ವ್ಯಾಕರಣ ಮತ್ತು ಸತ್ವ ಯಾವುದು ಮುಖ್ಯ?

ವ್ಯಾಕರಣ ಮತ್ತು ಸತ್ವ ಯಾವುದು ಮುಖ್ಯ?

ಸಾಮಾಜಿಕ ಜಾಲತಾಣದ ಬಂಧು ಮಿತ್ರ ಹಿತೈಷಿ ವಿದ್ವಜ್ಜನರಲ್ಲಿ ಐದಾರು ದಿವಸ ಹಿಂದೆ "ಗದ್ಯವಿರಲಿ ಪದ್ಯವಿರಲಿ, ಇಲ್ಲಿ ವ್ಯಾಕರಣ ಮುಖ್ಯವೋ? ಸತ್ವ (ತಿರುಳು)ಮುಖ್ಯವೋ?" ಎಂಬ ಪ್ರಶ್ನೆಯನ್ನು ಕೇಳಿದ್ದೆ ಮತ್ತು ಉತ್ತರಿಸುವಂತೆಯೂ ಪ್ರಾರ್ಥಿಸಿದ್ದೆ. ನನ್ನ ಪ್ರಶ್ನೆಗೆ ಹಲವು ಲೇಖಕ, ವಾಚಕ, ಬಂಧು, ಭಗಿನಿ, ಮಿತ್ರವರೇಣ್ಯರು ಮೆಚ್ಚಿ ಬಹೂತ್ತಮ ಅಭಿಪ್ರಾಯಗಳನ್ನು ಜಾಲತಾಣಗಳಲ್ಲಿ ಉತ್ತರವಾಗಿ ಕೊಟ್ಟಿದ್ದಾರೆ. ಇದು ನನಗೆ ಬಹಳ ಸಂತೋಷವನ್ನು ತಂದಿದೆ. ಅವರೆಲ್ಲರಿಗೂ  ನಾನು ಹೃತ್ಪೂರ್ವಕ ಅಭಿವಾದನವನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರ ಅಭಿಪ್ರಾಯ ಸಿಕ್ಕಿದ ನಂತರ ನಾನು ನನ್ನ ಅಭಿಮತವನ್ನು ಬರೆಯುತ್ತೇನೆಂಬುದಾಗಿಯೂ ಹೇಳಿದ್ದೆ.ಆ ಪ್ರಕಾರ  ನನ್ನ ಇತಿಮಿತಿಯೊಳಗೆ ಕೈಲಾದಂತೆ ಬರೆಯುವೆನು.

"ವಾಗರ್ಥಾವಿವ  ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ"    

"ಯೇನಾಕ್ಷರ ಸಮಾಮ್ನಾಯಾಂ ಅಧಿಗಮ್ಯ ಮಹೇಶ್ವರಾತ್

ಕೃತ್ಸ್ನಂ ವ್ಯಾಕರಣಂ ಪ್ರೋಕ್ತಂ ತಸ್ಮೈ ಪಾಣಿನಯೇ ನಮಃ"

