ಶಾಮು ಮತ್ತು ಸೋಮು

ಶಾಮು ಮತ್ತು ಸೋಮು

ಶಾಮು ಮತ್ತು ಸೋಮು ಬುದ್ಧಿವಂತ ಸೋದರರು. ಆದರೆ ಶಾಮು ಸ್ವಾರ್ಥಿ. ತನ್ನ ಬುದ್ಧಿವಂತಿಕೆಯನ್ನು ತನ್ನ ಲಾಭಕ್ಕಾಗಿಯೇ ಬಳಸುತ್ತಿದ್ದ. ಅವನು ಹಲವು ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನಗಳನ್ನು ಪಡೆದಿದ್ದ. ಸೋಮು ಪರೋಪಕಾರಿ. ತನ್ನ ಬುದ್ಧಿವಂತಿಕೆಯನ್ನು ಜನರ ಸಮಸ್ಯೆಗಳನ್ನು ಪರಿಹರಿಸಲು ಬಳಸುತ್ತಿದ್ದ. ಅದೊಂದು ದಿನ ಧಾರಾಕಾರ ಮಳೆ ಸುರಿದು, ಅವರ ಊರಿನಲ್ಲಿ ನೆರೆ ಬಂತು. ಶಾಮು ಎತ್ತರದ ಕಟ್ಟಡವೊಂದನ್ನು ಹತ್ತಿ ಅಲ್ಲೇ ಉಳಿದ.

ಸೋಮುವನ್ನು ಕರೆಯುತ್ತಾ ಶಾಮು ಹೇಳಿದ, “ಸೋಮು, ಬೇಗ ಈ ಕಟ್ಟಡಕ್ಕೆ ಬಾ. ಇಲ್ಲಿ ನೀನು ಕ್ಷೇಮವಾಗಿ ಇರಬಹುದು.”
ಶಾಮುವಿನ ಕರೆಗೆ ಸೋಮು ಓಗೊಡಲಿಲ್ಲ. ಬದಲಾಗಿ, “ನಾನು ಕಟ್ಟಡಕ್ಕೆ ಬರೋದಿಲ್ಲ. ಜನರ ಪ್ರಾಣ ಉಳಿಸುತ್ತೇನೆ” ಎಂದು ಜನರಿಗೆ ಸಹಾಯ ಮಾಡಲು ಹೋದ ಸೋಮು. ಅವನಿಗೆ ನೆರೆಯಲ್ಲಿ ತೇಲುತ್ತ ಬಂದ ಮರದ ದೊಡ್ಡ ಕಾಂಡವೊಂದು ಸಿಕ್ಕಿತು. ಅದನ್ನು ದೋಣಿಯಂತೆ ಬಳಸಿದ ಸೋಮು, ಹಲವಾರು ಸ್ಥಳಗಳಿಗೆ ಹೋಗಿ, ಅಲ್ಲಿ ಸಿಕ್ಕಿಹಾಕಿ ಕೊಂಡಿದ್ದ ಜನರನ್ನು ನೆರೆಯಿಂದ ಪಾರು ಮಾಡಿದ. ಆ ಜನರಿಗೂ ಸೋಮುವಿಗೂ ಕೆಲವರು ಆಹಾರ ತಂದಿತ್ತರು. ಖಾಲಿ ಕಟ್ಟಡದ ತಾರಸಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಶಾಮುವಿಗೆ ಎರಡು ದಿನ ತಿನ್ನಲು ಏನೂ ಸಿಗದೆ ಕಂಗಾಲಾದ. ತಾನೊಬ್ಬನೇ ನೆರೆಯಿಂದ ಬಚಾವಾದರೆ ಸಾಕೆಂದು ಯೋಚಿಸಿದ್ದಕ್ಕೆ ಈಗ ಶಾಮು ಪಶ್ಚಾತ್ತಾಪ ಪಟ್ಟ. ಮರುದಿನ ಸೋಮು ಆ ಕಟ್ಟಡಕ್ಕೆ ಬಂದು ಶಾಮುವನ್ನು ರಕ್ಷಿಸಿದ. ಇನ್ನು ಮುಂದೆ ತಾನೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕೆಂದು ಶಾಮು ನಿರ್ಧರಿಸಿದ.