ರಂಜಾನ್ ಹಬ್ಬದ ಶುಭಾಶಯಗಳು...

ರಂಜಾನ್ ಹಬ್ಬದ ಶುಭಾಶಯಗಳು...

ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು, ಮುಸ್ಲಿಂ, ಖುರಾನ್, ಭಗವದ್ಗೀತೆ, ಭಾರತ, ಪಾಕಿಸ್ತಾನ ಸೌಹಾರ್ಧತೆ ಸಂಯಮ ಸಮನ್ವಯ ಮುಂತಾದ ವಿಷಯಗಳ ಬಗ್ಗೆ  ಬಹುತೇಕ ಸಾಮಾನ್ಯ ಜನರಿಗೂ ತಲುಪುವಷ್ಟು ಚರ್ಚೆಗಳು ಅಭಿಪ್ರಾಯಗಳು ವ್ಯಕ್ತವಾಗಿದೆ. ಈಗ ಉಳಿದಿರುವುದು ಮತ್ತು ಮುಂದುವರಿಯ ಬೇಕಾಗಿರುವುದು ನಮ್ಮ ತೀರ್ಮಾನ ಹಾಗೂ ತಿಳಿವಳಿಕೆ ಮತ್ತು ನಡವಳಿಕೆ. ಇದೇ ಅತ್ಯಂತ ಮಹತ್ವದ ವಿಷಯ.

ಆಧುನಿಕ ಸಮಾಜ ನೀಡಿರುವ ಎಲ್ಲಾ ‌ಸಿರಿ ಸಂಪತ್ತುಗಳು - ಪ್ರಜಾಪ್ರಭುತ್ವ ಎಂಬ ಅಪರಿಮಿತ ಸ್ವಾತಂತ್ರ್ಯ ಎಲ್ಲವನ್ನೂ ಉಪಯೋಗಿಸಿಕೊಂಡು ಇರುವಷ್ಟು ದಿನ‌ ಇರುವುದರಲ್ಲಿ ಒಂದಷ್ಟು ಸುಖ ಸಂತೋಷ ನೆಮ್ಮದಿಯಿಂದ ಬಾಳಬೇಕೆ ಅಥವಾ ಈಗಿನ ಸಂದರ್ಭಕ್ಕೆ ಅಪ್ರಸ್ತುತವಾದ ಅಥವಾ ಅಷ್ಟೇನೂ ಪ್ರಯೋಜನವಲ್ಲದ ಪುರಾತನ ಕಾಲದ ಯಾವುದೋ ನಂಬಿಕೆ ಸಂಪ್ರದಾಯಗಳಿಗೆ ಕಟ್ಟುಬಿದ್ದು ಮನುಷ್ಯರೇ ಧರ್ಮದ ಜಾತಿಯ ಆಧಾರದಲ್ಲಿ ಒಬ್ಬರಿಗೊಬ್ಬರು ದ್ವೇಷಿಸುತ್ತಾ ಅಸೂಯೆಪಡುತ್ತಾ ಮಚ್ಚು ಚಾಕು ಬಂದೂಕು ಬಾಂಬುಗಳಿಂದ ಕೊಂದುಕೊಳ್ಳುತ್ತಾ ಸದಾ ಆತಂಕದಿಂದ ಬದುಕಬೇಕೇ ಎಂಬ ಆಯ್ಕೆಗಳು ಮಾತ್ರ.

ನಿಮಗೆ ಧರ್ಮ ಗ್ರಂಥಗಳು, ಹಿಜಾಬ್, ಕುಂಕುಮ, ನಾಮ, ಹಲಾಲ್ ಕಟ್, ಜಟ್ಕಾ ಕಟ್, ವಿಭೂತಿ, ಗಡ್ಡ, ಅಜಾನ್, ಹನುಮಾನ್, ಚಾಲೀಸು ಮುಂತಾದ ಆಚರಣೆಗಳು ಬೇಕೆ ಅಥವಾ ಮನುಷ್ಯ - ಮನುಷ್ಯತ್ವ  ಪ್ರೀತಿ ಸಹಕಾರ ಸಂಯಮ ಸುಖಬದುಕು ಬೇಕೆ ಎಂಬ ಆಯ್ಕೆಗಳು ಮಾತ್ರ ನಮ್ಮ ಮುಂದಿವೆ.

