ರಿಡ್ಜ್ ಪಾಯಿಂಟ್ ಎಂಬ ವಿಸ್ಮಯ

ರಿಡ್ಜ್ ಪಾಯಿಂಟ್ ಎಂಬ ವಿಸ್ಮಯ

ಇದೊಂದು ತುಂಬಾ ಅಪರೂಪದ, ಅದ್ಭುತ ಸಂಗ್ರಹ ಯೋಗ್ಯ ಮಾಹಿತಿ.ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಲೆ ವ್ಯೂ ಪಾಯಿಂಟ್ ಸಮೀಪದ ಮಂಕನಹಳ್ಳಿಯಲ್ಲಿ ಬ್ರಿಟಿಷರಿಂದ ಸ್ಥಾಪಿತವಾದ ಈ ಕಲ್ಲಿನ ಸ್ತಂಭದ ವೈಶಿಷ್ಟ್ಯತೆ ಎಂದರೆ ಕಲ್ಲಿನ ಎಡಭಾಗಕ್ಕೆ ಬೀಳುವ ಮಳೆಯ ನೀರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನೂ ಹಾಗೂ ಬಲಭಾಗಕ್ಕೆ ಬೀಳುವ ಮಳೆ ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನೂ ಸೇರುತ್ತದೆ.  

ಈ ಸ್ಥಳದ ಪಶ್ಚಿಮ ಭಾಗದ ಬೆಟ್ಟಕುಮರಿ ಪ್ರದೇಶದಿಂದ ಹುಟ್ಟುವ ಅಡ್ಡಹೊಳೆ ಮತ್ತು ಪುಷ್ಪಗಿರಿಯ ಗಿರಿಹೊಳೆ ಸೇರಿ ಕುಮಾರಧಾರ ನದಿಯಾಗುತ್ತದೆ.

ಈ ನದಿ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕಡೆಗೆ ಹರಿದು ಹೋಗುತ್ತದೆ. ಈ ನದಿಯು ಗುಂಡ್ಯ ನದಿಯೊಂದಿಗೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯೊಂದಿಗೆ ಸಂಗಮವಾಗುತ್ತದೆ. ಮುಂದೆ ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.   

ಈ ಪರ್ವತ ಶ್ರೇಣಿಗಳ ಪೂರ್ವಭಾಗದಲ್ಲಿ ಬಿದ್ದ ಮಳೆ ನೀರು ಮತ್ತು ಸಣ್ಣ ತೊರೆಗಳು ಹೇಮಾವತಿಯೊಂದಿಗೆ ಸೇರಿಕೊಳ್ಳುತ್ತವೆ. ಹೇಮಾವತಿ ನದಿ ಸಕಲೇಶಪುರ ಪಟ್ಟಣದ ಪಕ್ಕದಲ್ಲೇ ಹರಿದು ಮಂಡ್ಯ ಜಿಲ್ಲೆಯ ಕೆಆರ್​ಎಸ್ ಬಳಿ ಕಾವೇರಿ ನದಿಯೊಂದಿಗೆ ಸಂಗಮವಾಗಿ ತಮಿಳುನಾಡಿನಲ್ಲಿ ಬಂಗಾಳಕೊಲ್ಲಿ ಸೇರುತ್ತದೆ..

(ಸಂತೋಷ್ ಧರ್ಮರಾಜ್ ರವರ ಫೇಸ್ ಬುಕ್ ವಾಲ್ ನಿಂದ ಸಂಗ್ರಹ)