ಅಂದರೆ ಈ ಪ್ರಪಂಚದ ಮೃಗ ಖಗೋರಗ ಸೂಕ್ಷ್ಮ ಜೀವಿಗಳ ಪೈಕಿ ಕೇವಲ ಮನುಷ್ಯನಿಗಷ್ಟೇ ಭಗವಂತನು ವಾಕ್ಶಕ್ತಿಯನ್ನು ಕರುಣಿಸಿದ್ದಾನೆ. ಭುವನಾದ್ಯಂತ ಭೌಗೋಲಿಕ ಬೇಧಾನುಸಾರ  ವರ್ಣಾಕಾರ ಗುಣ ಸ್ವಭಾವಗಳಲ್ಲಿ ವೈವಿಧ್ಯತೆಯಿರುವ ಮನುಜರು ಕೋಟ್ಯಂತರ ವರ್ಷಗಳಿಂದ ಜನನ ಮರಣಗಳೆಂಬ  ನೈಸರ್ಗಿಕ ಕ್ರಿಯಾಚಕ್ರಕ್ಕೊಳಗಾಗುತ್ತ ತನ್ಮಧ್ಯಾವಧಿಯಲ್ಲಿ ಲಿಂಗ ವಯಸ್ಸು ವೃತ್ತಿಗಳ ದೇಶ ಕಾಲ ಪಾತ್ರಾನುಸಾರ ಸಾಂಸಾರಿಕ ಜೀವನವನ್ನು ಪರಂಪರಾಗತವಾಗಿ ನಡೆಸುತ್ತ ಬಂದವರಾಗಿರುತ್ತಾರೆ. ಇದುವೇ ಮನುಕುಲದ ಪ್ರಾದುರ್ಭಾವವು. ಕಾಲಾಂತರದಲ್ಲಿ ಜಗತ್ಪಿತನಾದ ಮಹೇಶ್ವರನಿಂದ ಮನುಷ್ಯನ ಜೀವನದ ಶ್ರೇಯಸ್ಸಿಗೆ ಅನುಕೂಲವಾಗಲೆಂದು ಅ ಕಾರದಿಂದ ಹ ಕಾರದವರೆಗಿನ ಅಕ್ಷರಮಾಲೆಯು(ಸಂಜ್ಞಾರೂಪದಲ್ಲಿ) ಲೋಕಕ್ಕೆ ಕೊಡಲ್ಪಟ್ಟಿತು.ವಾಕ್ಯಾರ್ಥವನ್ನು( ಅಕ್ಷರ ಮತ್ತು ಶಬ್ದಗಳ ಅನ್ಯೋನ್ಯ ಸಂಬಂಧೋತ್ತರ ಆಗುವ ವಾಕ್ಯಗಳ ಅರ್ಥ ಜ್ಞಾನವನ್ನು ಪಡೆಯಲು) ಆಳವಾಗಿ ತಿಳಿಯಲೋಸುಗ (ಭಾಷಾ ಜ್ಞಾನ ಪ್ರಾಪ್ತಿಗಾಗಿ) ಜಗನ್ನಿಯಾಮಕರಾದ ಪಾರ್ವತೀ ಪರಮೇಶ್ವರರನ್ನು ವಂದಿಸುತ್ತೇನೆ...(ಈ ಶ್ಲೋಕವನ್ನು ಮಹಾಕವಿಯೋರ್ವರು ಹೇಳಿದ್ದಂತೆ) ಹೀಗೆ ತಮ್ಮ ತಪಶ್ಶಕ್ತಿಯಿಂದ ಪರಮಾತ್ಮನಿಂದ ಪ್ರಾಪ್ತಿಸಿಕೊಂಡ ಅಕ್ಷರ ಸಂಜ್ಞೆಗಳಿಂದ ಋಷಿ ಮುನಿಗಳ ಅವಿರತ ಶ್ರಮ ಸಾಧನೆಯ ಫಲವಾಗಿ  ಹುಟ್ಟಿದ ನಾಮಪದ  ಹಾಗೂ ಕ್ರಿಯಾಪದಗಳ ಯಥಾಯೋಗ್ಯ ಎರಕದಿಂದ ವಾಕ್ಯಗಳ ಉದ್ಭವವಾಯಿತು. ಮುಂದೆ ಮನುಷ್ಯನು ಪರಸ್ಪರ ಮಾತುಕತೆಯಾಡುವಲ್ಲಿ ಮತ್ತು ಭಗವಂತನನ್ನು ಸ್ತುತಿಸುವಲ್ಲಿ(ರಾಗ ಸಹಿತ ಹಾಡುವುದು ಕೂಡಾ) ಮತ್ತು ಕಾಲಕ್ರಮೇಣ ಲಿಪಿಯನ್ನು ಶೋಧಿಸಿ ಬರಹಗಳ ಮೂಲಕ ಸಂವಹಿಸುವಲ್ಲಿ ವಾಕ್ಯಗಳು ಧಾರಾಳವಾಗಿ ಉಪಯೋಗಿಸಲ್ಪಟ್ಟವು. ಪದ, ಶಬ್ದ ವಾಕ್ಯಗಳನ್ನು ಬಳಸುವಾಗ ಅತ್ಯುಚ್ಛ ಪರಿಶುದ್ಧತೆಯನ್ನು  ಉಳಿಸಿಕೊಳ್ಳಲು ಸಂಶೋಧನೆಯ ಮೂಲಕ ಸತ್ಯತೆಯನ್ನು ಪ್ರಮಾಣೀಕರಿಸುವ ವ್ಯಾಕರಣ ಶಾಸ್ತ್ರದ ಉದ್ಭವವಾಯಿತು. (ಮಹರ್ಷಿಗಳಾದ ಪಾಣಿನಿ, ಪತಂಜಲಿ ಹಾಗೂ ವರರುಚಿಯವರಿಂದ) ಯಾವಾಗ ಭಾಷೆಯ ಪಂಚಾಗವಾದ ವ್ಯಾಕರಣಶಾಸ್ತ್ರವು