ಶಾಸ್ತ್ರೀಜಿಯವರನ್ನು ನೆನೆಯೋಣ, ನಮಿಸೋಣ

ಶಾಸ್ತ್ರೀಜಿಯವರನ್ನು ನೆನೆಯೋಣ, ನಮಿಸೋಣ

ನಮ್ಮ ದೇಶ ಭಾರತ ಬಹಳ ವಿಶಾಲವಾದ್ದು ಮತ್ತು ವಿಶಿಷ್ಟವಾದ್ದು. ಇಂದು (ಜನವರಿ ೧೧) ಭಾರತದ ಸ್ವಾತಂತ್ರ್ಯಾ ನಂತರದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯ ತಿಥಿ. ‌ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ, ದೇಶದ ಆಗುಹೋಗುಗಳ ಪರಿಚಯವಿದ್ದ, ಸರಳತೆಯ ಸಾಕಾರ ಮೂರ್ತಿ ಶಾಸ್ತ್ರೀಜಿಯವರನ್ನು ದೇಶದ ಜನತೆ ಪ್ರಧಾನಿಯಾಗಿ ಆರಿಸಿತು. ಪ್ರಾಮಾಣಿಕತೆ, ಸತ್ಯ ಸಂಧತೆ, ನಿಷ್ಠೆ, ಅಹಂ ಇಲ್ಲದಿರುವಿಕೆ, ತನಗಾಗಿ ಏನನ್ನೂ ಮಾಡದ ಓರ್ವ ಸಜ್ಜನರು ಇವರು. ಇವರೇನೂ ಶ್ರೀಮಂತಿಕೆಯ ಹಿನ್ನೆಲೆ ಇದ್ದವರಲ್ಲ. ಬಹಳಷ್ಟು ಆರ್ಥಿಕ ಸಮಸ್ಯೆಗಳು, ಇನ್ನಿತರ ತೊಂದರೆಗಳನ್ನು ದೇಶ ಎದುರಿಸುತ್ತಿದ್ದ ಸಮಯ ಅದಾಗಿತ್ತು. ಬರಗಾಲ ತಾಂಡವವಾಡುತ್ತಿತ್ತು. ನೆಹರೂಜಿಯವರ ಹಿಂದಿ ಭಾಷಾ ಹೇರಿಕೆಯ ಚಳುವಳಿ ಒಂದೆಡೆ, ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿತ್ತು. ಇನ್ನೊಂದೆಡೆ ಪಾಕಿಸ್ತಾನದ ಆಕ್ರಮಣ. ಶಾಸ್ತ್ರೀಜಿಯವರ ದಕ್ಷ ಹಾಗೂ ಪ್ರಾಮಾಣಿಕ ಮುತ್ಸದ್ದಿತನದಲ್ಲಿ ಎಲ್ಲವೂ ನಿಭಾಯಿಸಲ್ಪಟ್ಟಿತು.

ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದರು. ಯುದ್ಧದಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿತು. ಯುದ್ಧದ ಸಮಯದಲ್ಲಿ ಅವರು ಕರೆಕೊಟ್ಟ ಘೋಷವಾಕ್ಯ ‘ಜಯ್ ಜವಾನ್, ಜಯ್ ಕಿಸಾನ್’ ಈಗಲೂ ಸೈನಿಕರ, ರೈತಾಪಿ ಜನರ, ನಮ್ಮ ಮಕ್ಕಳ, ನಮ್ಮಗಳೆಲ್ಲರ ಮನದಲ್ಲಿ ಇದೆ.

ರಷ್ಯಾ ದೇಶದಲ್ಲಿ ೧೦--೦೧--೧೯೬೬ರಂದು ಶಾಂತಿ ಒಪ್ಪಂದಕ್ಕೆ ಸಹಿ ಮಾಡಲೆಂದು ಪಾಕಿಸ್ತಾನ ಮತ್ತು ಭಾರತದ ನಾಯಕರುಗಳು ಸೇರಿದರು. ಸಹಿ ಹಾಕಿದ ರಾತ್ರಿಯೇ ಶಾಸ್ತ್ರೀಜಿಯವರು ‘ಹೃದಯಾಘಾತ’ ದಿಂದ ಅಸು ನೀಗಿದರೆಂದು ಪತ್ರಿಕೆಗಳಲ್ಲಿ,ಕೆಲವು ಸುದ್ಧಿ ಮಾಧ್ಯಮಗಳಲ್ಲಿ ಓದಿದೆವು, ಕೇಳಿದೆವು. ನಿಜವಾದ ಕಾರಣ ಹೊರಬರಲೇ ಇಲ್ಲ. ಸರಳತೆಯ ಸಾಕಾರ ಮೂರ್ತಿಯಾಗಿದ್ದ ಶಾಸ್ತ್ರೀಜಿಯವರನ್ನು ನಾವು ಕಳೆದುಕೊಂಡೆವು.

ಅವರು ತಮ್ಮ ಜೀವನದಲ್ಲಿ ತಮ್ಮ ಮಗನಿಗೆ ಶಿಫಾರಸು ಮಾಡಬೇಕೆಂದು ಹೇಳಿದಾಗ ಅವರು ಹೇಳಿದ ಮಾತು ‘ಅರ್ಹತೆ ಮತ್ತು ಪ್ರತಿಭೆ ಇದ್ದರೆ ತಾನಾಗಿಯೇ ಉದ್ಯೋಗ ಸಿಗುತ್ತದೆ’  ಎಂಬುದಾಗಿ. ತಾವು ಮರಣಿಸಿದ ಕಾಲಕ್ಕೆ ಬ್ಯಾಂಕ್ ಲೋನ್ ಮಾಡಿ ಕಾರು ಖರೀದಿಸಿದ ( ತನ್ನ ಸ್ವಂತಕ್ಕೆ) ಕಂತುಗಳು ಬಾಕಿ ಇತ್ತು. ಶ್ರೀಯುತರಿಗೆ ಮರಣೋತ್ತರವಾಗಿ ೧೯೬೬ರಲ್ಲಿ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೈ ಜವಾನ್, ಜೈ ಕಿಸಾನ್ ರೂವಾರಿ, ಸರಳ, ಪ್ರಾಮಾಣಿಕತೆಯ ವ್ಯಕ್ತಿತ್ವ, ತಿಲಕರ ಹೋರಾಟದ ಕೆಚ್ಚು ಮೈಗೂಡಿಸಿಕೊಂಡ  ಮಹಾನ್ ಚೇತನ 'ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ’ಯವರನ್ನು ಒಂದು ಕ್ಷಣ ನಮ್ಮ ಮನದಾಳದ ನುಡಿಗಳಲ್ಲಿ ನೆನಪಿಸಿಕೊಳ್ಳೋಣ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