ಮೇ ೧ರಂದು ಕಾರ್ಮಿಕರಿಗೆ ಜೈ ಎನ್ನೋಣ

ಮೇ ೧ರಂದು ಕಾರ್ಮಿಕರಿಗೆ ಜೈ ಎನ್ನೋಣ

ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು *ದುಡಿಯುವ ಒಂದು ವರ್ಗ*. ಬಹಳ ಹಿಂದಕ್ಕೆ  ನೋಡಿದರೆ ಎಲ್ಲಾ ಮನೆಯಲ್ಲೂ ದುಡಿಯುವವರೇ ಇದ್ದದ್ದು. ಅಂದರೆ ‌ಸ್ವಂತ ತೋಟ, ಗದ್ದೆ, ಆ ಕೆಲಸಕ್ಕೆ ಕೂಲಿಗಳಾಗಿ ಬರುವವರೂ ಒಂದು ರೀತಿಯ ಕಾರ್ಮಿಕರೇ. ಬರು ಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು.

ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ ಬೇಕೆಂದು ಈ ವಿಶೇಷ ದಿನ ಹುಟ್ಟಿಕೊಂಡಿತು. ಮೊದಲು ಪ್ಯಾರಿಸ್ ದೇಶದಲ್ಲಿ ಮೇ ೧ರಂದು ಕಾರ್ಮಿಕ ದಿನ ಸ್ಥಾಪಿಸಲ್ಪಟ್ಟಿತು. ಭಾರತದಲ್ಲಿ ೨೦ನೇ ಶತಮಾನದ ದ್ವಿತೀಯಾರ್ಧದಲ್ಲಿ ಪ್ರಸ್ತಾವನೆಯಾಗಿ *ಮೇ ೧ ಕಾರ್ಮಿಕ ದಿನ* ಎಂದು ೧೯೨೭ರಲ್ಲಿ ಆರಂಭವಾಯಿತು. ಸಮಾಜವಾದಿ ಸಂಘಟನೆಗಳು, ಕಾರ್ಮಿಕ ಸಂಘಗಳು, ಬುದ್ಧಿಜೀವಿಗಳು ಸೇರಿ ಮೊದಲು ಇದನ್ನು ಸ್ಥಾಪಿಸಿದರು.

೨ನೇ ಮಹಾಯುದ್ಧದ ನಂತರ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಕಾರ್ಮಿಕರ ಕಲ್ಯಾಣ, ಕೆಲಸಕ್ಕೆ ತಕ್ಕ ಕೂಲಿ, ಸಂಭಾವನೆ, ರೋಗರುಜಿನಗಳ ಸಮಯದಲ್ಲಿ ಧನಸಹಾಯ, ಕೆಲಸ ಮಾಡುವಲ್ಲಿ ಉತ್ತಮ ಪರಿಸರ ನಿರ್ಮಾಣ,, ಶಿಕ್ಷಣ, ಮಕ್ಕಳಿಗೆ ವಿದ್ಯಾರ್ಥಿ ವೇತನಗಳು, ಮಹಿಳಾ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಗಳು, ವಿಮಾ ಯೋಜನೆ, ಕಾನೂನು ಸಲಹೆ ಮತ್ತು ಹೋರಾಟ, ಕೈಗಾರಿಕೆ, ಕನಿಷ್ಠ ಕೂಲಿ ನಿಗದಿ, ಈ ಮುಂತಾದ ವಿಷಯಗಳನ್ನು ಚರ್ಚೆ ಮಾಡಿ ಎಲ್ಲರಿಗೂ ಅನ್ವಯವಾಗುವಂತೆ ಜಾರಿಗೆ ತಂದು ಅನುಷ್ಠಾನ ಗೊಳಿಸುವ ಮಹಾ ಹೊಣೆಗಾರಿಕೆ ಈ ಕಾರ್ಮಿಕ ಸಂಘಟನೆಗಳದ್ದಾಗಿದೆ.

ಮುಖ್ಯವಾಗಿ ಸಾಮಾಜಿಕ ಭದ್ರತೆ ಒದಗಿಸುವುದು.ಮೇ ೧ರಂದು ಸಭೆ, ಚರ್ಚೆ, ನಿರ್ಣಯ, ಮೆರವಣಿಗೆ, ಪ್ರದರ್ಶನಗಳು, ಸಮಾರಂಭಗಳು, ಪರಿಹಾರ ವಿತರಣೆ ಮುಂತಾದ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ.

