ವಿಶ್ವ ಹಾವುಗಳ ದಿನ - ಜುಲೈ 16

ವಿಶ್ವ ಹಾವುಗಳ ದಿನ - ಜುಲೈ 16

ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶಿಷ್ಟ ಸ್ಥಾನವಿದೆ. ನಾಗರಾಜನೆಂದು ಪೂಜಿಸುತ್ತಾ ಬಂದವರು ನಾವು. ವರುಷಕ್ಕೊಮ್ಮೆ ಬರುವ ನಾಗರ ಪಂಚಮಿಯ ದಿನದಂದು ನಾಗಬನಕ್ಕೆ ತೆರಳಿ ಹಾಲು ಎರೆದು ಶೃದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವವರು ನಾವು. ಹಾವುಗಳ ಕುರಿತು ಜನರಲ್ಲಿರುವ ಅನಗತ್ಯ ಭಯವನ್ನು ದೂರ ಮಾಡಿ, ಅವುಗಳ ರಕ್ಷಣೆಗೆ ಜಾಗೃತಿ ಮೂಡಿಸಲು ವಿಶ್ವ ಹಾವು ದಿನ (ಉರಗ ದಿನ) ಆಚರಿಸಲಾಗುತ್ತದೆ. ಹಾವಿನ ಆವಾಸಸ್ಥಾನಗಳನ್ನು ರಕ್ಷಿಸೋಣ. ಅವುಗಳ ಮಹತ್ವ ತಿಳಿಸೋಣ. 

ಹಾವುಗಳು ಸರೀಸೃಪ ಗುಂಪಿಗೆ ಸೇರುವ ಪ್ರಮುಖ ಜೀವಿಗಳಾಗಿದ್ದು, ಜೀವಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ನಿರ್ವಸುತ್ತವೆ. ಬಹುಶಃ ಜಗತ್ತಿನಲ್ಲಿ ಹಾವುಗಳ ಬಗ್ಗೆ ಇರುವಷ್ಟು ಮೂಢನಂಬಿಕೆ/ ತಪ್ಪು ಅಭಿಪ್ರಾಯಗಳು ಬೇರೆ ಯಾವುದೇ ಪ್ರಾಣಿಗಳ ಮೇಲೂ ಇಲ್ಲ ಅನಿಸುತ್ತೆ! ಅವುಗಳಲ್ಲಿ ಪ್ರಮುಖವಾದವು ಕೆಳಗಿನಂತಿವೆ.

* ಹಾವು ಹಾಲು ಕುಡಿಯುತ್ತವೆ.

*  ನಾಗರಹಾವು 12 ವರ್ಷ ದ್ವೇಷ ಸಾಧಿಸುತ್ತವೆ.

*  ತಲೆಯಲ್ಲಿ‌ ವಜ್ರದ ನಾಗಮಣಿ ಹೊಂದಿವೆ.

*  ಐದು ಹೆಡೆ, ಏಳು ಹೆಡೆ ಹೊಂದಿದ ಹಾವುಗಳಿವೆ.

*  ಕೇರೆ ಹಾವಿನ ಬಾಲದಲ್ಲಿ ವಿಷವಿರುತ್ತವೆ.

*  ಮಣ್ಣುಮುಕ್ಕ ಹಾವು ಎರಡು ತಲೆಹೊಂದಿರುತ್ತದೆ.

*  ನಾಗರಹಾವು ಕೇರೆಹಾವಿನೊಂದಿಗೆ ಬೆದೆಯಾಡುತ್ತದೆ (ಮಿಲನ ಹೊಂದುತ್ತದೆ),  

* ಕೊಳಕು ಮಂಡಲ ಹಾವಿನ ಉಸಿರು ತೆಗಲಿದರೆ ಸಾಕು, ಉಸಿರು ತಗುಲಿದ ಸ್ಥಳ ಕೊಳೆಯಲು ಪ್ರಾರಂಭಿಸುತ್ತದೆ.

* ಕೇದಿಕೆ, ಸಂಪಿಗೆ ಹೂವಿನ ಪರಿಮಳಕ್ಕೆ ಹಾವುಗಳು ಬರುತ್ತವೆ.

* ಪುಂಗಿ ನಾದ ಕೇಳಿದೊಡನೆ ಹಾವುಗಳು, ಅದರಲ್ಲೂ ನಾಗರಹಾವುಗಳು ಎಲ್ಲಿದ್ದರೂ ಓಡೋಡಿ ಬರುತ್ತವೆ.

