ವಾಲ್ಮೀಕಿ ಜಯಂತಿ : ಈ ದಿನ ಯಾರನ್ನು ಸ್ಮರಿಸೋಣ…? (ಭಾಗ 2)

ವಾಲ್ಮೀಕಿ ಜಯಂತಿ : ಈ ದಿನ ಯಾರನ್ನು ಸ್ಮರಿಸೋಣ…? (ಭಾಗ 2)

ಇನ್ನೊಂದು, ಶಂಬೂಕ ಎಂಬ ಕೆಳ ಜಾತಿಯವನು ವಿಧ್ಯೆ ಕಲಿತನೆಂದು ರಾಮ ಅವನನ್ನು ಕೊಲ್ಲಿಸಿದ ಎಂಬುದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಆಗಿನ ದಿನಗಳಲ್ಲಿ ಅಸ್ಪೃಶ್ಯರ ನೆರಳನ್ನು ಸಹ ಸೋಕಿಸಿಕೊಳ್ಳುವುದು ಪಾಪ ಎಂಬ ಭಾವನೆಯಿದ್ದಾಗ ವಾಲ್ಮೀಕಿ ಆ ವಾಸ್ತವವನ್ನು ತಮ್ಮ ಗ್ರಂಥದಲ್ಲಿ ಚಿತ್ರಿಸಿರಬಹುದು. ಅದು ಆಗಿನ ಸಾಮಾಜಿಕ ವ್ಯವಸ್ಥೆಯನ್ನು ತಿಳಿಸುತ್ತದೆ. 2024 ರಲ್ಲಿಯೂ ಅಸ್ಪೃಶ್ಯತೆ ಇರುವಾಗ ಇದೇನು !!!! ಆದರೆ ಅದು ಆದರ್ಶವಲ್ಲ, ಅನಾಗರಿಕತೆ ಮತ್ತು ಅಮಾನವೀಯತೆ.

ಒಟ್ಟಿನಲ್ಲಿ ಒಂದು ಕಾಲ್ಪನಿಕ ಪಾತ್ರವನ್ನು ಕೃತಿಕಾರನ ಮೂಲ ಆಶಯವನ್ನು ಸರಿಯಾಗಿ ಗ್ರಹಿಸಿ ಪ್ರತಿಕ್ರಿಯಿಸುವುದು ಉತ್ತಮ. ಹಾಗೇ ಭಿನ್ನ ರೀತಿಯ ಆಲೋಚನೆಗಳಿದ್ದಲ್ಲಿ ಅದು ಸಹ ಆ ವ್ಯಕ್ತಿಯ ವೈಯಕ್ತಿಕ ಗ್ರಹಿಕೆ. ಅದನ್ನು ಒಪ್ಪುವ ಅಥವಾ ನಿರ್ಲಕ್ಷಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದು ನಮ್ಮ ನಂಬಿಕೆಗಳ ಮೇಲೆ ಹಲ್ಲೆ ಎನ್ನುವುದು ಸರಿಯಲ್ಲ. ನಮ್ಮ ನಂಬಿಕೆ ನಮ್ಮ ಸ್ವಂತದ್ದು. ಅದನ್ನು ಆಂತರಿಕವಾಗಿ ಗಟ್ಟಿ ಮಾಡಿಕೊಳ್ಳುವುದು ನಮಗೆ ಸೇರಿದ್ದು.

ಆದರೂ ಒಂದು ಕಾಲ್ಪನಿಕ ಪಾತ್ರಕ್ಕಿಂತ ಐತಿಹಾಸಿಕ ಮಹಾನ್ ವ್ಯಕ್ತಿಗಳಾದ ಬುದ್ದ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ಮುಂತಾದವರ ಬಗ್ಗೆ ಹೆಚ್ಚಿನ ಚರ್ಚೆ ಉತ್ತಮವೆನಿಸುತ್ತದೆ. ಆ ನಿಟ್ಟಿನಲ್ಲಿ ಮತ್ತಷ್ಟು ಯೋಚಿಸುವ ಆಶಯದೊಂದಿಗೆ....

ಭಾವನೆ, ಭಕ್ತಿ, ನಂಬಿಕೆ, ರಾಜಕೀಯ, ಪ್ರಚಾರ ಮುಂತಾದ ಸಮೂಹ ಸನ್ನಿಯಲ್ಲಿ ನಿಮ್ಮ ಸ್ವತಂತ್ರ ಚಿಂತನೆಯನ್ನು ಮರೆಯಬೇಡಿ. ಅದಕ್ಕೂ ಮನದ ಮೂಲೆಯಲ್ಲಿ ಸ್ವಲ್ಪ ಅವಕಾಶ ಇರಲಿ. ಇನ್ನೂ ಭೂಕಂಪ, ಪ್ರವಾಹ, ಯುದ್ಧಗಳು ಅದರ ಪರಿಣಾಮಗಳ ಭೀಕರತೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡುತ್ತಿದೆ.  ಯಾವ ರಾಮ ಲಕ್ಷ್ಮಣ ಅಲ್ಲಾ ಜೀಸಸ್ ಗಳು ಏನೂ  ಮಾಡುತ್ತಿಲ್ಲ. ಯಾರೂ ಬೆವರು ಸುರಿಸದೆ ಅಕ್ಕಿ ಗೋದಿ ಬೆಳೆಯಲಾಗುತ್ತಿಲ್ಲ, ಯಾವ ಮಾಧ್ಯಮಗಳು  ರಕ್ಷಣೆ ಮಾಡುತ್ತಿಲ್ಲ.