ಇದನ್ನು ಯಾರೋ ಮುಲ್ಲಾಗಳು, ಪಾದ್ರಿಗಳು, ಮೌಲ್ವಿಗಳು, ಸ್ವಾಮೀಜಿಗಳು, ಮಠಾಧೀಶರು ಹೇಳಿಕೊಡಬೇಕಿಲ್ಲ ಅಥವಾ ನಿರ್ಧರಿಸ ಬೇಕಿಲ್ಲ. ನಮ್ಮ ನಮ್ಮ ಜ್ಞಾನದ ಮಿತಿಯಲ್ಲಿ ನಾವೇ ನಿರ್ಧಾರ ತೆಗೆದುಕೊಳ್ಳಬೇಕು. ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ...

***

ಮತ್ತೆ ಕಲ್ಯಾಣ… ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ...

ಬಸವಣ್ಣನವರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2010 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು ಎಲ್ಲವೂ ಸಾಕಷ್ಟು ದಾಖಲಾಗಿವೆ. ಇವುಗಳಲ್ಲಿ ಬಸವಣ್ಣ ದೇವರಾಗಿಯೂ ಧರ್ಮವಾಗಿಯೂ ಸಮ ಸಮಾಜದ ಕ್ರಾಂತಿಕಾರಿಯಾಗಿಯೂ, ಓಟುಗಳಾಗಿಯೂ ಪರಿವರ್ತನೆಯನ್ನು ಹೊಂದಿದ್ದಾರೆ. 

ಅವರ ವಚನ ಸಾಹಿತ್ಯ ಭಾಷಣಗಳಿಗೆ, ಪ್ರವಚನಗಳಿಗೆ, ವಿಚಾರಸಂಕಿರಣಗಳಿಗೆ, ಲೇಖನಗಳಿಗೆ, ಡಾಕ್ಟರೇಟ್ ಗಳಿಗೆ, ಬಹಳ ಒಳ್ಳೆಯ ಆಹಾರ ಒದಗಿಸುತ್ತದೆ. ರಸ್ತೆಗಳು, ಭವನಗಳು, ಮೂರ್ತಿಗಳು, ವಿಶ್ವವಿದ್ಯಾಲಯಗಳು, ಧಾರ್ಮಿಕ ಕೇಂದ್ರಗಳು, ಸಂಘಟನೆಗಳು, ಪ್ರಶಸ್ತಿಗಳು ಅವರ ಹೆಸರಿನಲ್ಲಿ ಆಗಿದೆ. ಆದರೆ ನಿಜವಾಗಿ ಆಗಬೇಕಾಗಿರುವುದು ಮಾತ್ರ ಇನ್ನೂ ಗಗನಕುಸುಮವಾಗಿದೆ... ಕನ್ನಡ ನಾಡಿನ ಬಹುದೊಡ್ಡ ಕೊಡುಗೆ ಬಸವೇಶ್ವರರು. ಹನ್ನೆರಡನೆಯ ಶತಮಾನದಲ್ಲಿಯೇ ಸಮ ಸಮಾಜದ ಕನಸು ಕಂಡವರು.ಸುಮ್ಮನೆ ಒಮ್ಮೆ ಆಲೋಚಿಸಿ ನೋಡಿ...

