ಲಂಡನ್ ಬ್ಯಾಂಕ್ ಹುದ್ದೆಗೆ ವಿದಾಯ: ಈಗ ಹಣ್ಣಿನ ತೋಟದಿಂದ ಮೂರು ಪಟ್ಟು ಆದಾಯ

ಲಂಡನ್ ಬ್ಯಾಂಕ್ ಹುದ್ದೆಗೆ ವಿದಾಯ: ಈಗ ಹಣ್ಣಿನ ತೋಟದಿಂದ ಮೂರು ಪಟ್ಟು ಆದಾಯ

ಕೇವಲ ಐದು ವರುಷಗಳ ಮುಂಚೆ ಬ್ರಿಟನಿನ ಪ್ರಸಿದ್ಧ ಬ್ಯಾಂಕಿನಲ್ಲಿ ಲಕ್ಷಗಟ್ಟಲೆ ರೂಪಾಯಿ ವೇತನದ ಉದ್ಯೋಗ; ಗಾಜಿನ ಪುಟ್ಟ ಆವರಣದೊಳಗೆ ಹಣಕಾಸಿನ ಲೆಕ್ಕಾಚಾರದ ಬದುಕು. ೨೦೧೫ರಿಂದೀಚೆಗೆ ಹಣ್ಣಿನ ಗಿಡಗಳೊಂದಿಗೆ ಬದುಕು; ೧೨,೫೦೦ ದಾಳಿಂಬೆ ಗಿಡಗಳು, ೭,೫೦೦ ಪಪ್ಪಾಯಿ ಗಿಡಗಳು ಮತ್ತು ೨೦೦ ನಿಂಬೆ ಗಿಡಗಳೊಂದಿಗೆ ಒಡನಾಟ.
ಇದು ನವದೀಪ್ ಗೊಲೇಚಾ ಎಂಬ ೩೦ ವರುಷದ ಯುವಕ ಆರ್ಥಿಕ ಸಲಹೆಗಾರ ಉದ್ಯೋಗ ತೊರೆದು,  ತನ್ನೂರಿಗೆ ಹಿಂತಿರುಗಿ ಕೃಷಿಕನಾದ ಕತೆ. ಯಾವುದೋ ಸಿನೆಮಾನ ಕತೆಯಂತೆ ತೋರುವ ಇದಕ್ಕೆ ಕಾರಣ ಒಂದು ಫೋನ್ ಕರೆ.
ವರ್ತಕ ಕುಟುಂಬದಲ್ಲಿ ಹುಟ್ಟಿದ ನವ್‍ದೀಪ್ ಕಲಿತದ್ದು ರಾಜಸ್ಥಾನದ ಜೋಧಪುರದಲ್ಲಿ. ಅನಂತರ ಕಾಲೇಜು ಶಿಕ್ಷಣಕ್ಕಾಗಿ ತೆರಳಿದ್ದು ಮುಂಬೈಗೆ. ಅಲ್ಲಿ ಪದವಿ ಪಡೆದ ಬಳಿಕ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಲಿಕ್ಕಾಗಿ ಹಾರಿದ್ದು ಸಂಯುಕ್ತ ರಾಷ್ಟ್ರಕ್ಕೆ (ಯುನೈಟೆಡ್ ಕಿಂಗ್‍ಡಮ್). “ರಾಜಸ್ಥಾನದಿಂದ ಲಂಡನಿಗೆ ಬಂದಿದ್ದೆ. ಆರಂಭದಲ್ಲಿ ಎಲ್ಲವೂ ವಿಭಿನ್ನ ಮತ್ತು ಕಠಿಣ ಅನಿಸುತ್ತಿತ್ತು. ವರ್ತಕ ಕುಟುಂಬದವನಾದ ನಾನು ಅಂಕೆಸಂಖ್ಯೆಗಳಲ್ಲಿ ಲೀಲಾಜಾಲವಾಗಿ ಕಲಿಯಬಲ್ಲೆ ಎಂದು ಭಾವಿಸಿದ್ದೆ. ಆದರೆ ತರಗತಿಗಳಿಗೆ ಹಾಜರಾದಾಗಲೇ ಅದೆಲ್ಲ ಎಷ್ಟು ಕಷ್ಟವೆಂದು ನನಗೆ ತಿಳಿಯಿತು. ಅಲ್ಲಿ ಕಾಲೇಜಿನಲ್ಲಿ ಕಲಿಸುವ ವಿಧಾನವೇ ಬೇರೆ ಮತ್ತು ನಾನು ತರಗತಿಗಳಲ್ಲಿ ಶೂನ್ಯಭಾವದಿಂದ ಕುಳಿತಿರುತ್ತಿದ್ದೆ” ಎಂದು ಲಂಡನಿನ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
ಅನಂತರ ಸಿಎಫ್‍ಎ ಕೋರ್ಸಿಗಾಗಿ ಸ್ಕಾಲರ್‍ಷಿಪ್ ಗಳಿಸಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್‍ಲ್ಯಾಂಡ್ ಸೇರಿಕೊಂಡರು ನವದೀಪ್. ಅಲ್ಲಿನ ದಿನಗಳ ಬಗ್ಗೆ ಅವರು ಹೀಗೆನ್ನುತ್ತಾರೆ: “ಅಲ್ಲಿ ಕೆಲಸ ಮಾಡುವುದೇ ಅದ್ಭುತ ಅನುಭವ. ೨೩ನೆಯ ವಯಸ್ಸಿನಲ್ಲೇ ನನ್ನ ವಾರ್ಷಿಕ ಗಳಿಕೆ ೨೫,೦೦೦ ಪೌಂಡುಗಳು (ರೂಪಾಯಿ ೨೨ ಲಕ್ಷ). ಜೀವನದ ಗುರಿ ಸಾಧಿಸಿದ್ದೇನೆ ಎಂದುಕೊಂಡೆ. ಇದಕ್ಕಿಂತ ಹೆಚ್ಚಿನದೇನನ್ನೂ ನಾನು ಸಾಧಿಸುವಂತಿಲ್ಲ ಎಂದು ಭಾವಿಸಿದೆ.”
