ಮೌಲ್ಯಗಳ ಸರದಾರ ಡಾ. ರಾಜಕುಮಾರ್

ಕನ್ನಡ ಸಿನಿಪ್ರಿಯರ ಪಾಲಿಗೆ ‘ಅಣ್ಣಾವ್ರು’ ಎನಿಸಿಕೊಂಡ ವರನಟ ಡಾ. ರಾಜಕುಮಾರ್ ಅವರ ಚಿತ್ರ ಜೀವನದ ಬಗ್ಗೆ ನೂರಾರು ಪುಸ್ತಕಗಳು ಈಗಾಗಲೇ ಬಂದಿವೆ. ಆದರೂ ಡಾ. ರಾಜ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇದೆ. ‘ಡಾ. ರಾಜ್ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳು’ ಎನ್ನುವ ವಿಷಯದ ಮೇಲೆ ಅದ್ಭುತವಾದ ಕೃತಿಯೊಂದನ್ನು ರಚಿಸಿ ಕನ್ನಡ ಸಾಹಿತ್ಯಾಸಕ್ತರ ಮಡಿಲಿಗೆ ಹಾಕಿದ್ದಾರೆ ಶಿಕ್ಷಕ, ವಿಜ್ಞಾನ ವಿಷಯಗಳ ಬರಹಗಾರ ಡಾ. ಕೆ. ನಟರಾಜ್. ಈ ಬೃಹತ್ ಗಾತ್ರದ (೬೫೨ ಪುಟಗಳು) ಕೃತಿಯಲ್ಲಿ ಡಾ. ರಾಜ್ ನಟಿಸಿದ ೧೨೫ ಚಲನಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಹುಡುಕುವ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ. ಡಾ. ರಾಜ್ ಅವರ ಚಿತ್ರಗಳನ್ನು ವೀಕ್ಷಿಸುವುದೇ ಚೆನ್ನ. ಅವರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತದೆ. ಆ ಸಂದೇಶವನ್ನು ಅವರ ಚಿತ್ರಗಳಿಂದ ಹುಡುಕಿ ತೆಗೆಯುವ ಅಸಾಮಾನ್ಯ ಕಾರ್ಯವನ್ನು ನಟರಾಜ್ ಅವರು ಮಾಡಿದ್ದಾರೆ.
೧೨೫ ಚಲನಚಿತ್ರಗಳನ್ನು ವೀಕ್ಷಿಸುವುದು ಅದರ ಜೊತೆಗೆ ಆ ಚಿತ್ರದಲ್ಲಿನ ಪ್ರಮುಖ ಅಂಶಗಳನ್ನು ಹುಡುಕಿ ತೆಗೆದು ಬರಹ ರೂಪಕ್ಕೆ ತರುವ ಕೆಲಸ ಮಾಡಿದ್ದಾರೆ. ಈ ಕೃತಿಯ ಮೊದಲ ಭಾಗದಲ್ಲಿ ಈ ೧೨೫ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಹುಡುಕಿ ತೆಗೆದಿದ್ದಾರೆ. ಎರಡನೇ ಭಾಗದಲ್ಲಿ ‘ಮೌಲ್ಯಗಳ ದಾರಿಯಲ್ಲಿ ಡಾ. ರಾಜ್’ ಅನ್ನುವ ವಿಷಯದ ಅಡಿಯಲ್ಲಿ ಸುಮಾರು ೫೦ ಬರಹಗಳನ್ನು ಬರೆದ್ದಾರೆ. ಅದರಲ್ಲಿ ರಾಜ್ ಎನ್ನುವ ಅದ್ಭುತ ಶಕ್ತಿ, ವಂಶದ ಹಿರಿಮೆ, ಬಾಲ್ಯದ ದಿನಗಳು, ಬಡತನ, ರಂಗಭೂಮಿಯ ಒಲವು, ಮದರಾಸಿನ ನಟನಾ ದಿನಗಳು, ಭಕ್ತಿ ಪ್ರಧಾನ ಪಾತ್ರಗಳು, ಸಾಮಾಜಿಕ ಬದ್ಧತೆ, ಸಹ ಕಲಾವಿದರೊಂದಿಗಿನ ಒಡನಾಟ, ರಾಜ್ ದಿನಚರಿ, ಗಾಯನ, ಜೀವನ ಶೈಲಿ, ನಾಯಕಿಯರ ಜೊತೆಗಿನ ಒಡನಾಟ, ಸರಳತೆ, ನಂಬಿಕೆ, ಚಿತ್ರರಂಗದ ಹಿರಿಯಣ್ಣನಾಗಿ, ವೀರಪ್ಪನ್ ಬಂಧನದಲ್ಲಿ ರಾಜ್ ಮುಂತಾದ ಮಾಹಿತಿಪೂರ್ಣ ಅಧ್ಯಾಯಗಳಿವೆ.
