ರಾಷ್ಟ್ರೀಯ ಕಾನೂನು ಆಚರಣೆಯ ಸಂವಿಧಾನ ದಿನ

ರಾಷ್ಟ್ರೀಯ ಕಾನೂನು ಆಚರಣೆಯ ಸಂವಿಧಾನ ದಿನ

ದೇಶದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಸಂವಿಧಾನವು ಅಗತ್ಯ. ಕಾನೂನು ಕಟ್ಟಳೆಗಳು, ನಿಯಮಗಳು, ಹಲವಾರು ಮಾರ್ಗಸೂಚಿಗಳು, ಪ್ರಜೆಗಳ ಹಕ್ಕು ಕರ್ತವ್ಯಗಳು ಅದರಲ್ಲಿ ಅಡಕವಾಗಿರುತ್ತದೆ. ನಮ್ಮ ದೇಶದ ಸಂವಿಧಾನ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿದೆ. ಸಮಾನ ನ್ಯಾಯ, ಯಾವುದೇ ಲಿಂಗ ಭೇದವಿಲ್ಲದ, ತಾರತಮ್ಯವಿಲ್ಲದ ಕಾನೂನಿನ ಪ್ರತಿಬಿಂಬವಾಗಿದೆ. ಭಾರತದ ದಿಕ್ಸೂಚಿಯೆಂದರೂ ತಪ್ಪಾಗಲಾರದು. ದೇಶದ ಅಭಿವೃದ್ಧಿಯ ಪಥ, ವಿಧಾನಗಳು, ರಾಷ್ಟ್ರೀಯ ಸಮಗ್ರತೆ, ಜಾತ್ಯಾತೀತ ನಿಲುವು, ಸರಕಾರದ ರಚನೆ, ಜನರ ಮತ್ತು ಸರಕಾರದ ನಡುವಿನ ಸಂಬಂಧ ಎಲ್ಲವನ್ನೂ ಲಿಖಿತವಾಗಿ ಸಂವಿಧಾನದಲ್ಲಿ ಬರೆಯಲಾಗಿದೆ. ಭಾರತ ದೇಶದ  ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ಸ್ಥಾಪಿಸಿ, ಅದರಡಿಯಲ್ಲಿ ಬರುವ ಎಲ್ಲರಿಗೂ ಅಭಿವ್ಯಕ್ತಿ, ನಂಬಿಕೆ, ವಿಶ್ವಾಸ, ಭಕ್ತಿಯ ಆರಾಧನೆ, ಆಚಾರ-ವಿಚಾರ,ದೇಶದ ಸಮಗ್ರ ಒಗ್ಗಟ್ಟು, ದೇಶದ ಉನ್ನತಿಗಾಗಿ ಶ್ರಮಪಡುವುದು, ಸರ್ವ ಸ್ವತಂತ್ರರಾಗಿ ಬಾಳ್ವೆ ನಡೆಸುವುದು,ಇತರರ ಭಾವನೆಗಳನ್ನು ಘಾ‌ಸಿಗೊಳಿಸದಿರುವುದು ಈ ಎಲ್ಲವೂ ಸಂವಿಧಾನದಲ್ಲಿ ಅಡಕವಾಗಿದೆ. ನಮ್ಮ ಸಂವಿಧಾನವು 365 ವಿಧಿಗಳು,22 ಭಾಗಗಳು, 8 ಅನುಚ್ಛೇದ‌ಗಳನ್ನು ಹೊಂದಿದೆ.

ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರು ಡಾ ಬಿ ಆರ್ ಅಂಬೇಡ್ಕರ್ ಅವರು. ಸಂವಿಧಾನದ ಕರಡು ಪ್ರತಿಯನ್ನು ರಚಿಸಿ, ೧೯೫೦ರ ನವಂಬರ ೨೬ ರಂದು ಭಾರತಕ್ಕೆ ಅರ್ಪಿಸಿದ ದಿನವೇ ಸಂವಿಧಾನ ದಿನ. ಮೊದಲು ರಾಷ್ಟ್ರೀಯ ಕಾನೂನಿನ ದಿನವೆಂದು ಆಚರಿಸುತ್ತಿದ್ದರು. ೨೦೧೫ರಿಂದ ಸಂವಿಧಾನ ದಿನವೆಂದು ಘೋಷಿಸಲ್ಪಟ್ಟಿತ್ತು. ಸಂವಿಧಾನ ಕರಡು ಪ್ರತಿಯ ತಯಾರಿಗೆ ಡಾ ಬಿ ಆರ್ ಅಂಬೇಡ್ಕರ್ ಅವರೊಬ್ಬರೇ ಹೆಚ್ಚಿನ ಮುತುವರ್ಜಿ ವಹಿಸಿದ್ದರ ಫಲವೆಂದು, ಶ್ರೀ ಟಿಟಿ ಕೃಷ್ಣಮಾಚಾರಿಯವರ ಹೇಳಿಕೆಯಲ್ಲಿ ಕಂಡುಬರುತ್ತದೆ. ಸಮಿತಿಯ ಸದಸ್ಯರ ಅನಾರೋಗ್ಯ, ವಿದೇಶವಾಸ, ಮರಣ ಹೀಗೆ ಹತ್ತು ಹಲವು ಅಡಚಣೆಗಳು. ಡಾ ರಾಜೇಂದ್ರ ಪ್ರಸಾದ್ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು.

ಅಂಬೇಡ್ಕರ್ ಅವರ ವಿಚಾರಗಳು, ಆಲೋಚನೆಗಳನ್ನು ಮಕ್ಕಳಿಗೆ ಮಾಹಿತಿ ನೀಡಬಹುದು. ಸಂವಿಧಾನದ ಮಹತ್ವವನ್ನು ತಿಳಿಸಬಹುದು. ಓಟ ಇತ್ಯಾದಿ ಕ್ರೀಡೆಗಳನ್ನು ಆಯೋಜಿಸುವುದು, ಭಾಷಣ, ಪ್ರಬಂಧ, ರಸಪ್ರಶ್ನೆ ಇತ್ಯಾದಿ ಮಕ್ಕಳಿಗೆ ಏರ್ಪಡಿಸಿ ಶಾಲೆಗಳಲ್ಲಿ ಅರಿವು ಮೂಡಿಸಬಹುದು. ಅಖಂಡ ಭಾರತದ ಲಿಖಿತ ಸಂವಿಧಾನವನ್ನು ಗೌರವಿಸೋಣ. ಸಂವಿಧಾನವನ್ನು ರಚಿಸಿ ದೇಶಕ್ಕೆ ಸಮರ್ಪಿಸಿದ ಹಿರಿಯರನ್ನೆಲ್ಲ ಸ್ಮರಿಸೋಣ.

‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’

ನಮ್ಮ ಸಂವಿಧಾನ ನಮ್ಮ ಹೆಮ್ಮೆ

ಅರಿಯೋಣ ಬನ್ನಿ ಒಳಗೇನಿದೆ ಒಮ್ಮೆ

ಲಿಖಿತ ಸಂಗ್ರಹ ಬೃಹತ್ ಗ್ರಂಥವು

ವಿಶ್ವದಲ್ಲೇ ಅತಿ ಶ್ರೇಷ್ಠವು

 

ಡಾ ಬಿ ಆರ್ ಅಂಬೇಡ್ಕರರ ಶ್ರಮದ ಫಲವಿದು

ಭಾರತದ ಅತಿದೊಡ್ಡ ಬಲವಿದು

ಏಕ ಆಡಳಿತ ಏಕ ಕಾನೂನು ಸಮಾನತೆಯಿದು

ಹಕ್ಕು ಕರ್ತವ್ಯಗಳ ಅರಿವ ಗೂಡಿದು

 

ನಮಿಸೋಣ ಆಲೋಚನೆಗಳ ಸರಣಿಗೆ

ಕೈಯೆತ್ತಿ ಮುಗಿಯೋಣ ದಕ್ಷ ಶ್ರಮಹಾದಿಗೆ

ರಾಷ್ಟ್ರೀಯ ನಾಯಕರ ಕನಸು ನನಸಾದ ದಿನವಿಂದು

ತಿಳಿಸೋಣ ತಿಳಿಯೋಣ ಎಲ್ಲರೊಂದಾಗಿ ಬಂದು

 

-ರತ್ನಾ ಕೆ.ಭಟ್, ತಲಂಜೇರಿ

(ಆಕರ: ಡಾ.ಬಿ ಆರ್ ಅಂಬೇಡ್ಕರ್ ಪುಸ್ತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