ಯುವಜನತೆಗೆ ಸ್ಪೂರ್ತಿ

ಯುವಜನತೆಗೆ ಸ್ಪೂರ್ತಿ

ಪುಸ್ತಕದ ಲೇಖಕ/ಕವಿಯ ಹೆಸರು
ಬಾಲಚಂದ್ರ ಎಂ
ಪ್ರಕಾಶಕರು
ಪವಾಡಶ್ರೀ ಪ್ರಕಾಶನ
ಪುಸ್ತಕದ ಬೆಲೆ
ರೂ.150.00

‘ಯುವಜನತೆಗೆ ಸ್ಪೂರ್ತಿ’ ಎಂಬ ಪುಸ್ತಕವನ್ನು ಬಾಲಚಂದ್ರ ಎಂ ರವರು ಬರೆದಿದ್ದಾರೆ. ಈ ಪುಸ್ತಕವನ್ನು ಈಗಿನ ಯುವಜನತೆಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಯುವಮಂದಿಯಲ್ಲಿ ಆತ್ಮವಿಶ್ವಾಸವನ್ನು ಬಡಿದೆಚ್ಚರಿಸುವುದಕ್ಕೆ ಮತ್ತು ದುರ್ಬಲತೆಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವುದಕ್ಕೆ, ತಮ್ಮ ಈ ಪುಸ್ತಕದಲ್ಲಿ ೬೩ ಲೇಖನಗಳ ಮೂಲಕ ಯುವಮಂದಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಪ್ರತಿ ವರ್ಷ ಸಾವಿರಾರು ಯುವ ಮಂದಿ ಹಲವಾರು ಕಾರಣಗಳಿಗೆ ತಮ್ಮ ಅತ್ಯಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಸಣ್ಣ ಸಣ್ಣ ವಿಷಯಗಳಿಗೆ ತಮ್ಮ ಜೀವವನ್ನು ಕಳೆದುಕೊಳ್ಳುವುದಕ್ಕೆ ತಯಾರಾಗುವ ಯುವ ಮಂದಿ, ಸಾಯುವ ಮುನ್ನ ಈ ಪುಸ್ತಕ ಓದಿದ್ದರೆ ತಮ್ಮ ನಿಲುವನ್ನು ಬದಲಾಯಿಸುತ್ತಾರೆ ಎಂಬ ಬಲವಾದ ನಂಬಿಕೆ ನನ್ನಗಿದೆ. ಏಕೆಂದರೆ ಲೇಖಕರು ಸೋತು ಗೆದ್ದವರ ಮತ್ತು ಕಷ್ಷವನ್ನು ಮೆಟ್ಟಿ ಸಾಧನೆ ಮಾಡಿದವರ ಜೀವನವನ್ನು ನಮಗೆ ತಮ್ಮ ಲೇಖನಗಳ ಮೂಲಕ ತಿಳಿಸಿದ್ದಾರೆ.

ಪ್ರಸ್ತುತ ಸಮಾಜದಲ್ಲಿ ಯುವಮಂದಿ ಸಾಕಷ್ಟು ನ್ಯೂನತೆಗಳಿಂದ ಬಳಲುತ್ತಿದ್ದಾರೆ. ಕೆಲವರಿಗೆ ಉದ್ಯೋಗದ ಸಮಸ್ಯೆ, ಕೆಲವರಿಗೆ ಖಿನ್ನತೆಯ ಸಮಸ್ಯೆ, ಕೆಲವರಿಗೆ ಏನು ಮಾಡಬೇಕು ಎನ್ನುವ ಗುರಿಯೇ ಇಲ್ಲ, ಕೆಲವರಿಗೆ ಭವಿಷ್ಯದ ಚಿಂತನೆ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಯುವಮಂದಿಗೆ ಸ್ಪೂರ್ತಿ ತುಂಬುವ ಅನೇಕ ಪುಸ್ತಕಗಳಿವೆ, ಆ ಪುಸ್ತಕಳಲ್ಲಿ ಈ ಪುಸ್ತಕ ಕೂಡ ಒಂದು. ಯುವ ಮಂದಿ, ಈ ಪುಸ್ತಕ ಓದುವ ಮೂಲಕ ತಮ್ಮ ನ್ಯೂನತೆಗಳಿಗೆ  ಒಂದಲ್ಲಾ ಒಂದು ಲೇಖನಗಳಲ್ಲಿ ಪರಿಹಾರ ಕಂಡುಕೊಳ್ಳ ಬಹುದು. ಲೇಖಕರು ತಮ್ಮ ಪುಸ್ತಕದಲ್ಲಿ ಅನೇಕ ಮಹನೀಯರ ಯಶೋಗಾಥೆಯ ಬಗ್ಗೆ ಬಹಳ ಸ್ವಾರಸ್ಯವಾಗಿ ಮತ್ತು ವಿವರವಾಗಿ ತಿಳಿಸಿದ್ದಾರೆ. ಲೇಖಕರು ಅನೇಕ ಸಣ್ಣ ಕತೆಗಳ ಮೂಲಕ ಯುವಮಂದಿ ಹೇಗೆ ತಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. 

