ರಾಜಕಾರಣಿಗಳು ಮತ್ತು ರಾಜನೀತಿ

ರಾಜಕಾರಣಿಗಳು ಮತ್ತು ರಾಜನೀತಿ

ಭಾರತದ ರಾಜಕಾರಣಿಗಳು ಕಡ್ಡಾಯವಾಗಿ ಅಧ್ಯಯನ ಮಾಡಬೇಕಾದ ಮತ್ತು ಅರಿತುಕೊಳ್ಳಬೇಕಾದ ಮೂಲಭೂತ ವಿಷಯಗಳು ನಮ್ಮ ದೇಶದ ಸಾಹಿತ್ಯ ಇತಿಹಾಸದಲ್ಲಿಯೇ ಬಹಳಷ್ಟು ಅಡಕವಾಗಿದೆ. ಕೌಟಿಲ್ಯನ (ಚಾಣಕ್ಯ) ಅರ್ಥಶಾಸ್ತ್ರ ಎಂದು ಕರೆಯಲ್ಪಡುವ ಗ್ರಂಥ ಮುಖ್ಯವಾಗಿ ಆಡಳಿತಾತ್ಮಕ ರಾಜನೀತಿಯನ್ನು ರಾಜ್ಯದ ರಕ್ಷಣೆಯನ್ನು  ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ.

ವೇದವ್ಯಾಸರು ಬರೆದ ಮಹಾಭಾರತದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಯನಿಗೆ ಪ್ರಜೆಗಳ ಯೋಗಕ್ಷೇಮ ಹೇಗೆ ನೋಡಿಕೊಳ್ಳಬೇಕು ಎಂದು ಅರ್ಥಗರ್ಭಿತವಾಗಿ ಹೇಳುತ್ತಾರೆ. ವಾಲ್ಮೀಕಿಯವರು ಬರೆದ ರಾಮಾಯಣದಲ್ಲಿ ಶ್ರೀರಾಮನ ಆಡಳಿತದಲ್ಲಿ ಹೇಗೆ ಪ್ರಜೆಗಳು ಬಯಸುವ ಕಲ್ಯಾಣರಾಜ್ಯ ಇರಬೇಕು ಎಂದು ನಿರ್ದಿಷ್ಟವಾಗಿ ಹೇಳುತ್ತಾರೆ.

ಬಸವಣ್ಣನವರ ಅನುಭವ ಮಂಟಪದ ವಚನಗಳು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಿಕೆ, ಸಮ ಸಮಾಜದ ಕನಸನ್ನು ಅನುಮಾನಕ್ಕೆ ಆಸ್ಪದವಿಲ್ಲದಂತೆ ಹೇಳುತ್ತದೆ. ಅಂಬೇಡ್ಜರ್ ಅವರು ಬರೆದ ಬಹುತೇಕ ಗ್ರಂಥಗಳು ಒಂದು ರಾಷ್ಟ್ರದ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಪರಮೋಚ್ಚ ವಾಸ್ತವಗಳಾಗಿ ನಿಲ್ಲುತ್ತವೆ.

ವಿವೇಕಾನಂದರ ಆಧ್ಯಾತ್ಮಿಕ ಸಾಂಸ್ಕೃತಿಕ ಸಂದೇಶಗಳು ಒಬ್ಬ ರಾಜಕಾರಣಿಯು ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ರಾಜನೀತಿಯನ್ನು ಖಚಿತವಾಗಿ ಹೇಳುತ್ತದೆ.

ಗೌತಮ ಬುಧ್ಧನ ಸಂದೇಶಗಳು ವ್ಯಕ್ತಿಯ ಆಂತರಿಕ ಶುಧ್ದತೆಯ ಮಹತ್ವವನ್ನು ಎತ್ತಿಹಿಡಿಯುತ್ತದೆ. ಮಹಾತ್ಮ ಗಾಂಧಿಯವರ ಬದುಕೇ ಸಮಾಜ ಸೇವೆಯ ಪಾರದರ್ಶಕತೆ ಮತ್ತು ನಿಸ್ವಾರ್ಥತೆಗೆ ಉದಾಹರಣೆಯಾಗಿ ನಿಲ್ಲುತ್ತದೆ.

