ಮೂರು ಖಲೀಲ್ ಗಿಬ್ರಾನ್ ಕಥೆಗಳು

ಮೂರು ಖಲೀಲ್ ಗಿಬ್ರಾನ್ ಕಥೆಗಳು

ಖಗೋಳ ವಿಜ್ಞಾನಿ

ಆ ಮಂದಿರದ ಚಾವಣಿಯ ನೆರಳಲ್ಲಿ ನಾನೂ ನನ್ನ ಮಿತ್ರನೂ ನಡೆದುಹೋಗುತ್ತಿದ್ದಾಗ ಒಬ್ಬ ಕಣ್ಣಿಲ್ಲದ ಮನುಷ್ಯ ಒಬ್ಬನೇ ಕುಳಿತಿದ್ದುದನ್ನು ಕಂಡೆವು. ಕೂಡಲೇ ನನ್ನ ಮಿತ್ರನನ್ನು ಕೊಂಚ ಅಲ್ಲೇ ನಿಲ್ಲಲು ಹೇಳಿ, ಆ ಅಂಧನ ಬಳಿಗೆ ಹೋಗಿ ಶುಭಾಶಯ ಹೇಳಿದೆ. ಆಮೇಲೆ ಮಾತಿಗಿಳಿದೆ:

'ನಾನು ಹೀಗೆ ಕೇಳುತ್ತಿರುವುದಕ್ಕೆ ಕ್ಷಮೆ ಇರಲಿ ಸ್ವಾಮಿ. ಎಂದಿನಿಂದ ಹೀಗೆ ಕಣ್ಣಿಲ್ಲದೆ ಇದ್ದೀರಿ?'

ಆತ ಹೇಳಿದ: 'ಹುಟ್ಟಿದಂದಿನಿಂದಲೂ ಹೀಗೇ ಇದ್ದೇನೆ'.

'ಯಾವ ಪದವಿ ಗಳಿಸಿಕೊಂಡಿದ್ದೀರಿ,ಯಾವ ಜ್ಞಾನ ಶಾಖೆ ತಮ್ಮದು?'

'ನಾನೊಬ್ಬ ಖಗೋಳ ವಿಜ್ಞಾನಿ', ಎಂದ ಆತ. ಆಮೇಲೆ ತನ್ನ ಕೈಯನ್ನು ಎದೆಯ ಮೇಲೆ ಇರಿಸಿಕೊಂಡು ಹೇಳಿದ:

'ಇಲ್ಲಿಂದಲೇ ನಾನು ಸಕಲ ಸೂರ್ಯನನ್ನೂ ಚಂದ್ರರನ್ನೂ ಸಕಲ ನಕ್ಷತ್ರಗಳನ್ನೂ ವೀಕ್ಷಿಸುತ್ತಿರುತ್ತೇನೆ'.

***

ಕಣ್ಣು

ಒಂದು ದಿನ ಕಣ್ಣು ತನ್ನ ಸಂಗಡಿಗರಾದ ಕಿವಿ ಮತ್ತು ಮೂಗನ್ನು ಕರೆದು ಹೇಳಿತು: 'ಈ ಕಣಿವೆಗಳ ಆಚೆ, ಅದೋ ಅಲ್ಲಿ ನೀಲ ಮಂಜು ಪರದೆಯಿಂದ ಆವೃತವಾಗಿರುವ ಪರ್ವತವೊಂದು ಕಾಣಿಸುತ್ತಿದೆ ನನಗೆ. ನೋಡಿದಿರಾ, ಎಷ್ಟು ಸುಂದರವಾಗಿದೆ ಅಲ್ಲವೇ ಅದು?'

ಕಿವಿ, ಕಣ್ಣಿನ ಈ ಮಾತನ್ನು ಕೇಳಿ ಕೊಂಚ ಹೊತ್ತು ಸುಮ್ಮನಿತ್ತು. ಬಳಿಕ ಕಣ್ಣು ಉದ್ಧರಿಸಿದ ಪದಗಳನ್ನು ತನ್ನಲ್ಲೇ ಮನನ ಮಾಡಿತು. ಬಳಿಕ ಪ್ರಶ್ನಿಸಿತು: 'ಪರ್ವತ? ಯಾವ ಪರ್ವತ ? ಎಲ್ಲಿದೆ ಅದು? ಯಾವ ಪರ್ವತವೂ ಕೇಳಿಸುತ್ತಿಲ್ಲವಲ್ಲ ನನಗೆ!'