ಗುರುಗಳಿಂದ ಶಿಷ್ಯರಿಗೆ ನಿರ್ಮಲ ಹೃದಯದಿಂದ ಬೋಧಿಸಲ್ಪಡಲಾರಂಭಿಸಿತೋ ಈ ಸತ್ಸಂಪ್ರದಾಯವು ಮುಂದೆ  ಮನುಕುಲದ ಸುಸಂಸ್ಕೃತ ಕುಟುಂಬ ಜೀವನೋಚ್ಛ್ರಾಯಕ್ಕಿರುವ ಭಾಷೆಯ ಸದ್ವಿಕಾಸಕ್ಕೂ ಮನುಷ್ಯನ ಬುದ್ಧಿ ವಿಕಾಸಕ್ಕೂ (ಸ್ಥಿರವಾದ ಅವಿನಾಶೀ ಆತ್ಮನ ಕುರಿತಾಗಿ ವಿಭಿನ್ನವಾಗಿ ಚಿಂತಿಸುವ ಯೋಚಿಸುವ ವಿಶಿಷ್ಟ ಗುಣವೇ ವಿವೇಕವು)ಬಹು ಸಹಕಾರಿಯಾಯಿತು. ಇದುವೇ ಪ್ರಪಂಚದ ವಿದ್ಯೆಯಲ್ಲಿ ಅತೀ ಶ್ರೇಷ್ಟವಾದ ಅಧ್ಯಾತ್ಮ ವಿದ್ಯೆಯ ವಿಕಾಸಕ್ಕೂ ತದುತ್ತರ ಸಾರ ಸತ್ವಯುತ ಗದ್ಯ ಪದ್ಯಾದಿ ಸಾಹಿತ್ಯ ಗ್ರಂಥಗಳ ಲೇಖನಕ್ಕೂ ಕಾರಣವಾಯಿತು. ಇದುವೇ ಲೋಕಾದ್ಯಂತ ಸನಾತನ ಧರ್ಮಾಚರಣೆಯ ಮಹತ್ವವನ್ನು ಸಾರುವಲ್ಲಿ ಅನನ್ಯ ಪಾತ್ರವನ್ನು ವಹಿಸಿತು. (ಅಂದರೆ ಮಂತ್ರ ದ್ರಷ್ಟಾರ ಮಹರ್ಷಿಗಳು ತಮ್ಮ ನಿಯಮ ನಿಷ್ಠೆ ತಪೋಬಲದ ಮುಖೇನ ಅರ್ಜಿಸಿದ ಯಥಾರ್ಥ ಸತ್ಯ ಜ್ಞಾನಯುತವಾದ ವೇದ ವೇದಾಂಗ ಶಾಸ್ತ್ರಗಳ ಅಡಿಪಾಯವುಳ್ಳ ಧರ್ಮವು ಸನಾತನ ಧರ್ಮವೆಂದರ್ಥ) ಲೋಕದಲ್ಲಿ  ಜನಜೀವನಾವಶ್ಯಕವಾದ ಕರ್ಮದ ಪರಿಶುದ್ಧತೆ (ತಪ್ಪು ಒಪ್ಪುಗಳನ್ನು ನಿರ್ಣೈಸುವಲ್ಲಿ)ಯನ್ನು ಉಳಿಸಿಕೊಳ್ಳುವಲ್ಲಿ ಜ್ಞಾನದ ಪಾತ್ರವು ಮಹತ್ತರವು. ಈ ಜ್ಞಾನ(ತಿಳಿವು)ವನ್ನು ಮನುಷ್ಯರಿಗೆ ಬೋಧಿಸುವಲ್ಲಿ ಸ್ಪಷ್ಟ ಶಬ್ದೋಚ್ಚಾರ ಸಹಿತ ಭಾಷೆಯ ಪರಿಶುದ್ಧ ಪವಿತ್ರ ಜ್ಞಾನವುಳ್ಳ ಉಪಾಧ್ಯಾಯರುಗಳ (ಗುರುಗಳ) ಪಾತ್ರವು ಅಮೋಘವು. ಈ ಕಾರಣದಿಂದಲೇ ಮಾತಾಪಿತರಿಗೆ ಮಕ್ಕಳು ಕೊಡುವ ಪೂಜ್ಯ ಸ್ಥಾನವನ್ನು   ಸತ್ಪ್ರಜೆಗಳುಳ್ಳ ರಾಷ್ಟ್ರದಲ್ಲಿ ಅಧ್ಯಾಪಕರು ಸಹಜವಾಗಿಯೇ ಅಲಂಕರಿಸಿದ್ದಾರೆ. ಈ ದೃಷ್ಟಿಯಲ್ಲಿ ಅವರು ಜಗದ್ವಂದನಾರ್ಹರು. ಆದುದರಿಂದ ಈ ಪ್ರಪಂಚದಲ್ಲಿ ಮನುಷ್ಯರು ಆಡುವ ಬರೆಯುವ ಭಾಷೆ ಯಾವುದೇ ಇರಲಿ ಅದರ ಆಳವಾದ ಪರಿಜ್ಞಾನ ಪ್ರಾಪ್ತಿಗೆ ವ್ಯಾಕರಣ ಶಾಸ್ತ್ರಾಧ್ಯಯನವು ಅತ್ಯಗತ್ಯವೆಂಬುದು ಸುಸ್ಪಷ್ಟವಾದಂತಾಯಿತು. ಇದುವೇ ಸತ್ವಯುತ ಸಾಹಿತ್ಯ ರಚನೆಗೆ ಮೂಲಭೂತ ತಳಹದಿಯು. ಈ ಸಸತ್ವ ಸಾಹಿತ್ಯ ರಚನೆಯು ವ್ಯಾಕರಣ  ಜ್ಞಾನವುಳ್ಳ ಬರಹಗಾರರಿಗೆ ಕ್ರಮೇಣ ಸಿದ್ಧಿಸಿಯೇ ತೀರುತ್ತೆ.

