ಯಶಸ್ಸಿನ ಹಾದಿಯಲ್ಲಿ...

ಅನುಭವವೇ ಜೀವನ ಎನ್ನುವಂತೆ ಯಶಸ್ಸಿನ ಹಾದಿಯಲ್ಲಿ ನಡೆದು ಯಶಸ್ಸು ಪಡೆದವರ ಅನುಭವದ ಯಶೋಗಾಥೆ ನಮ್ಮನ್ನೂ ಸಹ ಆ ಯಶಸ್ವಿ ಮಾರ್ಗದತ್ತ ಕರೆದೊಯ್ಯುತ್ತದೆ. ಯಶಸ್ಸು ಎನ್ನುವುದಕ್ಕೆ ಒಬ್ಬೊಬ್ಬರದು ಒಂದೊಂದು ವಿಭಿನ್ನ ವಿಚಾರಗಳು ಇವೆ. ಯಶಸ್ಸು ಎಂಬುದು ಅವರವರ ದೃಷ್ಟಿಕೋನದಂತೆ ಅವರಿಗೆ ಗೋಚರಿಸುತ್ತದೆ.
ಪ್ರತೀಯೊಬ್ಬರ ಯಶಸ್ಸಿಗೆ ಯಾವುದೋ ಬಲವಾದ ಪರಿಸ್ಥಿತಿ,ಮನಸ್ಥಿತಿ,ಸಂಗತಿಗಳು ಕಾರಣವಾಗಿರುತ್ತವೆ. ಹಾಗೇ ಕೆಲವು ಮಂದಿ ವ್ಯಕ್ತಿಗಳೂ ಕೂಡಾ ಪ್ರತ್ಯಕ್ಷ (ನೇರವಾಗಿ) ಅಥವಾ ಪರೋಕ್ಷವಾಗಿ ಕಾರಣರಾಗಿರುತ್ತಾರೆ. ಇದನ್ನು ಬಿಟ್ಟು ಬಲವಾಗಿ ಪ್ರಭಾವಬೀರುವ ಅಂಶಗಳು ಅದೇನೋ ಕನಸುಗಳು, ಆಸೆಗಳು, ಆಸೆಗಳನಿಡೇರಿಸಲು ಹುಟ್ಟಿಕೊಂಡ ಭರವಸೆಗಳು, ಬದುಕಲೇಬೇಕೆಂಬ ನಂಬಿಕೆಗಳು ಸತತ ಸೋಲಿನಿಂದ ಕಲಿತ ಪಾಠಗಳು, ನಿಂದನೆಗಳು, ಚುಚ್ಚು ಮಾತುಗಳು, ಇವನಿಂದ ಏನೂ ಆಗುವುದಿಲ್ಲ ಎಂಬ ಕೊಂಕು ನುಡಿಗಳು, ಬಡತನ, ಪರಿಸ್ಥಿತಿಗಳು, ಸಾಧಿಸುವ ಛಲ,ಬಿದ್ದಾಗ ಕೇಳಿಸಿಕೊಳ್ಳುವ ಅಪಹಾಸ್ಯದ ನುಡಿಗಳು, ಇವನೆಲ್ಲಾ ಏನು ಮಾಡಿಯಾನು ಎನ್ನುವ ಮಾತುಗಳು ಇವಲ್ಲದೇ ಏನನ್ನಾದರೂ ಸಾಧಿಸಬೇಕು, ನಾನಿಲ್ಲದಿದ್ದರು ನನ್ನ ಕಾರ್ಯಗಳು ನನ್ನನ್ನು, ನನ್ನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುವಂತನೇಕ ಅಂಶಗಳು. ಹಾಗೇ ಯಾರೋ ಒಬ್ಬ ವ್ಯಕ್ತಿಯ ಸಾಧನೆ, ನಿತ್ಯದ ಬದುಕಿನಲ್ಲಿ ಬದುಕುವ ದಾರಿಗಳ ಚಿತ್ರಣಗಳು ಅಂಗವೈಕಲ್ಯತೆಯಿದ್ದರೂ ಸಹ ಸಾಧಿಸಿರುವ ವ್ಯಕ್ತಿಗಳ ಸ್ಫೂರ್ತಿ ಚಿತ್ರಣಗಳು ಕಣ್ಮುಂದೆ ಬಂದು ಬಡಿದಾಗ ನಾವು ಆ ಕಡೆಗೆ ಸಾಗಬೇಕೆಂಬ, ಯಶಸ್ವಿಯಾಗಬೇಕೆಂಬ ಹಠ, ಮಹೋನ್ನತ ಆಸೆ ಆ ಕ್ಷಣ ಹುಟ್ಟುವುದಾದರೂ..ಅದು ಅರೇ ಕ್ಷಣಕ್ಕೆ ಆಗಬಾರದು ಅದನ್ನು ಸಾಧಿಸುವವರೆಗೂ ಪಟ್ಟು ಬಿಡದೇ ಹೋರಾಡಲೇಬೇಕು.