ಈ ಕೃತಿಗೆ ಬೆನ್ನುಡಿಯನ್ನು ಬರೆದು ಲೇಖಕರನ್ನು ಹುರಿದುಂಬಿಸಿದ್ದಾರೆ ಹಿರಿಯ ಬರಹಗಾರರಾದ ಬರಗೂರು ರಾಮಚಂದ್ರಪ್ಪ. ಅವರು ತಮ್ಮ ಬೆನ್ನುಡಿಯಲ್ಲಿ “ಶ್ರೀ ಕೆ. ನಟರಾಜ್ ಅವರು ಮೂಲತಃ ವಿಜ್ಞಾನ ವಿಷಯವನ್ನು ಕಲಿತವರು; ಕಲಿಸಿದವರು. ಆದರೆ ಅವರ ಸಾಹಿತ್ಯಾಸಕ್ತಿ ಮತ್ತು ಅಭಿವ್ಯಕ್ತಿ ಗಮನೀಯ ಪ್ರಮಾಣದಲ್ಲಿ ಬೆಳೆದಿದೆ; ಬೆಳೆಯುತ್ತಿದೆ. ಗದ್ಯಕೃತಿಗಳ ಜೊತೆಗೆ ದೈನಂದಿನ ವಿದ್ಯಮಾನಗಳ ಬಗ್ಗೆ ಚುಟುಕು ರೂಪದ ರಚನೆಗಳ ಮೂಲಕ ಪ್ರತಿಕ್ರಿಯಿಸುತ್ತಿರುವ ಅವರ ನಿತ್ಯಾಸಕ್ತಿ ಕಾಳಜಿಗೊಂದು ಸಾಕ್ಷಿ. ಈಗ ಅವರು 'ಮೌಲ್ಯಗಳ ಸರದಾರ ಡಾ. ರಾಜಕುಮಾರ್' ಎಂಬ ಮಹತ್ವದ ಗ್ರಂಥವನ್ನು ರಚಿಸಿರುವುದರ ಮೂಲಕ ಸಿನಿಮಾಸಕ್ತಿಯ ಗಂಭೀರತೆ ಮತ್ತು ಡಾ. ರಾಜಕುಮಾರ್ ಅವರ ಮಾನವೀಯ ಅನನ್ಯತೆಗೆ ಕನ್ನಡಿಯಾಗಿದ್ದಾರೆ.
