ರಾಜಕುಮಾರನಾದ ಮುತ್ತುರಾಜ...

ರಾಜಕುಮಾರನಾದ ಮುತ್ತುರಾಜ...

ಇಂದು ಕರ್ನಾಟಕದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟಿದ ದಿನ. ಅವರಿಗೆ ಶುಭಾಶಯಗಳನ್ನು ಹೇಳುತ್ತಾ...

ರಾಜಕುಮಾರನಾದ ಮುತ್ತುರಾಜ. 

ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ. ಜನರ ಕಾಲ್ಪನಿಕ ಲೋಕವೇ ಬೇರೆ ಅದರಲ್ಲೂ ಸಿನಿಮಾ ನಟನನ್ನು. ರಂಗುರಂಗಿನ ಬೆಳಕಿನಲ್ಲಿ, ಬಣ್ಣ ಬಣ್ಣದ ಚಿತ್ತಾರದಲ್ಲಿ, ವಿವಿಧ ರೀತಿಯ ರಮ್ಯ ಪಾತ್ರಗಳಲ್ಲಿ, ದೇವ ಮಾನವ - ಸೂಪರ್ ಮ್ಯಾನ್ ಶೈಲಿಯಲ್ಲಿ ಜನರ ಭಾವನೆಗಳ ಮೇಲೆ ನಾಲ್ಕೈದು ದಶಕಗಳ ಕಾಲ ಸವಾರಿ ಮಾಡಿರುವ ರಾಜ್ ಕುಮಾರ್ ಅವರನ್ನು ಈಗಿನ ತಲೆಮಾರಿಗೆ ವಿವರಿಸುವುದು ಸ್ವಲ್ಪ ಕಷ್ಟ. ಬೆರಳ ತುದಿಯಲ್ಲಿ ಒತ್ತಿ ವಿಶ್ವದ ಎಲ್ಲವನ್ನೂ ನೋಡುವ ಸೌಲಭ್ಯಗಳು ಈಗ ಇರುವ ಸಂದರ್ಭದಲ್ಲಿ...

ಅಂದು ಬಡತನದ ಜೊತೆಗೆ ಮನರಂಜನೆಯ ಬಹುಮುಖ್ಯ ಮಾಧ್ಯಮವಾಗಿದ್ದ ಸಿನಿಮಾದ ಪ್ರತಿ ಹಾಡು ಸಂಭಾಷಣೆ ದೃಶ್ಯಗಳು ಮನಸ್ಸಿನೊಳಗೆ ಇಳಿದು ಮತ್ತೆ ಹೊರಬಂದು ಬದುಕಿನಲ್ಲೂ ಪ್ರವೇಶಿಸುತ್ತಿದ್ದವು. ನೋಡುಗರೇ ಪಾತ್ರಗಳಾಗಿ ತಮ್ಮನ್ನು ಕಲ್ಪಸಿಕೊಳ್ಳುತ್ತಿದ್ದರು. ತಂದೆ, ತಾಯಿ, ಅಕ್ಕ, ತಮ್ಮ, ಅಣ್ಣ, ತಂಗಿ ಮುಂತಾದ ರಕ್ತ ಸಂಬಂಧಗಳು, ಪ್ರೀತಿ ಪ್ರೇಮ ಪ್ರಣಯ ಹಾಸ್ಯ ವಿರಹಗಳ ಸರಮಾಲೆಯೇ  ದೃಶ್ಯಗಳಾಗಿ ಜೋಡಣೆಗೊಂಡು ಆಗಿನ ಸಾಮಾಜಿಕ ಜನಜೀವನವನ್ನು ಪ್ರಭಾವಿಸುತ್ತಿದ್ದವು. ಇಂತಹ ವಾತಾವರಣದಲ್ಲಿ ಬೆಳೆದು ಬಂದ ವ್ಯಕ್ತಿಯೇ ಅಭಿಮಾನಿಗಳಿಂದ "ಅಣ್ಣಾವ್ರು" ಎಂದು ಕರೆಸಿಕೊಳ್ಳುವ ‌ಡಾಕ್ಟರ್ ರಾಜ್ ಕುಮಾರ್. ಆರಾಧನಾ ಭಾವದಿಂದ ಅಥವಾ ಪೂರ್ವಾಗ್ರಹ ‌ದೃಷ್ಟಿಕೋನದಿಂದ ಅವರನ್ನು ನೋಡಿದರೆ ಅದು ಅವಾಸ್ತವವಾಗಬಹುದು. ಅವರ ಹತ್ತಿರದ ಸಂಬಂಧಿಗಳು, ಅವರ ಜೊತೆಗಾರರು, ಅವರಿಂದ ಲಾಭ ಪಡೆದವರು ಅವರನ್ನು ಚಿತ್ರಸುವುದಕ್ಕಿಂತ ಅವರ ‌ಸಿನಿಮಾ ನೋಡಿ, ಮಾಧ್ಯಮಗಳ ಸಂದರ್ಶನ ನೋಡಿ, ಸಭೆ ಸಮಾರಂಭಗಳಲ್ಲಿ ಭಾಷಣ ಕೇಳಿ ಅವರನ್ನು ಅವರ ಸಾಧನೆಯ ಆಧಾರದ ಮೇಲೆ ನೋಡಬೇಕಿದೆ.‌