ಅಂದು, ರಾಜ ಮಹಾರಾಜರುಗಳ ಆಡಳಿತದಲ್ಲಿ ಒಬ್ಬರಿಗೊಬ್ಬರು ಕೊಂದುಕೊಳ್ಳುವಾಗ ಯಾರ ಯಾವ ಶ್ರೀರಾಮರು ರಕ್ಷಿಸಲಿಲ್ಲ. ಅರಬ್ ಪರ್ಶಿಯನ್ ಮೊಘಲರು ಮುಂತಾದ ಮುಸ್ಲಿಂ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಾಗಲು ಯಾವ ರಾಮರೂ ದೇಶ ಕಾಪಾಡಲಿಲ್ಲ, ಬ್ರಿಟಿಷ್, ಫ್ರೆಂಚ್, ಡಚ್ ಮುಂತಾದ ವಿದೇಶಿ ವ್ಯಾಪಾರಿಗಳು ದೇಶವನ್ನು ಆಕ್ರಮಿಸಿ ಕೊಳ್ಳೆ ಹೊಡೆಯುವಾಗಲು ಯಾರ ಶ್ರೀರಾಮರು ನೆರವಿಗೆ ಬರಲಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಗಲ್ಲಿಗೇರುವಾಗ ಶ್ರೀರಾಮ ಸಹಾಯ ಮಾಡಲಿಲ್ಲ, ಭಾರತದ ವಿಭಜನೆಯ ಸಮಯದಲ್ಲಿ ನಡೆದ ಹತ್ಯಾಕಾಂಡ ನಿಲ್ಲಿಸಲಿಲ್ಲ, ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಶ್ರೀರಾಮ ನೆರವಾಗಲಿಲ್ಲ, ಕನಿಷ್ಠ ಕೊರೋನಾ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲಿಲ್ಲ, ಹೋಗಲಿ ಈ ದೇಶದ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ ಸಮ ಸಮಾಜ ನಿರ್ಮಾಣ ಮಾಡಲು ಶ್ರೀರಾಮರಿಗೆ ಸಾಧ್ಯವಾಗಲಿಲ್ಲ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಆಗಲಿಲ್ಲ. ಹಾಗೆಯೇ ಮಧ್ಯಪ್ರಾಚ್ಯದ ಹಿಂಸೆಯನ್ನು ತಡೆಯಲು ಅಲ್ಲಾ ಜೀಸಸ್ ಗಳಿಗೆ ಸಾಧ್ಯವಾಗುತ್ತಿಲ್ಲ. ಈಗ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಿದ ಮಾತ್ರಕ್ಕೆ ಏನೂ ವ್ಯತ್ಯಾಸ ಆಗುವುದಿಲ್ಲ. ಕೇವಲ ಜನರ ಭಾವನೆ ಮತ್ತು ಭಕ್ತಿಯ ಸಮಾಧಾನ ಆಗಬಹುದು.

ಆದ್ದರಿಂದ ನಮ್ಮೆಲ್ಲರ ಪ್ರಯತ್ನ ರಾಮ ಮಂದಿರ ನಿರ್ಮಾಣಕ್ಕಿಂತ ರಾಮ ರಾಜ್ಯದ ನಿರ್ಮಾಣಕ್ಕೆ, ರಾಮನಂತ ಆದರ್ಶ ವ್ಯಕ್ತಿಯ ವ್ಯಕ್ತಿತ್ವ ಹೊಂದಲು ಪ್ರಯತ್ನಿಸಬೇಕಿದೆ. ಮಂದಿರ ಒಂದು ಸಾಂಕೇತಿಕ ಮಾತ್ರ. ಸರಿಯೋ ತಪ್ಪೋ, ಒಳ್ಳೆಯದೋ ಕೆಟ್ಟದ್ದೋ ಇತಿಹಾಸ ಏನೇ ಇರಲಿ ಈ ದೇಶದಲ್ಲಿ ಈಗಲೂ ಸುಮಾರು 20 ಕೋಟಿ ಮುಸ್ಲಿಂ ಸಮುದಾಯದ ಜನರು ನಮ್ಮ ನಡುವೆ ಭಾರತೀಯ ಪ್ರಜೆಗಳಾಗಿ ಸಮಾನ ಹಕ್ಕು ಮತ್ತು ಕರ್ತವ್ಯಗಳೊಂದಿಗೆ ವಾಸಿಸುತ್ತಿದ್ದಾರೆ. ಅವರ ಭಾವನೆಗಳನ್ನು ಗೌರವಿಸುವುದು ಸಹ ದೇಶದ ಶಾಂತಿ, ಅಭಿವೃದ್ಧಿ ಮತ್ತು ಒಟ್ಟು ಹಿತಾಸಕ್ತಿಯಿಂದ ಮುಖ್ಯ ಎಂಬ ಅರಿವು ಸಹ ಇರಬೇಕು.