ಜಗನ್ಮೋಹಕ ಮಾಧ್ಯಮೋದ್ಯಾನವನ್ನು ಶ್ರೇಷ್ಟ ಮಟ್ಟದ ಸಾರಯುತ ಬರಹಗಳೆಂಬ ಫಲ ಪುಷ್ಪಭರಿತ ತರುಲತೆಗಳಿಂದ ಅಲಂಕರಿಸಲು ವಾಚಕ ಸನ್ಮಿತ್ರ ಬಂಧು ಹಿತೈಷಿ ಭಗಿನಿಯರುಳ್ಳ ಸಾಮಾಜಿಕ ಜಾಲತಾಣಗಳ ಬರಹಗಾರರಿಂದ ಸಾಧ್ಯವಾಗದೇ ಎಂಬ ಉತ್ಕಟೇಚ್ಛೆಯ ಪ್ರಶ್ನೆಯು ಮನಸ್ಸಿನಲ್ಲಿ ಉದಿಸಿದುದರಿಂದ ಇಷ್ಟೆಲ್ಲ ಬರೆದೆ. ಬರಹದೋಷಗಳಿದ್ದಲ್ಲಿ ಕ್ಷಮಿಸಬೇಕೆಂದು ಸರ್ವರಲ್ಲೂ ಪ್ರಾರ್ಥಿಸುವೆನು.

-ಎಸ್.ಕೆ.ಸದಾಶಿವ ಭಟ್ಟ, ಶೇಡಿಗುಮ್ಮೆ , ಕುಂಬಳೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