ರಷ್ಯಾದ ರಕ್ತದಾಹ : ಅಮಾಯಕರ ಮೇಲಿನ ದಾಳಿ ಖಂಡನೀಯ

ರಷ್ಯಾದ ರಕ್ತದಾಹ : ಅಮಾಯಕರ ಮೇಲಿನ ದಾಳಿ ಖಂಡನೀಯ

ಉಕ್ರೇನ್ ಮೇಲೆ ರಷ್ಯಾ ಮಾರಕ ದಾಳಿ ಮುಂದುವರಿಸಿದೆ. ಇದನ್ನು ಉಕ್ರೇನ್-ರಷ್ಯಾ ಯುದ್ಧವೆಂದು ಕರೆಯಲು ಸಾಧ್ಯವಿಲ್ಲ. ಯಾವುದೇ ರೀತಿಯಲ್ಲೂ ಮಿಲಿಟರಿ ಬಲವಿಲ್ಲದ, ಅಂತರಾಷ್ಟ್ರೀಯ ಸಮುದಾಯ ಕೂಡ ಕೈಬಿಟ್ಟ ಒಂದು ಬಡ ದೇಶದ ಮೇಲೆ ಬಲಾಢ್ಯ ದೇಶ ನಡೆಸುತ್ತಿರುವ ಅಮಾನುಷ ಆಕ್ರಮಣವಿದು. ವಿಶ್ವ ಸಮುದಾಯದ ಎಚ್ಚರಿಕೆ, ಆರ್ಥಿಕ ನಿರ್ಬಂಧ, ವಿಶ್ವಸಂಸ್ಥೆಯ ನಿರ್ಣಯಗಳಿಗೂ ಸೊಪ್ಪು ಹಾಕದೆ ರಷ್ಯಾ ದಾಳಿ ಮುಂದುವರಿಸಿದೆ ಮಾತ್ರವಲ್ಲ, ಜನವಸತಿ ಕಟ್ಟಡಗಳು, ಶಾಲೆ-ಆಸ್ಪತ್ರೆ ಎನ್ನದೆ ಬಾಂಬ್ ಗಳನ್ನು ಸುರಿಯುತ್ತಿದೆ. ನಿತ್ಯ ನೂರಾರು ಮಂದಿಯ ಸಾವಿನ ವರ್ತಮಾನ ಬರುತ್ತಿದೆ. ಮಂಗಳವಾರ ನಡೆದ ಒಂದು ಬಾಂಬ್ ದಾಳಿಯಲ್ಲಿ ಕರ್ನಾಟಕದ ರಾಣಿಬೆನ್ನೂರಿನ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲಿಗೆ ಭೂಮಿಯ ಉತ್ತರದ ಯಾವುದೋ ಒಂದು ಭಾಗದಲ್ಲಿ ನಡೆಯುತ್ತಿರುವ ಸಮರ ನಮ್ಮ ಮನೆ ಬಾಗಿಲಿಗೂ ಬಂದಂತಾಗಿದೆ.

