ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು (ಭಾಗ 1)

ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು (ಭಾಗ 1)

“ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ಮಹಿಳೆ” ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲ್ಲಿರಲಿ, ‘ಅಡುಗೆ’  ದೈವೀದತ್ತ ಕಲೆ ಅವಳ ಪಾಲಿಗೆ.

ಓರ್ವ ಹೆಣ್ಣು ಮಗಳ ಸ್ಥಿತಿ ಗತಿ, ಅವಳ ಸ್ಥಾನಮಾನ, ಅವಳ ಮೇಲಾಗುವ ಲೈಂಗಿಕ ಶೋಷಣೆ, ಅತ್ಯಾಚಾರ, ಅನಾಚಾರ, ಅಮಾನವೀಯತೆ, ತಾರತಮ್ಯ, ಲಿಂಗಾನುಪಾತ ಈ ಎಲ್ಲವನ್ನೂ ಮನಗಂಡು ಮೂಡಿದ ಪದವೇ ‘ಮಹಿಳಾ ದಿನ’. ಮಹಿಳೆಗೆ ಸ್ಥಾನ ಸಮಾಜದಲ್ಲಿ ಕಲ್ಪಿಸುವುದು, ಅವಳಿಗೂ ನಾಯಕತ್ವದ ಅವಕಾಶ ನೀಡುವುದು ಈ ಹಿನ್ನೆಲೆಯಲ್ಲಿ ಇಂದು ‘ಮಹಿಳಾ ಮೀಸಲಾತಿ’ ಜಾರಿಗೆ ಬಂತು.

೧೯೭೫ರಲ್ಲಿ ‘ವಿಶ್ವಮಹಿಳಾ ದಿನ’ ವನ್ನಾಗಿ ಮೊದಲಬಾರಿಗೆ ಆಚರಿಸಲಾಯಿತು. ಮಹಿಳೆ ಅಥವಾ ಓರ್ವ ಹೆಣ್ಣು ಮಗಳು ಸಮಾಜದಲ್ಲಿ, ಆಡಳಿತ ಕ್ಷೇತ್ರದಲ್ಲಿ, ತನ್ನ ಮನೆಯಲ್ಲಿ, ಬಂಧು ಬಳಗದ ನಡುವೆ ತನ್ನದೇ ಆದ ದಿಟ್ಟ ಹೆಜ್ಜೆಗಳನ್ನು ಊರಲು, ಛಾಪನ್ನು ಮೂಡಿಸುವ ನಿಟ್ಟಿನಲ್ಲಿ, ಅನೇಕ ನಿಯಮಗಳನ್ನು ಜಾರಿಗೆ ತರಲಾಯಿತು. ಸಾಧಾರಣವಾಗಿ ಮಹಿಳೆ ನಾವು ನೋಡಿದ ಹಾಗೆ ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆ. ಮಹಿಳೆಯ ಧೀರತನ, ದಿಟ್ಟ ನಿರ್ಧಾರಗಳು ಶ್ಲಾಘನೀಯವಾದರೂ, ಅದನ್ನು ವಿರೋಧಿಸುವ ಒಂದು ಬಣ ಇದ್ದೇ ಇದೆ. ‘ನಿಂತರೂ ತಪ್ಪು, ಕೂತರೂ ತಪ್ಪು’ ಹೇಳುವವರು ಬಹಳಷ್ಟು ಮಂದಿ ಕೇಳಿದ್ದೇನೆ, ನೋಡಿದ್ದೇನೆ ನನ್ನ ಬದುಕಿನ ಅನುಭವಗಳ ಹಾದಿಯಲ್ಲಿ. ‘ಒಲೆಯ ಬೂದಿ ತೋಡುವ ಇವಳಿಗೆ ಕೈಗೆ ಕೈಗಡಿಯಾರ ಯಾಕೆ?’

‘ನಾಚಿಕೆಯಿಲ್ಲದೆ ಗಂಡನಿಗಂಟಿ ನಡೆಯುವ ಬಜಾರಿ ಇವಳು’ ಹೇಳಲೂ ಹೇಸದವರಿದ್ದಾರೆ. ಮಹಿಳೆಯ ಸ್ವಾಭಿಮಾನಕ್ಕೆ ಪೆಟ್ಟು ಕೊಡುವುದು, ಇಂಚಿಂಚು ಸಾಯಿಸಲು ನೋಡುವುದು ಎಷ್ಟು ‌ಸರಿ? ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೇಳುವವರಿಗೂ ಮನೆಯಲ್ಲಿ ಹೆಣ್ಣುಮಕ್ಕಳು ಇಲ್ಲವೇ? ಮಹಿಳೆ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯುವ ಕಾಲ ಬರಲಿ. ಲಿಂಗ ತಾರತಮ್ಯ ಹೋಗಲಾಡಿಸಿ, ಆಕೆಗೂ ಹೃದಯವಿದೆ, ಮನಸ್ಸಿದೆ, ದು:ಖ ದುಮ್ಮಾನಗಳಿವೆ, ಸುಖ ಸಂತೋಷಗಳಿವೆ ಎಂದು ಅರಿಯುವ, ತಿಳಿಯುವ, ಅರ್ಥವಿಸಿಕೊಳ್ಳುವ ಹೃದಯವಂತರು ಇಂದು ಬೇಕಾಗಿದ್ದಾರೆ. ಆದರೆ ಭೂಮ್ಯಾಕಾಶ ವ್ಯತ್ಯಾಸದಂತಾಗಿದೆ. ಎಲ್ಲವೂ ಅಯೋಮಯ.ಇನ್ನೂ ಉಸಿರುಗಟ್ಟಿಸುವ ವಾತಾವರಣ ಎಷ್ಟೋ ಮನೆಗಳಲ್ಲಿದೆ ಎಂಬುದೇ ಬೇಸರದ ವಿಚಾರ.