ಡಾ. ರಾಜಕುಮಾರ್ ಅವರ ಸಾಧನೆಯನ್ನು ಕುರಿತು ಕನ್ನಡದಲ್ಲಿ ಅನೇಕ ಕೃತಿಗಳು ಪ್ರಕಟವಾಗಿವೆ. ಬಹುಶಃ ಯಾವುದೇ ಚಲನಚಿತ್ರ ಕಲಾವಿದರನ್ನು ಕುರಿತು ಇಷ್ಟು ಸಂಖ್ಯೆಯ ಕೃತಿಗಳು ರಚನೆಯಾಗಿಲ್ಲ. ಇದು ರಾಜಕುಮಾರ್ ಅವರ ಸಿನಿಮಾ ಸಾಧನೆಗಷ್ಟೇ ಅಲ್ಲ ಅವರು ಬದುಕಿದ ರೀತಿ ನೀತಿಗಳಿಗೂ ಸಂದ ಗೌರವ. ಶ್ರೀ ಕೆ. ನಟರಾಜ್ ಅವರು ಈ ಗ್ರಂಥದಲ್ಲಿ ಡಾ. ರಾಜಕುಮಾರ್ ಅವರ ಮಾನವೀಯ ಮೌಲ್ಯಗಳನ್ನು ಸಿನಿಮಾ ಮತ್ತು ಬದುಕು-ಎರಡೂ ನೆಲೆಗಳಿಂದ ಕಟ್ಟಿಕೊಟ್ಟಿದ್ದಾರೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಮುನ್ನುಡಿ ಎಂಬ ಹೊನ್ನುಡಿಯಲ್ಲಿ
“ಕಥಾ ಇಮಾಸ್ತೇ ಕಥಿತಾ ಮಹೀಯಸಾಂ
ವಿತಾಯ ಲೋಕೇಷು ಯಶಃ ಪರೇಯುಷಾಮ್ /
ವಿಜ್ಞಾನವೈರಾಗ್ಯ ವಿವಕ್ಷಯಾ ವಿಭೋ
ವಚೋ ವಿಭೂತಿರ್ನತು ಪಾರಮಾರ್ಥ್ಯಮ್"
ಮಹಾಭಾರತ, ಭಾಗವತ, ಭಗವದ್ಗೀತೆ, ವಿಷ್ಣು ಸಹಸ್ರನಾಮದಂತಹ ಮಹಾದ್ಭುತ ಭಕ್ತಿಸಾಹಿತ್ಯವನ್ನು ಜಗತ್ತಿಗೆ ನೀಡಿದ ಭಗವಾನ್ ವೇದವ್ಯಾಸರ ವಾಣಿ ಈ ಮೇಲಿನ ಶ್ಲೋಕ, ಮಹಾನುಭಾವರ, ವಿಭೂತಿಪುರುಷರ ಚರಿತೆಯನ್ನು ಅವರ ಸಿದ್ಧಿಸಾಧನೆಗಳನ್ನು, ಅವರು ಬದುಕಿದ ರೀತಿ ನೀತಿಗಳನ್ನು ಜೀವನಮೌಲ್ಯಗಳನ್ನು ಸಂಗ್ರಹಿಸಿ, ದಾಖಲಿಸಬೇಕು. ಏಕೆಂದರೆ, ಮುಂದಿನ ತಲೆಮಾರುಗಳಿಗೆ ಆದರ್ಶ, ಪ್ರೇರಣೆ, ಮಾರ್ಗದರ್ಶನಕ್ಕೆ ಇಂತಹ ಮಹಾನುಭಾವರ ಚರಿತ್ರೆಗಳು ತುಂಬಾ ಅಗತ್ಯವಿದೆ. ಈ ಸತ್ಕಾರ್ಯವನ್ನು ನಮ್ಮ ಕಾಲಘಟ್ಟದಲ್ಲಿ ಶಿಕ್ಷಣಸಂಸ್ಕೃತಿ ವಿಶಾರದರಾದ ಡಾ। ಕೆ. ನಟರಾಜ್ ಅವರು ಮಾಡಿ ಧನ್ಯಧನ್ಯರಾಗಿದ್ದಾರೆ.
ಯುಗಪುರುಷರೂ, ಶತಮಾನ ಸಾಧಕರೆಂದೇ ಖ್ಯಾತವಿಖ್ಯಾತರಾದ ಡಾ| ರಾಜಕುಮಾರ್ ಅವರ ಜೀವನಪ್ರೀತಿಯ, ವ್ಯಕ್ತಿತ್ವದ, ಅವರು ನಂಬಿದ ಹಾಗೂ ಬದುಕಿದ ಮೌಲ್ಯಗಳನ್ನು ಅವರು ಅಭಿನಯಿಸಿದ್ದ ಚಲನಚಿತ್ರ ಪಾತ್ರಗಳ ಮೂಲಕ ಪರಿಚಯಿಸಿ ಡಾ| ಕೆ. ನಟರಾಜ್ ನಾಡಿಗೆ ಅತ್ಯಂತ ಶ್ರೇಷ್ಠವೆನಿಸುವ ಉಪಕಾರವನ್ನು ಮಾಡಿದ್ದಾರೆ.” ಎಂದು ಬೆನ್ನು ತಟ್ಟಿದ್ದಾರೆ.
