ಯೋಗ-ಸುಯೋಗ : ವೈಚಾರಿಕ ಲೇಖನ

ಜೂನ್ ೨೧ 'ವಿಶ್ವ ಯೋಗ ದಿನ'ವಂತೆ. ಒಪ್ಪಿಕೊಳ್ಳೋಣ. ಯೋಗ,ಸುಯೋಗ, ಭಾಗ್ಯ ಇದೆಲ್ಲ ಅಣ್ಣ ತಮ್ಮಂದಿರೇನೋ ಅನ್ನಿಸುವುದಿದೆ. ಯಾವುದೇ ಒಳ್ಳೆಯ ಹೆಸರು ಬರಬೇಕಾದರೆ 'ಯೋಗ' ಬೇಕು ಹೇಳ್ತಾರೆ. ಜೊತೆಗೆ ಸರಿಯಾದ ಕಾಲವೂ ಕೂಡಿ ಬರಬೇಕು, ಭಾಗ್ಯವೂ ಬೇಕು, ಹಣೆಯಲ್ಲಿ ಬರೆದಿರಬೇಕು. ಎಂಥ ಕಡು ಬಡವನಾದರೂ ಯೋಗವಿದ್ದರೆ ರಾಜವೈಭವ ಅವನದಾಗಬಹುದು. 'ತಿರುಕನ ಕನಸು' ಪದ್ಯವನ್ನು ಪ್ರಾಥಮಿಕ ಶಾಲಾ ದಿನಗಳಲ್ಲಿ ಓದಿದವರೇ ನಾವು. ರಸ್ತೆಯಲ್ಲೋ, ವಾಹನದಲ್ಲೋ ಆಗುವ ಅವಘಡವನ್ನು, ಕೊನೆಯಲ್ಲಿ ಹೋಲಿಸುವುದು "ಅವನಿಗೆ ಆ ಯೋಗವೇ ಇದ್ದಿರಬಹುದೆಂದು". ಇತ್ತೀಚೆಗೆ ಹೆಚ್ಚುತ್ತಿರುವ ವಿಚ್ಛೇದನಕ್ಕೂ ಇದೇ ಮಾತು. ಎರಡನೇ ವಿವಾಹ ಸಂಬಂಧಕ್ಕೂ ಇದೇ ಯೋಗದ ಮಾತು. ಈ ಯೋಗ ಒಂದು ರೀತಿಯದಾದರೆ, ದೇಹ ಮನಸ್ಸಿನ ಅವಿನಾಭಾವ ಸಂಬಂಧದ ಬೆಸುಗೆ 'ಯೋಗ ಚಟುವಟಿಕೆ'ಯಲ್ಲಡಗಿದೆ ಎನ್ನುವುದು ಇನ್ನೊಂದು ವಿಶ್ಲೇಷಣೆ.
ಯೋಗ ಎಂದರೆ ಕೈಕಾಲೆತ್ತಿ ಸರ್ಕಸ್ ಮಾಡಿದರಾಯಿತು ಎನ್ನುವ ಧೋರಣೆಯಿದೆ. ಸ್ಪಷ್ಟವಾದ ದಾರಿಯಿದ್ದರೂ ಕೆಲವರಿಗೆ ವಕ್ರ ದಾರಿಯೇ ಇಷ್ಟ."ಕಷ್ಟಪಟ್ಟು ಯೋಗವನ್ನು ಮಾಡದೆ ಇಷ್ಟ ಪಟ್ಟು ನಿಯಮಿತವಾಗಿ ಮಾಡಿದರೆ ಆರೋಗ್ಯದ ತರಂಗಗಳು ಶರೀರವನ್ನು ಕಾಪಿಟ್ಟುಕೊಳ್ಳಬಹುದು. ನಮ್ಮ ಹಿಂದಿನ ಪರಂಪರೆ, ಸಂಸ್ಕೃತಿ, ಪೌರಾಣಿಕ ಸನ್ನಿವೇಶಗಳು, ಋಷಿಮುನಿಗಳ ಕಠಿಣ ತಪಸ್ಸು, ಏಕಾಗ್ರತೆ, ಉಪವಾಸ, ಧ್ಯಾನ, ಕ್ರಮಾಗತ ಜೀವನ, ಆಚಾರ-ವಿಚಾರ ಈ ಎಲ್ಲದರಲ್ಲೂ ಯೋಗವನ್ನು ಕಾಣಬಹುದು. ಶಾಂತಿಯ ಮಂತ್ರ, ಆರೋಗ್ಯ ಸೂತ್ರ, ನೆಮ್ಮದಿಯನ್ನು ಸೂರ್ಯ ನಮಸ್ಕಾರದೊಂದಿಗೆ ಮುಂಜಾವನ್ನು ಆರಂಭಿಸಿದರೆ ಸಿಗಬಹುದು. ಹೆಚ್ಚುತ್ತಿರುವ ಒತ್ತಡದ ಜೀವನ, ನೆಮ್ಮದಿಯಿಲ್ಲದಿರುವುದು, ಯೋಗದಿಂದಾಗುವ ಉಪಯೋಗ, ಶಾರೀರಿಕ ಸ್ವಾಸ್ಥ್ಯ,ಮನಸ್ಸಿನ ಆರೋಗ್ಯ ಎಲ್ಲವನ್ನೂ ಮನಗಂಡು ವಿಶ್ವಯೋಗ ದಿನವೆಂದು ೨೦೧೫ ಜೂನ್ ೨೧ ರಂದು ಆಚರಿಸಲಾಯಿತು. ಯೋಗ ಮತ್ತು ಧ್ಯಾನದ ಚಟುವಟಿಗಳಿಂದಾಗುವ ಉಪಯೋಗವನ್ನು ಸಂಘ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ, ಪ್ರಚಾರ ಫಲಕಗಳು, ಬೀದಿನಾಟಕಗಳ ಪ್ರದರ್ಶನ, ಆರೋಗ್ಯ ಭಾಗ್ಯ ರೂಪಕಗಳ ಮೂಲಕ ಪ್ರಚಾರ ಮಾಡಬೇಕು. ಅತಿಯಾದ ಆಸೆಯ ಬೆನ್ನು ಹತ್ತದೆ, ತೃಪ್ತಿಯ ಬದುಕು ಯೋಗದಿಂದ ದೊರೆಯಬಹುದೆನ್ನುವ ಸಂದೇಶ ನೀಡಬೇಕು. ಆಯುಷ್ಯ ಭಗವಂತನ ಕೊಡುಗೆ, ಹಾಗೆಂದು ದಿನ ಬೆಳಗಾದರೆ ಸೋಮಾರಿಯಾಗಿ ಅಲೆಯುತ್ತಾ,ತಿನ್ನುವ ಕೆಲಸ ಮಾತ್ರವೇ ಆದರೆ ಹೇಗೆ? ಶರೀರ ದಪ್ಪವಿದ್ದವರೂ ಸಹ ನಿಯಮಿತವಾಗಿ ಯೋಗವನ್ನು ಮಾಡಬಹುದು. ಶರೀರ ಪ್ರಕೃತಿ ಹಿರಿಯರಿಂದ ಬಂದ ಕೊಡುಗೆ.ಹಾಗೆಂದು ಆರೋಗ್ಯದ ರಹದಾರಿ ನಮ್ಮ ಕೈಯಲ್ಲೇ ಇದೆ. ಮನಸ್ಸನ್ನು ಸದಾ ಉಲ್ಲಾಸದಲ್ಲಿ ಇರುವಂತೆ ನೋಡಿಕೊಳ್ಳಬಹುದು. ಬೆಳಗಿನ ಸಮಯದ ನಡಿಗೆ, ಸೂರ್ಯ ನಮಸ್ಕಾರ ಅಭ್ಯಾಸ ಒಳ್ಳೆಯದು. ಭಗವಂತನ ಕೊಡುಗೆ (ಭಿಕ್ಷೆ ಎಂದರೂ ತಪ್ಪಿಲ್ಲ) ಈ ದೇಹ. ಇದರ ನರನಾಡಿಗಳನ್ನು ಸ್ವಚ್ಛವಾಗಿಡುವುದರಲ್ಲಿ ಪ್ರಮುಖ ಪಾತ್ರವಹಿಸುವುದು. ಒಳ್ಳೆಯ ನಡೆನುಡಿ, ಧ್ಯಾನ, ದೇವರನಾಮ ಸ್ಮರಣೆ ಸದಾ ಇರಲಿ. ಕಷ್ಟ-ನಷ್ಟಗಳ ಮೆಟ್ಟಿ ನಿಲ್ಲೋಣ. ಭೋಗದತ್ತ ವಾಲದಿರೋಣ. ಇಂದು ಸಂಘ-ಸಂಸ್ಥೆಗಳಲ್ಲಿ,ಶಾಲೆಗಳಲ್ಲಿ ಯೋಗದ ಬಗ್ಗೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ, ಮಾಹಿತಿ ನೀಡುವುದೂ ಇದೆ. ಯೋಗ ಶಿಬಿರಗಳನ್ನು ಅಲ್ಲಲ್ಲಿ ನಡೆಸುತ್ತಾರೆ. ಕೆಲವೊಂದು ರೋಗಗಳ ನಿವಾರಣೆಗೆ ಯೋಗ ರಾಮಬಾಣದಂತೆ ಸಹಕರಿಸುತ್ತದೆ. ಕೆಲವು ಯೋಗ ಚಟುವಟಿಕೆಯನ್ನು ವೈದ್ಯರ ಅನುಮತಿಯಿಲ್ಲದೆ ಮಾಡಬಾರದು. ಸದಾಚಾರಿಗಳಾಗಿ, ಸತ್ ಚಿಂತಕರಾಗಿ ಅನ್ಯರಿಗೆ ಒಳ್ಳೆಯದನ್ನೇ ಬಯಸುವವರಾಗಿ, ಸ್ವಚ್ಛ ಮನದ ಗುಡಿಯನ್ನು ನಮ್ಮದಾಗಿಸಿಕೊಂಡು ಬಾಳೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