ವಿಶ್ವ ಕನ್ನಡ ಸಮ್ಮೇಳನ - ಪುಸ್ತಕ ಬಿಡುಗಡೆ
ನಮ್ಮೂರು ಗೌಡಪ್ಪ, ನಾನು, ಸುಬ್ಬ, ಸೀನ ಹಿಂಗೆ ಒಂದು 10ಜನ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ವಿ. ಯಡೂರಪ್ಪ ನಮ್ಮ ಗೌಡಪ್ಪನ್ನ ನೋಡ್ತಿದ್ದಾಗೆನೇ, ಬಾರೋ ನೀನು ಬಂದು ವೇದಿಕೆಯಲ್ಲಿ ಕುಕ್ಕರ್ ಬಡಿ ಅಂದ್ರು, ಯಾಕೆ ಸಾ, ನಿಮ್ಮ ಕಡೆ ಕುಮಾರಸಾಮಿ ಹವಾ ಇದೆಯಪ್ಪಾ, ಉಳಿದೋನು ನೀನೇ, ಹಾಳೂರಿಗೆ ಉಳಿದೋನೆ ಗೌಡಪ್ಪ ಅಂತ ಸರಿ ಬಾ ಅಂದ್ರು, ಲೇ ನೋಡ್ರಲಾ ನನ್ನ ಸ್ಟಾಟಸ್, ನೀವೆಲ್ಲಾ ಇಲ್ಲೇ ಕುಂತಿರಿ ನಾನು ಆಮ್ಯಾಕೆ ಬತ್ತೀನಿ ಅಂದು ಹೋದ. ಲೇ ನಿಮ್ಮ ಹಳ್ಳಿ ಚಂಗೂಲಿ ಬುದ್ದಿ ಇಲ್ಲಿ ತೋರಿಸ್ ಬೇಡ್ರಲಾ, ಕೊನೆಗೆ ಮರಾಠಿಯೋರು ನಿಮ್ಮನ್ನ ಕರ್ಕಂಡು ಹೋಗಿ ಎಮ್ಮೆ ಕಾಯಕ್ಕೆ ಹಚ್ತಾರೆ ಅಂದ. ಯಾವನೋ ಪೋಲಸ್ನೋನು ಮಾರಿಹಬ್ಬದಾಗೆ ಕೋಣ ಕಡಿಯೋನು ಇದ್ದಂಗೆ ಇದೀಯಾ, ಇಲ್ಲೇನ್ಲಾ ಮಾಡ್ತೀಯಾ ಅಂದ. ಹೂಂ, ಇಲ್ಲೂ ನಾಕು ಎಮ್ಮೆ ಅವೆ ಕಡಿತೀನಿ ಅಂದು ವೇದಿಕೆಗೆ ಹೋದೋನೆ, ಯಡೂರಪ್ಪಂಗೆ ಅಂಗೆ ಸಿಕ್ಕ ಸಿಕ್ಕೋರಿಗೆ ಕಾಲಿಗೆ ಬಿದ್ದ, ಬಡ್ಡೆ ಐದ ಸಾಮಿಯಾನ ಮಾಲೀಕಂಗೂ ಕಾಲಿಗೆ ಬಿದ್ದಿದ್ದ, ಸಾನ ಮಾಡಿದೇಯನಪ್ಪಾ ಅಂದ್ರು ಯಡೂರಪ್ಪ, ಯಾಕ್ ಸಾ. ಕಡೆಗೆ ಐಸ್ವರ್ಯ ರೈ ಓಡಿ ಹೋಬಿಟ್ಟಾಳು ಅಂತ ಕೇಳಿದೆ ಅಷ್ಟೆ ಅಂದ್ರು.
