ವಿಶ್ವಗುರು ಕನಸನ್ನು ಮತ್ತೆ ತೆರೆದಿಟ್ಟ ಪ್ರಧಾನಿ ಮೋದಿ

ಪ್ರತಿಷ್ಟಿತ ಜಿ20 ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆ ಸೆ. ೯ ಮತ್ತು ೧೦ರಂದು ಹೊಸದಿಲ್ಲಿಯಲ್ಲಿ ನಡೆಯಲಿದ್ದು ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿನ ತಮ್ಮ ಯೋಚನೆ, ಯೋಜನೆಗಳನ್ನು ತೆರೆದಿಟ್ಟಿದ್ದಾರೆ. ಪಿಟಿಐ ಸುದ್ಧಿ ಸಂಸ್ಥೆಗೆ ನೀಡಿದ ಅತ್ಯಂತ ಮಹತ್ವದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಭಾರತ ಇಂದಿಗೂ ಅಲಿಪ್ತ ನೀತಿಯನ್ನು ಅನುಸರಿಸುತ್ತಾ ಬಂದಿದ್ದು ಮುಂದೆಯೂ ಇದರಲ್ಲಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಆದರೆ ಸ್ವತಂತ್ರ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಪ್ರಧಾನಿ ಅವರು ನೆರೆಯ ಚೀನಾ ಮತ್ತು ಪಾಕಿಸ್ತಾನ ದೇಶಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.
ಸದ್ಯ ಇಡೀ ವಿಶ್ವವು ಭಾರತದತ್ತ ದೃಷ್ಟಿ ಬೀರುತ್ತಿದ್ದು ಮುಂಬರುವ ಶೃಂಗ ಸಭೆ ಇದಕ್ಕೆ ಸಾಕ್ಷಿಯಾಗಲಿದೆ. ಈಗ ಜಾಗತಿಕ ಸಮುದಾಯ ಭಾರತದ ಮಾರ್ಗದರ್ಶನವನ್ನು ಎದುರು ನೋಡುತ್ತಿದೆಯಲ್ಲದೆ ನಮ್ಮ ದೂರದೃಷ್ಟಿಯ ಚಿಂತನೆಗಳನ್ನು ಅನುಸರಿಸಲು ಮುಂದಾಗಿದೆ ಎನ್ನುವ ಮೂಲಕ ಭಾರತದ ಬಗೆಗಿನ ಬದಲಾಗಿರುವ ಜಾಗತಿಕ ದೃಷ್ಟಿಕೋನದತ್ತ ಬೆಳಕು ಚೆಲ್ಲಿದರು. ಈ ಹಿಂದೆ ಹಸಿವಿನಿಂದ ಕೂಡಿದ ದೇಶ ಎಂದು ಜಾಗತಿಕ ಸಮುದಾಯ ಭಾರತವನ್ನು ನೋಡುತ್ತಿದ್ದರೆ ಈಗ ಮಹತ್ವಾಕಾಂಕ್ಷಿಗಳ ಮತ್ತು ಕೋಟ್ಯಾಂತರ ಕೌಶಲಭರಿತ ಕಾರ್ಮಿಕರನ್ನೊಳಗೊಂಡ ಭಾರತ ಎಂದು ಪರಿಗಣಿಸಲಾರಂಭಿಸಿದೆ. ಅಷ್ಟು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬನೆಯತ್ತ ಹೊರಳುತ್ತಿರುವುದು ಕೂಡ ವಿಶ್ವ ರಾಷ್ಟ್ರಗಳ ಆಕರ್ಷಣೆಗೆ ಕಾರಣವಾಗಿದೆ. ಅಲ್ಲದೆ ವಿಶ್ವದ ಜಿಡಿಪಿ ಕೇಂದ್ರಿತ ದೃಷ್ಟಿಕೋನವನ್ನು ಮಾನವ ಕೇಂದ್ರಿತವನ್ನಾಗಿಸುವ ನಿಟ್ಟಿನಲ್ಲಿ ಭಾರತ ವೇಗವರ್ಧಕವಾಗಿ ಕೆಲಸ ಮಾಡುತ್ತಿದೆ. ಇದೆಲ್ಲದರ ಹಿನ್ನಲೆಯಲ್ಲಿ ಮುಂದಿನ ಜಿ20 ಶೃಂಗ ಸಭೆ ಕೇವಲ ಭಾರತ ಮಾತ್ರವಲ್ಲದೆ ಇಡೀ ಜಾಗತಿಕ ಸಮುದಾಯಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳುವ ಮೂಲಕ ಪ್ರಧಾನಿಯವರು ಭಾರತದ ಅಬಿವೃದ್ಢಿ ಪರ ದೂರದೃಷ್ಟಿತ್ವವನು ತೆರೆದಿಟ್ಟರು.
ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿರುವ ಭಾರತ ಜಮ್ಮು-ಕಾಶ್ಮೀರ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಕೆಲವೊಂದು ಮಹತ್ವದ ಜಿ20 ಸಭೆಗಳನ್ನು ಆಯೋಜಿಸಿದುದರ ಕುರಿತಂತೆ ಚೀನ ಎತ್ತಿದ ಆಕ್ಷೇಪಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ ಭಾರತದ ಸಾಂಸ್ಕೃತಿಕ ಮತ್ತು ಪಾರಂಪರಿಕ ಐತಿಹ್ಯವನ್ನು ವಿಶ್ವ ಸಮುದಾಯಕ್ಕೆ ಪರಿಚಯಿಸುವುದು ನಮ್ಮ ಕರ್ತವ್ಯವಾಗಿದೆ. ಭಾರತದ ಅವಿಭಾಜ್ಯ ಅಂಗಗಳಾಗಿರುವ ಶ್ರೀನಗರ ಮತ್ತು ಅರುಣಾಚಲ ಪ್ರದೇಶಕ್ಕೂ ಜಿ20 ರಾಷ್ಟ್ರಗಳ ಪ್ರತಿನಿಧಿಗಳನ್ನು ಕರೆದೊಯ್ದಿರುವುದಲ್ಲಿ ವಿಶೇಷವೇನೂ ಇಲ್ಲ ಎಂದವರು ಪಾಕಿಸ್ತಾನ ಮತ್ತು ಚೀನಕ್ಕೆ ನೇರ ಚಾಟಿ ಬೀಸಿದರು.
ರಷ್ಯಾ-ಉಕ್ರೇನ್ ನಡುವಣ ಸಮರವನ್ನು ಪರಸ್ಪರ ಮಾತುಕತೆಯ ಮೂಲಕವಷ್ಟೇ ಬಗೆಹರಿಸಲು ಸಾಧ್ಯ ಎಂದು ಆರಂಭದಿಂದಲೂ ಭಾರತ ಪ್ರತಿಪಾದಿಸುತ್ತಲೇ ಬಂದಿದೆ ಎಂದರು. ಮುಂದಿನ ಜಿ20 ಶೃಂಗಸಭೆಯ ಆದ್ಯತೆಗಳು ಮತ್ತು ಭಾರತ ಪ್ರತಿಪಾದಿಸಲಿರುವ ವಿಷಯಗಳ ಮೇಲೆ ಪ್ರಧಾನಿ ಈ ರೀತಿ ಬೆಳಕು ಚೆಲ್ಲಿದರು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೪-೦೯-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