12 ನೆಯ ಶತಮಾನದಲ್ಲಿಯೇ ವೇಶ್ಯೆ ಅಥವಾ ಸೂಳೆ ಎಂದು ಕರೆಯಲಾಗುತ್ತಿದ್ದ ಒಬ್ಬ ಲೈಂಗಿಕ ಕಾರ್ಯಕರ್ತೆಯನ್ನು ಅನುಭವ ಮಂಟಪದ ಸದಸ್ಯೆಯನ್ನಾಗಿಸಿ ಆಕೆಯ ಒಡಲಾಳದ ನೋವಿಗೆ ವಚನ ಸಾಹಿತ್ಯದ ಮೂಲಕ ಧ್ವನಿಯಾಗಲು ಅವಕಾಶ ನೀಡಿದ ಬಸವಣ್ಣನವರನ್ನು ಏನೆಂದು ಕರೆಯುವುದು. 2022 ರ ಈ ಸಂದರ್ಭದಲ್ಲೂ ವೇಶ್ಯೆ ಎಂಬ ನಮ್ಮದೇ ಹೆಣ್ಣುಮಗಳು ಎಷ್ಟೊಂದು ತಿರಸ್ಕಾರಕ್ಕೆ ಒಳಗಾಗಿರುವಾಗ 12 ನೇ ಶತಮಾನದ ಬಸವೇಶ್ವರರ ಸಮಾನತೆಯ ಚಿಂತನೆ ಎಷ್ಟು ಗಾಢವಾಗಿರಬಹುದು. 

ಅಷ್ಟೇ ಏಕೆ ಈಗಲೂ ಕೆಲವು ಕರ್ಮಠ ಬ್ರಾಹ್ಮಣರು, ಗೌಡರು, ವೀರಶೈವರು, ಶೆಟ್ಟರು, ಕುರುಬರು, ಮುಂತಾದ ಅನೇಕ ಜಾತಿಗಳವರು ಕಮ್ಮಾರ ಚಮ್ಮಾರ ಹೊಲೆಯ ಮಾದಿಗರನ್ನು ಮನೆಯೊಳಗೆ ಸೇರಿಸದ ಪರಿಸ್ಥಿತಿ ಇರುವಾಗ ಎಂಟು ಶತಮಾನಗಳ ಹಿಂದೆಯೇ  ಬಸವಣ್ಣ ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡಿದ್ದಲ್ಲದೆ ಅವರ ವಚನ ಸಾಹಿತ್ಯಕ್ಕೆ ಬೆಳಕು ನೀಡಿದರು ಎಂಬುದನ್ನು ಊಹಿಸಿ ಕೊಳ್ಳಲು ಸಾಧ್ಯವೇ?

ಈಗಲೂ ಮರ್ಯಾದೆ ಹತ್ಯೆಗಳು ನಡೆಯುತ್ತಿರುವಾಗ ಆಗಲೇ ಅಂತರ್ಜಾತಿ ವಿವಾಹಗಳನ್ನು  ಮಾಡಿಸಿದ ಬಸವೇಶ್ವರರನ್ನು ಹೇಗೆ ವರ್ಣಿಸುವುದು? ಈಗ ಸಹ ವಂಶಾಡಳಿತ, ಜಮೀನ್ದಾರಿ ಪದ್ಧತಿ, ಕೆಲವು ಜಿಲ್ಲೆಗಳನ್ನು - ರಾಜ್ಯಗಳನ್ನು ಪಕ್ಷಗಳ ಹೆಸರಿನಲ್ಲಿ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿರುವಾಗ ಆಗಿನ ಕಾಲದಲ್ಲೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಅಡಕಗೊಳಿಸಿದ ಬಸವೇಶ್ವರರ ದೂರದೃಷ್ಟಿ ಕಲ್ಪಿಸಿಕೊಳ್ಳಲು ಸಾಧ್ಯವೇ.

