ಮೌನದ ಮೌಲ್ಯ

ಮೌನದ ಮೌಲ್ಯ

ಒಮ್ಮೆ ರಾಜನೊಬ್ಬ 'ತನ್ನ ರಾಜ್ಯವನ್ನು ನೋಡಿಕೊಳ್ಳುವಲ್ಲಿಯೇ ನನ್ನ ಪೂರ್ತಿ ಸಮಯ ಹೋಗಿಬಿಡುತ್ತಿದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ. ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?' ಎಂದು ಗುರು ಲಾವೋ ತ್ಸು ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ. 'ಆಗಬಹುದು ರಾಜ. ಒಂದು ಶಬ್ದ ಸಾಕು.' 'ಹೌದಾ? ಯಾವುದು ಆ ಶಬ್ದ?' ಅದುವೇ 'ಮೌನ' ಎಂದು ಗುರು ಉತ್ತರಿಸುತ್ತಾರೆ.

ಮೌನ ಜಗತ್ತಿನ ಅದ್ಭುತ ಸಂಗೀತ ಅನ್ನುತ್ತಾರೆ. ಜಗತ್ತಿನ ಉಗಮವಾಗಿದ್ದೇ ಮೌನದ ಗರ್ಭದಿಂದ. ಹಾಗೆಯೇ ನಮ್ಮೆಲ್ಲ ಯೋಚನೆಗಳು ನಮ್ಮೊಡಲಿನ ಮೌನದಿಂದಲೇ ಹುಟ್ಟಿಕೊಳ್ಳುವವು. ‘ಮೌನಂ ಸಮ್ಮತಿ ಲಕ್ಷಣಂ’ ಅನ್ನೋದು ರೂಢಿ ಮಾತು. ಆದರೆ ಅದೇ ಪರಮಸತ್ಯವೇನೂ ಅಲ್ಲ. ಕೆಲವೊಮ್ಮೆ ಮೌನ ಅಸಹಾಯಕತೆಯೂ ಸಿಡುಕೂ ಅಸಹನೆಯೂ ಆಗಿರುತ್ತದೆ. ಆದ್ದರಿಂದ ಮೌನ ಅನ್ನುವುದು ಮಾತಿಲ್ಲದಿರುವಿಕೆಯಷ್ಟೇ ಆಗಿಬಿಡಬಾರದು. ಅದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಸ್ತ್ರವಾಗಬಾರದು. ಇಲ್ಲಿ 'ಮಾತು ಬೆಳ್ಳಿ ಮೌನ ಬಂಗಾರ' ಎಂಬ ನಮ್ಮ ನೆಲದ ನಾಣ್ಣುಡಿಯನ್ನು ನೆನಪಿಸಿಕೊಂಡರೆ ಮೌನಕ್ಕೆ ನಮ್ಮ ಹಿರಿಯರು ಹೇಗೆ ಸಮಾನ ಗೌರವ ಕೊಟ್ಟಿದ್ದರು ಎಂದು ಅರಿವಾಗುತ್ತದೆ. ಮನಸ್ಸಿಗೆ ನೆಮ್ಮದಿ ನೀಡುವ ಧ್ಯಾನದ ಸಮಯದಲ್ಲೂ ಮೌನಕ್ಕೆ ಬಹುವಾದ ಮೌಲ್ಯ! ಮಾತಿನ ಭರಾಟೆಯ ಲೋಕದಲ್ಲಿ ಒಮ್ಮೆ ಮೌನಕ್ಕೆ ಶರಣಾಗಿ ನೋಡಿ. ನೆಮ್ಮದಿಯು ನಮ್ಮನ್ನು ಹುಡುಕಿ ಬರುವುದು.

-ರವಿ ಕಂಗಳ ಕೊಂಕಣಕೊಪ್ಪ

ಚಿತ್ರ ಕೃಪೆ: ಇಂಟರ್ನೆಟ್ ತಾಣ