ಕನ್ನಡ ಭಾಷೆ ಸಿನಿಮಾ ಸಂಸ್ಕೃತಿಗೆ ಅವರ ಕೊಡುಗೆ ಏನು ಎಂಬುದನ್ನು ಗಮನಿಸಬೇಕಿದೆ. ಅವರ ಸಾರ್ವಜನಿಕ ನಡವಳಿಕೆಗಳು ಎಷ್ಟು ಆದರ್ಶಪ್ರಾಯವಾದು ಎಂಬುದನ್ನು ನೋಡಬೇಕಿದೆ. ಒಂದು ತಲೆಮಾರಿನ ಮೇಲೆ ಅವರ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕಿದೆ. ಜನಪ್ರಿಯತೆಯ ದೃಷ್ಟಿಯಲ್ಲಿ ಕನ್ನಡ ನಾಡಿನಲ್ಲಿ ಅತ್ಯಂತ ಹೆಚ್ಚು ಎತ್ತರಕ್ಕೆ ಏರಿದ್ದ ವ್ಯಕ್ತಿ ರಾಜ್ ಕುಮಾರ್. ಅವರ ಹುಟ್ಟು ಸಾವು ಬಾಲ್ಯ ಆರಂಭದ ದಿನಗಳು ನಟಿಸಿದ ಸಿನಿಮಾಗಳು ಪ್ರಶಸ್ತಿಗಳು ಮಕ್ಕಳು ಸಂಸಾರ ಹೋರಾಟ ಕುರಿತ ಎಲ್ಲಾ ಮಾಹಿತಿಗಳು ಈಗಾಗಲೇ ಅನೇಕ ಪುಸ್ತಕಗಳಲ್ಲಿ ದಾಖಲಾಗಿದೆ. ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಮಾಧ್ಯಮಗಳಲ್ಲಿ ಚರ್ಚಿಸಲಾಗಿದೆ. ಅದರ ಭಾಗವಾಗಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ಸಣ್ಣ ಅಭಿಪ್ರಾಯ...

ಕರ್ನಾಟಕದ ಕನ್ನಡ ಮಣ್ಣಿನ ಯಾರಾದರೂ ಒಬ್ಬ ಅತ್ಯಂತ ಜನಪ್ರಿಯ ಅಥವಾ ಪ್ರಸಿದ್ಧ ಅಥವಾ ಸಾಧಕ ಅಥವಾ ಅಧಿಕಾರಸ್ತ ವ್ಯಕ್ತಿಗಳ ಸಂಪೂರ್ಣ ಜೀವನ ವೃತ್ತಾಂತವನ್ನು ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಿ "ಹಳ್ಳಿ ಹೈದ" ಎಂಬ ಅನ್ವರ್ಥನಾಮಕ್ಕೆ ಸೂಕ್ತ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದರೆ ಅದು ಮುತ್ತುರಾಜನೆಂಬ ಡಾ. ರಾಜ್ ಕುಮಾರ್.