ಪಾದ ಪೂಜೆ, ಅಡ್ಡ ಪಲ್ಲಕ್ಕಿ, ಬೃಹತ್ ಬಂಗಲೆಗಳು, ಶಿಕ್ಷಣದ ವಾಣಿಜ್ಯೀಕರಣ, ಆಸ್ತಿಗಾಗಿ ಹೊಡೆದಾಟ ಬಡಿದಾಟ, ನ್ಯಾಯಾಲಯಕ್ಕೆ ಅಲೆದಾಟ, ಯಾವುದೋ ಪಕ್ಷದ ಅನುಯಾಯಿಗಳಾಗಿ ಸಂಪೂರ್ಣ ಮುಳಗಿರುವ ಅನೇಕ ಮಠಗಳು ಈಗ ಜನಪ್ರಿಯವಾಗಿರುವಾಗ ಆಗಿನ ಅವರ ಹೋರಾಟ ಹೇಗಿರಬಹುದು.

ಒಕ್ಕಲಿಗರು ವೀರಶೈವರು ಒಂದೊಂದು ಪಕ್ಷದ ಬಾಲಗಳಿಗೆ ಜೋತು ಬಿದ್ದಿರುವಾಗ, ಲಿಂಗಾಯಿತರು ವೀರಶೈವರು ಪರಸ್ಪರ ಕಚ್ಚಾಡುತ್ತಿರುವಾಗ, ದಲಿತರು ಬ್ರಾಹ್ಮಣರು ದ್ವೇಷಿಸುತ್ತಿರುವಾಗ, ಮುಸ್ಲಿಮರು ಕ್ರಿಶ್ಚಿಯನ್ನರು ದೂರವಾಗಿರುವಾಗ, ಹಿಂದೂಗಳು ಮುಸ್ಲಿಮರು ವಿರೋಧಿಗಳಾಗಿರುವಾಗ… ಲೈಂಗಿಕ ಕಾರ್ಯಕರ್ತೆಯರು ಇರಲಿ ಸಾಮಾನ್ಯ ಹೆಣ್ಣುಮಕ್ಕಳನ್ನೇ ದ್ವಿತೀಯ ದರ್ಜೆಯ ರೀತಿ ನಡೆಸಿಕೊಳ್ಳುತ್ತಿರುವಾಗ.. ಪ್ರಜಾಪ್ರಭುತ್ವದ ತಳಹದಿ ಚುನಾವಣೆಯೇ ಬಹಿರಂಗವಾಗಿ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವಾಗ...

ಕೆಲವು ಅಪರೂಪದ ಉದಾಹರಣೆ ಹೊರತುಪಡಿಸಿ, ಒಬ್ಬ ಒಕ್ಕಲಿಗ ಅಭ್ಯರ್ಥಿ ಚುನಾವಣೆಯಲ್ಲಿ ಲಿಂಗಾಯತರು ಹೆಚ್ಚು ಮತವಿರುವ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ, ಅದೇ ರೀತಿ ವೀರಶೈವರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಒಕ್ಕಲಿಗರು ಗೆಲ್ಲುವುದಿಲ್ಲ. ದಲಿತರು ಸಾಮಾನ್ಯ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ, ಬ್ರಾಹ್ಮಣರು ವೇದ ಉಪನಿಷತ್ತು ಮನುಸ್ಮೃತಿಗಳನ್ನು ಬಿಟ್ಟು ಕದಲುತ್ತಿಲ್ಲ, ಇಂತಹ ವಾತಾವರಣದಲ್ಲಿ ಗೆಳೆಯರೆ ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ. ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು. ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ. ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ. ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ. ಜಾತಿ ರಹಿತ ಚುನಾವಣೆ. ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ. ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ.

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ. ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ. ಆದರೂ, ಮತ್ತೆ ಕಲ್ಯಾಣಕ್ಕಾಗಿ ಆ ಕನಸನ್ನು ನನಸು ಮಾಡಲು ಮನಸ್ಸುಗಳ ಅಂತರಂಗದ ಚಳವಳಿ ಸದಾ ಜಾರಿಯಲ್ಲಿರುತ್ತದೆ ಅದು ವಾಸ್ತವವಾಗುವವರೆಗೂ...ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ : ಇಂಟರ್ನೆಟ್ ತಾಣ