ಲಭ್ಯ ಸಂಪನ್ಮೂಲ ಬಳಕೆ

ಲಭ್ಯ ಸಂಪನ್ಮೂಲ ಬಳಕೆ

ಒಂದು ಸಲ ಭಾರತೀಯ ಹೆಮ್ಮೆಯ ಎಂಜನೀಯರ ಹಾಗೂ ದಕ್ಷ ಅಧಿಕಾರಿಯಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಸಿಂಧ್ ವಿಭಾಗದ ಸಕ್ಕೂರಿಗೆ ಹೋಗಲು ಕರೆ ಬಂತು. ಅವರಿಗೆ ಸಿಂಧು ನದಿಯಿಂದ ಸಕ್ಕೂರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾದ ಕಾರ್ಯ ಒಪ್ಪಿಸಲಾಯಿತು. ಆಗ ಪಟ್ಟಣ ಅಭಿವೃದ್ಧಿಯಾಗಿರಲಿಲ್ಲ, ಪ್ರತಿಕೂಲ ಹವಾಮಾನ, ಅತೀ ಚಳಿ, ಬಿಸಿಲು, ಕೆಟ್ಟ ಹವಾಗುಣವಿದ್ದರಿಂದ ಕೆಲಸಕ್ಕೆ ಅಡಚಣೆಯಾಗಿತ್ತು. ಸಿಂಧೂ ನದಿಯ ನೀರು ತುಂಬಾ ಬಗ್ಗಡವಾಗಿತ್ತು. ಅದನ್ನು ಶುದ್ಧಿಕರಿಸಿ ನಗರಕ್ಕೆ ನೀರೊದಗಿಸುವುದು ಸವಾಲಿನ ಕೆಲಸವಾಗಿತ್ತು. ಇವೆಲ್ಲವುಗಳಿಗೆ ಅಂಜದೆ ಕೆಲಸ ಮಾಡಲು ವಿಶ್ವೇಶ್ವರಯ್ಯನವರು ಹಿಂಜರಿಯಲಿಲ್ಲ. ವಿಜ್ಞಾನ ತಂತ್ರಜ್ಞಾನ ಅಷ್ಟೊಂದು ಅಭಿವೃದ್ಧಿಯಾಗದ ಆ ಕಾಲದಲ್ಲಿಯೂ ತಮ್ಮದೇ ಅನುಭವ, ನೈಪೂಣ್ಯತೆ ಹಾಗೂ ವೈಚಾರಿಕ ದೃಷ್ಟಿಕೋನದಿಂದ ಯೋಜನೆಯೊಂದನ್ನು ರೂಪಿಸಿದರು. ಒಂದು ದೊಡ್ಡ ಬಾವಿಯೊಂದನ್ನು ತೋಡಿಸಿದರು. ಬಾವಿಯ ಕೆಳಭಾಗಕ್ಕೆ ಮರಳನ್ನು ತುಂಬಿಸಿದರು. ನದಿಯ ನೀರನ್ನು ಬಾವಿಯ ಮರಳಿನ ಮೂಲಕ ಇಳಿಯುವಂತೆ ಮಾಡಿದರು. ಆಗ ನೀರಿನ ಬಗ್ಗಡ ಜಾಲಾಡಿದಂತಾಗಿ ಶುದ್ಧವಾಯಿತು. ಈ ಶುದ್ದ ನೀರನ್ನು ಗುಡ್ಡದ ಮೇಲೆ ಪಂಪ್ ಮಾಡಿ ಶೇಖರಿಸುವ ವ್ಯವಸ್ಥೆ ಮಾಡಿದರು. ನಂತರ ಕೊಳವೆಗಳ ಮೂಲಕ ನೀರನ್ನು ನಗರಕ್ಕೆ ಒದಗಿಸಿದರು. ಇದರಿಂದ ಶೋಧಿಸುವ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾದ್ದು ಅನವಶ್ಯಕವಾಯಿತು. ಪುರಸಭೆಗೆ ಹಣದ ಉಳಿತಾಯವಾಯಿತು. ಯೋಜನೆಯು ತುಂಬಾ ಸರಳ ಮತ್ತು ಬುದ್ದಿವಂತಿಕೆಯಿಂದ ಕೂಡಿತ್ತು. ಇದು ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು. ಮುಂದೆ ಇಂತಹ ಅಮೂಲ್ಯ ಯೋಜನೆಯು ಬೇರೆ ಬೇರೆ ನದಿಗಳಿಂದ ಅನೇಕ ನಗರಗಳಿಗೆ ನೀರನ್ನು ಶೋಧಿಸಿ, ಸಾಗಿಸುವ ವ್ಯವಸ್ಥೆಗೆ ನಾಂದಿಯಾಯಿತು. ಇಂತಹ ಕೆಲಸಗಳು ಇಂದಿನ ಯುವಜನರಿಗೆ ಸ್ಫೂರ್ತಿಯಾಗಬೇಕಿದೆ. ಲಭ್ಯ ಸಂಪನ್ಮೂಲಗಳನ್ನು ಬಳಸಿ, ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವ ಸ್ಫೂರ್ತಿಯನ್ನು ಸರ್.ಎಂ.ವಿ.ಯವರ ಈ ಸಾಧನೆಯು ನೀಡುತ್ತದೆ. ನಿರ್ದಿಷ್ಟ ಕೆಲಸಗಳನ್ನು ಮಾಡುವಾಗ, ಕೆಲಸಕ್ಕನುಗುಣವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಆತ್ಮಾವಲೋಕನ ಮಾಡಿಕೊಂಡು ಸಾಧ್ಯಾಸಾಧ್ಯತೆಗಳನ್ನು ಓರೆಗೆ ಹಚ್ಚಿ ಪರಿಶೀಲಿಸಿ, ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.

-ಯೋಗೇಶ ಅಮೀನಗಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