ನೀವು ಹೇಗೇ ನೋಡಿ,  ಹುಟ್ಟಿನಿಂದ ಸಾಯುವತನಕ ಅವರ ಭಾಷೆ, ದೇಹಚಲನೆ, ಉಡುಗೆ ತೊಡುಗೆ, ಊಟ, ಸಾಂದರ್ಭಿಕ ನಿರ್ಧಾರಗಳು ಈ ನೆಲದ ಅಪ್ಪಟ ಮಣ್ಣಿನ ಸೊಗಡಿನ ಗ್ರಾಮೀಣ ಪರಿಸರದ ಹಳ್ಳಿ ಹೈದನಂತೆಯೇ ಕಾಣುತ್ತಾರೆ. ಕೆಲವೊಂದು ಶಿಷ್ಟಾಚಾರದ ಹೊರತಾಗಿಯೂ ಅವರು ಅದನ್ನು ಉಳಿಸಿಕೊಂಡಿದ್ದರು. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಎಷ್ಟೋ ಇಲ್ಲಿನ ಮಣ್ಣಿನ ಮಕ್ಕಳು ಬೆಳೆಯುತ್ತಾ ರೈತ ನಾಯಕರೋ, ರಾಜಕಾರಣಿಗಳೋ, ಕ್ರೀಡಾಪಟುಗಳೋ, ವಿಜ್ಞಾನಿಗಳೋ, ಉದ್ಯಮಿಗಳೋ, ‌ಹೀಗೆ ಏನೋ ಆಗಿ ದೊಡ್ಡ ಹೆಸರು ಮಾಡಿ, ಅವರೆಲ್ಲ ಕ್ರಮೇಣ ಹಳ್ಳಿ ಸೊಗಡನ್ನು ಮೇಲ್ನೋಟದ ತೋರಿಕೆಗಾಗಿಯೋ ಅಥವಾ ನೆನಪಿನ ಬುತ್ತಿಯಾಗಿಯೋ ಬಳಸುತ್ತಾರೆ ಮತ್ತು ಬಹುತೇಕರು ನಗರೀಕರಣಗೊಂಡು ತಮ್ಮ ತನ ಕಳೆದುಕೊಂಡಿರುತ್ತಾರೆ. ಆದರೆ

ಈ ರಾಜಕುಮಾರ ಅಪ್ಪಟ ಹಳ್ಳಿ ಹೈದನಂತೆಯೇ ಕೊನೆಯವರೆಗೂ ಇದ್ದರು. ಆಂತರಿಕವಾಗಿ ಅವರ ಮನಸ್ಥಿತಿ ಹೇಗಿತ್ತೋ ಅವರೇ ಬಲ್ಲರು. ಆದರೆ  ನಡವಳಿಕೆ ಮಾತ್ರ ಅವರು ಎಷ್ಟು ಮುಗ್ಧರೋ ಅಷ್ಟೇ ಒಬ್ಬ ಹಳ್ಳಿ ಪೆದ್ದು ಎಂದು ನಾವೆಲ್ಲ ಹಾಸ್ಯ ಮಾಡುವ ಗ್ರಾಮ್ಯ ಶೈಲಿಯ ಗುಣ ಅವರಲ್ಲಿ ಅಂತರ್ಗತವಾದಂತೆ ಭಾಸವಾಗುತ್ತದೆ. ನಟನೆಯಲ್ಲೂ ಅದೇ ಮುಗ್ಧತೆ, ಅದೇ ರಸಿಕತೆ, ಭಕ್ತಿಯಲ್ಲೂ ಅದೇ ತನ್ಮಯತೆ, ಹೊಡೆದಾಟಗಳಲ್ಲಿ ಅದೇ ಗ್ರಾಮ್ಯ ಶೈಲಿ, ಕಣ್ಣುಗಳಲ್ಲಿ ಅದೇ ಹಳ್ಳಿಯ ನೋಟ, ಹೊರ ಪ್ರಪಂಚದ ಆಗುಹೋಗುಗಳಲ್ಲಿ ಅದೇ ಪೆದ್ದುತನ ಎಲ್ಲವೂ ಹಳ್ಳಿಹೈದನ ಗುಣಲಕ್ಷಣಗಳು ಅವರಲ್ಲಿ ಐಕ್ಯವಾದಂತಿವೆ.