ಸರಿ ಉದ್ಘಾಟನೆ ಆಯ್ತು. ಮಗ ರೈನೇ ನೋಡೋನು, ಆ ವಮ್ಮ ಹೆದರ್ಕಂತಾ ಇತ್ತು. ಗಾರ್ಡ್ಸ್ ಯಾವುದಕ್ಕೂ ಒಂದು ಕಣ್ಣು ಇವನ ಮೇಲೆ ಇಟ್ಟಿರಿ ಅಂತು, ಯಾಕೆ ಮೇಡಂ, ನೋಡಕ್ಕೆ ಕಳ್ಳ ಇದ್ದಂಗೆ ಇದಾನೆ, ನಾನು ಹಾಕ್ಕಂಡ್ ಬಂದಿರೋ ಚಿನ್ನ ಎಲ್ಲಾ ನಮ್ಮ ಅತ್ತೆ ಜಯಬಾಧುರಿದು, ಇವನು ಏನಾದ್ರೂ ಹೊಡಕ್ಕಂಡು ಹೋದ್ರೆ, ನಂಗೂ ಅಭಿಷೇಕ್ ಗೂ ಡೇವೋರಸ್ ಆಗ್ಬಿಡುತ್ತೆ ಅಷ್ಟೆ ಅಂದ್ರು, ಅವು ಗೌಡಪ್ಪನನ್ನೇ ನೋಡೋವು, ಮಗಾ ಪಂಚೆ ಸರಿ ಮಾಡ್ಕಳಕ್ಕೆ ಅಂತ ಬಗ್ಗಿದ್ರೆ, ಗನ್ ಅಂಗೆ ರೆಡಿ ಮಾಡೋರು, ಗೌಡಪ್ಪ ಲೇ ಯಾಕ್ರೋ ನನ್ನ ಹಿಂದೆ ಬಿದ್ದಿದೀರಿ ಅನ್ನೋನು, ಅವು ಸರಿಗಾ ಬೈಟ್ ಅನ್ನೋವು. ಅಲ್ಲೇ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಇದ್ರು, ಗೌಡಪ್ಪ ಅವರನ್ನ ಪರಿಚಯ ಮಾಡ್ಕಂಡ, ಸಾ ನಿಮ್ಮ ಮನೇಲಿ ಗೋವಿನ ಜೋಳ , ಮೆಣಸಿನ ಕಾಯಿ ಸಾನೇ ಬೆಳಿತೀರಾ ಅಂತ ಕಾಣ್ತದೆ ಅಂದ, ಯಾಕಪ್ಪ, ಅಲ್ಲಾ ನಿಮ್ಮ ಹೆಸರಿನ ಜೊತೆ ಕಾರ- ಜೋಳ ಐತಲ್ಲಾ ಅದಕ್ಕೆ ಅಂದ., ಅಂಗಾರೆ ನಿನ್ನ ಪ್ರಕಾರ ಉಮೇಶ - ಕತ್ತಿ, ಇವರೇನು ಕತ್ತೆ ಸಾಕಿದಾರಾ, ಬೊಮ್ಮಾಯಿ - ಬೊಂಬಾಯಿಯೋರಾ, ಯಡೂರಪ್ಪ ಏನು ಯಡಿಯೂರ್ನೋರಾ ಅಂತ ಸಾನೇ ಉಗಿದ್ರು. ಮುಚ್ಕಂಡು ಕುಂತ್ಕಳಕ್ಕೆ ಏನು ತಗೋತೀಯಾ ಅಂದ್ ಮ್ಯಾಕೆ ಸುಮ್ಕಾದ.