ಅದೊಂದು ದಿನ ತಂದೆಯವರಿಂದ ನವದೀಪರಿಗೆ ಫೋನ್ ಕರೆ ಬಂತು. “ಊರಿಗೆ ಮರಳಿ ಬಾ” ಎಂದು ತಂದೆ ಕರೆದಾಗ ನವದೀಪರಿಗೆ ಇಲ್ಲವೆನ್ನಲಾಗಲಿಲ್ಲ. ರಾಜಸ್ಥಾನಕ್ಕೆ ಹಿಂತಿರುಗಿದ ನವದೀಪ್ ಕುಟುಂಬದ ವ್ಯವಹಾರದಲ್ಲಿ ತೊಡಗುವುದಿಲ್ಲ ಎಂದು ನಿರ್ಧರಿಸಿದರು. ಬೇರೇನಾದರೂ ಚಟುವಟಿಕೆ ಶುರು ಮಾಡಬೇಕೆಂದು ಹುಡುಕಾಡುತ್ತಿದ್ದಾಗ, ತಂದೆ ಜಮೀನು ಖರೀದಿಸಿದ್ದು ತಿಳಿಯಿತು. ತಕ್ಷಣವೇ ಅವರ ಮನದಲ್ಲಿ ಮೊಳಕೆಯೊಡೆಯಿತು ಅಲ್ಲಿ ಹಣ್ಣಿನ ತೋಟ ರೂಪಿಸುವ ಯೋಜನೆ.
ಆ ಕನಸು ಸುಂದರವಾಗಿತ್ತು. ಆದರೆ ಕೃಷಿಯ ಹಿನ್ನೆಲೆಯೇ ಇಲ್ಲದ, ಯಾವುದೇ ಕುಟುಂಬ ಸದಸ್ಯನಿಂದ ಸಹಾಯದ ಸಾಧ್ಯತೆಯೇ ಇಲ್ಲದ ನವದೀಪ್‍ನದು ಗಾಢ ಕತ್ತಲಿನಲ್ಲಿ ಸೂಜಿಗಾಗಿ ತಡಕಾಡಿದ ಪರಿಸ್ಥಿತಿ.
ಮುಂದಿನ ಕೆಲವು ತಿಂಗಳುಗಳಲ್ಲಿ ರಾಜಸ್ಥಾನ ಕೃಷಿ ಇಲಾಖೆಯ ಪರಿಣತರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದರು. ೨೦೧೫ರಲ್ಲಿ ಮಹಾರಾಷ್ಟ್ರದ ಸಲಹೆಗಾರನ ನೆರವಿನಿಂದ ತಮ್ಮ ತೋಟ ನ್ಯಾಚುರಾ ಫಾರ್ಮಿಗಾಗಿ ಜಮೀನು ಹದಗೊಳಿಸಿ ಗಿಡ ನೆಡಲು ತಯಾರಿ ನಡೆಸಿದರು.
ಬಹುಪಾಲು ಗ್ರಾಹಕರ ಪ್ರಥಮ ಕಾಳಜಿ ಆರೋಗ್ಯ ರಕ್ಷಣೆ ಎಂಬುದನ್ನು ನವದೀತ್ ಗಮನಿಸಿದ್ದರು. ಹಲವಾರು ಕೃಷಿಕರು ಸಾವಯವ ಕೃಷಿಯಲ್ಲಿ ತೊಡಗಲು ಗ್ರಾಹಕರ ಬೇಡಿಕೆಯೇ ಪ್ರೇರಣೆ ಎಂದು ಅವರಿಗೆ ಅರ್ಥವಾಗಿತ್ತು. ಹಾಗಾಗಿಯೇ ತನ್ನ ಫಾರ್ಮಿನಲ್ಲಿ “ವಿಷಮುಕ್ತ ಕೃಷಿ ವಿಧಾನ” ಅನುಸರಿಸಲು ನಿರ್ಧರಿಸಿದರು.