ರಾಜಕೀಯವೆಂದರೆ ಏನೋ ಕೆಟ್ಟದ್ದು ಎಂಬಂತೆ ಅದರಿಂದ ಮಾರು ದೂರ, ಮಾಂಸಹಾರಿ ಊಟವೆಂದರೆ ಪಂಚಪ್ರಾಣ, ಪ್ರಣಯದ ಕಣ್ಣೋಟದಲ್ಲಿ ಅದೇ ಹಳ್ಳಿಯ ಕಿಲಾಡಿತನ, ಹಣದ ವಿಷಯದಲ್ಲಿ ಸ್ವಲ್ಪ ಜಿಪುಣತನ, ಗೊಂದಲವಾದಾಗ ತಲೆ ಕರೆದುಕೊಳ್ಳುವ ಅದೇ ಮಣ್ಣಿನ ಗುಣ ಎಲ್ಲವೂ ಪಕ್ಕಾ ಹಳ್ಳಿ ಹೈದ. ನನಗಂತೂ ವೈಯಕ್ತಿಕವಾಗಿ ಕನ್ನಡ ಮಣ್ಣಿನ ಸಮಷ್ಠಿ ಪ್ರಜ್ಙೆಯಿಂದ ಅವಲೋಕಿಸಿದಾಗ ನಿಜವಾದ ಹಳ್ಳಿ ಹೈದ ಡಾ.ರಾಜ್ ಕುಮಾರ್. ಆದರೆ ಆ ಮುಗ್ದತೆ ಸ್ವಾಭಾವಿಕವೇ ಅಥವಾ ಜನಪ್ರಿಯತೆಯ ಒತ್ತಡದಿಂದ ಬಂದದ್ದೇ ಎಂಬುದು ಪ್ರಶ್ನಾರ್ಹ. ನವರಸಗಳನ್ನು ಪಾತ್ರಗಳಲ್ಲಿ ಸಮರ್ಥವಾಗಿ ತುಂಬುವ ಸಾಮರ್ಥ್ಯ ಅವರಲ್ಲಿ ಇದ್ದಾಗ ಅಷ್ಟು ಸುಲಭವಾಗಿ ಮುಗ್ದತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಬದುಕಿನ ನಿಜವಾದ ಅನುಭವಗಳು ಅಭಿನಯದ ಭಾಗವಾಗಿರುತ್ತದೆ. 

ಭಾಷೆ ಸಂಸ್ಕೃತಿ ಜನಜೀವನದ ಮೇಲೆ ಪ್ರಭಾವ ಎಲ್ಲವನ್ನೂ ಗಮನಿಸಿದಾಗ ಅವರ ಸಾಧನೆ ಎತ್ತರದಲ್ಲಿ ನಿಲ್ಲುತ್ತದೆ. ಅದು ಈಗಾಗಲೇ ಸಾಬೀತಾಗಿರುವ ವಿಷಯ. ಸಾರ್ವಜನಿಕ ಸೇವೆಗಳ ವಿಷಯ ಬಂದಾಗ, ಚಿತ್ರರಂಗದ ಒಟ್ಟು ನಿಯಂತ್ರಣ ಗಮನಿಸಿದಾಗ ಅವರ ವಿರೋಧಿಗಳು ಅವರ ಮೇಲೆ ಒಂದಷ್ಟು ಆಪಾದನೆ ಮಾಡುತ್ತಾರೆ. ಅದು ಎಲ್ಲಾ ಕಾಲಕ್ಕೂ ಎಲ್ಲರ ಮೇಲೆಯೂ ಇರುತ್ತದೆ. ಅದು ಅವರವರ ಭಾವಕ್ಕೆ ಬಿಡುತ್ತಾ, ಕೆಲವೊಂದು ಒಪ್ಪು ತಪ್ಪುಗಳ ನಡುವೆಯೂ ಕನ್ನಡಿಗರು ಹೆಮ್ಮೆ ಪಡುಬಹುದಾದ ಕೆಲವೇ ಅಗ್ರಗಣ್ಯ ವ್ಯಕ್ತಿತ್ವಗಳ ಶ್ರೇಷ್ಠ ಸಾಲಿನಲ್ಲಿ ರಾಜ್ ಕುಮಾರ್ ಅವರೂ ಪ್ರಮುಖವಾಗುತ್ತಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು.

***

ರವಿ ಕೃಷ್ಣಾ ರೆಡ್ಡಿ ಮತ್ತು ಜನ ಚೈತನ್ಯ ಯಾತ್ರೆ...

ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಕೆಲವು ವರ್ಷಗಳಿಂದ ಪ್ರಾಮಾಣಿಕವಾಗಿ ಹೋರಾಡುತ್ತಿರುವ ಕರ್ನಾಟಕದ ಪ್ರಮುಖ ವ್ಯಕ್ತಿಗಳಲ್ಲಿ ಶ್ರೀ ರವಿ ಕೃಷ್ಣಾ ರೆಡ್ಡಿಯವರು ಒಬ್ಬರು. ಅಮೆರಿಕದ ಸಾಪ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ಇವರು ಭಾರತದಲ್ಲಿ ಸರ್ವವ್ಯಾಪಿಯಾದ ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ಮಾರಕ ಎಂದು ಭಾವಿಸಿ ಅದರ ವಿರುದ್ಧ ಹೋರಾಡಲು ಉದ್ಯೋಗ ತೊರೆದು ಕರ್ನಾಟಕಕ್ಕೆ ಬರುತ್ತಾರೆ.

