇಹಕ್ಕೆ ಅತಿ ಮುಖ್ಯ. ನೀರು, ಜ್ಯೂಸ್, ದ್ರವದ ಅಂಶ ಹೊಂದಿರುವ ಮದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಋತುಮಾನಕ್ಕೆ ತಕ್ಕಂತಹ ಆಹಾರಗಳನ್ನು ಸೇವಿಸಬೇಕು. ವಿಟಮಿನ್‌ಗಳಾದ ಎ, ಡಿ, ಇ, ಕೆ, ಬಿ, ಸಿ ದೇಹಕ್ಕೆ ಅತೀ ಮುಖ್ಯ.

ಕೆಲವೊಮ್ಮೆ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಸಣ್ಣಪುಟ್ಟ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಆಹಾರ ಜೀರ್ಣವಾಗಿರದಿದ್ದರೆ ಒಂದು ಲೋಟ ಬಿಸಿ ನೀರಿಗೆ ಒಂದು ನಿಂಬೆಹಣ್ಣಿನ ರಸ ಮತ್ತು ಉಪ್ಪನ್ನು ಸೇರಿಸಿ ಕುಡಿಯಿರಿ. ಅರ್ಧ ಗಂಟೆಯಲ್ಲಿ ದೇಹ ಉಲ್ಲಸಿತವಾಗುತ್ತದೆ. ಆಲೂಗಡ್ಡೆ, ತೊಗರಿಬೇಳೆ, ಕಡ್ಲೆಬೇಳೆ ಮುಂತಾದ ಪದಾರ್ಥಗಳು, ಕೊಬ್ಬಿನ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿದ್ದರೆ ಒಂದು ತುಂಡು ಶುಂಠಿ ಮತ್ತು ಕಲ್ಲು ಉಪ್ಪನ್ನು ಸೇರಿಸಿ ಬಾಯಿಯಲ್ಲಿ ಅರ್ಧ ಗಂಟೆ ಜಗಿಯುತ್ತಾ ಅದರ ರಸವನ್ನು ಕುಡಿಯುತ್ತಿದ್ದರೆ ದೇಹದಲ್ಲಿರುವ ಗ್ಯಾಸ್ ಕರಗುತ್ತದೆ. ಜೊತೆಗೆ ಜೀರ್ಣವನ್ನು ನೀಡುತ್ತದೆ.

ಹಸಿರು ತರಕಾರಿ: ಹಸಿರು ತರಕಾರಿ ಅಥವಾ ಹಣ್ಣಿನ ಜ್ಯೂಸ್ ಉತ್ತಮ. ದೇಹ ಅತಿಯಾದ ಭಾರ ಎನಿಸಿದಲ್ಲಿ ಜ್ಯೂಸ್ ಮಾಡಿ ಕುಡಿಯಿರಿ. ಜ್ಯೂಸ್‌ಗೆ ಒಂದು ಕಲ್ಲು ಉಪ್ಪು, ಶುಂಠಿ ಅಥವಾ ನಿಂಬೆಹಣ್ಣಿನ ರಸ ಸೇರಿಸಿ. ಹೃದಯದ ತೊಂದರೆ ಇರುವವರಿಗೆ ಬೆಳ್ಳುಳ್ಳಿ ತುಂಬಾ ಉಪಕಾರಿ. ಜ್ವರ, ಶೀತ, ಕೆಮ್ಮು ತೊಂದರೆ ಇರುವ ಸಂದರ್ಭಗಳಲ್ಲಿ ಬೆಳ್ಳುಳ್ಳಿ ಹುರಿದು ಸಾರಿಗೆ ಹಾಕಿ ಊಟದ ಜೊತೆ ತಿನ್ನಬಹುದು. ಬಾಯಿಗೂ ರುಚಿಸುತ್ತದೆ. ಬೀಟ್‌ರೂಟ್, ಇದು ಹಲವು ರೀತಿಯಲ್ಲಿ ಪ್ರಯೋಜನಕಾರಿ. ಕಬ್ಬಿಣ, ಮ್ಯಾಗ್ನೇಶಿಯಂ ಹಾಗೂ ವಿಟಮಿನ್ ಸಿ ಬೀಟ್‌ರೂಟ್‌ನಲ್ಲಿ ಹೇರಳವಾಗಿರುವುದರಿಂದ ಚರ್ಮ, ಕೂದಲಿನ ರಕ್ಷಣೆಗೆ ಉತ್ತಮ. ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅಂಶವನ್ನು ತೆಗೆದುಹಾಕುತ್ತದೆ. ಕರುಳಿನ ಬೇನೆಗೆ ಉತ್ತಮವಾಗಿದ್ದು ಬೀಟ್‌ರೂಟ್‌ನ್ನು ಹಸಿಯಾಗಿ ಸಲಾಡ್‌ನಲ್ಲಿ ಅಥವಾ ಜ್ಯೂಸ್ ಮಾಡಿ ಸೇವಿಸಿದರೆ ಪ್ರಯೋಜನ ಅಧಿಕ. ಕಾಫಿ, ಟೀ ಕುಡಿಯುವ ಬದಲು ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಇದು ದೇಹದ ತೂಕವನ್ನು ಇಳಿಸುವುದಲ್ಲದೆ ಕರುಳಿನ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.

-ಅರೆಯೂರು ಶ್ರೀವೈದ್ಯಸುತ,