ಒಂದು ಮನೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಮಹಿಳೆ ಮತ್ತು ಪುರುಷ ಗಾಲಿಯ ಎರಡು ಚಕ್ರಗಳಿದ್ದಂತೆ. ಒಂದು ಚಕ್ರ ಸ್ವಲ್ಪ ವಾಲಿದರೂ ಅನಾಹುತ ತಪ್ಪಿದ್ದಲ್ಲ. ಮಗಳು, ಸಹೋದರಿ, ತಾಯಿ, ಪತ್ನಿ, ಗೆಳತಿ, ಸಖಿ, ಅಜ್ಜಿಯಾಗಿ, ಮನೆಯಲ್ಲಿ ಆಕೆ ನಿಭಾಯಿಸುವ ಪಾತ್ರ ಸಾಮಾನ್ಯವಲ್ಲ. ‘ಕ್ಷಮಯಾಧರಿತ್ರಿ’ ಆಕೆ. ಆಕೆಯ ದಿನನಿತ್ಯದ ದುಡಿಮೆಗೆ ಬೆಲೆಕಟ್ಟಲಾಗದು. ಮಹಿಳೆಯಿಲ್ಲದ ಮನೆ ‘ಸ್ಮಶಾನ’ ಕ್ಕೆ ಸಮ. ಮನೆಯಲ್ಲಿ ಮಾತು, ನಗು, ಕೈಬಳೆ ಝೇಂಕಾರ, ಗೆಜ್ಜೆನಿನಾದ, ಕಲರವ ಇದೆಲ್ಲ ಓರ್ವ ಮಹಿಳೆ ಇದ್ದಾಗ ಮಾತ್ರ ಸಾಧ್ಯ.

ಇತ್ತೀಚೆಗೆ ನಾವು ಕಂಡಂತೆ, ಸಣ್ಣ ಹೆಣ್ಣು ಮಗುವನ್ನು ಸಹ ಲೈಂಗಿಕ ಶೋಷಣೆಗೆ ಒಳಗಾಗಿಸಿ, ಸಾಯಿಸುವುದು ಸರ್ವೇಸಾಮಾನ್ಯವಾಗಿದೆ. ಹಾಗಾದರೆ ಇದು ಯಾರ ತಪ್ಪು? ಆ ಮಗುವಿನದೇ, ಕಾಮುಕರದೇ, ತಿಳುವಳಿಕೆಯ ಕೊರತೆಯೇ? ಆಕೆಗೆ ಬದುಕುವ ಹಕ್ಕಿಲ್ಲವೇ?

