ವೈಕುಂಠ ಏಕಾದಶಿ ದಿನ (ಗೀತಾ ಜಯಂತಿ)

ವೈಕುಂಠ ಏಕಾದಶಿ ದಿನ (ಗೀತಾ ಜಯಂತಿ)

ನಮ್ಮ ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಬಾ ಎಂದರೆ ಬಾರದು, ಬರಬೇಡ ಎಂದರೆ ಬಾರದೆ ಇರದು. ಒಂದೇ ನಾಣ್ಯದ ಎರಡು ಮುಖಗಳನ್ನು ನೀಡಿ ಒಂದನ್ನು ಆಯ್ಕೆ ಮಾಡು ಎಂದರೆ ಹೇಗೋ ಹಾಗೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಹಾಗಾದರೆ ಶಾಶ್ವತವಾದದ್ದು ಯಾವುದು? ಅದೇ ವೈಕುಂಠ. ಭಗವಾನ್ ಮಹಾವಿಷ್ಣುವಿನ ದಿವ್ಯ ಸನ್ನಿಧಿ. ಅಲ್ಲಿ ಇರುವುದು ಒಂದೇ ತತ್ವ, ಒಂದೇ ನಿಯಮ.

ಹರಿ ಸ್ಮರಣೆಯಿಂದ ನಮ್ಮ ಜೀವನ ಧನ್ಯ, ಮಾನ್ಯ ಮತ್ತು ಪಾವನ. ಉಪವಾಸ ಎಂದರೆ ಭಗವತ್ ಸ್ಮರಣೆಗೆ ಇಲ್ಲಿ ಆದ್ಯತೆ. ಮನೋನಿಗ್ರಹ, ಏಕಾಗ್ರತೆ, ನಿಷ್ಠೆ, ವ್ರತ ಇದೆಲ್ಲ ಉಪವಾಸದ ಮಜಲುಗಳು. ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳನ್ನು ನಿಗ್ರಹಿಸಿ, ಭಗವತ್ ಚಿಂತನೆ ನಡೆಸುವುದು. ಈ ಉಪವಾಸದ ಸಮಯದಲ್ಲಿ ದುರಾಲೋಚನೆಗಳಿಗೆ ಆಸ್ಪದವಿಲ್ಲ, ಕೆಟ್ಟ ಯೋಚನೆಗಳು ಬರಲೇ ಬಾರದು. 

ಪದ್ಮ ಪುರಾಣದ ಒಂದು ಮಾಹಿತಿಯಂತೆ "ಮುರನೆಂಬ ದುಷ್ಟ ದಾನವನ ವಧೆಗಾಗಿ ಭಗವಾನ್ ಮಹಾವಿಷ್ಣುವಿನ ದಿವ್ಯ ತೇಜಸ್ಸಿನಿಂದ (ಮೊಗಕಮಲ) ಹೈನಮತಿ ನಾಮಾಂಕಿತ ಸ್ತ್ರಿರತ್ನವೊಂದು ಉದ್ಭವಿಸಿ, ದೇವಿಯಾಗಿ ದುಷ್ಟನ ವಧೆಗೈದು ಲೋಕಕ್ಷೇಮ ಉಂಟು ಮಾಡಿದಳೆಂದು ಪ್ರತೀತಿ". ಇದೇ ದಿನ ವೈಕುಂಠ ಏಕಾದಶಿಯಾದ್ದರಿಂದ, ಉಪವಾಸವಿದ್ದು, ಮಹಾವಿಷ್ಣುವಿನ ಆರಾಧನೆ, ಪೂಜೆ, ನೇಮನಿಷ್ಠೆ ಗಳಲ್ಲಿ ತೊಡಗಿದವರಿಗೆ ಮೋಕ್ಷ ಪ್ರಾಪ್ತಿ ಯಾಗುತ್ತದೆ ಹಾಗೂ ಹೈನವತಿ ದೇವಿ ಇನ್ನು ಮುಂದೆ ಏಕಾದಶೀ ದೇವಿಯಾಗಿ ಕರೆಯಲ್ಪಡುತ್ತಾಳೆ ಎಂಬಂತೆ ಬಿಂಬಿಸಲ್ಪಟ್ಟಿದೆ. ಏಕಾದಶಿ ಉಪವಾಸವನ್ನು ನಿರ್ಲಕ್ಷಿಸಿ ಧರ್ಮವನ್ನು ಮೀರಿದ ರುಕ್ಮಾಂಗದನ ಕಣ್ಣು ತೆರೆಯಿಸಿ ಶ್ರೀ ಮಹಾವಿಷ್ಣು ವೈಕುಂಠಕ್ಕೆ ಕರೆಸಿಕೊಂಡ ಎಂಬ ಹಾಗೆಯೂ ಕಥೆ ಇದೆ.