ಯಾರು ಏನೇ ಹೇಳಿದರು ಧರ್ಮ ಎಂಬುದು ಒಂದು ಅಫೀಮು. ಧಾರ್ಮಿಕ ಮೂಲಭೂತವಾದ ತುಂಬಾ ಅಪಾಯಕಾರಿ. ದೇವರು ಧರ್ಮದ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡಲು ಎಲ್ಲಾ ಧರ್ಮಗಳಲ್ಲಿ ತುಂಬಾ ಜನ ಬೇಕಾಗಿಲ್ಲ. ಕೆಲವೇ ನರ ರಾಕ್ಷಸರು ಸಾಕಷ್ಟು ಪ್ರಾಣ ಹಾನಿ ಮಾಡಬಹುದು. ಪರಿಸ್ಥಿತಿಯ ಲಾಭ ಪಡೆಯಲು ದುಷ್ಟ ಜನ ಕಾಯುತ್ತಿರುತ್ತಾರೆ. ಅವರನ್ನು ಪ್ರಚೋದಿಸುವುದು ಕೂಡಾ ನಾವು ಮಾಡಬಹುದಾದ ದೊಡ್ಡ ತಪ್ಪಾಗಬಹುದು.

ಮಂದಿರ ನಿರ್ಮಾಣ ಒಂದು ಸಣ್ಣ ಪ್ರಕ್ರಿಯೆ. ಇದರ ಹಿಂದೆ ಸ್ವಾತಂತ್ರ್ಯ ನಂತರ ಮಸೀದಿ ಕೆಡವಿದ ಅಪರಾಧವೂ ಅಡಗಿದೆ ಜೊತೆಗೆ ಕಾನೂನಿನ ಮಾನ್ಯತೆಯೂ ಇದೆ. ಅದನ್ನು ಇಷ್ಟೊಂದು ವಿಜೃಂಭಿಸುವ ಅವಶ್ಯಕತೆ ಇಲ್ಲ. ಎಲ್ಲಾ ಅತಿರೇಕಗಳ ಪರಿಣಾಮ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆ ಇರಬೇಕು. ಜನರಿಗೆ ಹುಚ್ಚು ಹಿಡಿಸುವುದು ಸುಲಭ. ಅದನ್ನು ನಿಯಂತ್ರಿಸುವುದು ಕಷ್ಟ.

ಜೀವ ಮತ್ತು ಜೀವನ ಮುಖ್ಯ ಎಂಬುದನ್ನು ಸ್ವಾಗತಿಸುತ್ತಾ, ಮಂದಿರ - ಮಸೀದಿ - ಚರ್ಚುಗಳು ಮುಖ್ಯವೇ ಎಂಬುದನ್ನು ಪ್ರಶ್ನಿಸುತ್ತಾ… ಸನಾತನ ಧರ್ಮದಲ್ಲಿ ನೀವು ನಂಬಿಕೆಯುಳ್ಳವರಾದರೆ ಈ ರೀತಿಯ ಪ್ರಶ್ನೆಗಳಿಗೂ ಅವಕಾಶ ನೀಡಿ, ಇಲ್ಲದಿದ್ದರೆ ನೀವು ಆ ಧರ್ಮದಲ್ಲಿ ಇರಲು ಅರ್ಹರಲ್ಲ ಎಂದು ನೆನಪಿಸುತ್ತಾ..

" ಇಲ್ಲಿಯವರೆಗೂ ನಾನು ಪಡೆದ ಅನುಭವ ಮತ್ತು ಅರಿವಿನಿಂದ ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ಇದಕ್ಕಿಂತ ಉತ್ತಮ ಸತ್ಯ ನಿಮಗೆ ಅರಿವಾದರೆ ಅದನ್ನು ಅಳವಡಿಸಿಕೊಳ್ಳಿ " ಎಂಬ ಗೌತಮ ಬುದ್ಧನ ಜ್ಞಾನೋದಯದ ಸಂದೇಶವನ್ನು ಒಪ್ಪಿಕೊಳ್ಳುತ್ತಾ… ರಾಮ ಮಂದಿರ ಒಂದು ಆದರ್ಶ ಸಮಾಜದ ಮತ್ತು ಸರ್ವ ಧರ್ಮ ಸಮನ್ವಯದ ಸಂಕೇತವಾಗಲಿ ಎಂದು ಹಾರೈಸುತ್ತಾ…

(ಮುಗಿಯಿತು)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