ಕೃತಿಯ ಲೇಖಕರಾದ ನಟರಾಜ್ ತಮ್ಮ ‘ಲೇಖಕರ ನುಡಿ’ಯಲ್ಲಿ ಡಾ. ರಾಜ್ ಅವರ ಮನದಾಳದಲ್ಲಿ ಅಚ್ಚೊತ್ತಿದ್ದಂತೆ ನೆಲೆ ನಿಂತ ಘಟನೆಗಳನ್ನು ವಿವರವಾಗಿ ಬರೆದಿದ್ದಾರೆ. “ಬರಗೂರು ರಾಮಚಂದ್ರಪ್ಪನವರು ಹೇಳುವಂತೆ, ನಾನೂ ರಾಜ್ ಕುಮಾರ್ರವರ 'ಅವ್ಯಕ್ತ ಅಭಿಮಾನಿ'. ರಾಜ್ ಅಭಿಮಾನದ ಹೊಳೆ ನನ್ನ ಈ ಜೀವನ ಕಾಲದ ತುಂಬಾ ಭೋರ್ಗರೆದು ಹರಿದಿದೆ. ನಾವು. ಗಾಂಧಿ, ಬಸವಣ್ಣ, ಅಂಬೇಡ್ಕರ್ರವರನ್ನು ಕಣ್ಣಾರೆ ಕಂಡವರಲ್ಲ; ಅವರ ಜೀವನವನ್ನು ನೋಡಿದವರೂ ಅಲ್ಲ. ಆದರೂ ಅವರನ್ನು ಪೂಜಿಸಿ ಗೌರವಿಸುತ್ತೇವೆ. ಏಕೆಂದರೆ ಅವರು ಬಾಳಿ ಬದುಕಿದ ರೀತಿಯೇ ಹಾಗಿತ್ತು. ಆದರೆ ರಾಜ್ರನ್ನು ನಾವು ಕಣ್ಣಾರೆ ಕಂಡವರು; ಅವರ ಚಿತ್ರಗಳೊಡನೆ ಜೀವಂತ ಬೆಸೆದವರು. ಕಣ್ಣಾರೆ ಕಂಡ ಆ ದೃಶ್ಯ ಭಾವಧಾರೆಯನ್ನು ನಾವು ಮರೆಯುವುದೆಂತು? ಇತಿಹಾಸದ ವ್ಯಕ್ತಿಗಳನ್ನು ಆದರಿಸಿ, ಅವರನ್ನು ಆದರ್ಶಗಳನ್ನು ಗೌರವಿಸುವುದು, ಪೂಜಿಸುವುದು ಅನಾದಿಯಿಂದಲೂ ನಡೆದು ಬಂದಿದೆ. ಆದರೆ ನಮ್ಮ ಕಾಲದ 'ಲೆಜೆಂಡರಿ ರಾಜ್' ಬಗ್ಗೆ ನೋಡಿದ್ದನ್ನು. ತಿಳಿದದ್ದನ್ನು ವ್ಯಕ್ತ ಪಡಿಸುವ ಪ್ರಯತ್ನವೇ ಈ ಪುಸ್ತಕ.
