ವಲಸಿಗರಿಗೆ ಅಗೌರವ ಖಂಡನೀಯ

ವಲಸಿಗರಿಗೆ ಅಗೌರವ ಖಂಡನೀಯ

ಅಕ್ರಮ ವಲಸೆ ಯಾವುದೇ ರಾಷ್ಟ್ರಕ್ಕೂ ಹೊರೆ ಎನ್ನುವುದರಲ್ಲಿ ಮರುಮಾತಿಲ್ಲ. ಅಗರ್ಭ ಶ್ರೀಮಂತ ರಾಷ್ಟ್ರ ವಿಸ್ತಾರದಲ್ಲಿ ೪ ನೇ ಸ್ಥಾನದಲ್ಲಿರುವ ಅಮೇರಿಕ ಕೂಡ ತನ್ನೊಡಲಲ್ಲಿ ಹೆಚ್ಚುವರಿ ಜನರನ್ನು ಸಲಹುವ ಔದಾರ್ಯ ತೋರದೆ ಇರುವುದು ಈಗಿನ ಬಲು ಚರ್ಚಿತ ವಿಚಾರ. ಟ್ರಂಪ್ ಪ್ರದರ್ಶಿಸುತ್ತಿರುವ ‘ಅಮೇರಿಕ ಫಸ್ಟ್’ ನೀತಿ ತಪ್ಪಲ್ಲದಿದ್ದರೂ, ಮಾನವೀಯ ನೆಲೆಗಟ್ಟಿನಲ್ಲಿ ಅದರ ಅನುಷ್ಟಾನಕ್ಕೆ ಮುಂದಾಗಿರುವ ಕ್ರಮ ಮಾತ್ರ ಖಂಡನಾರ್ಹ.

ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವ ಹೊತ್ತಿನಲ್ಲಿಯೇ ಆತನ ಮನೆಯ ಸದಸ್ಯರನ್ನು ಅಪಮಾನಿಸುವುದು ಅದೆಷ್ಟು ಸರಿ? ‘ಮಿತ್ರ’ ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿಯೇ ಆ ರಾಷ್ಟ್ರ ಅಲ್ಲಿದ್ದ ಭಾರತೀಯ ಅಕ್ರಮವಾಸಿಗಳನ್ನು ತಂಡೋಪತಂಡವಾಗಿ ಅಗೌರವಯುತವಾಗಿ ಭಾರತಕ್ಕೆ ರವಾನಿಸಿರುವುದು ಸಾಕಷ್ಟು ವಿವಾದಕ್ಕೂ, ಆಕ್ಷೇಪಕ್ಕೂ ಕಾರಣವಾಗಿದೆ. ಅಮೇರಿಕ ಇಬ್ಬಗೆಯ ಧೋರಣೆ ಹಿತಕರವಲ್ಲ. ಒಂದೆಡೆ ರಾಜತಾಂತ್ರಿಕ ಮಾತುಕತೆ ನಡೆಸುತ್ತಿರುವಾಗಲೇ ಅಮೇರಿಕ ತನ್ನ ಕಟ್ಟುನಿಟ್ಟಿನ ವಿದೇಶಾಂಗ ನೀತಿ ಮೂಲಕ ಕ್ರೌರ್ಯ ಎಸಗಿರುವುದು ಸರಿಯಲ್ಲ.

ಅಮೇರಿಕ ಜಗತ್ತಿನ ದೊಡ್ಡಣ್ಣ. ಎಲ್ಲರಿಗಿಂತ ಹೆಚ್ಚು ಮುಂದುವರಿದ ರಾಷ್ಟ್ರ ಎನ್ನುವುದೇನೋ ಸರಿ. ಆ ಶ್ರೀಮಂತಿಕೆ, ಹಿರಿತನಕ್ಕೆ ತಕ್ಕಂತೆ ವರ್ತಿಸುವುದೂ ಅಷ್ಟೇ ಅಗತ್ಯವಲ್ಲವೇ? ಅಮೇರಿಕ ತಾನು ಶ್ರೀಮಂತನೇ ಇರಬಹುದು; ಆದರೆ, ಭಾರತದ್ದು ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ. ಅಮೇರಿಕ ಪವರ್ ಫುಲ್ ಇದ್ದಿರಬಹುದು; ಆದರೆ, ಜಗತ್ತಿನ ಪ್ರಭಾವಶಾಲಿ ರಾಷ್ಟ್ರಗಳಲ್ಲಿ ಭಾರತವೂ ಒಂದೆನ್ನುವುದನ್ನು ಅಮೇರಿಕ ಮರೆಯಬಾರದು. ಅಮೇರಿಕಕ್ಕೆ ಭಾರತ ಎಲ್ಲ ರೀತಿಯಲ್ಲೂ ಸರಿಸಮಾನ ಸ್ನೇಹಿತ. ಕಡೇಪಕ್ಷ ದ್ವಿಪಕ್ಷೀಯ ಮಾತುಕತೆ ವೇಳೆ “ನಿಮ್ಮ ವಲಸೆ ನೀತಿಗೆ ನಮ್ಮ ಬೆಂಬಲವಿದೆ”ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವಾಗ “ಭಾರತೀಯ ವಲಸಿಗರನ್ನು ಗೌರವಯುತವಾಗಿ ಕಳುಹಿಸಿ” ಎಂದಿದ್ದರೂ ಈ ರೀತಿ ಕೋಳ ತೊಟ್ಟುಕೊಂಡು ಬರುವ ಸ್ಥಿತಿ ನಿಲ್ಲುತ್ತಿತ್ತೇನೋ!

ವಲಸಿಗರ ಕೈಗೆ ಕೋಳ, ಸರಪಳಿ ಹಾಕಿ ಕರೆತರುವುದನ್ನು ಕಾಂಗ್ರೆಸ್ ಸಂಸದ ಹಾಗೂ ಮಾಜಿ ವಿದೇಶಾಂಗ ಪಟು ಶಶಿ ತರೂರ್ ಬಲವಾಗಿ ವಿರೋಧಿಸಿದ್ದಾರೆ. ಇದು ನಿಜವೇ ಆಗಿದ್ದರೆ, ಭಾರತವು ಪ್ರಬಲ ಧ್ವನಿ ಎತ್ತಬೇಕು ಎಂದೂ ಹೇಳಿದ್ದಾರೆ. ಮೋದಿ ಅವರ ಅಮೇರಿಕದ ಪ್ರವಾಸದುದ್ದಕ್ಕೂ ಶಶಿ ತರೂರ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆ ಮೆಚ್ಚುಗೆಗಳನ್ನು ಸ್ವೀಕರಿಸಿದಂತೆ ಕೇಂದ್ರ ಸರಕಾರ ಅವರ ಸಲಹೆಗಳನ್ನೂ ಸ್ವೀಕರಿಸುವುದೂ ಉತ್ತಮ ಎಂದೆನಿಸುತ್ತಿದೆ. ಅಮೇರಿಕ ಇನ್ನೂ ಪಾಳೇಗಾರಿಕೆ ಕಾಲದಲ್ಲಿಯೇ ಇದ್ದರೆ, ಆ ಮನಸ್ಥಿತಿಯಿಂದ ಹೊರಬರಲಿ. ಅಕ್ರಮ ವಲಸಿಗರನ್ನೂ ಮನುಷ್ಯರಂತೆ ಕಾಣಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೮-೦೨-೨೦೨೫ 

ಚಿತ್ರ ಕೃಪೆ: ಅಂತರ್ಜಾಲ ತಾಣ