ಪಟ್ಟಿ ಸಾಗುತ್ತಲೇ ಹೋಗುತ್ತದೆ ಹಾವುಗಳ ಬಗೆಗಿನ ಮೂಡನಂಬಿಕೆಯ ಪುಂಗಿಯ ಸರಣಿ...ಅದರಲ್ಲೂ ಇತ್ತೀಚೆಗೆ ಜನ 'ನಾಗಿನಿ' ಸೇರಿ ಹಾವುಗಳ ಬಗ್ಗೆ 'ಕಣಿ' ಹೇಳುವ ಸಾಲುಸಾಲು ಧಾರವಾಹಿಗಳನ್ನು ನೋಡ್ಕೊಂಡು ಈ ತಪ್ಪು ಅಭಿಪ್ರಾಯಗಳನ್ನು ಮತ್ತಷ್ಟು ವೃದ್ದಿಸಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಹಾವು ಕಡಿತದಿಂದ ಪ್ರತಿವರ್ಷ 50 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪುತ್ತಿದ್ದು, ಪ್ರಪಂಚದಲ್ಲಿಯೇ ಹಾವು ಕಡಿತದಿಂದ ಅತಿಹೆಚ್ಚು ಜನ ಸಾವನ್ನಪ್ಪುವ ದೇಶ ನಮ್ಮದಾಗಿದೆ.

ನಾವು ಕಂಡ ಕಂಡಲ್ಲಿ ಹಾವುಗಳನ್ನು ಕೊಲ್ಲುವುದನ್ನು ಬಿಡಬೇಕು. ಹಾವುಗಳನ್ನು ಕೊಂದರೆ ನಮ್ಮ ಪ್ರಕೃತಿಯಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆ. ಏಕೆಂದರೆ ಹಾವುಗಳು ಬಹಳಷ್ಟು ಸಂಖ್ಯೆಯಲ್ಲಿ ಇಲಿಗಳನ್ನು ಹಿಡಿದು ತಿನ್ನುವುದರಿಂದ ನಮ್ಮ ಆಹಾರ ಧಾನ್ಯಗಳು ಉಳಿಯುತ್ತವೆ. ಹಾವುಗಳ ಸಂಖ್ಯೆ ಕಡಿಮೆಯಾದರೆ ಇಲಿಗಳ ಸಂಖ್ಯೆ ಅಧಿಕವಾಗುತ್ತದೆ. ಹಾವುಗಳ ಸಂಖ್ಯೆಯನ್ನು ನಿಯಂತ್ರಿಸಲು ಮುಂಗುಸಿ, ನವಿಲು, ಹದ್ದುಗಳು ಇವೆ. ಹಾವುಗಳನ್ನು ನಾವು ಕೊಂದರೆ ಕ್ರಮೇಣ ಮುಂಗುಸಿ, ನವಿಲುಗಳಿಗೆ ಆಹಾರ ಇರುವುದಿಲ್ಲ. ಕ್ರಮೇಣ ಅವುಗಳ ಸಂತತಿ ಕಡಿಮೆಯಾಗುತ್ತದೆ. ಹೀಗೆ ನಮ್ಮ ಪ್ರಕೃತಿಯಲ್ಲಿ ಒಂದನ್ನು ಬಿಟ್ಟು ಒಂದು ಬದುಕಲಾರದು.

ಬನ್ನಿ, ಹಾವನ್ನು ರಕ್ಷಣೆ ಮಾಡುವ. ಅದಕ್ಕೆ ತೊಂದರೆ ನೀಡದೆ ಅದು ನಮಗೆ ಉಪಟಳ ನೀಡುವುದಿಲ್ಲ. ಸ್ವಚ್ಛಂದವಾಗಿ ತಿರುಗಾಡುತ್ತಿದ್ದ ಹಾವಿನ ವಾಸಸ್ಥಳಗಳನ್ನು ನಾವು ಕಾಂಕ್ರೀಟ್ ಕಾಡುಗಳನ್ನಾಗಿ ಪರಿವರ್ತನೆ ಮಾಡಿ ಬಿಟ್ಟಿದ್ದೇವೆ. ಇದರಿಂದ ನೆಲೆ ಇಲ್ಲದ ಹಾವುಗಳು ನಮ್ಮ ಮನೆಯೊಳಗೆ ಬರತೊಡಗಿವೆ ಅಷ್ಟೇ. ಹಾವಿನ ಬಗ್ಗೆ ಜಾಗೃತಿ ಬೆಳೆಸೋಣ. ಮಿಥ್ಯ ವಿಷಯಗಳನ್ನು ಬಿಟ್ಟು, ಸತ್ಯ ವಿಷಯಗಳನ್ನು ಹರಡೋಣ.

(ಆಧಾರ) - ಅರುಣ್ ಡಿ'ಸೋಜ, ಮಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