ಆಗ ಮೂಗು ಹೇಳಿತು: 'ಇಲ್ಲಯಾವ ಪರ್ವತವೂ ಇಲ್ಲ! ನನಗಂತೂ ಅದರ ವಾಸನೆ ತಲುಪಿಲ್ಲ

ಕಣ್ಣು ಸ್ವಲ್ಪ ಆ ಕಡೆ ತಿರುಗಿತೋ ಇಲ್ಲವೋ, ಇತ್ತ ಕಿವಿಯೂ ಮೂಗೂ ಕಣ್ಣಿನ ಉದ್ಗಾರದ ಅರ್ಥಹೀನತೆಯ ಕುರಿತು, ಕಣ್ಣಿಗೆ ಆಗಿರಬಹುದಾದ ದೃಷ್ಟಿಭ್ರಮೆಯ ಕುರಿತು ತಮ್ಮಲ್ಲೇ ಆಡಿಕೊಂಡವು. ಕೊನೆಗೆ, 'ಏನೋ ಆಗಿದೆ ಈ ಕಣ್ಣಿಗೆ' ಎಂಬ ನಿರ್ಧಾರಕ್ಕೆ ಬಂದವು.

***

ತುಂಬಾ ಹಳೆಯ ಮದ್ಯ

ಒಬ್ಬ ಶ್ರೀಮಂತನಿದ್ದ ಅವನ ಮನೆಯಲ್ಲಿ ಅತ್ಯಂತ ರಹಸ್ಯವಾದ ಸಾರಾಯಿಯ ಉಗ್ರಾಣವೊಂದಿತ್ತು. ಅದರಲ್ಲಿ ಹಲವಾರು ವರ್ಷಗಳಷ್ಟು ಹಳೆಯದಾದ ಶ್ರೇಷ್ಠ ಗುಣಮಟ್ಟದ ಮದ್ಯದ ಹೂಜಿಯೊಂದಿತ್ತು. ಸಹಜವಾಗಿ ಆತನಿಗೆ ಈ ಹಳೆಯ ಮದ್ಯದ ಬಗ್ಗೆ ತುಂಬಾ ಹೆಮ್ಮೆ ಇತ್ತು. ಇದನ್ನು ಅತ್ಯಂತ ವಿಶೇಷ ಸಂದರ್ಭದಲ್ಲಿ ಮಾತ್ರ ಬಳಸಬೇಕೆಂದು ಆತ ತೀರ್ಮಾನಿಸಿದ್ದ. ಅಂಥ ವಿಶೇಷ ಸಂದರ್ಭ ಯಾವುದೆಂಬುದು ಕೇವಲ ಅವನಿಗಷ್ಟೇ ಗೊತ್ತು.

ಒಮ್ಮೆ ಆ ಪ್ರಾಂತ್ಯದ ರಾಜ್ಯಪಾಲ ಈ ಶ್ರೀಮಂತನ ಮನೆಗೆ ಭೇಟಿ ಕೊಟ್ಟ. ಅತಿಥಿ ಸತ್ಕಾರದ ಹೊತ್ತಿಗೆ, 'ಆ ವಿಶೇಷ ಮದ್ಯದ ಹೂಜಿಯನ್ನು ಈ ಯಃಕಶ್ಚಿತ್ ರಾಜ್ಯಪಾಲನಿಗಾಗಿ ಬರಿದುಗೊಳಿಸುವುದೆ? ಛೇ. ಖಂಡಿತ ಇಲ್ಲ ಅಂದುಕೊಂಡ ಶ್ರೀಮಂತ.

