ಮೂಡುಬಿದಿರೆಯಲ್ಲಿ ತಯಾರಾಗುವ "ಪೊಳಲಿ ಚೆಂಡು"

ಮೂಡುಬಿದಿರೆಯಲ್ಲಿ ತಯಾರಾಗುವ "ಪೊಳಲಿ ಚೆಂಡು"

ತುಳುನಾಡಿನ ಇತಿಹಾಸ ಪ್ರಸಿದ್ದ ಮೃಣ್ಮಯ (ಮಣ್ಣಿನ) ಮೂರ್ತಿ ಮಾತೆ ಶ್ರೀ ರಾಜರಾಜೇಶ್ವರಿಯ ಸನ್ನಿಧಿ ಪೊಳಲಿಯ ಜಾತ್ರೆ ಎಂದರೆ ಅದು ವಿಶೇಷ ಮಾತ್ರವಲ್ಲ ವಿಶಿಷ್ಠವೂ ಹೌದು. ಒಂದು ತಿಂಗಳ ಈ ಪರಂಪರೆಯ ಜಾತ್ರೆಯಲ್ಲಿ ' ಪುರಲ್ದ ಚೆಂಡ್' (ಪೊಳಲಿ ಚೆಂಡು) ಕೂಡಾ ಪ್ರಧಾನ ಆಕರ್ಷಣೆ. ಎಲ್ಲೆಡೆಯಿಂದ ಭಜಕರು ಹರಿದು ಬರುವ ಈ ಜಾತ್ರೆಯ ಚೆಂಡಿನಾಟದ ಹಿನ್ನೆಲೆ ( ಈ ಬಾರಿ ಎಪ್ರಿಲ್ 6ರಿಂದ 10) ಅದರ ಆಚರಣೆ ಎಲ್ಲವೂ ಗಮನಾರ್ಹವೇ. ಪೊಳಲಿ ಜಾತ್ರೆಗೆ ದಿನ ನಿಗದಿಪಡಿಸುವಲ್ಲಿ ಮೂಡುಬಿದಿರೆಯ ಪುತ್ತಿಗೆಯ ಕ್ಷೇತ್ರದ ಪಾತ್ರ ಮುಖ್ಯವಾಗಿದೆ. ಅದೇ ರೀತಿ ಪ್ರಸಿದ್ಧ ಪೊಳಲಿ ಚೆಂಡಿಗೂ ಮೂಡುಬಿದಿರೆಗೂ ಗಮನ ಸೆಳೆಯುವ ಸಂಬಂಧವೆಂದರೆ ಈ ಚೆಂಡು ತಯಾರಾಗುವುದೂ ಮೂಡುಬಿದಿರೆಯಲ್ಲೇ! 

ಕಳೆದ 15 ವರ್ಷಗಳಿಂದ ಪೊಳಲಿ ಚೆಂಡಿನ ಸಿದ್ಧತೆಯನ್ನು ಶ್ರದ್ಧಾ ಭಕ್ತಿಯಿಂದ ನಿರ್ಮಿಸುವಲ್ಲಿ ಸಂತಸವನ್ನು ಕಂಡವರು ಇಲ್ಲಿನ ಗಾಂಧಿನಗರದ ಎಂ.ಪದ್ಮನಾಭ ಸಮಗಾರ. ತಂದೆ ಕೃಷ್ಣ ಸಮಗಾರರರಿಂದ ಬಳುವಳಿಯಾಗಿ ಬಂದ ವೃತ್ತಿ ಕೌಶಲದ ಜತೆಗೆ ಚೆಂಡು ತಯಾರಿಕೆಯನ್ನೂ  ಪದ್ಮನಾಭ ಮುಂದುವರಿಸಿಕೊಂಡು ಬಂದಿದ್ದಾರೆ. ಬೆಂಗಳೂರಿನಿಂದ  ಗಾಡಿ ಎತ್ತಿನ ದಪ್ಪ ಚರ್ಮವನ್ನು ಬೆಂಗಳೂರಿನಲ್ಲಿ ಶೋಧಿಸಿ, ಮನೆಗೆ ತಂದು ತಮಗೆ ಬೇಕಾದ ರೀತಿಯಲ್ಲಿ ಹದ ಮಾಡಿ ತೆಂಗಿನ ನಾರನ್ನು ಚೆಂಡಿನೊಳಗೆ ನಿರ್ವಾತವಿಲ್ಲದಂತೆ ತುಂಬಿ ಹೊಲಿಯುವ ಚಾಕಚಕ್ಯತೆಗೆ ಅಷ್ಟೇ ಶ್ರಮವಿದೆ. 