ಕೆಲವೊಮ್ಮೆ ಹೀಗಾಗುವುದು ಸಹಜ, ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುತ್ತಿರುವಾಗ ನಾಯಕನನ್ನು ತನಗೇ ಹೋಲಿಸಿಕೊಂಡು ಏನೇನೋ ಕನಸು ಕಾಣುವ, ತಾನೂ ಸಹ ಅವನಂತೆ ಎಂದುಕೊಳ್ಳುವ ಮನೋಭಾವ ಮೂಡುತ್ತದೆ...
ಅರೇಕ್ಷಣದ ತೃಪ್ತಿ ಅಲ್ಲಿ ಸಿಗಬಹುದು. ಆದರೆ ಹೊರಬಂದಾಗ ಮತ್ತೇ ಅದೇ ಸಹಜ ರೀತಿಯದು. ಪ್ರತೀಯೊಂದು ಯಶಸ್ಸು ಸಹ ಸತತ ಪ್ರಯತ್ನ, ಕಠಿಣ ಪರಿಶ್ರಮ,ಅವಿರತ ದುಡಿಮೆಯಿಂದ ಮಾತ್ರ ಸಾಧ್ಯ. ನಿದ್ರೆ,ಆಹಾರ ನೀರಡಿಕೆ ಎಲ್ಲವನ್ನೂ ಬಲಿ ನೀಡಬೇಕಾಗುತ್ತದೆ.
ಯಶಸ್ಸೆಂಬುದು ಸುಲಭಕ್ಕೆ ದಕ್ಕುವ ನೀರು ಕುಡಿದು ದಾಹ ತೀರಿಸಿಕೊಳ್ಳುವ ರೀತಿಯಲ್ಲಿ ಯಾವತ್ತೂ ಇರದು. ಯಶಸ್ಸು ಎಂಬುದು ಸದಾ ಒಳಿತನ್ನೇ ಬಯಸುವಂತಾಗಬೇಕು. ಒಳ್ಳೆಯದನ್ನು ಮಾಡುತ್ತಾ ಸಾಗುತ್ತಿರುವುದು,ಅದು ಸಣ್ಣದಾಗಿರಲಿ, ದೊಡ್ಡದಾಗಿರಲಿ ಅದು ನಮ್ಮನ್ನು ಮುಂದಕೆ, ಮೇಲ್ಮಟ್ಟಕ್ಕೆ ಕರೆದೊಯ್ಯುತ್ತಿರುತ್ತದೆ. ನಿಮ್ಮ ಹತ್ತಿರ ನೂರು ಜನರ ಹಸಿವನ್ನು ನೀಗಿಸಲು ಸಾಧ್ಯವಾಗದೇ ಇರಬಹುದು ಆದರೆ ನೀವು ತಿನ್ನುವುದರಲ್ಲಿ ಒಬ್ಬರಿಗಾದರೂ ನೀಡಿ ಅವರ ಹಸಿವು ನೀಗಿಸಬಹುದಲ್ಲವೇ ಎಂದು ಯಶಸ್ವಿಯಾದವರು ಹೇಳಿದ್ದಾರೆ.. ಯಶಸ್ಸಿನ ಹಾದಿಯ ಯೋಚನೆಗಳು,ಯೋಜನೆಗಳು ಈರೀತಿಯಲ್ಲೂ ಇರಬಹುದು.
ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು
ಓ ನನ್ನ ಚೇತನ
ಆಗು ನೀ ಅನಿಕೇತನ ಎನ್ನುವ ಶ್ರೇಷ್ಠರ ನುಡಿ...ಗುರಿಯೆಂಬುದಕ್ಕೆ,ಯಶಸ್ಸು ಎಂಬುದಕ್ಕೆ ಕೊನೆಯಿರದು ಅದು ನಮ್ಮ ಬದುಕಿನ ಕೊನೆಯವರೆಗಿನ ಪಯಣವಾಗಿರುತ್ತೆ ಎನ್ನಬಹುದು.
-ಶಾಂತಾರಾಮ ಶಿರಸಿ, ಉತ್ತರ ಕನ್ನಡ.
ಚಿತ್ರ ಕೃಪೆ: ಇಂಟರ್ನೆಟ್ ತಾಣ