ಇದೇ ದಿನ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಭಗವಾನ್ ವಾಸುದೇವನಿಂದ ಪಾರ್ಥನಿಗೆ ‘ಭಗವದ್ಗೀತೆ’ ಬೋಧನೆಯಾದ ದಿನವಾದ ಕಾರಣ ‘ಗೀತಾಜಯಂತಿ’ ಎಂಬುದಾಗಿಯೂ ಆಚರಿಸುತ್ತಾರೆ. ಧರ್ಮವು ಕಡಿಮೆಯಾದಾಗ,ಅಧರ್ಮ ತಾಂಡವವಾಡುತ್ತಿರುವಾಗ, ಧರ್ಮವನ್ನು ಉದ್ಧರಿಸಲು ಭಗವಾನ್ ಮಹಾವಿಷ್ಣು ನಾನಾ ಅವತಾರಗಳಲ್ಲಿ ಕಾಣಿಸಿಕೊಂಡು ಧರ್ಮದ ರಕ್ಷಣೆ ಮಾಡುತ್ತಾನೆ. ಇದನ್ನೆಲ್ಲ ಪುರಾಣ ಪುಣ್ಯ ಕಾವ್ಯಗಳಲ್ಲಿ ಓದಿ ತಿಳಿದವರು ನಾವುಗಳು. ಈ ಶುಭದಿನದಂದು  ಭಗವದ್ಗೀತೆ ಪಾರಾಯಣ, ವಿಷ್ಣುಸಹಸ್ರನಾಮ, ಶ್ಲೋಕಗಳು, ಪುರಾಣ ಕಾವ್ಯಗಳನ್ನು ಓದಿ ಪುನೀತರಾಗೋಣ. ಅಖಂಡ ಭಜನಾ ಕೈಂಕರ್ಯ ಸಹ ಮಾಡಿ ಮನಸ್ಸಿನ ಹತೋಟಿಯನ್ನು ಸಾಧಿಸಬಹುದು.

‘ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇಮಹಾಭಾರತಮ್/

ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಂ ಅಂಬ ತ್ವಾಮನುಸಂದಧಾಮಿ ಭಗವದ್-ಗೀತೇ ಭವದ್ವೇಷಿಣೀಮ್//

ಅಮ್ಮಾ, ಭಗವದ್ಗೀತೆ, ಭಗವಂತನಾದ ಶ್ರೀಮನ್ನಾರಾಯಣನಿಂದ ಪಾರ್ಥನಿಗೆ ಸ್ವತಃ ಉಪದೇಶಿಸಲ್ಪಟ್ಟ, ಪ್ರಾಚೀನ ಮಹರ್ಷಿಗಳಾದ ವ್ಯಾಸರಿಂದ ಮಹಾಭಾರತ ಮಧ್ಯದಲ್ಲಿ ಸೇರಿಸಲ್ಪಟ್ಟ, ಅದ್ವೈತಾಮೃತವನ್ನು ವರ್ಷಿಸುತ್ತಿರುವ, ಸಂಸಾರನಾಶಿನಿಯಾದ, ಅಷ್ಟಾದಶಾಧ್ಯಾಯಗಳುಳ್ಳ, ಭಗವತಿಯಾದ ನಿನ್ನನ್ನು ಧ್ಯಾನಿಸುತ್ತೇನೆ.

"ಶಾಂತಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ

ವಿಶ್ವಾಕಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್/

ಲಕ್ಷ್ಮೀಕಾಂತಂ* *ಕಮಲನಯನಂ ಯೋಗಿಹೃದ್ಧಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ ಸರ್ವ ಲೋಕೈಕನಾಥಮ್//"

 

ಓಂ ನಾರಾಯಣಾಯ ವಿದ್ಮಹೇ

ವಾಸುದೇವಾಯ ಧೀಮಹೀ/

ತನ್ನೋ ವಿಷ್ಣು ಪ್ರಚೋದಯಾತ್//

ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷ ದಿನದಂದು ಬರುವುದೇ ಏಕಾದಶಿ. ಮಹಾವಿಷ್ಣುವಿನ ಆರಾಧನೆ. ವೈಕುಂಠ ದ್ವಾರ ಪ್ರವೇಶ ದಿನ. ಇದೇ ವೈಕುಂಠ ಏಕಾದಶಿ. ಜಗತ್ತಿನ ಬೆಳಕಿನ ಸೂರ್ಯದೇವನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿ ದಿನ. ಈ ದಿನದ ಏಕಾದಶಿ ಉಪವಾಸ ಬಹಳ ಪಾವಿತ್ರ್ಯತೆಯಿಂದ ಕೂಡಿದ್ದು, ವಿಶೇಷ ಮಹತ್ವವಿದೆ. ನಾವು ಏನಾದರೂ ಸಾಧಿಸಬೇಕೆಂದಿದ್ದರೆ ಈ ಏಕಾದಶಿ ಉಪವಾಸ ರಹದಾರಿಯಿದ್ದಂತೆ. ಮನಸ್ಸಿಗೆ ಶಾಂತಿ, ಆನಂದ, ಆರೋಗ್ಯ ಸಿಗುವುದು.

