ಮುನಿಸು ತೋರಿತೇ ಪ್ರಕೃತಿಯು

ನಿಸರ್ಗದ ನಡುವೆ ಬೆಚ್ಚಗೆ ಆಶ್ರಯಿಸಿದ್ದ ಸಕಲ ಜೀವಿಗಳನ್ನು ಪೋಷಿಸಿದ್ದ ಪ್ರಕೃತಿ, ಅದೇಕೋ ಒಮ್ಮೆಲೇ ತನ್ನೊಡಲ ನೋವನ್ನು ಹೊರಹಾಕಿತೋ ಅಥವಾ ಮನುಷ್ಯನ ಸ್ವಾರ್ಥಕ್ಕೆ ತನ್ನ ಮುನಿಸು ತೋರಿತೋ, ಆದರೆ ಅದರ ಪರಿಣಾಮ ಮಾತ್ರ ಘನಘೋರ, ನೆಮ್ಮದಿಯಾಗಿ ಮಲಗಿದ್ದವರೆಲ್ಲರಿಗೂ ಆಘಾತವಾಗಿತ್ತು. ಒಮ್ಮೆಲೇ ಸುರಿದ ವರುಣಾಗಮನ ಬದುಕನ್ನೇ ಬೀದಿ ಪಾಲಾಗಿಸಿದ್ದರೆ, ಇನ್ನೊಂಡೆಗೆ ನಾಳೆಗಳ ಕನಸು ಕಾಣುತ್ತ ಮಲಗಿದ್ದ ಅದೆಷ್ಟೋ ಮಂದಿಯ ಬದುಕು ನಿದಿರೆಯಲ್ಲೇ ಕೊನೆಯಾಗಿತ್ತು. ಆ ದೃಶ್ಯ ನೋಡುವುದಿರಲಿ ಕೇಳಲು ಭಯಾನಕವೆನಿಸುತ್ತದೆ. ಆದರೆ ಅದನ್ನು ಅನುಭವಿಸಿದವರ ಸಂಕಟ ಎಷ್ಟಿರಬಹುದು? ವರುಷವೆಲ್ಲ ಬೆಳೆದ ರೈತರ ಶ್ರಮದ ಬೆಳೆ ಹೊಳೆಯ ಪಾಲಾಗಿತ್ತು. ವೃಕ್ಷಗಳಲ್ಲೇ ಗೂಡು ಕಟ್ಟಿದ್ದ ಪುಟ್ಟ ಹಕ್ಕಿಗಳು, ವನ್ಯ ಜೀವಿಗಳು ಎಲ್ಲವೂ ಒಂದೇ ತಾಸಿನೊಳಗೆ ನಾಶವಾಗಿತ್ತು.
ಆದರೆ ಇದಕ್ಕೆಲ್ಲ ಕಾರಣ ಏನಿರಬಹುದು? ಒಂದೊಮ್ಮೆ ಮನುಷ್ಯನ ಸ್ವಾರ್ಥಕ್ಕೆ ಪರಿಸರದ ಮುನಿಸು ಎಂದರೂ, ಅದನ್ನು ಹೇಗೆ ಸ್ವೀಕರಿಸಬಹುದು? ಹಾಗೆ ನೋಡಿದರೆ ಅಲ್ಲಿ ನೊಂದವರಾರು ಆ ಪ್ರಕೃತಿಯನ್ನು ನಶಿಸಿದವರಲ್ಲ. ಯಾರದೋ ಸಂಪಾದನೆಗೆ, ಯಾವುದೋ ಅಭಿವೃದ್ಧಿಯ ಹೆಸರಲ್ಲಿ ಗುಡ್ಡಗಾಡುಗಳನ್ನು ನಶಿಸಿದ್ದು ಯಾರೋ, ಆದರೆ ಅದಕ್ಕೆ ಬಲಿಯಾದವರು ನಿಜಕ್ಕೂ ಅಮಾಯಕರು. ಅದರಲ್ಲೂ ಪುಟ್ಟ ಕಂದಮ್ಮಗಳು, ಈಗಿನ್ನೂ ಹೆತ್ತವರ ಮಡಿಲಲ್ಲಿದ್ದ ಆ ಮುಗ್ಧ ಜೀವಗಳಿಗೆ ಯಾವ ಸ್ವಾರ್ಥವಿತ್ತು ಹೇಳಿ? ಸಿಕ್ಕಿದ್ದನ್ನು ಹೆಕ್ಕಿ ತಿನ್ನುವ ಹಕ್ಕಿಗಳು, ಉಳಿದ ಆಹಾರ ತಿನ್ನುವ ಶ್ವಾನಗಳು, ಮುಗ್ಧ ಗೋವುಗಳು ಇವೆಲ್ಲವೂ ಮಾಡಿದ ತಪ್ಪಾದರೂ ಏನು?