ಲೇಖಕರು ತಮ್ಮ ಮೊದಲ ಲೇಖನದಲ್ಲಿ ಜಿಂಕೆಯ ಉದಾಹರಣೆ ನೀಡುತ್ತ ಹೇಗೆ ಯುವಮಂದಿ ತಮ್ಮ ಸುತ್ತಲೂ ಇರುವ ಸಮಸ್ಯೆಗಳ ಕಡೆ ಗಮನ ಹರಿಸದೆ ತಮ್ಮ ಪ್ರಸ್ತುತ ಕರ್ತವ್ಯದ ಕಡೆ ಗಮನ ಹರಿಸಿ ಎಂದು ತಿಳಿಸಿದ್ದಾರೆ. ತಮ್ಮ ಎರಡನೆ ಲೇಖನದಲ್ಲಿ ಅಪ್ಪ ಹೇಗೆಲ್ಲಾ ತಮ್ಮ ಮಕ್ಕಳ ಭವಿಷ್ಯಕ್ಕೆ ದುಡಿಯುತ್ತಾನೆ ಎಂಬುದನ್ನು ತಿಳಿಸಿದ್ದಾರೆ. ಯುವ ಮಂದಿ ತಮ್ಮ  ಪೋಷಕರ ಬಳಿ, ಅದು ಬೇಕು ಇದು ಬೇಕು, ಎನ್ನುವವರು ಈ ಕತೆ ಓದಬೇಕು. ಮೂರನೇ ಲೇಖನದಲ್ಲಿ ಭಾರತದ ಯುವ ಜನಸಂಖ್ಯೆ ಮತ್ತು ಯುವಶಕ್ತಿಯ ಅಸಮರ್ಪಕ ಬಳಕೆಯ ಬಗ್ಗೆ ತಿಳಿಸಿದ್ದಾರೆ. ಭಾರತವನ್ನು ಬದಲಾಯಿಸೋಣ ಎಂಬುದು ಈ ಲೇಖನದ ಆಶಯ. ತಮ್ಮ ನಾಲ್ಕನೇ ಲೇಖನ ‘ಯಾರೋ ಏನೋ ಅಂದರು ಅಂತ’, ಶಿರ್ಷಿಕೆಯೆ ಹೇಳುವಂತೆ ಯುವಮಂದಿ ಅನಗತ್ಯ ಮಾತುಗಳಿಗೆ ತಲೆಕೆಡಿಸಿಕೊಳ್ಳಬಾರದು. ತಮ್ಮ ಹನ್ನೆರಡನೆ ಲೇಖನದಲ್ಲಿ, ಕಣ್ಣಿಗೆ ಕೆಟ್ಟವರಂತೆ ಕಾಣುವವರು ಸಮಾಜಕ್ಕೆ ಒಳಿತನ್ನು ಮಾಡುವವರು ಇದ್ದಾರೆ, ಹಾಗೆಯೇ ಕಣ್ಣಿಗೆ ಒಳ್ಳೆಯವರಂತೆ ಕಾಣುವ ಮಂದಿ ಕೆಟ್ಟ ಕೆಲಸ ಮಾಡುವವರು ಇದ್ದಾರೆ ಎಂದು ತಿಳಿಸಿದ್ದಾರೆ. ಇವರ ದೇವೋಭವದ ಲೇಖನಗಳು ನಮಗೆ ನಮ್ಮ ತಾಯಿ, ತಂದೆ, ಗುರುಗಳು ಮತ್ತು ರಾಷ್ಟ್ರದ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಹೀಗೆ ಪುಸ್ತಕದ ತುಂಬ ನಮಗೆ ಬಹಳ ಉಪಯೋಗವಾಗುವ ಅಂಶಗಳ ಸರಮಾಲೆಯನ್ನೆ ಕಾಣಬಹುದು.