ಇದಲ್ಲದೆ  ನಮ್ಮನ್ನಾಳಿದ ಅನೇಕ  ರಾಜಮಹಾರಾಜರ ಬಗೆಗಿನ ಮಾಹಿತಿ ಭಾರತೀಯ ಮನಸ್ಥಿತಿಯನ್ನು ಗುರುತಿಸಲು ಸಹಾಯಕವಾಗುತ್ತದೆ.

ರಾಜಕೀಯ ಮತ್ತು ಸಾರ್ವಜನಿಕ ಸೇವೆಗೆ ಪ್ರವೇಶಿಸುವ ಪ್ರತಿಯೊಬ್ಬರೂ ಇವುಗಳನ್ನು ಕೂಲಂಕುಷವಾಗಿ ಓದಿ ಅದನ್ನು ಸರಿಯಾಗಿ ಗ್ರಹಿಸಿ ಅಳವಡಿಸಿಕೊಂಡಿದ್ದೇ ಆದರೆ ಭಾರತ ಸಾಮಾಜಿಕ ಮತ್ತು ರಾಜಕೀಯದ ಬಹುತೇಕ ಸಮಸ್ಯೆಗಳು ತನ್ನದ ತಾನೇ ಪರಿಹಾರ ಕಂಡುಕೊಳ್ಳುತ್ತವೆ. ಅಧಿಕಾರ ಕೇಂದ್ರಕ್ಕೆ ಹತ್ತಿರವಿರುವವರು ಇದನ್ನೆಲ್ಲಾ ಅರ್ಥ ಮಾಡಿಕೊಂಡರೆ ಅವರ ಮನಸ್ಥಿತಿಗಳು ಜಾಗೃತವಾಗಿ ಅವರಲ್ಲಿ ತಮಗರಿವಿಲ್ಲದೆ ಸೂಕ್ಷ್ಮ ಸಂವೇದನೆಗಳು ಉಂಟಾಗಿ ವಿವೇಚನೆ ಬೆಳೆಯುತ್ತದೆ.

ದುರಾದೃಷ್ಟವೆಂದರೆ ಇದನ್ನೆಲ್ಲಾ ತಿಳಿದ ವ್ಯಕ್ತಿಗಳು ಈ ವ್ಯವಸ್ಥೆಯಿಂದ ದೂರವಾಗಿ ಸಿನಿಕರಾದರೆ ಇದನ್ನು ಅರಿಯದ ರಾಜಕಾರಣಿಗಳು ಹಣ ಜಾತಿಯ ಚುನಾವಣಾ ರಾಜಕೀಯದಲ್ಲಿ ಮತ ಪಡೆದು ಗೆದ್ದು ನಮ್ಮನ್ನು ಆಳುತ್ತಾರೆ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದಂತೆ ನಮ್ಮಲ್ಲಿಯೇ ಅತ್ಯುತ್ತಮ ಆಡಳಿತದ ಮಾದರಿಗಳಿರುವಾಗ ಅದನ್ನು ಗಮನಿಸುತ್ತಿಲ್ಲ. 

ಕನಿಷ್ಠ ಮುಂದಿನ ದಿನಗಳಲ್ಲಾದರೂ ಈ ಆಧುನಿಕ ಕಾಲದಲ್ಲಿ ಆಡಳಿತದ ಬಗ್ಗೆ ಸಂಪೂರ್ಣ ತಿಳಿದಿರುವ ಮಾನವೀಯ ಮುಖದ ರಾಜಕಾರಣಿಗಳು ನಮ್ಮನ್ನು ಆಳುವಂತಾಗಿ ಈ ದೇಶ ವಿಶ್ವ ಭೂಪಟದಲ್ಲಿ ಮಹತ್ವದ ಸ್ಥಾನ ಹೊಂದಲಿ ಎಂಬ ಆಶಯದೊಂದಿಗೆ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು