ವಿದ್ಯಾರ್ಥಿಗಳ ಒತ್ತಡ ತಗ್ಗಿಸಲು ೩ ಪರೀಕ್ಷೆಗಳು ಅತ್ಯುತ್ತಮ ಕ್ರಮ

ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳು ಭಯಭೀತರಾಗುವ ಪರಿಸ್ಥಿತಿ ಶಿಕ್ಷಣ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದೆ. ಅದರಲ್ಲೂ, ಭವಿಷ್ಯದ ದಿಕ್ಕು ನಿರ್ಧರಿಸುವ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳ ಪಾಲಿಗೆ ಒತ್ತಡದ ಕುಲುಮೆಗಳಾಗಿವೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಏರಿಳಿತ ಸ್ವೀಕರಿಸಲು ಆಗದೆ ಪ್ರತಿ ವರ್ಷ ಫಲಿತಾಂಶದ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಸಾವಿನ ಮನೆಯ ಹಾದಿ ಹಿಡಿಯುವುದನ್ನು ಪ್ರತಿ ವರ್ಷ ನೋಡುತ್ತವೇ ಬಂದಿದ್ದೇವೆ. ಒಬ್ಬ ವಿದ್ಯಾರ್ಥಿ ಒಂದಿಡೀ ವರ್ಷದ ಅವಧಿಯಲ್ಲಿ ಕಲಿತ ಶಿಕ್ಷಣದ ಗ್ರಹಿಕೆಯ ಮಟ್ಟವನ್ನು ಅರಿಯುವ ಸಾಧನವಾಗಬೇಕಿದ್ದ ಪರೀಕ್ಷೆಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಿರೀಕ್ಷೆಗೂ ಮೀರಿದ ಒತ್ತಡದಿಂದಾಗಿ ವಿದ್ಯಾರ್ಥಿಗಳನ್ನು ರೇಸಿಗೆ ಬಿಟ್ಟ ಕುದುರೆಗಳಂತೆ ಮಾಡಿರುವುದು ಮಾತ್ರ ಕಳವಳಕಾರಿ ಸಂಗತಿ. ವಾಸ್ತವ ಪರಿಸ್ಥಿತಿ ಈ ರೀತಿ ಇರುವಾಗ ಕರ್ನಾಟಕ ಸರ್ಕಾರ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಮುಂದಾಗಿರುವುದು ಶ್ಲಾಘನೀಯ ವಿಚಾರ. ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ೩ ಪರೀಕ್ಷೆ ಬರೆಯುವ ಅವಕಾಶ ಸಿಗಲಿದೆ. ಅ ಪೈಕಿ ಯಾವುದರಲ್ಲಿ ಯಾವ ವಿಷಯಕ್ಕೆ ಅತಿ ಹೆಚ್ಚು ಅಂಕ ಬಂದಿರುತ್ತದೋ ಅದನ್ನೇ ಅಂತಿಮ ಅಂಕವಾಗಿ ಉಳಿಸಿಕೊಳ್ಳುವ ಆಯ್ಕೆ ಸಿಗಲಿದೆ. ಇದರಿಂದಾಗಿ ಪೂರಕ ಪರೀಕ್ಷೆ ಹಾಗೂ ಮುಂದಿನ ವರ್ಷದ ಪರೀಕ್ಷೆವರೆಗೆ ಕಾಯಬೇಕಾದ, ಅದಕ್ಕಾಗಿ ಪರೀಕ್ಷೆ ಬರುವವರೆಗೂ ಹಾಗೂ ಪರೀಕ್ಷೆಯ ಸಮಯದಲ್ಲೂ ಅತೀವ ಒತ್ತಡಕ್ಕೆ ಒಳಗಾಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಇರುವುದಿಲ್ಲ ಎಂಬುದು ಗಮನಾರ್ಹ ಸಂಗತಿ.
ಅಂದ ಹಾಗೆ ಮೂರು ಪರೀಕ್ಷೆ ವಿಧಾನ ಕಡ್ಡಾಯವಲ್ಲ, ಮೊದಲ ಪರೀಕ್ಷೆಯಲ್ಲೇ ತನ್ನ ವ್ಯಾಸಂಗ ಮಟ್ತಕ್ಕೆ ಅನುಗುಣವಾಗಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಇನ್ನೆರಡು ಪರೀಕ್ಷೆಗಳನ್ನು ಬರೆಯುವುದು ಅನಿವಾರ್ಯವಲ್ಲ. ಆದರೆ ಪರೀಕ್ಷಾ ಸಂದರ್ಭದಲ್ಲಿ ಗಲಿಬಿಲಿಯಾಗಿ, ಒತ್ತಡಕ್ಕೆ ಸಿಲುಕಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗೆ ಈ ವಿಧಾನದಡಿ ಮತ್ತೆರಡು ಅವಕಾಶ ಸಿಗುತ್ತದೆ. ಆತ ಆ ಎರಡು ಪರೀಕ್ಷೆಗಳಲ್ಲಿ ತನ್ನ ಸಾಮರ್ಥ್ಯ ತೋರಿಸಬಹುದು. ವಾರ್ಷಿಕ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗೂ ಮತ್ತೆರಡು ಅವಕಾಶ ದೊರೆಯಲಿದ್ದು, ಆಗ ಒಂದು ವರ್ಷವೂ ವ್ಯರ್ಥವಿಲ್ಲದೇ ಪಾಸ್ ಮಾಡಿಕೊಂಡು ಮುಂದಿನ ತರಗತಿಗೆ ಪ್ರವೇಶ ಪಡೆಯಬಹುದು. ಇದು ಸ್ವಾಗತಾರ್ಹ ಕ್ರಮವಾದರೂ, ಆರಂಭದಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಬಹುದು. ಶಿಕ್ಷಕರು ಬರೀ ಪರೀಕ್ಷೆಯಲ್ಲೇ ತೊಡಗಿಕೊಂಡಿರಬೇಕಾ ಎಂಬ ವಿರೋಧವನ್ನೂ ಎದುರಿಸಬೇಕಾಗಬಹುದು. ಕೂಡಲೇ ಸಂಭಾವ್ಯ ಗೊಂದಲ ಬಗೆಹರಿಸಿ, ಮೂರು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಈಗಿನಿಂದಲೇ ಸಜ್ಜುಗೊಳಿಸುವುದು ಒಳಿತು. ಈ ವಿಧಾನದ ಯಶಸ್ಸಿಗೆ ಶಿಕ್ಷಕ ವರ್ಗದ ಬೆಂಬಲ ಅತ್ಯಂತ ಮುಖ್ಯ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೮-೦೯-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