ಈ ವಿಧಾನದಲ್ಲಿ ಫಸಲು ವೃದ್ಧಿಗಾಗಿ ಜೈವಿಕ ಗೊಬ್ಬರಗಳ ಬಳಕೆ ಮತ್ತು ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ಜೈವಿಕ ಪೀಡೆನಾಶಕಗಳ ಬಳಕೆ ಕಡ್ಡಾಯ. ಯಾಕೆಂದರೆ ಸಸ್ಯಗಳು ಪೋಷಕಾಂಶಗಳನ್ನು ಮಣ್ಣಿನಿಂದ ಪಡೆಯುತ್ತವೆ. ಮಣ್ಣಿನಲ್ಲೇ ವಿಷವಿದ್ದರೆ, ಅದು ಸಸ್ಯಗಳನ್ನೂ ಫಸಲನ್ನೂ ಸೇರಿಕೊಂಡು ಅವೂ ವಿಷಭರಿತವಾಗುತ್ತವೆ. ಆದ್ದರಿಂದ, ಸಸ್ಯಗಳ ಬೆಳವಣಿಗೆಗೆ ಸೂಕ್ತವಾದ ಮತ್ತು ಗ್ರಾಹಕರ ಆರೋಗ್ಯಕ್ಕೆ ಪೂರಕವಾದ ಫಸಲು ಒದಗಿಸುವ ವಿಷಮುಕ್ತ ಕೃಷಿ ವಿಧಾನವನ್ನು ತನ್ನ ತೋಟದಲ್ಲಿ ಅಳವಡಿಸಿಕೊಂಡರು ನವನೀತ್.
ವೇರಾ ವಿಲ್‍ಪುರದಲ್ಲಿರುವ ಅವರ ತೋಟದಲ್ಲಿ ೩೫ ಸ್ಥಳೀಯ ರೈತರು ದುಡಿಯುತ್ತಿದ್ದಾರೆ. ಆರಂಭದಲ್ಲಿ ನನ್ನ ತೋಟದಲ್ಲಿ ಕೆಲಸ ಮಾಡಲು ಜನರನ್ನು ಕರೆ ತರುವುದು ಕಷ್ಟವಾಗಿತ್ತು. ನಾನು ಅನುಸರಿಸುವ ಕೃಷಿ ವಿಧಾನದ ಬಗ್ಗೆ ಇಲ್ಲಿನವರು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಕ್ರಮೇಣ ಈ ವಿಧಾನದ ಬಗ್ಗೆ ಅವರೂ ತಿಳಿದುಕೊಂಡರು ಎಂದು ವಿವರಿಸುತ್ತಾರೆ ನವನೀತ್. ನನ್ನ ತೋಟದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಿಂಗಳಿಗೆ ರೂ.೧೦,೦೦೦ದಿಂದ ರೂ.೧೫,೦೦೦ ಮಜೂರಿ ಗಳಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವಾರದಲ್ಲಿ ನಾಲ್ಕೈದು ದಿನ ತೋಟದಲ್ಲಿ ನವದೀಪ್ ಅವರಿಂದ ದುಡಿಮೆ. “ಇದು ಮುಖ್ಯ ಯಾಕೆಂದರೆ ತೋಟದ ಕೆಲಸಗಳ ಬಗ್ಗೆ ನನಗೆ ನೇರಾನೇರ ಅನುಭವ ಸಿಗುತ್ತದೆ ಮತ್ತು ಕೆಲಸಗಾರರು ಮಾಡುವ ಕೆಲಸವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತದೆ” ಎನ್ನುತ್ತಾರೆ.
ಕಳೆದ ವರುಷ ನ್ಯಾಚುರಾ ಫಾರ್ಮಿನಿಂದ ನವದೀಪ್ ಗಳಿಸಿದ ಆದಾಯ ರೂ.೭೦ ಲಕ್ಷ. ಈ ವರುಷ ರೂ.೧.೨೫ ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದಾರೆ.
“ಕೃಷಿ ಅತ್ಯಂತ ಜಾಣತನದ ಕಾಯಕ ಯಾಕೆಂದರೆ ಅಂತಿಮವಾಗಿ ನಿಜವಾದ ಸಂಪತ್ತಿಗೆ ಮತ್ತು ಸಂತೋಷಕ್ಕೆ ಕೃಷಿಯಿಂದಲೇ ಅತ್ಯಧಿಕ ದೇಣಿಗೆ” ಎಂಬುದು ನವದೀಪ್ ಗೊಲೇಚಾರ ಸಂದೇಶ.
ಫೋಟೋಗಳು: ನವದೀಪ್, ತೋಟದಲ್ಲಿ ಫಲತುಂಬಿದ ದಾಳಿಂಬೆ ಗಿಡ ಮತ್ತು ದಾಳಿಂಬೆ ಫಸಲು ವಿಂಗಡಿಸುತ್ತಿರುವ ಕೆಲಸಗಾರರು
ಫೋಟೋ ಕೃಪೆ: ದ ಬೆಟರ್ ಇಂಡಿಯಾ ವೆಬ್-ಸೈಟ್