ಈ ಪುಸ್ತಕದಲ್ಲಿ ನನಗೆ ಬಹಳ ಇಷ್ಟವಾದ ಲೇಖನಗಳೆಂದರೆ ‘ಹುಟ್ಟು ದರಿದ್ರವಾಗಿದ್ದರೇನು? ಸಾವು ಚರಿತ್ರೆಯಾಗಿರಬೇಕು’ ಈ ಲೇಖನದಲ್ಲಿ ಆಂಬೇಡ್ಕರ್, ಆಬ್ದುಲ್ ಕಲಾಂ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರು ಹೇಗೆ ಬಡತನದಲ್ಲಿ ಹುಟ್ಟಿ ಅದನ್ನು ಮೆಟ್ಟಿ ನಿಂತರು ಎಂಬುದನ್ನು ಓದಬಹುದು. ‘ನನ್ನ ಪ್ರೀತಿಯ ಯುವಮಿತ್ರರೇ! ನಿಮ್ಮಲ್ಲಿನ ಪ್ರತಿಭೆಯನ್ನು ಈ ಜಗತ್ತಿಗೆ ತೋರಿಸುವುದು ಯಾವಾಗ?’ ಈ ಲೇಖನದಲ್ಲಿ, ಓಬ್ಬ ವ್ಯಕ್ತಿಯನ್ನು ಅವಮಾನಿಸಿದ ಕಂಪನಿಯೇ ಆತ  ರಚಿಸಿದ ಆಪ್ ಅನ್ನು ಖರೀದಿ ಮಾಡಲು ಲಕ್ಷ ಕೋಟಿ ನೀಡಿತು. ‘ನೀನು ನಿನ್ನಂತಾಗು’ ಲೇಖನದಲ್ಲಿ, ಅಬ್ದುಲ್ ಕಲಾಂ ಮತ್ತು ಮಗುವಿನ ನಡುವಿನ ಸಂಭಾಷಣೆಯನ್ನು ತಿಳಿಸಿದ್ದಾರೆ. ‘ಆತ್ಮ ವಿಶ್ವಾಸವಿದ್ದವರಿಗೆ ಈ ಜಗತ್ತೇ ತಲೆಬಾಗುತ್ತದೆ!’ ಲೇಖನದಲ್ಲಿ, ಜಾದವ್ ಮೊಲಾಯ್ ರವರ ಮೂವತ್ತು ವರ್ಷಗಳ ಪರಿಶ್ರಮದಿಂದ, ಒಂದು ಪ್ರವಾಹಕ್ಕೆ ನಾಶವಾಗಿದ್ದ ಅರಣ್ಯವನ್ನು ಪುನಃ ಏಕಾಂಗಿಯಾಗಿ ಬೆಳೆಸಿದರು ಎಂಬ ನಿಜ ಕತೆಯನ್ನು ಓದಬಹುದು. ರಾಷ್ಟ್ರ ಋಣವನ್ನು ಹೇಗೆ ಯುವಮಂದಿ ತೀರಿಸಬೇಕು ಎಂದು ತಮ್ಮ ಇನ್ನೊಂದು ಲೇಖನದಲ್ಲಿ ತಿಳಿಸಿದ್ದಾರೆ. ‘ತಪ್ಪುಮಾಡುವುದಾದರೆ ಬೆಲೆಯುಳ್ಳ ತಪ್ಪನ್ನೇ ಮಾಡಿ!’ ಲೇಖನದಲ್ಲಿ, ಗ್ರಹಾಂಬೆಲ್ ಹೇಗೆ ತನ್ನ ತಪ್ಪು ಗ್ರಹಿಕೆಯಿಂದ ಟೆಲಿಫೋನ್ ಅನ್ನು ಕಂಡುಹಿಡಿದು, ಇತಿಹಾಸದಲ್ಲಿ ಬೆಲೆಯುಳ್ಳ ತಪ್ಪು ಎಂದು ಪರಿಗಣಿಸಲಾಗಿದೆ ಎಂಬುದನ್ನು ಲೇಖಕರು ನಮಗೆ ಹೇಳಿದ್ದಾರೆ. ಇಲ್ಲಿ ನಾವು ತಿಳಿಯಬಹುದಾದ ಅಂಶವೆಂದರೆ ಸತತ ಪ್ರಯತ್ನ ಮುಖ್ಯ ಎಂಬುದು. 