ಮೊದಲು ವೃತ್ತಕಾರದ ಚರ್ಮವನ್ನು ಕತ್ತರಿಸಿ ಅರ್ಧ ಗೋಲಾಕಾರವಾಗಿ ರೂಪಿಸುವ ಹಂತದಲ್ಲಿ ಪುಟ್ಟ ಒನಕೆಯಿಂದ ಚರ್ಮವನ್ನು ಗುದ್ದಿ ಹದ ಮಾಡಬೇಕಾಗುತ್ತದೆ. ಹೀಗೆ ಎರಡು ಅರ್ಧ ಗೋಲಾಕಾರದ ಬಟ್ಟಲುಗಳು ತಯಾರಾದ ಬಳಿಕ ಎರಡನ್ನೂ ಚರ್ಮದ ದಾರದಿಂದಲೇ ಆರ್ಧಾಂಶ ಹೋಲಿಯಲಾಗುತ್ತದೆ. ನಂತರ ತೆಂಗಿನ ನಾರನ್ನು ನೀರು ಹನಿಸಿ ಒದ್ದೆ ಮಾಡಿ ಈ ಗೋಲದೊಳಗೆ ತುರುಕಿ ಮತ್ತೆ ಒತ್ತಡ ಹಾಕಿ ಗುದ್ದಬೇಕು. ಹೀಗೆ ಗುದ್ದಿ ಗಟ್ಟಿಗೊಳಿಸುವಾಗ ಎಲ್ಲಿಯೂ ಗೋಲದೊಳಗೆ ಖಾಲಿ (ನಿರ್ವಾತ) ಜಾಗ ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. 

ಹೀಗೆ ಸ್ವಲ್ಪ  ಚಪ್ಪಟ್ಟೆಯಾದ ಚೆಂಡು ತಯಾರಾಗುತ್ತದೆ. ಇದನ್ನು ಸಂಬಂಧಪಟ್ಟವರು  ಒಯ್ದ ನಂತರ ಎಣ್ಣೆ ಕೊಡುತ್ತಾರೆ. ಆಗ ಪೂರ್ತಿಯಾಗಿ ಚೆಂಡಿನಾಕಾರಕ್ಕೆ ಬರುತ್ತದೆ. ಹೀಗೆ ಜಿಲ್ಲೆಯ ಹತ್ತು ಹಲವು ಧಾರ್ಮಿಕ ಕ್ಷೇತ್ರಗಳಿಗೆ ಚೆಂಡು ತಯಾರಿಸಿಕೊಡುವ ಅವಕಾಶ ಪಡೆದಿರುವ ಪದ್ಮನಾಭ ಅಪರೂಪದ ಸಾಧಕರೂ ಹೌದು. 

ಮೂಡುಬಿದರೆಯ ಹಳೆ ಠಾಣೆ ಬಳಿ ಕಲ್ಸಂಕದಲ್ಲಿ ಚರ್ಮದ ಚಪ್ಪಲಿ, ಶೂ ಬ್ಯಾಗ್ ತಯಾರಿ ಹೀಗೆ ಕರಕುಶಲಿಗರಾಗಿರುವ ಪದ್ಮನಾಭ ಹದಿನೈದು ವರ್ಷಗಳಿಂದ  ಇಲ್ಲಿನ ಸೊಸೈಟಿ ಬ್ಯಾಂಕಿನ ನಿರ್ದೇಶಕರಾಗಿ ಓರ್ವ ಜನಾನುರಾಗಿ ಸಹಕಾರಿಯೂ ಹೌದು. ಪರಂಪರೆಯ ಬೆಸುಗೆ ಇರುವ ಚೆಂಡುಗಳನ್ನು ತಯಾರಿಸುವ ಅವಕಾಶ ಪಡೆದಿರುವುದು ನನ್ನ ಭಾಗ್ಯ ಎನ್ನುವ ಪದ್ಮನಾಭರ( ಮೊ. 8970535339) ಈ ಕೆಲಸದ ಹಿಂದೆ ಪತ್ನಿ ಕಮಲ, ಪುತ್ರರಾದ ರಾಜೇಶ್, ರಾಕೇಶ್, ಪುತ್ರಿಯರಾದ ಜಯಶ್ರೀ, ಉಷಾ ಅವರ ಸಹಕಾರವೂ ಇದೆ. 

ಮೂಡುಬಿದಿರೆ ಚೆಂಡಿಗೂ '18'ರ ನಂಟು!

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಎಂದರೆ ಇಲ್ಲಿ 18ರ ನಂಟಿದೆ. 18 ಬಸದಿಗಳು, ಕೆರೆಗಳು, ದೇವಾಲಯಗಳು, ಆಳ್ವಾಸ್ ನಂತಹ ಹೆಸರಾಂತ ಶಿಕ್ಷಣ ಪ್ರತಿಷ್ಠಾನದ ಖ್ಯಾತಿವೆತ್ತ ಒಂದೇ ದೊಡ್ಡ ಆವರಣದಲ್ಲಿ 18 ಶಿಕ್ಷಣ ಸಂಸ್ಥೆಗಳು, ಅಲ್ಲಿ 18 ಸಾವಿರ ವಿದ್ಯಾರ್ಥಿಗಳು ಹೀಗೆ .. 18ರ ನಂಟು ಬೆಳೆಯುತ್ತದೆ. ವಿಶೇಷವೆಂದರೆ ಪದ್ಮನಾಭರೂ ಪ್ರಸಿದ್ಧ ಪೊಳಲಿ ಸೇರಿದಂತೆ ಜಿಲ್ಲೆಯ ಸುಮಾರು 18 ಕ್ಷೇತ್ರಗಳಿಗೆ ಅಲ್ಲಿನ ವಾರ್ಷಿಕ ಜಾತ್ರೆಗಳಿಗೆ ಚರ್ಮದ ಚೆಂಡು ಒದಗಿಸುತ್ತಾ ಬಂದಿರುವುದು! ಅದರಲ್ಲಿ ಪೊಳಲಿ ಚೆಂಡು ದೊಡ್ಡ ಗಾತ್ರದ್ದು. 

ವಾಮಂಜೂರಿನ ಅಮೃತೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ, ಬೆಳುವಾಯಿ ನಡ್ಯೋಡಿಗೆ ಮತ್ತು ಸಾಣೂರು. ಕೋಟೆಬಾಗಿಲು, ಮೂಡುಬಿದರೆಯ ಆದಿಶಕ್ತಿ ಮಹಾದೇವಿ ಮತ್ತು ಮಹಾಕಾಳಿ ದೇವಸ್ಥಾನಗಳು, ಮಲ್ಲೂರು, ಅಮ್ಟಾಡಿ, ಇರುವೈಲು, ಮುಚ್ಚೂರು, ಮಾರ್ನಾಡು, ಅಳಿಯೂರು, ಅಶ್ವತ್ಥಪುರ, ಪಾಲಡ್ಕ ಹೀಗೆ ವಿವಿಧೆಡೆ ಹಲವು ಗಾತ್ರದ ಚೆಂಡುಗಳನ್ನು ಒದಗಿಸುವ ಪದ್ಮನಾಭರಿಗೆ ಜನವರಿಯಿಂದ ಮೇವರೆಗೆ ಚೆಂಡಿನ ಸೀಸನ್. ಅದೊಂದು ವ್ಯಾಪಾರ ಎನ್ನುವುದಕ್ಕಿಂತ ಧಾರ್ಮಿಕ ಪರಂಪರೆಯ ಸೇವೆಯ ಅವಕಾಶ ಎನ್ನುತ್ತಾರೆ ಪದ್ಮನಾಭರು.

ಲೇಖನ ಕೃಪೆ: ಗಣೇಶ್ ಕಾಮತ್ ಮೂಡುಬಿದಿರೆ