ಮೊದಲಿಗೆ ವಿವಿಧ ಸಂಘ ಸಂಸ್ಥೆಗಳು ಪಕ್ಷಗಳ ಜೊತೆ ಹೋರಾಟ ಮಾಡಿ ನಂತರ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆ ಸ್ಥಾಪಿಸಿ ತದನಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ಥಾಪಿಸಿ ನಿರಂತರ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ದಿನೇ ದಿನೇ ಹೆಚ್ಚಾಗುತ್ತಿರುವ ಭ್ರಷ್ಟಾಚಾರ, ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಬಯಲಾಗುತ್ತಿರುವ ಹಗರಣಗಳ ಸರಮಾಲೆ ಇವುಗಳಿಂದ ಬೇಸತ್ತ ಯುವ ಸಮೂಹ ಆಸೆಯ ಕಣ್ಣುಗಳಿಂದ  ಈ ರೀತಿಯ ಪ್ರಾಮಾಣಿಕ ಹೋರಾಟಗಾರರತ್ತ ಆಕರ್ಷಿತವಾಗುತ್ತಿದೆ. ಜಾಗೃತ ಮನಸ್ಥಿತಿಯ ಜನ ಬದಲಾವಣೆ ಬಯಸುವ ಮನಸ್ಸುಗಳು ಕೈ ಜೋಡಿಸುತ್ತಿದ್ದಾರೆ. ದಿಢೀರನೆ ದೊಡ್ಡ ಪರಿವರ್ತನೆ ಸಾಧ್ಯವಾಗದಿದ್ದರೂ ಬದಲಾವಣೆಯ ಮುನ್ನುಡಿ ಇದರಿಂದ ಸಾಧ್ಯವಾಗುತ್ತದೆ.

ರಾಜ್ಯದ ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗೃತಗೊಳಿಸಲು ಜನ ಚೈತನ್ಯ ಯಾತ್ರೆಯನ್ನು ಇಂದಿನಿಂದ 24-04-2022 ಬೆಂಗಳೂರಿನಿಂದ ಪ್ರಾರಂಭಿಸುತ್ತಿದ್ದಾರೆ. ಒಂದು ವರ್ಷದಷ್ಟು ದೀರ್ಘಕಾಲ ರಾಜ್ಯವನ್ನು ಸುತ್ತುವ ಯೋಜನೆ ರೂಪಿಸಿಕೊಂಡಿದ್ದಾರೆ. ಅವರಿಗೆ ತುಂಬಾ ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ...

ಪರ್ಯಾಯ ರಾಜಕೀಯದ ಸಾಧ್ಯತೆಗಳಲ್ಲಿ ರವಿ ಕೃಷ್ಣಾ ರೆಡ್ಡಿಯವರ ಈ ಒಂದು ಪ್ರಯತ್ನ ಸಹ ಗಮನ ಸೆಳೆಯುತ್ತದೆ. ಬೇರೆ ಬೇರೆ ವ್ಯಕ್ತಿಗಳು ಮತ್ತು ಸಂಘಟನೆಗಳು ಒಟ್ಟಾಗಿ ಒಂದು ವೇದಿಕೆಯ ಅಡಿಯಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಪ್ರದರ್ಶಿಸಿದರೆ ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸು ನನಸಾಗಬಹುದು. ಹಾಗಾಗಲಿ ಎಂದು ಬಯಸುತ್ತಾ.. ವೈಯಕ್ತಿಕವಾಗಿ ನಾನು ಯಾವುದೇ ಸಂಘ ಸಂಸ್ಥೆ ಪಕ್ಷ ಸಿದ್ದಾಂತಗಳ ಪ್ರತ್ಯಕ್ಷ ಅಥವಾ ಪರೋಕ್ಷ, ಅಧಿಕೃತ ಅಥವಾ ಅನಧಿಕೃತ ಸದಸ್ಯನಲ್ಲ. ಆದರೆ ಸಮಾಜದ ಹಿತದೃಷ್ಟಿಯಿಂದ ಯಾರೇ ಉತ್ತಮ ಕೆಲಸ ಮಾಡಿದರೂ ಅವರಿಗೆ ನಮ್ಮ ಸಹಕಾರ ಸದಾ ಇರುತ್ತದೆ.

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