ಮೆಚ್ಚುಗೆಯ ನಿರೀಕ್ಷೆ ಬೇಡ

ಮೆಚ್ಚುಗೆಯ ನಿರೀಕ್ಷೆ ಬೇಡ

ದಿನ ನಿತ್ಯ ನಾವು ನೂರಾರು ಕೆಲಸಗಳನ್ನು ಮಾಡುತ್ತೇವೆ. ಆ ಕೆಲಸಗಳಲ್ಲಿ ಕೆಲವು ವೈಯಕ್ತಿಕ, ಹಲವು ಸಾಮಾಜಿಕ, ಇನ್ನು ಕೆಲವು ವೃತ್ತಿಪರ ಕೆಲಸಗಳು ಇರುತ್ತವೆ. ಇದಲ್ಲದೇ ಹಲವರು ವೃತ್ತಿ ಹೊರತುಪಡಿಸಿ ಪ್ರವೃತ್ತಿಯಾಗಿ ಹಲವಾರು ಆಸಕ್ತಿಯುತ ಕ್ಷೇತ್ರಗಳಲ್ಲಿ ನಾವು ತೊಡಗುವುದನ್ನು ಕಾಣುತ್ತೇವೆ. ನಾವು ಮಾಡುವ ಕೆಲಸ ಸಮಾಜಕ್ಕೆ ಉಪಯೋಗಿ ಆಗಿರಬೇಕು. ಅಂತಹ ಕೆಲಸವನ್ನು ನಾವು ನಿಷ್ಠೆ ಪ್ರಾಮಾಣಿಕತೆಯಿಂದ ಮಾಡಬೇಕು. ಅಂತಹ ಕೆಲಸಗಳು ನಮಗೆ ಆತ್ಮತೃಪ್ತಿ ನೀಡುವಂತಿರಬೇಕು. ಯಾರೋ ಮೇಲಾಧಿಕಾರಿಗಳು ಮೆಚ್ಚಲಿ, ಆಪ್ತರು ಹೊಗಳಲಿ, ಪರಿಚಿತರು ಶಹಬಾಸ್‌ ಎನ್ನಲಿ ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡು ಯಾವುದೇ ಕೆಲಸ ಮಾಡದಿರಿ. ಉತ್ತಮವಾಗಿ ಕೆಲಸ ಮಾಡುವದಷ್ಟೇ 'ನಮ್ಮ ಕರ್ತವ್ಯವಾಗಿರಲಿ ನಾವು ಮಾಡುವ ಕೆಲಸ ಉಳಿದವರಿಗೆ ಮೆಚ್ಚುಗೆ ಆಗಲಿ ಆಗದೇ ಇರಲಿ ಮೊದಲು ನಮ್ಮ ಆತ್ಮಕ್ಕೆ ಮೆಚ್ಚುಗೆಯಾಗಬೇಕು. ಅದರಿಂದ ಆತ್ಮ ಸಂತೋಷ ಆತ್ಮ ತೃಪ್ತಿ ಸಿಗಬೇಕು. ನಮ್ಮ ಕೆಲಸ, ಕಲೆ ಕಂಡು ಉಳಿದವರಿಂದ ಹೊಗಳಿಕೆ ಮೆಚ್ಚುಗೆ ನಿರೀಕ್ಷೆ ಮಾಡಬೇಡಿ. ಯಾರೂ ಮೆಚ್ಚದಿದ್ದರೂ ಆ ಕೆಲಸವನ್ನು ನಾವು ಇಷ್ಟ ಪಟ್ಟು ಮಾಡಬೇಕು. ನಮ್ಮ ಕೆಲಸ ಕಂಡು ಸಾವಿರಾರು ಪರಿಚಿತರಲ್ಲಿ ಬೆರಳಿಣಿಕೆಯಷ್ಟು ಜನ ಮೆಚ್ಚಬಹುದು ಅವರ ಪ್ರತಿಕ್ರಿಯೆ ಗೌರವಿಸಿ. ಮೆಚ್ಚದೇ ಇರುವವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಮಗೆ ಆಗದವರ ನಮ್ಮ ಏಳೆ ಸಹಿಸದವರು ನಮ್ಮ ಬಗ್ಗೆ ಅಸೂಯೆ ಹೊಂದಿದವರು ನಾವು ಎಷ್ಟೇ ಉತ್ತಮ ಕೆಲಸ ಮಾಡಿದರೂ ಮೆಚ್ಚುಗೆ ಸೂಚಿಸುವುದಿಲ್ಲ ಅವರು ಸೂಚಿಸಲಿ ಎಂದು ಅಂದುಕೊಳ್ಳಬಾರದು. ಎದೆ ತುಂಬಿ ಹಾಡುವೆನು ಅಂದು ನಾನು - ಗೀತೆ ಇಲ್ಲಿ ಸ್ಮರಿಸಬಹುದು. ಒಬ್ಬ ಗಾಯಕ ಅದ್ಭುತವಾಗಿ ಹಾಡಿದರೂ ಬೆರಳೆಣಿಕೆಯಷ್ಟು ಜನ ಮೆಚ್ಚುವ ಸಾಧ್ಯತೆ ಇದೆ. ಒಬ್ಬ ಬರಹಗಾರ ಅದೆಷ್ಟೇ ಉತ್ತಮವಾಗಿ ಬರೆದರೂ ಕೆಲವರು ಮೆಚ್ಚದೇ ಇರಬಹುದು. ನಮ್ಮೆಲ್ಲಾ ಕೆಲಸಗಳನ್ನು ಬೇರೆಯವರು ಮೆಚ್ಚಲಿ ಎಂದು ನಿರೀಕ್ಷೆ ತಪ್ಪು. ಸಹಾಯ ಪಡೆದ ವ್ಯಕ್ತಿಗಳಲ್ಲಿ ಹಲವರು ಮರಳಿ ಧನ್ಯವಾದ ಹೇಳರು. ಹೇಳಲೆಂದು ನಿರೀಕ್ಷೆ ಬೇಡ.

ಯಾರೂ ಮೆಚ್ಚಲಿ ಮೆಚ್ಚದೇ ಇರಲಿ ಹೊಗಳಲಿ ತೆಗಳಲಿ ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು. ಆ ಕಾರ್ಯ ನಮಗೆ ಮೆಚ್ಚುಗೆ ಆದರೆ ಸಾಕು. ಹೊಗಳಿಕೆ ನಿರೀಕ್ಷೆ ಮಾಡದಿರಿ. ತೆಗಳಿಕೆ ನಿರ್ಲಕ್ಷ್ಯ ಮಾಡಿ; ನಮ್ಮ ಹಾದಿ ನಮ್ಮ ಗುರಿ ಬಗ್ಗೆ ಸ್ಪಷ್ಟತೆ ಇರಲಿ.

-ರಂಗನಾಥ ಎನ್ ವಾಲ್ಮೀಕಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