ಜೀವನವೆಲ್ಲ ಶ್ರಮಪಟ್ಟು ಕಟ್ಟಿದ್ದ ಅದೊಂದೆ ಸೂರು ಹೊಳೆಯಾಗಿ ಹರಿದು ಹೋಗಿದ್ದರೆ, ತಮ್ಮನ್ನು ಗುರುತಿಸಬಲ್ಲ ಯಾವುದೇ ಕಾಗದ ಪತ್ರಗಳು ಉಳಿದಿಲ್ಲ. ಪರಿಹಾರದ ಭರವಸೆ ಹೊತ್ತುಮರಳಿ ಸಿಗದ ಕಳೆದುಕೊಂಡ ವಿಷಯಗಳಿಗೆ ಮರುಕ ಪಡುತ್ತಾ, ಕಳೆದುಕೊಂಡ ತಮ್ಮವರಿಗಾಗಿ ಕಂಬನಿ ಸುರಿಸುವ ಆ ಮುಗ್ಧ ಜನರ ನೋವಿಗೆ ಯಾವ ಸಾಂತ್ವನದ ನುಡಿಗಳು ಕೂಡ ಸಮಾಧಾನ ನೀಡಲಾರವು. ಇತ್ತ ಮನುಷ್ಯನಂತೆ ಹೇಳಿಕೊಳ್ಳಲೂ ಬಾರದ ಮುಗ್ಧ ಜೀವಿಗಳ ನೋವಂತೂ ಕರುಳು ಹಿಂಡುವಂತಿದೆ.
ನೀರಿನ ನಡುವೆ ಸಿಲುಕಿದ ಮೂಖ ಪ್ರಾಣಿಗಳ ರಕ್ಷಣೆ ಮಾಡುವವರಾರು? ಹಸಿದು ಕಂಗೆಟ್ಟ ಆ ಜೀವಿಗಳಿಗೆ ಆಹಾರ ಕೂಡ ಇಲ್ಲದಾಗಿದೆ. ಬಡವ ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರನ್ನೂ ಬೀದಿ ಪಾಲಾಗಿಸಿದ ಮಳೆಯ ಆರ್ಭಟಕ್ಕೆ ಜನರು ಆಶ್ರಯ ಕೇಂದ್ರಗಳಲ್ಲಿ ಉಳಿದುಕೊಳ್ಳುವಂತಾಗಿದೆ. ಇಲ್ಲಿ ಯಾರಿಂದ ತಪ್ಪಾಗಿರಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು, ಹೇಗೆ ಈ ಸಮಸ್ಯೆ ಮುಂದುವರಿಯದಂತೆ ತಡೆಯಬೇಕು ಎಂಬುದು ಬಹಳ ಮುಖ್ಯವಾಗುತ್ತದೆ. ಯಾರ ಆರೈಕೆಯನ್ನು ಬಯಸದೆ ಸೊಂಪಾಗಿ ಬೆಳೆದ ವೃಕ್ಷಗಳಿಗೆ ಬದುಕಲು ಅವಕಾಶ ನೀಡುವುದು ನಮ್ಮ ಕರ್ತವ್ಯವಲ್ಲವೇ? ಮರದ ನೆರಳಲ್ಲಿ ಬೆಳೆವ ಹುಲ್ಲು, ಇತರೆ ಸಸ್ಯರಾಶಿಗಳು ಮಣ್ಣ ಸವಕಳಿಯನ್ನು ತಡೆಯಬಹುದು ಅಲ್ಲವೇ? ಒಂದು ವ್ಯಾಪ್ತಿಗೆ ಎಷ್ಟು ಕೊಳವೆ ಭಾವಿಗಳಿಗೆ ಅವಕಾಶ? ಬರಡಾದ ಭೂಮಿಯನ್ನು ಸರಿಪಡಿಸುವ ಬಗೆ ಯಾವುದು? ಇದೆಲ್ಲದರ ಪರಿಹಾರ ಕಂಡು ಕೊಂಡರೆ? ಮುಂದೇ ಹೀಗಾಗದಂತೆ ತಡೆಯಬಹುದು. ಆದರೆ ಆ ದಿಕ್ಕಿನತ್ತ ನಮ್ಮ ಯೋಚನೆಗಳು ಯಾಕೋ ಸಾಗುತ್ತಿಲ್ಲ. ಒಮ್ಮೆ ಬಂದ ಪ್ರವಾಹ ಇಳಿದು ಹೋಗುತ್ತಲೇ ಪರಿಸರ ಸಂರಕ್ಷಣೆಯ ಬಗೆಗೆ ಚಿಂತೆ ಇಲ್ಲವಾದರೆ, ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಇಂತಹ ಸಂದರ್ಭಗಳು ಮರುಕಳಿಸಬಹುದಲ್ಲವೇ?
-ಭಾಗ್ಯಶ್ರೀ ರತನ್ ಶೆಟ್ಟಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