ತ್ರಿಮೂರ್ತಿಗಳಲ್ಲಿ ವಿಷ್ಣು ಜಗದ ಜೀವರಾಶಿಗಳನ್ನು ಪೊರೆಯುವ ದೇವರು. ಅವನ ಆರಾಧನೆ ಕಷ್ಟಗಳು ಬಾರದಂತೆ ಮತ್ತು ಬಂದರೆ ಸಹಿಸುವ ಶಕ್ತಿಯನ್ನು ನೀಡುವುದಂತೆ. ಮಹಾಭಾರತದ ಶಾಂತಿಪರ್ವದಲ್ಲಿರುವಂತೆ ಮನ್ವಂತರದಲ್ಲಿ ಭಗವಾನ್  ವಿಷ್ಣು ವಿಕುಂಠೆಯೆಂಬ ಸ್ತ್ರೀರೂಪಧಾರಿಯಾಗಿದ್ದ ಕಾರಣ ವೈಕುಂಠ ಎಂಬ ಹೆಸರು ಬಂತೆಂದು ಇದೆ.

ಪುರಾಣದ ದಾಖಲೆಯೊಂದರಲ್ಲಿ ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಹತ್ತಿರವೇ ಇದ್ದವನು. ಪೂಜೆ, ವ್ರತಗಳನ್ನು ಶ್ರದ್ಧಾಭಕ್ತಿಗಳಿಂದ ಮಾಡುವವನು. ಸ್ನಾನಕ್ಕಾಗಿ ಯಮುನೆಯ ಸಲಿಲಕ್ಕಿಳಿದವ ಮೇಲೆ ಬರಲೇ ಇಲ್ಲವಂತೆ. ಬೆಳಗಿನ ಸಮಯವಾದ ಕಾರಣ ರಾಕ್ಷಸರ ಸಂಚಾರದ ಕಾಲ. ವರುಣದೇವನ ಅಂಗರಕ್ಷಕನೋರ್ವ ಖಳನಾಗಿದ್ದು ನಂದಗೋಪನನ್ನು ಎಳೆದೊಯ್ದನಂತೆ. ವಿಷಯವರಿತ ಕೃಷ್ಣ ಆತನನ್ನು ಎದುರಿಸಿ ತನ್ನ ತಂದೆ ನಂದಗೋಪನನ್ನು ಪಾರು ಮಾಡಿದನಂತೆ. ನಂದಗೋಪನಿಗೆ ವೈಕುಂಠ ದರ್ಶನ ಭಾಗ್ಯವಾಯಿತು. ಹಿಂದಿರುಗಿ ಬಂದ ನಂದಗೋಪ ಗೋಪಾಲಕರಿಗೆ ಎಲ್ಲವನ್ನೂ ಅರುಹಿದ. ನಮಗೂ ವೈಕುಂಠ ತೋರಿಸೆಂದು ಭಗವಂತನಿಗೆ ಕೇಳಿಕೊಂಡಾಗ, ಯಮುನೆಯಲ್ಲಿರುವ ಬ್ರಹ್ಮಕುಂಡದಲ್ಲಿ ಮುಳುಗೆದ್ದು ಬನ್ನಿರೆಂದು ದೇವ ಆಜ್ಞಾಪಿಸಿದನಂತೆ. ವೈಕುಂಠ ದರುಶನ ಭಾಗ್ಯದಿಂದ ತೃಪ್ತರಾದರಂತೆ ಗೋಪಾಲಕರು. ಆ ದಿನವೇ ‘ವೈಕುಂಠ ಏಕಾದಶಿ’ ಎಂದು ಪ್ರಸಿದ್ಧವಾಯಿತು.

ಭಗವಾನ್ ವಿಷ್ಣುವಿನ ಪೂಜೆ, ತಪ, ಧ್ಯಾನವನ್ನು ನಿಷ್ಠೆಯಿಂದ ಈ ದಿನ ಉಪವಾಸವಿದ್ದು ಮಾಡಿದವನಿಗೆ ವೈಕುಂಠ ಪ್ರಾಪ್ತಿ,ಮೋಕ್ಷದ ಹಾದಿ ಸಿಗುವುದೆಂಬ ನಂಬಿಕೆ. ಇಲ್ಲಿ ಶಾಶ್ವತ ನಾವೆಸಗಿದ ಒಳ್ಳೆಯ ಕೆಲಸಕಾರ್ಯಗಳು ಮಾತ್ರ."ಹರಿಸ್ಮರಣೆ ಮಾಡೋ ನಿರಂತರ" ದಾಸವರೇಣ್ಯರು ಹಾಡಿದಂತೆ ಹರಿಯ ಧ್ಯಾನ, ಸ್ಮರಣೆ ನಮಗೆ ದಾರಿದೀಪವಾಗಬಹುದೆಂಬ ನಂಬಿಕೆ. ಭಗವಂತನಲ್ಲಿ ಕಷ್ಟ ಕೊಡಬೇಡವೆಂದು ಕೇಳುವುದಲ್ಲ. ಕಷ್ಟ ಬಂದಾಗ ಎದುರಿಸಿ ಹೋರಾಡುವ ಶಕ್ತಿ ಕೊಡೆಂದು ಪ್ರಾರ್ಥಿಸಬೇಕು.

-ರತ್ನಾ ಕೆ ಭಟ್,ತಲಂಜೇರಿ

(ವಿವಿಧ ಪುರಾಣಗಳಿಂದ ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