ಈ ಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಮೇಲಿನ ಲೇಖನಗಳು ನಮಗೆ ಸಾಕಷ್ಟು ಸ್ಪೂರ್ತಿ ತುಂಬುತ್ತದೆ. ಸ್ವಾಮಿ ವಿವೇಕಾನಂದರು ಹೇಗೆ ತಮಗೆ ಬಂದ ಕಠಿಣ ಸಮಸ್ಯೆ ಮತ್ತು ತೊಂದರೆಗಳನ್ನು ಬಹಳ ಜಾಣ್ಮೆಯಿಂದ ಪರಿಹಾರಿಸಿದ್ದಾರೆ ಎಂಬುದನ್ನು ತಿಳಿಯಬಹುದು. ‘ಸಾಧಿಸಲು ಬೇಕು ಐದು ಸಿ ಗಳು’ ಲೇಖನದಲ್ಲಿ ಸಾಧನೆ ಮಾಡ ಬಯಸುವವರಿಗೆ ಐದು ಸಿ ಗಳನ್ನು ತಿಳಿಸಿದ್ದಾರೆ, ಅವುಗಳೆಂದರೆ ಬದ್ಧತೆ, ಸ್ವಷ್ಟತೆ, ಗೊಂದಲವಿಲ್ಲದೆ ಇರೋದು, ಏಕಾಗ್ರತೆ ಮತ್ತು ವ್ಯಕ್ತಿತ್ವ. ಚಂದ್ರಶೇಖರ ಆಝಾದ್, ಸಾಕ್ರೆಟೀಸ್, ಮೈಕಲ್ ಫಿಲಿಪ್ಸ್, ಅರುಣಿಮಾ ಸಿನ್ಹಾ, ಅಬ್ರಾಹಂ ಲಿಂಕನ್, ಫಿಲ್ನೈಕ್,  ಥಾಮಸ್ ಆಲ್ವಾ ಎಡಿಸನ್, ಕಲ್ನಲ್ ಸ್ಯಾಂಡರ್ ಮತ್ತು ನೆಪೋಲಿಯನ್ ಬೋನಾಪಾರ್ಟೆ ಈ ಎಲ್ಲಾ ಮಹಾನಿಯರು ಎದುರಿಸಿದ ಸಮಸ್ಯೆ ಮತ್ತು ಆ ಸಮಸ್ಯೆಗಳನ್ನು ಪರಿಶ್ರಮ, ಛಲ, ಜಾಣ್ಮೆ ಮತ್ತು ಧೈರ್ಯದಿಂದಲೇ ಗೆದ್ದಿದ್ದನ್ನು ನಾವು ಓದಬಹುದು. ಉಳಿದ ಲೇಖನಗಳು ನಮ್ಮ ಜೀವನಕ್ಕೆ ಬೇಕಾದ ಪಾಠಗಳನ್ನು ತಿಳಿಸಿತ್ತದೆ. 

ಒಟ್ಟಾರೆ ನಾವು ಈ ಪುಸ್ತಕದಿಂದ ಕಲಿಯಬಹುದಾದದ್ದು ತುಂಬಾ ಜಾಸ್ತಿಯಿದೆ. ನಮಗೆ ಎದುರಾಗುವ ಕಷ್ಟಗಳನ್ನು ನಾವು ಹೇಗೆಲ್ಲಾ ನಿವಾರಣೆ ಮಾಡಿಕೊಳ್ಳಬಹುದು ಮತ್ತು ಮುಂತಾದ ಅಂಶಗಳನ್ನು ಓದಿ ತಿಳಿಯಬಹುದು. ಈ ಪುಸ್ತಕ ಓದಿ ಮುಗಿಸಿದವರಿಗೆ, ಸಾಯುವ ಮುನ್ನ ಏನನ್ನಾದರೂ ಸಾಧಿಸಿ ಸಾಯಬೇಕು ಎಂಬುವ ಛಲ ಬಂದೇ ಬರುತ್ತದೆ.