ವಾಮಮಾರ್ಗ ಬೇಡ

ವಾಮಮಾರ್ಗ ಬೇಡ

ಚುನಾವಣಾ ಅಕ್ರಮದ ಬೆನ್ನೆತ್ತಿ ಭರ್ಜರಿ ಬೇಟೆ ಮುಂದುವರೆಸಿರುವ ಭಾರತೀಯ ಚುನಾವಣಾ ಆಯೋಗ ದೇಶಾದ್ಯಂತ ಈವರೆಗೆ ೪೬೫೦ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯ ಮತ್ತು ಉಡುಗೊರೆಗಳನ್ನು ಜಪ್ತಿ ಮಾಡಿದೆ. ಇದು ಕಳೆದ ೭೫ ವರ್ಷಗಳ ಲೋಕಸಭ ಚುನಾವಣಾ ಇತಿಹಾಸದಲ್ಲಿ ವಶಪಡಿಸಿಕೊಂಡ ಅತ್ಯಧಿಕ ಮೊತ್ತ ಎಂಬ ದಾಖಲೆ ಬರೆದಿದೆ. ಪಾರದರ್ಶಕತೆ, ಸಮಯ, ವೆಚ್ಚ ಉಳಿತಾಯಕ್ಕಾಗಿ ಒಂದು ದೇಶ, ಒಂದು ಚುನಾವಣೆ ಜಾರಿಗೊಳಿಸುವ ಚಿಂತನೆ ಗರಿಗೆದರಿರುವ ಹೊತ್ತಲ್ಲೇ ಭಾರತದ ಲೋಕಸಭಾ ಚುನಾವಣಾ ಕಣದಲ್ಲಿ ಕುರುಡು ಕಾಂಚಾಣದ ಕುಣಿತ ಹೆಚ್ಚಿರುವುದು ವಿಷಾದನೀಯ.

ಪ್ರತಿ ಚುನಾವಣೆಯಲ್ಲೂ ಆಯೋಗ ವಶ ಪಡಿಸಿಕೊಳ್ಳುತ್ತಿರುವ ಹಣ, ಮದ್ಯ, ಡ್ರಗ್ಸ್, ಉಡುಗೊರೆಗಳ ಪ್ರಮಾಣ ಹೆಚ್ಚಾಗುತ್ತಿರುವುದು ಚುನಾವಣೆ ವ್ಯವಸ್ಥೆ ವಾಮಮಾರ್ಗದತ್ತ ಸಾಗುತ್ತಿರುವುದಕ್ಕೆ ಸಾಕ್ಷಿ. ಈ ಪ್ರಮಾಣದಲ್ಲಿ ಹಣವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ನೋಡಿದರೆ ರಾಜಕೀಯ ಪಕ್ಷಗಳಿಗೆ ಕಾನೂನಿನ, ನೈತಿಕತೆಯ ಭಯ ಇಲ್ಲವೇ ಎಂಬ ಸಂದೇಹ ಕಾಡದಿರದು. ಪ್ರಜಾತಂತ್ರ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಈ ಬೆಳವಣಿಗೆಗಳು ಖಂಡಿತವಾಗಿಯೂ ಒಳ್ಳೆಯ ಲಕ್ಷಣವಲ್ಲ. ಮತದಾರರನ್ನು ಓಲೈಸಲು ರಾಜಕಾರಣಿಗಳು ಬಳಸುವ ಇಂತಹ ವಾಮಮಾರ್ಗಗಳು ಅಂತಿಮವಾಗಿ ಇಡೀ ಪ್ರಜಾಪ್ರಭುತ್ವವನ್ನೇ ವಿಫಲಗೊಳಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ.

೨೦೧೯ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ೩,೪೭೫ ಕೋಟಿ ಮೌಲ್ಯದ ನಗದು, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಮೊದಲ ಹಂತದ ಮತದಾನಕ್ಕೂ ಮುನ್ನವೇ ದೇಶಾದ್ಯಂತ ಒಟ್ಟು ೪,೬೫೮.೧೬ ಕೋಟಿ ನಗದು, ವಸ್ತುಗಳನ್ನು ಜಪ್ತಿ ಮಾಡಿರುವುದು ಚುನಾವಣೆ ಅಕ್ರಮದ ಅಗಾಧತೆಗೆ ಸಾಕ್ಷಿ ಆಗಿದೆ. 

ಚುನಾವಣೆ ವ್ಯವಸ್ಥೆ ಭ್ರಷ್ಟವಾಗುತ್ತಿರುವ ವಿಷಯದಲ್ಲಿ ರಾಜಕಾರಣಿಗಳನ್ನು ಮಾತ್ರ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಆಮಿಷಗಳಿಗೆ ಬಲಿಯಾಗುವ ಮತದಾರರು ಇರುವುದರಿಂದಲೇ ಈ ಪಿಡುಗು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂಬುದು ನಿರ್ವಿವಾದ. ದಾಳಿ-ತಪಾಸಣೆ ನಡೆಸಿ ವಶಪಡಿಸಿಕೊಳ್ಳುವುದಷ್ಟೇ ಆಯೋಗದ ಕರ್ತವ್ಯ ಅಲ್ಲ. ರಾಜಕಾರಣಿಗಳು ಮತ್ತು ಮತದಾರರು ಈ ಪಿಡುಗಿನಿಂದ ದೂರ ಇರುವಂತೆ ಪ್ರೇರೇಪಿಸಲು ಅಗತ್ಯವಿರುವ ಅರಿವು ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಮತ್ತು ದಂಡನಾರ್ಹ ಕ್ರಮಗಳನ್ನು ಪ್ರಯೋಗಿಸಬೇಕು. ಅಲ್ಲದೆ, ದೊಡ್ಡ ದೊಡ್ಡ ಭರವಸೆಗಳನ್ನು ನೀಡುವ, ಅಭಿವೃದ್ಧಿಯ ಕನಸು ಬಿತ್ತುವ ರಾಜಕೀಯ ಪಕ್ಷಗಳು ಮೊದಲು ಚುನಾವಣೆಯನ್ನು ನೈತಿಕ ಮಾರ್ಗದಲ್ಲಿ ಎದುರಿಸುವ ಸಂಕಲ್ಪ ಮಾಡಬೇಕು. ಜನಸಾಮಾನ್ಯರು ಸಹ ಮತದಾನದ ಮಹತ್ವವನ್ನು ಅರಿತು ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಹಕ್ಕು ಚಲಾಯಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳು ಸಶಕ್ತಗೊಳ್ಳಬೇಕಾದರೆ ಇಂಥ ಅಪಸವ್ಯಗಳನ್ನು ನಿವಾರಿಸಲೇಬೇಕು. ಇಲ್ಲದಿದ್ದಲ್ಲಿ ಚುನಾವಣೆ ಅಕ್ರಮಗಳು ಹೆಚ್ಚುತ್ತಲೇ ಹೋಗುತ್ತವೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೬-೦೪-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