ಪ್ರಾದೇಶಿಕ ಹಿತಾಸಕ್ತಿಗಾಗಿ ದೇಶ ದೇಶಗಳ ನಡುವೆ ಯುದ್ಧಗಳು ನಡೆಯಬಹುದು. ಮನುಷ್ಯನ ಇತಿಹಾಸವೆಂದರೆ ಯುದ್ಧದ ಇತಿಹಾಸವೇ. ಆದರೆ ಯುದ್ಧದಲ್ಲಿ ಕನಿಷ್ಟ ನೀತಿಯನ್ನು ಪಾಲಿಸುವುದು ಅಗತ್ಯ. ಮೊದಲು ಸಂಯುಕ್ತ ರಾಷ್ಟ್ರ ಸಂಘ, ಈಗ ವಿಶ್ವ ಸಂಸ್ಥೆ, ಮಾನವ ಹಕ್ಕುಗಳ ಸಂಸ್ಥೆ ಎಂದೆಲ್ಲ ನಾವು ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿರುವುದು ಇನ್ನಷ್ಟು ನಾಗರಿಕರಾಗೋಣ ಎಂಬುದಕ್ಕಾಗಿ. ಹಿಂದಿನ ಎರಡು ಮಹಾಯುದ್ಧಗಳಲ್ಲಿ ನಡೆಸಿದ ಮಾನವ ಹಕ್ಕು ಉಲ್ಲಂಘನೆ, ಯುದ್ಧಾಪರಾಧಗಳಿಗಾಗಿ ಎಷ್ಟೊ ಮಂದಿಗೆ ಶಿಕ್ಷೆಯಾಗಿದೆ. ಅಂದರೆ ಸೈನಿಕರ ನಡುವೆ ನಡೆಯಬೇಕಾದ ಯುದ್ಧ ಅಮಾಯಕ ಜನರ ಪ್ರಾಣಹರಣಕ್ಕೆ ಕಾರಣ ಆಗಬಾರದು. ಆದರೆ ರಷ್ಯಾ ಈ ಎಲ್ಲ ನೀತಿಯನ್ನೂ ಮರೆತು ಸಾಮಾನ್ಯ ಪ್ರಜೆಗಳು - ಮಕ್ಕಳು ಮಹಿಳೆಯರು ಎಂಬ ಬೇಧವನ್ನೂ ಎಣಿಸದೆ ದಾಳಿ ನಡೆಸುತ್ತಿದೆ; ಯುದ್ಧದ ಹುಮ್ಮಸ್ಸಿನಲ್ಲಿ ಹೊಸ ಹೊಸ ಅಸ್ತ್ರಗಳ ಪ್ರಯೋಗ ನಡೆಸುತ್ತಿದೆ. ಇದು ದುಷ್ಟತನ, ಶಿಕ್ಷಾರ್ಹ ಅಪರಾಧ. ಅಂತರಾಷ್ಟ್ರೀಯ ಸಮುದಾಯ ಈ ಕೃತ್ಯವನ್ನು ಕಠಿಣ ಪದಗಳಲ್ಲಿ ಖಂಡಿಸಬೇಕು. ಹದ ಮೀರಿರುವ ರಷ್ಯಾವನ್ನು ನಿಯಂತ್ರಿಸಲು ವಿಶ್ವ ಸಂಸ್ಥೆ, ಭದ್ರತಾ ಮಂಡಳಿಗಳು ಶತ ಪ್ರಯತ್ನ ಮಾಡಬೇಕಿದೆ. ಮನುಷ್ಯರನ್ನು ಹುಳಗಳಂತೆ ಹೊಸಕಿ ಹಾಕುವ ಕ್ರೌರ್ಯವನ್ನು ಜಗತ್ತು ಹೆಚ್ಚು ದಿನ ಸಹಿಸಿಕೊಳ್ಳಲಾರದು. ಇತಿಹಾಸ ಅಂಥ ಸರ್ವಾಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತದೆ.

ದಾಳಿಗೊಳಗಾಗುತ್ತಿರುವ ಉಕ್ರೇನ್ ಬಲುದೂರದಲ್ಲಿದೆ ಎಂದು ನಾವು ಅಂದುಕೊಳ್ಳುವಂತಿಲ್ಲ. ಈಗಾಗಲೇ ಕನ್ನಡಿಗರೊಬ್ಬರು ಮೃತಪಟ್ಟಿದ್ದಾರೆ. ಎಷ್ಟೋ ಸಾವಿರ ಭಾರತೀಯರು ಉಕ್ರೇನ್ ನಲ್ಲಿ ಶಿಕ್ಷಣಕ್ಕಾಗಿ ತೆರಳಿದವರು ಅಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರಲು ಭಾರತ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಈ ಕಾಳಗದ ನೇರ ಹಾಗೂ ಪರೋಕ್ಷ ಪರಿಣಾಮಗಳು ನಮ್ಮನ್ನು ಕಾಡಲಿವೆ. ಕಚ್ಚಾ ತೈಲಬೆಲೆ ಏರಿಕೆಯಾಗಲಿದ್ದು, ಅದರಿಂದ ಉಂಟಾಗುವ ಹಣದುಬ್ಬರ ಈಗಾಗಲೇ ಏಟು ತಿಂದಿರುವ ನಮ್ಮ ಆರ್ಥಿಕತೆಯನ್ನು ಇನ್ನಷ್ಟು ಕಂಗೆಡಿಸಬಹುದು. ಜರ್ಮನಿ ಮತ್ತು ಪೋಲೆಂಡ್ ಗಳ ನಡುವೆ ಆರಂಭವಾದ ಎರಡನೇ ಮಹಾಯುದ್ಧ ಮುಂದೆ ಹದಿನೈದಕ್ಕೂ ಹೆಚ್ಚು ದೇಶಗಳು ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿತು. ಇದೂ ಹಾಗೆ ಆಗದಿರಲಿ ಎಂದು ಆಶಿಸೋಣ. ಆದರೆ ಕೊರೊನಾದಂಥ ಒಂದು ಸೂಕ್ಷ್ಮ ವೈರಾಣು ಜಗತ್ತಿನ ಮೂಲೆ ಮೂಲೆಗೂ ಹರಡುವಂತೆ ಯುದ್ಧದ ಪರಿಣಾಮವೂ  ಹರಡಲಿದೆ ಎಂದು ತಿಳಿಯಲು ಹೆಚ್ಚು ಜಾಣ್ಮೆ ಬೇಕಾಗಿಲ್ಲ. ಈ ನಡುವೆ ನಮ್ಮ ದೇಶದ, ನಮ್ಮ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ರಾಜತಾಂತ್ರಿಕ ನಡೆಗಳನ್ನು ನಾವು ತೆಗೆದುಕೊಳ್ಳಬೇಕಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ. ೦೨-೦೩-೨೦೨೨