ಉದ್ಘಾಟನೆ ಆತು, ಮಗ ದೀಪ ಆರಿಸಬೇಡಿ ಅಂತಿದ್ದ, ಬೆಂಕಿ ಪೊಟ್ಟಣ ಕಳದೈತೆ, ಅದ್ರಾಗೆ ಬೀಡಿ ಹಚ್ಕಬೋದಲ್ಲಾ ಅಂತ, ಏ ಥೂ. ಸರಿ ಇನ್ಫಿ ನಾಣಿ ಭಾಸಣ ಮಾಡಿದ್ರು, ಅವರು ಸಾಫ್ಟ್ ವೇರ್ ಬಗ್ಗೆ ಹೇಳಿದ್ರೆ, ಇವನು ಬೆಸೀಟ್ ಮಾರೋರು ಅಂತಿದ್ದ, ಮಾಜಿ ಸುಂದರಿ ರೈ ಭಾಸಣನೂ ಆತು. ರೈಗೆ ಥ್ಯಾಂಕ್ಸ್ ಕೊಡಕ್ಕೆ ಹೋದ, ಗಾರ್ಡ್ಸ್, ಗೊತ್ತಾತು ಬುಡಿ ಅಂದ್ ಸುಮ್ಕೆ ಕೂತ. ಇದೀಗ ಗೌಡಪ್ಪನೋರು ಒಂದು ನಾಕು ಮಾತು ಆಡಬೇಕು ಅಂದ್ರು.ಯಡೂರಪ್ಪ ಇವನ ಹೆಸರು ಯಾವಾಗ ಸೇರಿಸಿದ್ರಿ ಅಂತ ಸಾನೇ ಉಗೀತಾ ಇದ್ರು, ಬಡ್ಡೆ ಐದ ಪ್ರೋಟೋಕಾಲ್ ಪ್ರಕಾರ ನನ್ನ ಹೆಸರೂ ಬತ್ತದೆ ಸಾ ಅಂದ. ಸರಿ ನಾಕೇ ನಾಕು ಮಾತಾಡಿ ಬಾ ಅಂತು ಯಡೂರಪ್ಪ. ಇಲ್ಲಾಂದ್ರೆ, ಎಗರಿಸಿ ಎದೆಗೆ ಒದಿತೀನಿ ಅಂದ್ರು, ನೀವೇನ್ ಜಾಕಿಚಾನ್ ಅಂದ ಗೌಡಪ್ಪ, ಲೇ ಅವನು ಯಾರಲಾ, ನಮ್ಮ ಚೂನಾ ಫ್ರೆಂಡ್.
ಕನ್ನಡ ಮಹಾಜನಗಳೆ ನೀವು ಕೆಚ್ಚದೆಯ, ಗಂಡು ಗಲಿಗಳು, ಟಿಪ್ಪೂ,ಹೈದರಾಲಿ ಹಾಗೇ ತಿಮ್ಮೇಗೌಡರಂತೆ ಧೈರ್ಯವಂತರಾಗಿ ಹೋರಾಡಬೇಕು, ಲೇ ಈ ತಿಮ್ಮೇಗೌಡ ಯಾರಲಾ ಅಂತು ಅಂಬರೀಸು. ಅದೇ ಸಾ, ನಮ್ಮಪ್ಪ,.ಲೇ ಅವೇನೇನ್ಲಾ ಅಂತ ಕೆಲಸ ಮಾಡವ್ನೆ. ಕನ್ನಡ ಸಾಲೆ ಮೇಸ್ಟ್ರು ಆಗಿದ್ರು ಅಂದ. ವಾಲೆಂಟರಿ ರಿಟೈರ್ಡ್ ಮೆಂಟ್ ತಗೊಂಡು ಕಟ್ಟೆ ಮೇಲೆ ಕೂತು ಬೀಡಿ ಸೇದ್ತಾವ್ರೆ ಅಂದ. ಸರಿ ನೋಡಿ ಕನ್ನಡ ರಸಿಕರೆ, ಮರಾಠಿಗರನ್ನು ಬಿಡಬೇಡಿ. ಅವರ ಕನ್ನಡಕ್ಕೆ ಬೈದರೆ ನೀವು ಮರಾಠಿಗೆ ಬೈಯಿರಿ, ಅಂಗೇ ಯಾವಾಗಲೂ ಮಚ್ಚು, ಲಾಂಗ್ ಮಡಿಕ್ಕಂಡೇ ಇರಿ ಅಂತಿದ್ದಾಗೆನೇ ಜನ ಕೇಕೇ ಹಾಕೋರು, ಗೌಡಪ್ಪ ಈರಾ ವೇಸದಿಂದ ಮಾತಾಡ್ತಾನೇ ಇದ್ದ,. ಪೋಲೀಸ್ನೋರು ಇವನನ್ನೇ ನೋಡೋರು, ಯಾಕ್ ಸಾ, ಕೋಮು ಗಲಭೆ ಆದ್ರೆ ಒಳಗೆ ಹಾಕಕ್ಕೆ ಅಂತ ಪೋಟೋ ಹೊಡ್ಕಂಡ್ರು. ಓಹೋ, ಇನ್ನು ಹಿಂಗೆ ಬಿಟ್ಟರೆ ಇವನು ನನ್ನ ಮಾರ್ಕೆಟ್ ಡವನ್ ಮಾಡ್ತಾನೆ ಅಂದು ಯಡೂರಪ್ಪ ಬರ್ತೀಯೋ ಇಲ್ಲಾ ನಿನ್ನ ಗ್ರಾಮ ಪಂಚಾಯಿತಿ ಅಧ್ಯಕ್ಸ ಸ್ಥಾನಕ್ಕೆ ರಾಜೀನಾಮೆ ಕೊಡಿಸಲೋ ಅಂತಿದ್ದಾಗೆನೇ ಗೌಡಪ್ಪ ಸೀಟಲ್ಲಿ ಹಾಸೀನನಾಗಿದ್ದ, ಕೆಟ್ಟ ಬಿಸಿಲು, ಈ ಬಡ್ಡೆ ಐದಂದು ಸಾನೇ ವಾಸ್ನೆ.ಪಾಪ ಎಲ್ಲಾವು ಸಾಕ್ಸ್ ವಾಸನೆ ನೋಡ್ಕಳೋವು.
ಸರಿ ಈಗ ಪುಸ್ತಕ ಬಿಡುಗಡೆ ಕಾರ್ಯಕ್ರಮ, ಗೌಡಪ್ಪ ಸುಬ್ಬನ್ನ ಕರೆದು ಒಂದು ಚೀಲದಾಗೆ ಪುಸ್ತಕ ಇಟ್ಟಿದೀನಿ ತಗೊಂಡು ಬಾರಲಾ ಅಂದ. ಸ್ಟೇಜಿಗೆ ಪುಸ್ತಕ ಹೋಗ್ತಿದ್ದಾಗೆನೇ ಯಡೂರಪ್ಪ ಏನಲಾ ನಮ್ಮ ಪಕ್ಸದ್ದ ಪ್ರಣಾಳಿಕೆ ಏನಲಾ ಅಂದ್ರು, ಇಲ್ಲಾ ಸಾ ನಾನು ಬರೆದಿರೋ ಪುಸ್ತಕ, ಅಂಗಾರೆ ಅದನ್ನು ಇಲ್ಲೇ ಬಿಡುಗಡೆ ಮಾಡು ಅಂದ್ರು, ಅನಂತ ಮೂರ್ತಿ, ಚಂಪಾ ಸೇರಿದಂತೆ ಎಲ್ಲಾ ಸಾಹಿತಿಗಳು ಇದ್ರು, ಒಂದಿಷ್ಟು ಪುಸ್ತಕ ಬಿಡುಗಡೆ ಆತು, ಇದೀಗ ಗೌಡಪ್ಪ ಬರೆದಿರುವ ಪುಸ್ತಕ ಬಿಡುಗಡೆ "ಮಧುಮೇಹಕ್ಕೆ ನಾಟಿ ಔಷಧಿ" ಭಾಗ 1, ಭಾಗ - 2, "ಹಾವು ಕಚ್ಚಿದರೆ ಕೋಳಿ ಔಸಧಿ", ಅಜೀರ್ಣಕ್ಕೆ ಆಂಜನೇಯ ಚೂರ್ಣ" ಹುಳಕಡ್ಡಿ, ಕೆರೆತಕ್ಕೆ ಸೊಪ್ಪಿನ ಔಷಧಿ ಎಲ್ಲಾ ಬಿಡುಗಡೆ ಆಯ್ತು. ಗೌಡಪ್ಪ ಸಾನೇ ಖುಸಿಯಾಗಿದ್ದ. ಯಡೂರಪ್ಪ ಗುರಾಯಿಸ್ತಾ ಇದ್ರು, ರೀ ಗೌಡ್ರೆ ಸ್ವಲ್ಪ ಬರ್ತೀರಾ, ಲೇ ಇದನ್ನೇನು ಸಂತೆ ಅನ್ಕಂಡಿಯೇನೋ, ಇದನ್ನು ಬಿಡುಗಡೆ ಮಾಡಕ್ಕೆ ಏನೂ ಭೈರಪ್ಪನವರ ಕೃತಿ ನಿಂದು, ಹಿಂದಿಂದ ಚಂಪಾ ಇಂತೋರು ಇರೋದ್ರಿಂದಲೇ ನಮ್ಮಂತವರಿಗೆ ಬೆಲೆ ಇಲ್ಲಾ ಅಂತಿದ್ರು,.ಅನಂತಮೂರ್ತಿ ನಾನು ಜ್ಞಾನಪೀಠ ಪ್ರಶಸ್ತಿ ತಗೊಂಡರೂ ಇಂತಹ ಪುಸ್ತಕ ಬರೆಯಲಿಲ್ಲಾ ಅಂತಿದ್ರು, ಐಶ್ವರ್ಯ ರೈಗೆ ನಾಕು ಪುಸ್ತಕ ಕೊಟ್ಟ, ಗೋವಿಂದ ಕಾರ ಜೋಳ , ಲೇ ಇನ್ ಮ್ಯಾಕೆ ನೀ ಬರಬೇಡೋ ಯಪ್ಪಾ ಅಂತಿದ್ರು. ಇಡೀ ಪುಸ್ತಕ ಮೇಳದಲ್ಲಿ ಗೌಡಪ್ಪನ ಪುಸ್ತಕಕ್ಕೆ ಹೆವಿ ಡಿಮ್ಯಾಂಡ್, ಮಗಾ ಜೊತೆಗೆ ಔಷಧಿನೂ ತಂದಿದ್ದ, ಅಂತೂ ಕಾರ್ಯಕ್ರಮ ಎಲ್ಲಾ ಮುಗೀತು, ಊರಿಗೆ ಬಂದ್ವಿ.
ಗೌಡಪ್ಪನ ಬಿಜೆಪಿ ಪಕ್ಸದಿಂದ ಉಚ್ಚಾಟಿಸಲಾಗಿದೆ ಅಂತ ಪತ್ರ ಬಂದಿತ್ತು, ಕಾರಣ ಮುಖ್ಯಮಂತ್ರಿಗಳಿಂದ ಕೆಟ್ಟ ಪುಸ್ತಕ ಬಿಡುಗಡೆ ಮಾಡಿಸುವುದು ಮಾತ್ರವಲ್ಲದೆ, ಪಕ್ಷದ ಹೆಸರು ಹೇಳಿಕೊಂಡು ನಾಟಿ ಔಷಧಿ ಮಾರಿದಾನೆ ಅಂತ, ಪಕ್ಸ ಹೋದರೆ ಹೋಗಲಿ ಬುಡಲಾ ಅಂತೂ ನನ್ನ ಪುಸ್ತಕ ವಿಸ್ವ ಕನ್ನಡದಲ್ಲಿ ಬಂತಲ್ಲಾ ಅಂತಾನೆ ಬಡ್ಡೆ ಐದ.
Comments
ಉ: ವಿಶ್ವ ಕನ್ನಡ ಸಮ್ಮೇಳನ - ಪುಸ್ತಕ ಬಿಡುಗಡೆ
ಉ: ವಿಶ್ವ ಕನ್ನಡ ಸಮ್ಮೇಳನ - ಪುಸ್ತಕ ಬಿಡುಗಡೆ