ಹೆಣ್ಣು ಮಗುವಿನ ಭ್ರೂಣಹತ್ಯೆ ಸಾರಾಸಗಟಾಗಿ ನಡೆಸುವುದು ಕಂಡು, ಲಿಂಗಾನುಪಾತ ತಲೆದೋರಿದಾಗ, ಆಡಳಿತಪಕ್ಷಗಳು ಎಚ್ಚೆತ್ತವು. ಆದರೂ ಅಲ್ಲೊಂದು ಇಲ್ಲೊಂದು ಪ್ರಕರಣ ಆಗುತ್ತಿದೆ. ಅದೂ ವಿದ್ಯಾವಂತರಲ್ಲಿ. ತಾಯಗರ್ಭದಲ್ಲೇ ಅವಳನ್ನು ಸಾಯಿಸುವುದರಿಂದ ಶೋಷಣೆ ಆರಂಭ. ‘ಹೆಣ್ಣಿಗೆ ಹೆಣ್ಣೇ ಶತ್ರು’ ತಾಯಿ ಮನಸ್ಸು ಮಾಡಿದರೆ ಭ್ರೂಣಹತ್ಯೆ ತಡೆಗಟ್ಟಬಹುದು. ಆಕೆಗೆ ಸ್ಥಿರ ಮನಸ್ಥಿತಿ ಇಲ್ಲದಾಗ ಇಂಥ ಪ್ರಕರಣ ತಲೆದೋರುವುದು ಸಹಜ ಒಂದು ಕಾರಣ.ಇನ್ನೊಂದು ಆಕೆಯನ್ನು ಬಾಯಿ ಮುಚ್ಚಿಸುವ ಕೆಲಸ ಮನೆಯವರೇ ಮಾಡಿ, ಶೋಷಣೆಗೆ ಒಳ ಪಡಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಪುರುಷಪ್ರಧಾನ ಸಮಾಜದ ದಬ್ಬಾಳಿಕೆ ಒಮ್ಮೊಮ್ಮೆ ಕಾಣಿಸಿಕೊಳ್ಳಲೂ ಬಹುದು. ಸಮಾಜ ಎಷ್ಟೇ ಮುಂದುವರಿದರೂ ಆಕೆ ಭೋಗದವಸ್ತು, ಪುರುಷನ ಕಾಮನೆಗಳ ಬಲಿಪಶು, ಅಡುಗೆ ಮನೆಗೆ ಸೀಮಿತ, ಮಕ್ಕಳನ್ನು ಹೆರುವ ಯಂತ್ರ, ಮನೆಯ ಸದಸ್ಯರ ಬೇಕು ಬೇಡಗಳನ್ನು ಪೂರೈಸುವವಳು ಈ ರೀತಿಯ ಮನೋಭಾವ ಇನ್ನೂ ಇದೆ. ಒಳ್ಳೆಯ ವಿದ್ಯಾಭ್ಯಾಸ ನೀಡಿ ಮೊದಲು ಸಮಾಜದಲ್ಲಿ ನಿಲ್ಲುವ, ನಡೆಯುವ, ನಾಲ್ಕು ಜನರೊಂದಿಗೆ ವ್ಯವಹರಿಸುವ, ತಲೆಯೆತ್ತಿ ಉತ್ತರಿಸುವ ಕೌಶಲವನ್ನು ಆಕೆಗೆ ಕಲಿಸಬೇಕು. ‘ಹಾಗೆಂದು ಸ್ವೇಚ್ಛಾಚಾರ ಸಲ್ಲದು, ತನ್ನ ಇತಿ-ಮಿತಿಗಳ ಬಗ್ಗೆ ಅರಿತಿರಬೇಕು. ಸಂಸ್ಕಾರ, ಸಂಪ್ರದಾಯ, ನೈತಿಕ ಮೌಲ್ಯಗಳ ಚೌಕಟ್ಟು, ತನ್ನ ಮನೆತನ, ಗುರುಹಿರಿಯರು ಎಂಬುದನ್ನು ಮರೆತು ವ್ಯವಹರಿಸಬಾರದು. ಇತ್ತೀಚೆಗೆ ಸಮಾಜದ ಎಲ್ಲಾ ಸ್ತರಗಳಲ್ಲೂ ಆಕೆ ತನ್ನದೇ ಛಾಪನ್ನು ಮೂಡಿಸಿ ‘ಸೈ’ ಅನಿಸಿಕೊಂಡಿದ್ದಾಳೆ. ಆದರೆ ಶೋಷಣೆ, ಅತ್ಯಾಚಾರಗಳು ಕಡಿಮೆಯಾಗಿಲ್ಲ.

ಮಕ್ಕಳ ಕಳ್ಳಸಾಗಣೆಯಂತಹ ಕೆಟ್ಟ ಚಾಳಿ ದಿನಾ ನಡೆಯುತ್ತಿದೆ. ಅಲ್ಲೂ ತಾರತಮ್ಯ, ಗಂಡುಮಗುವಿನ ಮಾರಾಟಕ್ಕೆ ಬೆಲೆ ಹೆಚ್ಚು, ಹೆಣ್ಣು ಮಗುವಿಗೆ ಕಡಿಮೆ. ಛೇ, ಎಂಥ ಅಮಾನವೀಯತೆ ಇದು. ಇದಕ್ಕೆ ಕುಮ್ಮಕ್ಕು ಕೊಡುವವರು ನಾವೇ ಅಲ್ಲವೇ?

ನಮ್ಮ ಮನೆಯ ಮಹಿಳೆಯರನ್ನು  ಪ್ರೀತಿಸೋಣ, ಗೌರವಿಸೋಣ, ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸೋಣ, ಹೆಣ್ಣು ಗಂಡು ತಾರತಮ್ಯ ಬೇಡ, ಗಂಡುಮಗುವಿಗೂ ಕೆಲಸ ಬೊಗಸೆ ಕಲಿಸೋಣ,ಜೊತೆಜೊತೆಯಾಗಿ ಬೆಳೆಸೋಣ ಆಗದೇ? ಬರಿಯ ಆಚರಣೆ, ಭಾಷಣಗಳಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ.

(ಇನ್ನೂ ಇದೆ)

-ರತ್ನಾ ಕೃಷ್ಣ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