ಆಮೇಲೆ ಆ ಧರ್ಮಪ್ರಾಂತ್ಯದ ಗುರುಗಳು ಆಗಮಿಸಿದರು. ಆಗ ಕೂಡ ಶ್ರೀಮಂತನಿಗೆ ಮದ್ಯದ ಹೂಜಿಯನ್ನು ಹೊರತೆಗೆಯಲು ಮನವೊಪ್ಪಲಿಲ್ಲ. 'ಇಲ್ಲ, ಹೂಜಿಯ ಮುಚ್ಚಳವನ್ನು ಈತನಿಗಾಗಿ ತೆರೆಯಲಾರೆ. ತೆರೆದರೂ ಅದರಿಂದ ಹೊಮ್ಮುವ ಅದ್ಭುತ ಪರಿಮಳ ಈತನ ಮೂಗಿನ ಹೊಳ್ಳೆಯನ್ನು ಖಂಡಿತ ತಲುಪಲಾರದು' ಎಂದು ಆತ ತರ್ಕಿಸಿದ.

ಮುಂದೊಂದು ದಿನ ಆ ರಾಜ್ಯದ ಯುವರಾಜ ಆಗಮಿಸಿದಾಗಲೂ ಅಷ್ಟೆ, 'ಕೇವಲ ಒಬ್ಬ ಯುವರಾಜನ ಆತಿಥ್ಯಕ್ಕೋಸ್ಕರ ಅಷ್ಟು ಬೆಲೆಬಾಳುವ ಮದ್ಯ ಬಳಸುವುದೆಂದರೆ? ಇದು ತುಂಬಾ ದುಬಾರಿಯಾಯಿತು!' ಎಂದುಕೊಂಡ ಆ ಶ್ರೀಮಂತ.

ತನ್ನ ತಮ್ಮನ ವಿವಾಹ ಸಮಾರಂಭದ ಹೊತ್ತಿಗೂ ಆ ಮದ್ಯವನ್ನು ಹೊರತೆಗೆಯುವ ಮನಸ್ಸಾಗಲಿಲ್ಲ ಆ ಶ್ರೀಮಂತನಿಗೆ. 'ಇಂಥ ಅತಿಥಿಗಳಿಗೆಲ್ಲ ಆ ಮದ್ಯ ಬೇಕಿಲ್ಲ' ಎಂದು ಆತ ಲೆಕ್ಕ ಹಾಕಿದ. ದಿನಗಳು ಉರುಳಿದವು. ವರ್ಷಗಳು ದಾಟಿದವು. ಶ್ರೀಮಂತನಿಗೆ ವೃದ್ಧಾಪ್ಯ ಬಂತು. ಮುಂದೆ ಮರಣವೂ ಪ್ರಾಪ್ತವಾಯಿತು.

ಎಲ್ಲ ಮನುಷ್ಯರಂತೆಯೇ ಆತನ ಅಂತ್ಯಕ್ರಿಯೆಯೂ ನೆರವೇರಿತು. ಆ ದಿನ, ಶ್ರೀಮಂತನ ಸಾರಾಯಿಯ ಉಗ್ರಾಣದಲ್ಲಿದ್ದ ಹೂಜಿಯನ್ನು ಇನ್ನಿತರ ಹೂಜಿಗಳ ಸಹಿತ ಹೊರತೆಗೆಯಲಾಯಿತು. ಶವಯಾತ್ರೆಗಾಗಿ ನೆರೆ ಗ್ರಾಮಗಳಿಂದ ಬಂದಿದ್ದ ರೈತರಿಗೆಲ್ಲ ವಿತರಿಸಲಾಯಿತು. ಅದು ಎಷ್ಟು ಶ್ರೇಷ್ಠವಾದ ಮದ್ಯ, ಎಷ್ಟು ಹಳೆಯ ಮದ್ಯ ಎಂಬೆಲ್ಲ ವಿಚಾರಗಳು ಅವರಲ್ಲಿ ಯಾವ ಒಬ್ಬನಿಗೂ ತಿಳಿಯಲೇ ಇಲ್ಲ. ತಿಳಿಯುವ ಅಗತ್ಯವಾದರೂ ಏನು? ಅವರ ಪಾಲಿಗೆ, ಇತರ ಎಲ್ಲರ ಹಾಗೆಯೇ, ಹೂಜಿಯಿಂದ ಬಟ್ಟಲಿಗೆ ಸುರಿದ ಮದ್ಯ - ಅದು ಕೇವಲ ಮದ್ಯ ಅಷ್ಟೆ!

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