ಬಹಳಷ್ಟು ಸಂದರ್ಭದಲ್ಲಿ ಸರಕಾರ ನೀಡುವ ಸೌಲಭ್ಯಗಳನ್ನು ಪಡೆಯುವ ಸಂದರ್ಭದಲ್ಲಿ ಕಾರ್ಮಿಕರು ಹಿಂದೆ ಉಳಿಯುತ್ತಾರೆ. ಮಾಹಿತಿಯ ಕೊರತೆಯೋ ಅಥವಾ ಸರಕಾರ ಅವರಿಗೆ ಮಾಹಿತಿ ತಲುಪಿಸುವಲ್ಲಿ ಎಡವುತ್ತಿದೆಯೋ ಗೊತ್ತಿಲ್ಲ. ಆದರೆ ಸರಕಾರ ನೀಡುವ ಸೌಲಭ್ಯಗಳು ಕಾರ್ಮಿಕ ವರ್ಗವನ್ನು ತಲುಪುತ್ತಿಲ್ಲ. ಹೀಗಾಗಿ ಕಾರ್ಮಿಕ ಸಂಘಟನೆಗಳು ಮತ್ತಷ್ಟು ಬಲವಾಗಿ ಸಂಘಟಿತರಾಗಿ ಸೂಕ್ತ ಕಾರ್ಮಿಕ ಫಲಾನುಭವಿಗಳಿಗೆ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ.

ಬಹುತೇಕ ಕಾರ್ಮಿಕರಿಗೆ ತಾವು ದುಡಿಯುವ ಕಾರ್ಖಾನೆ ಅಥವಾ ಸಂಸ್ಥೆಯ ದುಡಿಮೆಯನ್ನು ಹೊರತು ಪಡಿಸಿ ಹೊರ ಪ್ರಪಂಚ ತಿಳಿದಿರುವುದಿಲ್ಲ. ದಿನದ ಬೇರೆ ಬೇರೆ ಪಾಳಿಗಳಲ್ಲಿ ನಿರಂತರವಾಗಿ ದುಡಿದು ತಮ್ಮ ಹಾಗೂ ತಮ್ಮ ಕುಟುಂಬದ ಹೊಟ್ಟೆಯನ್ನು ತುಂಬಿಸುತ್ತಿರುತ್ತಾರೆ. ಈ ಶ್ರಮಿಕ ವರ್ಗಕ್ಕೆ ಸಿಗಬೇಕಾದ ಅನುಕೂಲತೆಗಳನ್ನು ಕಾರ್ಮಿಕ ಸಂಘಟನೆಗಳು ಮತ್ತು ಸರಕಾರಗಳು ಮಾಡಿಕೊಟ್ಟಲ್ಲಿ ಎಲ್ಲರಿಗೂ ಸಮ ಬಾಳು, ಸಮ ಪಾಲು ಎಂಬ ನುಡಿಗೆ ಗೌರವ ದೊರೆಯುತ್ತದೆ. 

ಇದರಲ್ಲಿ ಆಲೋಚನೆ ಮಾಡುವ ಅಂಶವೆಂದರೆ, ಸಂಘಟಿತ, ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರೂ ಇದ್ದಾರೆ. ಫ್ಯಾಕ್ಟರಿ, ಬೀಡಿ, ಸಾಬೂನು, ಎಣ್ಣೆ, ಗೃಹನಿರ್ಮಾಣ, ತೋಟಗಾರಿಕೆ, ಹತ್ತು ಹಲವು ಸೇರುತ್ತದೆ. ಆಯಾಯ ವಿಭಾಗದಲ್ಲಿ ಸಂಬಂಧ ಪಟ್ಟವರು ಅವರ ಸದಸ್ಯತ್ವ ಮಾಡಿ, ಅವರಿಗಿರುವ ಸೌಲಭ್ಯಗಳನ್ನು ಹೇಳಿ ಕೊಡಿಸುತ್ತಾರೆ.

ಎಲ್ಲಾ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಎಲ್ಲವನ್ನೂ ಜಾರಿಗೆ ತಂದು, ಸರ್ವರು, ಆದಷ್ಟೂ ಉತ್ತಮ ಜೀವನ  ನಡೆಸುವಂತಾಗಲಿ ಎಂಬ ಹಾರೈಕೆ.

ಶ್ರಮಯೇವ ಜಯತೇ...

-ರತ್ನಾ ಕೆ.ಭಟ್, ತಲಂಜೇರಿ