ತಂದೆ, ತಾಯಿಯ ಋಣ ತೀರಿಸಲಾಗದ್ದು ಎಂದು ಹೇಳುತ್ತಾರೆ ; ಅದು ನಿಜ. ಅದರಂತೆ ನಮಗೆ ಇನ್ನೂ ಹಲವಾರು ಋಣ ಬಾಧ್ಯತೆಗಳು ಇದ್ದೇ ಇರುತ್ತವೆ. ಅವುಗಳಲ್ಲಿ ಗುರುಋಣ, ದೇಶಋಣ, ಸಮಾಜಋಣ, ಸ್ನೇಹಋಣ ಮುಂತಾದವು. ಬಹುಶಃ ಯೋಗ್ಯನಾದ ಮನುಷ್ಯ ಈ ಋಣಗಳನ್ನು ತೀರಿಸಲು ಪ್ರಯತ್ನಿಸಬಹುದೇನೋ. ನಿಮಗೆ ಆಶ್ಚರ್ಯವಾಗಬಹುದು ನನಗೆ ಇಲ್ಲಿ ಇನ್ನೊಂದು ಋಣವೂ ಸೇರ್ಪಡೆಯಾಗಿಬಿಟ್ಟಿತ್ತು ; ಅದೇ 'ರಾಜ್ ಕುಮಾರ್ರವರ ಋಣ!' ನಿಜಕ್ಕೂ ನಿಮಗೆ ಆಶ್ಚರ್ಯವೆನ್ನಿಸಬಹುದು. ರಾಜ್ ಚಿತ್ರಗಳನ್ನು ನಾನು ನೋಡಲು ಆರಂಭಿಸಿದ್ದು ಮತ್ತು ನನಗೆ ಗುರುತಿಸುವ ಬೌದ್ಧಿಕ ಅರ್ಹತೆ ಬಂದಿದ್ದು ೧೯೬೨ ರಿಂದ; ಅದಾಗ ನನಗೆ ಆರು ವರ್ಷಗಳು.... ನಾನು ನೋಡಿ, ನನ್ನ ಮನಃಪಟಲದಲ್ಲಿ ಉಳಿದ ರಾಜ್ ಮೊದಲ ಚಿತ್ರ 'ಕಿತ್ತೂರು ಚೆನ್ನಮ್ಮ'. ಇದರಲ್ಲಿ ರಾಜ್ರವರದ್ದು ಮಲ್ಲಸರ್ಜನ ಪಾತ್ರ! ಇದರಲ್ಲಿ ರಾಜ್, ರಾಜಗಾಂಭೀರ್ಯ ಪಾತ್ರದಲ್ಲಿ ನನ್ನ ಮನಸ್ಸಿನಲ್ಲಿ ನೆಲೆಯೂರಿಬಿಟ್ಟಿದ್ದರು!
ನಂತರ ನಾವು ನೋಡಿದ್ದು ರಾಜ್ರ ಸಾಲು ಸಾಲು ಚಿತ್ರಗಳೇ. ನಮ್ಮದೋ ಎಳೆ ಮನಸ್ಸಿನ ಬಿಳಿಯ ಹಾಳೆ: ರಾಜ್ರವರದ್ದು ಮೌಲ್ಯಗಳನ್ನು ಅಚೊತ್ತುವ ಅಭೂತಪೂರ್ವ ಅಭಿನಯ... ನಿಜಜೀವನದಲ್ಲಿ, ನಮ್ಮ ತಂದೆ ತಾಯಿಯರ ಕಾಳಜಿಯ ಉಪದೇಶ; ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಹೊತ್ತ ನಮ್ಮ ರಾಜಕುಮಾರರ ಸಾಮಾಜಿಕ ಮೌಲ್ಯಗಳ ಅನಾವರಣ; ನಮ್ಮ ಬೌದ್ಧಿಕ ವಿಕಾಸಕ್ಕೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕಿತ್ತು? ಶಾಲೆಗಳಲ್ಲಿ ಪಾಠ ಪ್ರವಚನಗಳಾದ ಮೇಲೆ ನಾವೆಲ್ಲಾ ಹುಡುಗರು ಗುಂಪುಗೂಡಿ ಕೂತು ಚರ್ಚಿಸುತ್ತಿದ್ದುದೇ ಅಂದಿನ ಕನ್ನಡ ಚಿತ್ರಗಳನ್ನು. ಅದರಲ್ಲೂ ರಾಜ್ ಚಿತ್ರಗಳೆಂದರೆ ನಮಗೆ ಹಬ್ಬ. ಅಂದು ನಾವು ಸಿನಿಮಾ ನೋಡುತ್ತಿದ್ದುದೆ ಟೆಂಟ್ಗಳಲ್ಲಿ. 'ನಲವತ್ತು ಪೈಸೆ' ನೆಲದ ಚಾರ್ಜ್ ಆಗಿದ್ದರೆ, ಹುಡುಗರು ನಾವೆಲ್ಲಾ ಇಪ್ಪತ್ತು ಪೈಸೆ ಕೊಟ್ಟು ಒಳನುಗ್ಗುತ್ತಿದೆವು. ಆ ಹರಿದ ಟೆಂಟ್ಗಳಲ್ಲಿ ಅಲ್ಲಲ್ಲಿ ನಕ್ಷತ್ರಗಳು, ಚಂದ್ರ ಕಾಣುತ್ತಿದ್ದರೂ ನಾವು ಮಾತ್ರ ಏಕಾಗ್ರಚಿತ್ತತೆಯಿಂದ ರಾಜ್ ಚಿತ್ರಗಳನ್ನು ನೋಡುತ್ತಿದ್ದೆವು. ಶಾಲೆಯಲ್ಲಿ ಬಿಡುವು ಸಿಕ್ಕಾಗ, ಯಾರು ಮೊದಲು ಸಿನಿಮಾ ನೋಡಿರುತ್ತಾರೋ ಅವರಿಂದ ವೀಕ್ಷಕ ವಿವರಣೆ!. ನಾವಂತೂ ಕಣ್ಣು ಬಾಯಿ ತೆರೆದುಕೊಂಡೇ ಕೇಳುತ್ತಿದ್ದೆವು. ಅದರಲ್ಲೂ ನಮ್ಮ ಸ್ನೇಹಿತ ಸುಬ್ಬಣ್ಣ ರಾಜ್ ಚಿತ್ರಗಳ ವಿಮರ್ಶೆ ಮಾಡುತ್ತಿದ್ದರೆ, ನಿಜವಾಗಿಯೂ ಚಿತ್ರದ ವೀಕ್ಷಣೆಯನ್ನೇ ಮೀರಿಸುವಂತಿರುತ್ತಿತ್ತು. ಬೇರೆ ಯಾವುದೇ ಭಾಷೆಯ ಚಿತ್ರ ನೋಡಿದರೂ 'ನಮ್ಮ ರಾಜ್ ಕುಮಾರೇ ಗ್ರೇಟ್' ಎನ್ನುವಂತೆ ವರ್ಣಿಸುತ್ತಿದ್ದ ಸುಬ್ಬು!
