ವೈಚಾರಿಕತೆ ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯ

ವೈಚಾರಿಕತೆ ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯ

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಮೇಲಾಟ ಹೆಚ್ಚಾಗಿದೆ. ಎಲ್ಲರೂ ಗೌರವಿಸಬೇಕಾದ ಸಾವರ್ಕರ್, ಟಿಪ್ಪು ಸುಲ್ತಾನ್, ನೆಹರೂ ಅವರ ಹೋರಾಟ, ಆಡಳಿತವನ್ನು ಹೊಗಳುವ, ತೆಗಳುವ ಕಾರ್ಯದಲ್ಲಿ ರಾಜಕಾರಣಿಗಳು ಬ್ಯೂಸಿಯಾಗಿದ್ದಾರೆ. ಆ ಮೂಲಕ ನಿಜವಾಗಿಯೂ ಚರ್ಚೆಯಾಗಬೇಕಾದ ಅಭಿವೃದ್ಧಿ, ಜನರಿಗೆ ಒದಗಿಸಬೇಕಾದ ಮೌಲ ಸೌಕರ್ಯ, ಜೀವನ ಮಟ್ಟ ಸುಧಾರಣೆ, ಭ್ರಷ್ಟಾಚಾರ ನಿರ್ಮೂಲನೆ ಕುರಿತ ವಿಷಯಗಳನ್ನು ಮರೆಮಾಚುತ್ತಿದ್ದಾರೆ. ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಕಾಲಾಪಾನಿಯಂತಹ ಕಠಿಣ ಶಿಕ್ಷೆಗೆ ಒಳಗಾಗಿ ಚಿತ್ರಹಿಂಸೆಯನ್ನು ಅನುಭವಿಸುತ್ತಿರುವಾಗ, ಯಾರೂ ಅವರ ಸಹಾಯಕ್ಕೆ ಬಾರದೆ ಬ್ರಿಟೀಷರ ಹೀನಕೃತ್ಯದ ಕೂಟಕ್ಕೆ ಶರಣಾಗಿರಬಹುದು. ಅಂದ ಮಾತ್ರಕ್ಕೆ ಅವರನ್ನು ಹೀಯಾಳಿಸುವುದು ಸರಿಯೇ? ಟಿಫ್ಫು ಸುಲ್ತಾನ್ ಕೂಡ ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದಾರೆ. ಆಡಳಿತದಲ್ಲಿ ಕೆಲವೊಂದು ತಪ್ಪುಗಳು ನಡೆದಿರಬಹುದು, ಅಂದ ಮಾತ್ರಕ್ಕೆ ಸದಾ ಹೀಯಾಳಿಸುವುದು ಎಷ್ಟು ಸರಿ? ಜವಾಹರಲಾಲ್ ನೆಹರೂ ಕೂಡ ವೈಜ್ಞಾನಿಕ ವಿಚಾರಗಳುಳ್ಳ ದೂರದೃಷ್ಟಿಯ ನಾಯಕರಾಗಿದ್ದರು. ನಮ್ಮ ದೇಶ ಎಲ್ಲಾ ರೀತಿಯಿಂದ ಬಡ ರಾಷ್ಟ್ರವಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ. ಈಗ ನಾವು ಬರೀ ರಾಜಕೀಯ ದೃಷ್ಟಿಯಿಂದ ಇವರೆಲ್ಲರ ತ್ಯಾಗ, ಹೋರಾಟವನ್ನು ಮರೆತು ಮಾತನಾಡುವುದು ಸರಿಯಲ್ಲ. ಇದರಿಂದ ಕೆಲವು ರಾಜಕೀಯ ನಾಯಕರಿಗೆ ಅಷ್ಟೋ ಇಷ್ಟು ಲಾಭವಾಗಬಹುದೇ ಹೊರತು, ಜನರಿಗೆ ಈ ವಾದ ವಿವಾದಗಳಿಂದ ಯಾವುದೇ ಲಾಭವಿಲ್ಲ. ಈ ನಿಟ್ಟಿನಲ್ಲಿ ಪ್ರಜೆಗಳು ಜಾಗೃತರಾಗಬೇಕು. ಇನ್ನು, ಆಹಾರದ ವಿಚಾರವಾಗಿಯೂ ರಾಜ್ಯದಲ್ಲಿ ಪರ -ವಿರೋಧದ ನಿಲುವುಗಳು ವ್ಯಕ್ತವಾಗುತ್ತಿವೆ. ಭಾರತದಲ್ಲಿ ಮತ-ಧರ್ಮ, ಊಟದ ಪದ್ಧತಿ, ಆಚಾರ ವಿಚಾರಗಳು ಎಲ್ಲವೂ ಭಿನ್ನವಾಗಿವೆ. ಇವು ನಿಂತಿರುವುದು ಅವರವರ ನಂಬಿಕೆಗಳ ಮೇಲಷ್ಟೇ. ಅದು ಸರಿ, ಇದು ತಪ್ಪು ಎಂದು ಪ್ರತಿಪಾದಿಸುವ ಯಾವುದೇ ಸಾಕ್ಷ್ಯಗಳು ಇಲ್ಲ. ವೈಜ್ಞಾನಿಕ ಕಾರಣವೂ ಸಿಗುವುದಿಲ್ಲ. ಹೀಗಿರುವಾಗ ಇಂತಹ ಧಾರ್ಮಿಕ, ಭಾವನಾತ್ಮಕ ವಿಷಯಗಳಲ್ಲೇ ಕಾಲವ್ಯಯ ಮಾಡದೆ ವೈಚಾರಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವತ್ತ ಗಮನಹರಿಸುವುದು ಇಂದಿನ ತುರ್ತು ಅಗತ್ಯವಾಗಿದೆ.