ವೈದ್ಯ ಶಿಕ್ಷಣದ ವ್ಯಾಪಾರೀಕರಣ ಖಂಡನೀಯ

ಶಿಕ್ಷಣ ಎನ್ನುವುದು ಲಾಭಗಳಿಸಲು ಇರುವ ಮಾರ್ಗವಲ್ಲ, ಬೋಧನಾ ಶುಲ್ಕ ಯಾವಾಗಲೂ ಕೈಗೆಟಕುವ ದರದಲ್ಲಿ ಇರಬೇಕು ಎನ್ನುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿರುವುದು ಅತ್ಯಂತ ಸೂಕ್ತ. ಶಿಕ್ಷಣದ ವ್ಯಾಪಾರಿಕರಣ ಗೊಳಿಸಿರುವ ಧನದಾಹಿ ಮನಸುಗಳಿಗೆ, ಆಡಳಿತ ವ್ಯವಸ್ಥೆಗೆ ಈ ತೀರ್ಪು ಕಿವಿಹಿಂಡಿದಂತಿದೆ.
೨೦೧೧ರಲ್ಲಿ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಏಳು ಪಟ್ಟು ಏರಿಸಿ, ವಾರ್ಷಿಕ ಶುಲ್ಕವನ್ನು ೨೪ ಲಕ್ಷ ರೂಪಾಯಿಗಳಿಗೆ ದಿಡೀರನೆ ಹೆಚ್ಚಿಸಿರುವ ೨೦೧೭ರ ರಾಜ್ಯ ಸರಕಾರದ ನಿರ್ಧಾರ ಸರಿಯಲ್ಲ ಎಂದು ಹೈಕೋರ್ಟ್ ನ ದ್ವಿಸದಸ್ಯ ಪೀಠ ಚಾಟಿ ಬೀಸಿದೆ. ಮೆಡಿಕಲ್ ಸೀಟು ಎನ್ನುವುದು ಬಿಜಿನೆಸ್ ಗೆ ದಾರಿಯಲ್ಲ ಎಂದು ಹೇಳುತ್ತಲೇ, ಶುಲ್ಕ ನಿಗದಿ ಕುರಿತು ಪಾರದರ್ಶಕ ನೀತಿ ಅನುಸರಿಸಲೂ ಕೋರ್ಟ್ ಸೂಚಿಸಿರುವುದು ಶ್ಲಾಘನೀಯ. ಈ ಪ್ರಕಾರವಾಗಿ ಇನ್ನು ಮುಂದೆ ಬೋಧನಾ ಶುಲ್ಕ ನಿರ್ಧರಿಸುವಾಗ ವೃತ್ತಿಪರ ಸಂಸ್ಥೆಯ ಸ್ಥಳ, ಕಾಲೇಜಿನ ಮೂಲಸೌಕರ್ಯಗಳ ವೆಚ್ಚ, ವೃತ್ತಿಪರ ಕೋರ್ಸ್ ನ ಸ್ವರೂಪ, ಆಡಳಿತ ಮತ್ತು ನಿರ್ವಹಣೆ ಖರ್ಚು, ಸಂಸ್ಥೆಯ ಪ್ರಗತಿ ಮತ್ತು ಕಾಲೇಜಿನ ಅಭಿವೃದ್ಧಿಗೆ ಹೆಚ್ಚುವರಿ ಹಣದ ಅಗತ್ಯತೆ, ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಮನ್ನಾ ಮಾಡುವ ವಿಧಾನದ ಅಳವಡಿಕೆ- ಈ ಎಲ್ಲಾ ಅಂಶಗಳನ್ನು ಪರಿಗಣಿಸುವುದು ಅವಶ್ಯ. ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಸಮಿತಿ (AFRC) ಇವನ್ನು ಕೂಲಂಕುಶವಾಗಿ ಪರಿಶೀಲಿಸಿ ಶುಲ್ಕ ನಿರ್ಧರಿಸಬೇಕು ಎಂದು ಕೋರ್ಟ್ ಸೂಚಿಸಿರುವುದು ನ್ಯಾಯೋಚಿತವಾಗಿದೆ.