ರಾಜ್ ಚಿತ್ರಗಳು ನಮ್ಮ ಬಾಲ್ಯದ ಜೀವನಕ್ಕೇ ಒಂದು ರೀತಿಯ ಟಾನಿಕ್ನಂತೆ ಇದ್ದವು. ಅವರು ತಮ್ಮ ಚಿತ್ರಗಳಲ್ಲಿ ತೋರಿಸುತ್ತಿದ್ದ ಮೌಲ್ಯಗಳು, ನಮ್ಮ ಜೀವನವನ್ನು ಅವ್ಯಕ್ತವಾಗಿ ಆವರಿಸುತ್ತಲೇ ಹೋದವು. ಮುಂದೆ ಕಾಲೇಜಿನಲ್ಲೂ ಕೆಲವು ಸ್ನೇಹಿತರು ರಾಜ್ ಚಿತ್ರಗಳನ್ನು ಹೀಗಳೆದರೆ, ಅಲ್ಲಿ ದೊಡ್ಡ ವಾಗ್ಯುದ್ಧವೇ ನಡೆದು ಬಿಡುತ್ತಿತ್ತು! ರಾಜ್ ಚಿತ್ರಗಳನ್ನು ಅಂದು ನಾವೆಲ್ಲಾ ತಂದೆ, ತಾಯಿ, ತಮ್ಮ, ತಂಗಿಯರೊಂದಿಗೆ ಯಾವ ಮುಜಗರವೂ ಇಲ್ಲದೆ ನೋಡುತ್ತಿದ್ದೆವು. ಅದು ನಮ್ಮ ಕೌಟುಂಬಿಕ ಬಂಧನವನ್ನು ಇನ್ನೂ ಹೆಚ್ಚು ಮಾಡುತ್ತಿತ್ತು. ತಂದೆ ತಾಯಿ ಹಾಗೂ ಬಂಧುಗಳು ಹೇಳುತ್ತಿದ್ದ ಬುದ್ಧಿಮಾತುಗಳನ್ನೂ ಉದ್ದೀಪನಗೊಳಿಸುತ್ತಿದ್ದವು. ರಾಜ್ ಚಿತ್ರಗಳನ್ನು ನಾವು ನೋಡಿ ಮೌಲ್ಡ್ ಆದ ರೀತಿಯೇ ಹಾಗಿತ್ತು!”
ನಿಜಕ್ಕೂ ನಟರಾಜ್ ಅವರ ಮಾತುಗಳು ಸತ್ಯ. ಡಾ. ರಾಜ್ ನಟನೆಯನ್ನು ನೋಡಿ ಮೆಚ್ಚಿಕೊಂಡವರು ಅನೇಕರು, ಅನುಸರಿಸಿದವರು ಇನ್ನು ಕೆಲವರು, ಚಿತ್ರದಲ್ಲಿನ ಉತ್ತಮ ಗುಣಗಳನ್ನು ಅನುಸರಿಸಿದವರು ಮತ್ತೆ ಕೆಲವರು. ಹೀಗೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವೇ ಆಗಿಹೋಗಿದ್ದರು ರಾಜಣ್ಣ. ಈ ಒಂದು ಉತ್ತಮ ಕೃತಿಯ ಪ್ರಕಾಶಕರಾದ ಸ್ನೇಹ ಬುಕ್ ಹೌಸ್ ನ ಕೆ.ಬಿ.ಪರಮಶಿವಪ್ಪನವರು ತಮ್ಮ ಮನದಾಳದ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಈ ಕೃತಿಯ ಕೊನೆಯ ಪುಟಗಳಲ್ಲಿ ಹಲವಾರು ಮಂದಿ ಮಹನೀಯರು ಡಾ ರಾಜ್ ಬಗ್ಗೆ ಆಡಿದ ಮಾತುಗಳಿವೆ. ಡಾ. ರಾಜ್ ಚಿತ್ರಸಂಪುಟದಲ್ಲಿ ಅವರ ಬದುಕಿನ ಮತ್ತು ಚಿತ್ರದ ಹಲವಾರು ವರ್ಣರಂಜಿತ ಚಿತ್ರಗಳಿವೆ. ಡಾ. ಎಂ ಎಸ್ ಮೂರ್ತಿಯವರ ಡಾ. ರಾಜ್ ಚಿತ್ರವನ್ನು ಮುಖಪುಟಕ್ಕೆ ಭಾಗ್ಯಸುತ ಅವರು ಸೊಗಸಾಗಿ ಬಳಸಿಕೊಂಡಿದ್ದಾರೆ. ಶತಮಾನದ ಮಹಾನ್ ನಟನಿಗೆ ಸಲ್ಲಬೇಕಾದ ನ್ಯಾಯವನ್ನು ಲೇಖಕರಾದ ಕೆ ನಟರಾಜ್ ಅವರು ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ‘ಮೌಲ್ಯಗಳ ಸರದಾರ ಡಾ. ರಾಜಕುಮಾರ್’ ಕೃತಿ ಒಂದು ಸಂಗ್ರಹ ಯೋಗ್ಯ ಪುಸ್ತಕ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.