ಶಂಕರಾನಂದ ಹೆಬ್ಬಾಳರ ಮೂರು ಗಝಲ್ ಗಳು

ಶಂಕರಾನಂದ ಹೆಬ್ಬಾಳರ ಮೂರು ಗಝಲ್ ಗಳು

ಕವನ

ಗಝಲ್ ೧

ಒಳಗಿನ ಪ್ರೀತಿ ಹೇಳಾಕ ಕಾಯಕ ಹತ್ತಾಳ

ಇಲಕಲ್ಲ ಸೀರಿಯುಟ್ಟು|

ಅರಷಿಣ ಹಚ್ಕೊಂಡ ನಾಚ್ಕೊಂಡಾಳ

ಮೂಗಿನಮ್ಯಾಲೆ ನತ್ತಯಿಟ್ಟು||

 

ಹೊಳದಾವು ಜೋಡಿ ಮೀನಂಗ ನಿನ್ನ

ಕಣ್ಣ ಫಳಪಳ ಅಂತ|

ಮಧುಮಗಳಂಗ ಸಿಂಗಾರ ಮಾಡ್ಕೊಂಡ

ನಿಂತಾಳ ಕುಂಕುಮ ಹಣ್ಯಾಗಿಟ್ಟು||

 

ಗೆಳೆಯ ಬರತಾನಂತ ಬಾಗಲದಾಗ

ಬರುದಾರಿಯೊಳಗ ಅಡ್ಡ ನಿಲ್ಲಬ್ಯಾಡ|

ಮನಸ ಕದ್ದ ಚೆಲುವಾ ಬರೋ ಹಾದಿ

ನೋಡಕೊಂತ ಮೊಗದಾಗ ನಗುವಿಟ್ಟು||

 

ಹೊಸ ಹುಮ್ಮಸ್ಸಿನ್ಯಾಗ ಅಪ್ಪಿಕೊಂಡು

ನೆನೆಸಿ ನೆಲಗಡ್ಲಿಯಾಗಿನಿ ಕೇಳು|

ಹಸಿಮಣಿಮ್ಯಾಲೆ  ನವವಧುವಿನಂಗ

ಸಿಂಗಾರಾಗಿ ಹಸರ ಬಳಿತೊಟ್ಟು||

 

ಗುಳೇದಗುಡ್ಡದ ಕುಬಸ ತೊಟಗೊಂಡು

ತುಟಿಕಚ್ಚಿ ಕರಿಯಾಕ ಹತ್ತಿನಿ |

ಉಸಿರ ಇರೋತನಕ ಅಭಿನವನ

ಹೃದಯದೊಳಗೆ ಇರತಾಳ ಮನಸ್ಸಿಟ್ಟು||

*****

ಗಝಲ್ ೨

ಗುರುವ ಎದೆಗೆ ತುಳಿದು ಸುಖವ 

ಪಡುವೆಯಲ್ಲ ನೀನು|

ಹರನ ನೆನೆವ ಬಾಯಲಿ ಹೊಲಸು

ನುಡಿವೆಯಲ್ಲ ನೀನು||

 

ಪೊಗಳಿ ಪೇಳುತ ವಚನವ ಕೊಟ್ಟು

ಕಾಣದೆ ಹೋಗುವೆ |

ತೆಗಳಿ ನಡೆವ ಲೋಗರ ನಡುವೆಯೆ

ಮಡಿವೆಯಲ್ಲ ನೀನು||

 

ಪದವ ಕಲಿಸಿ ನಿಂತಿಹ ಹಿರಿಯರ

ಮಾನವನು ಕಳೆದಿರುವೆ|

ಕುದಿದ ಮನದಿ ಉಪ್ಪನು ಹಾಕುತ

ನಲಿವೆಯಲ್ಲ ನೀನು||

 

ಅಣಕಿಸಿ ಬಾಳುತ ಮೊಗಕೆ ಬಣ್ಣಹಚ್ಚಿ

ನಾಟಕವಾಡಿದ ನರ್ತಕ|

ಚಣದ ಆಷಾಢ ಭೂತಿಯಾಗಿ ಸೋಗನು

ಹಾಕುವೆಯಲ್ಲ ನೀನು||

 

ಲೋಕದ ನಿಯಮ ಸಾರುತ ಹೇಳಿಹುದು

ಅಭಿನವನ ಕವಿತೆಯದು|

ನಾಕವ ಅರಸಿ ಹೊರಡುತ್ತ ಸತ್ಯವನು

ಸುಡುವೆಯಲ್ಲ ನೀನು||

*****

ಗಝಲ್ ೩

ಕಲಿಯುವ ಸಮಯದಿ ಪ್ರೀತಿಯು

ಸೆಳೆಯುತಿದೆ ಗೆಳೆಯ|

ನಲಿಯುವ ವಯಸಲಿ ಅಕ್ಷರವು

ಮರೆಯುತಿದೆ ಗೆಳೆಯ||

 

ಶರವೇಗದ ಜ್ಞಾನವಿಂದು ಮಸ್ತಕದಿ

ನೆಲೆಯನ್ನು ಅರಸಿದೆ|

ಗುರುವಿನ ಸನ್ಮಾರ್ಗದಲಿ ಸದ್ಗುಣ

ಬೆಳೆಯುತಿದೆ ಗೆಳೆಯ||

 

ಸಹಜ ಕಾಮನೆಗಳ ದೂರವಿರಿಸಿ

ಗುರಿಯನ್ನು ಸಾಧಿಸು|

ಬಹಳ ಸಮಯವಿರದೆ ನಿದ್ರೆಯು

ಎಳೆಯುತಿದೆ ಗೆಳೆಯ||

 

ತರುಣಿಯ ಒಲವ ನುಡಿಗಿಂದು

ಮರುಳಾಗಬೇಡ ಮೂರ್ಖ|

ದೊರೆಯಂತೆ ಮೆರೆಯುವ ಅವಕಾಶ

ಕರೆಯುತಿದೆ ಗೆಳೆಯ||

 

ಮನಸಿಗೆ ಮುದನೀಡುವ ಅಭಿನವನ

ಕವಿತೆಯನು ಆಲಿಸು|

ಕನಸು ನನಸಾಗಿ ಹೃದಯದಿ ಜ್ಞಾಪಕ

ಉಳಿಯುತಿದೆ ಗೆಳೆಯ||

-ಶಂಕರಾನಂದ ಹೆಬ್ಬಾಳ 

 

ಚಿತ್ರ್