ಪ್ರಸ್ತುತ ಕರ್ನಾಟಕದಲ್ಲೂ ಮೈನಾರಿಟಿ ಕಾಲೇಜುಗಳ ಸರಕಾರಿ ಕೋಟಾಗಳಲ್ಲಿ ಒಂದು ಮೆಡಿಕಲ್ ಸೀಟಿಗೆ ೧,೨೮,೭೪೬ ರೂ, ಡೆಂಟಲ್ ಸೀಟಿಗೆ ೮೩,೩೫೮ ರೂ. ಗಳಿವೆ. ಇದೇ ಖಾಸಗಿ ಕೋಟದಲ್ಲಿ ೧೦,೮೦,೧೫೨ ರೂ ( ಮೆಡಿಕಲ್) , ೭,೩೨,೬೨೫ ರೂ ( ಡೆಂಟಲ್) ಶುಲ್ಕಗಳಿವೆ. ಸರಕಾರಿ, ಖಾಸಗಿ ಸೀಟಿನ ಈ ಅಂತರ ಯಾರು ಎದೆಯನ್ನೂ ದಸಕ್ಕನೆ ಕುಸಿಯುವಷ್ಟು ವ್ಯಾಪಕವಾಗಿದೆ. ನಾನ್ ಮೈನಾರಿಟಿ ಕಾಲೇಜುಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಅಲ್ಲಿ ಸರ್ಕಾರಿ ಕೋಟಾದ ಮೆಡಿಕಲ್ ಸೀಟಿಗೆ ೧,೨೮,೭೪೬ ರೂ, ಡೆಂಟಲ್ ಗೆ ೮೩,೩೫೮ ರೂ ಗಳಿವೆ. ಅದೇ ಖಾಸಗಿ ಕೋಟದಲ್ಲಿ ಮೆಡಿಕಲ್ ಸೀಟಿಗೆ ೯,೮೧,೯೫೬ ರೂ ಹಾಗೂ ಡೆಂಟಲ್ ಗೆ ೬,೬೬,೦೨೩ ರೂ. ಗಳಿವೆ.
ಗಗನಕ್ಕೇರಿರುವ ಈ ದುಬಾರಿ ಶುಲ್ಕದ ಬಾಧೆ ತಾಳಲಾರೆದೆಯೇ ಎಷ್ಟೋ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾ, ಚೀನಾ, ಕಿರ್ಗಿಸ್ತಾನ್, ಫಿಲಿಫೈನ್ಸ್ ನತ್ತ ಮುಖ ಮಾಡುತ್ತಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ, ಗುಣಮಟ್ಟದ ಶಿಕ್ಷಣದ ಮೂಲಕ ಮೆಡಿಕಲ್ ಪದವಿ ಪೂರೈಸುವ ಈ ರಾಷ್ಟ್ರಗಳಿಗೆ ಪ್ರತಿವರ್ಷ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ತೆರಳುವ ದೌರ್ಭಾಗ್ಯ ಒದಗಿರುವುದು ಈ ರಾಷ್ಟ್ರದ ಶೈಕ್ಷಣಿಕ ಅವ್ಯವಸ್ಥೆಗೆ ಹಿಡಿದ ಕನ್ನಡಿ.
ಇಂದು ದುಬಾರಿ ಶುಲ್ಕ ಕಟ್ಟಿದ ವಿದ್ಯಾರ್ಥಿ, ಭವಿಷ್ಯದಲ್ಲಿ ತನ್ನ ವೃತ್ತಿಯನ್ನೇ ಹಣ ವಸೂಲಿಯ ದಂಧೆಯಾಗಿ ಪರಿವರ್ತಿಸಿಕೊಳ್ಳಲು ಯಾವ ಹಿಂಜರಿಕೆಯನ್ನೂ ಇಟ್ಟುಕೊಳ್ಳುವುದಿಲ್ಲ. ಪ್ರಸ್ತುತ ಓಡುತ್ತಿರುವ ಅವ್ಯವಸ್ಥೆಯ ಬಂಡಿ ಇದೇ ಮಾದರಿಯದ್ದೇ. ಕೇವಲ ಆಂಧ್ರಪ್ರದೇಶ ಸರಕಾರವಲ್ಲ, ಕರ್ನಾಟಕವೂ ಸೇರಿ ಎಲ್ಲ ರಾಜ್ಯಗಳು ದುಬಾರಿ ಬೋಧನಾ ಶುಲ್ಕ ಹೇರಿಕೆ ನೀತಿಯನ್ನು ಕೈಬಿಡಬೇಕಾಗಿದೆ. ಆರೋಗ್ಯ ಮೂಲಭೂತ ಹಕ್ಕು. ಆ ಹಕ್ಕು ದಕ್ಕಿಸಿಕೊಳ್ಳುವ ಮಾರ್ಗವನ್ನೇ ದುಬಾರಿ ಮಾಡುವುದು ಸಮಂಜಸವಲ್ಲ. ಮೆಡಿಕಲ್ ಶಿಕ್ಷಣ ಧನವಂತ ವಿದ್ಯಾರ್ಥಿಗಳ ಸ್ವತ್ತಾಗದೆ, ಬಡ- ಮಧ್ಯಮ ವರ್ಗದ ಪ್ರತಿಭಾವಂತ ಆಕಾಂಕ್ಷಿಗಳ ಕೈಗೂ ಎಟಕುವಂತೆ ಆಗಲಿ. ಆಡಳಿತ ವ್ಯವಸ್ಥೆ ಕಣ್ತೆರೆಯಲಿ..
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿನಾಂಕ:೦೯-೧೧-೨೦೨೨
ಚಿತ್ರಕೃಪೆ: ಇಂಟರ್ನೆಟ್ ತಾಣ