ವೇತನ ಬಿಡುಗಡೆಗೆ ಆದ್ಯತೆ ನೀಡಿ

ವೇತನ ಬಿಡುಗಡೆಗೆ ಆದ್ಯತೆ ನೀಡಿ

ರಾಜ್ಯದ ಹಲವು ಇಲಾಖೆಗಳ ನೌಕರರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ವೇತನವಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಹಣಕಾಸು ಇಲಾಖೆ ವೇತನ ಬಿಡುಗಡೆ ಮಾಡಿದ ನಂತರ ಆಯಾ ಇಲಾಖೆಯ ಪ್ರಭಾನ ಕಾರ್ಯದರ್ಶಿಗಳು ಅನುಮೋದನೆ ನೀಡುತ್ತಾರೆ. ನಂತರ ನಗರ ಪ್ರದೇಶಗಳ ನೌಕರರಿಗೆ ಖಜಾನೆ -೨ ವ್ಯವಸ್ಥೆ ಮೂಲಕ ವೇತನ ಪಾವತಿಯಾಗುತ್ತದೆ. ಆದರೆ, ಗ್ರಾಮೀಣ ನೌಕರರಿಗೆ ವೇತನ ಪಾವತಿ ಹಲವು ಹಂತಗಳನ್ನು ದಾಟುತ್ತದೆ. ಇಲಾಖೆಯ ಮುಖ್ಯಸ್ಥರ ಅನುಮೋದನೆಯ ನಂತರ ಜಿಲ್ಲಾ ಪಂಚಾಯತಿ, ಅಲ್ಲಿಂದ ತಾಲೂಕು ಪಂಚಾಯಿತಿ ತಲುಪುತ್ತದೆ. ಅಲ್ಲಿ ಮತ್ತೆ ಇಲಾಖಾವಾರು ಅನುಮೋದನೆ ಪಡೆದು ವೇತನ ನೀಡಲಾಗುತ್ತದೆ. ಈ ಖಜಾನೆ ೨ ಜಾರಿಗೆ ಬಂದ ನಂತರ ಅನುದಾನವನ್ನು ಇಲಾಖಾವಾರು ಪರಿಗಣಿಸಲಾಗುತ್ತಿದೆ. ಇಲಾಖೆಗೆ ನಿಗದಿಯಾದ ಅನುದಾನವಷ್ಟೇ ಆ ಇಲಾಖೆಯ ನೌಕರರು ಪಡೆಯಬೇಕಿದೆ. ಇಲಾಖೆಯ ನೌಕರರು ಪಡೆಯಬೇಕಿದೆ. ಇಲಾಖೆಯು ಯಾವ ಕಚೇರಿಯ ಸಿಬ್ಬಂದಿ ಮೊದಲು ವೇತನ ಪಟ್ಟಿ ಸಿದ್ಧಪಡಿಸಿ, ಖಜಾನೆಗೆ ಸಲ್ಲಿಸುತ್ತಾರೋ ಅವರಿಗೆ ವೇತನವಾಗುತ್ತದೆ. ವಿಳಂಬ ಮಾಡಿದರೆ ಆ ತಿಂಗಳ ವೇತನ ಸಿಗುವುದಿಲ್ಲ. ಅಲ್ಲದೆ, ಖಜಾನೆ ೨ ಬಂದ ನಂತರ ತಂತ್ರಾಂಶ ಆಧಾರಿತ ವೇತನ ವ್ಯವಸ್ಥೆ ಜಾರಿಗೆ ಬಂದಿದೆ. ಪ್ರತಿ ಹಂತದಲ್ಲೂ ವೇತನಕ್ಕೆ ಅನುಮೋದನೆ ನೀಡುವ ವಿಭಾಗಗಳ ಮುಖ್ಯಸ್ಥರ ಫೋಟೋ, ಡಿಜಿಟಲ್ ಸಹಿ ಒಳಗೊಂಡ ವೇತನ ಕೀ ಇರುತ್ತದೆ. ಅವರು ವರ್ಗಾವಣೆಗೊಂಡರೆ ಅವರ ಸ್ಥಾನಕ್ಕೆ ಬರುವವರ ಡಿಜಿಟಲ್ ಸಹಿ, ಫೋಟೋ ಕೇಂದ್ರ ಕಚೇರಿಗೆ ಕಳುಹಿಸಬೇಕು. ಅಲ್ಲಿ ಧೃಢೀಕರಣಗೊಂಡ ನಂತರ ವೇತನ ಪಾವತಿಗೆ ಅನುಮೋದನೆ ನೀಡಬಹುದು. ಈ ಪ್ರಕ್ರಿಯೆಗೆ ಕನಿಷ್ಟ ೨೦ ರಿಂದ ೨೫ ದಿನಗಳು ಬೇಕಾಗುತ್ತದೆ. ಪ್ರತೀ ಬಾರಿಯೂ ವರ್ಗಾವಣೆಗಳಾದಾಗ ವೇತನ ವಿಳಂಬವಾಗುತ್ತದೆ. ಅಲ್ಲದೆ, ರಾಜ್ಯ ಸರಕಾರ ಎಪ್ರಿಲ್ ೧ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇ.೧೭ರಷ್ಟು ಮಧ್ಯಂತರ ಪರಿಹಾರ ಘೋಷಿಸಿದ ನಂತರ ವೇತನಕ್ಕಾಗಿ ಹೆಚ್ಚುವರಿ ಅನುದಾನ ನೀಡದೇ ಇದ್ದುದರಿಂದಲೂ ವೇತನ ವಿಳಂಬವಾಗಿದೆ. ಆದ್ದರಿಂದ ನೌಕರರ ಸಂಬಳಕ್ಕಾಗಿ ಸಮರ್ಪಕ ಅನುದಾನ ಮೀಸಲಿಡಬೇಕಿದೆ. ಜಿಲ್ಲಾವಾರು ವೇತನ ಬಿಡುಗಡೆಗೆ ಆದ್ಯತೆ ನೀಡಬೇಕಿದೆ. ಅಲ್ಲದೆ, ಖಜಾನೆ ೨ರಲ್ಲಿರುವ ಎಲ್ಲ ನ್ಯೂನತೆಗಳನ್ನೂ ನಿವಾರಿಸಬೇಕಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೪-೦೮-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