ಶಿರಾಡಿ ಘಾಟ್

ಭಯಂಕರ ಹೆದರಿಕೆ ಹುಟ್ಟಿಸುವ ಕಥೆಗಳನ್ನು ಓದಬೇಕೆಂದು ಬಯಸುವವರಿಗಾಗಿಯೇ ಅನುಭವಿಸಿದವರ ಅನಿಸಿಕೆಗಳನ್ನು ಕೇಳಿ, ತಮ್ಮದೇ ಆದ ಕಲ್ಪನೆಯಲ್ಲಿ ಬರೆದಂತಹ ಕಥೆಗಳು ‘ಶಿರಾಡಿ ಘಾಟ್’ ನಲ್ಲಿವೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ತಮ್ಮ ಅನುಭವದಲ್ಲಿ ಕಂಡುಬಂದ ದೆವ್ವಗಳಿಗೆ ಒಂದಿಷ್ಟು ಕಥಾರೂಪ ಕೊಟ್ಟು ಬರೆದ ಕಥೆಗಳು ಭಯಂಕರವಾಗಿವೆ. ಹಗಲಿನಲ್ಲಿ ಓದುವಾಗ ಸರಾಗವಾಗಿಯೇ ಓದಿಸಿಕೊಂಡು ಹೋಗುವ ಈ ಕಥೆಗಳು ರಾತ್ರಿಯ ನೀರವತೆಯಲ್ಲಿ ಓದಿದಾಗ ಮಾತ್ರ ಸಕತ್ ಭಯ ಹುಟ್ಟಿಸುತ್ತವೆ. ಅದರಲ್ಲೂ ಜೋರಾದ ಮಳೆ, ಗಾಳಿ ಬರುವ ಸಮಯದಲ್ಲಿ ಓದಲು ಪ್ರಾರಂಭಿಸಿದರೆ ಮೊದಲ ಕಥೆ ಮುಗಿದು ಎರಡನೇ ಕಥೆ ಬರುವಾಗ ಮನಸ್ಸಿನಲ್ಲಿ ಅವ್ಯಕ್ತವಾದ ಭಯ ಇಣುಕಲು ಶುರುವಾಗುತ್ತದೆ. ನಂತರ ನಿಮ್ಮ ಕಿವಿಗೆ ಸಣ್ಣ ಸೂಜಿ ಬಿದ್ದ ಸದ್ದು ಕೇಳಿಸಿದರೂ ಮನಸ್ಸಿನಲ್ಲಿ ಬಾಂಬ್ ಬಿದ್ದಂತೆ ಹೆದರಿಕೆ ಹುಟ್ಟುತ್ತದೆ.
ರಮೇಶ್ ಶೆಟ್ಟಿಗಾರ್ ಅವರು ಭಯಪಡಿಸಲೇ ಬರೆದ ಕಥೆಗಳು ಎಂದು ತಮ್ಮ ಮಾತಿನಲ್ಲೇ ಒಪ್ಪಿಕೊಂಡಿದ್ದಾರೆ. ಅವರ ಪ್ರಕಾರ “ ನೀವು ಈ ಕಥೆಗಳನ್ನು ಓದಿ ಕಿಂಚಿತ್ತಾದರೂ ಬೆರಗಾದಿರಿ ಎಂದಾದರೆ ನಾನು ಬರೆದುದಕ್ಕೆ ಸಾರ್ಥಕವಾಯ್ತು. ಹಾರರ್, ಹಾಂಟೆಡ್, ಘೋಸ್ಟ್ ಕಥೆಗಳನ್ನು ಇಷ್ಟಪಟ್ಟು ಓದುವ ಬಲುದೊಡ್ಡ ಸಾಹಿತ್ಯಾಸಕ್ತ ಗುಂಪಿದೆ ಹಾಗೂ ಅಂತಹ ಕಥೆಗಳ ನಿರೀಕ್ಷೆಯಲ್ಲಿ ಹಲವು ಓದುಗರಿದ್ದಾರೆ ಎಂಬ ಅರಿವಿನಿಂದ ನಾನು ಈ ಕಥೆಗಳನ್ನು ಬರೆದೆ. ನನ್ನ ಮೊದಲ ಕಥಾಸಂಕಲನವಾದ, ೨೦೧೬ರಲ್ಲಿ ಲೋಕಾರ್ಪಣೆಯಾದ "ಅಪೂರ್ಣಸತ್ಯ" ಪುಸ್ತಕದಲ್ಲಿ ಜೀವನ ಮೌಲ್ಯಗಳ ಕೌತುಕಮಯವಾದ ಹನ್ನೆರಡು ಕಥೆಗಳನ್ನು ಬರೆದ ನಾನು, ದೆವ್ವ, ಭೂತ-ಪ್ರೇತಗಳನ್ನು ನಂಬದ ನಾನು. ಈ ಕೃತಿಯಲ್ಲಿ ವಿಭಿನ್ನವಾಗಿ ಹನ್ನೆರಡು ಹಾಂಟೆಡ್ ಕತೆಗಳನ್ನು ಬರೆಯಲು ಪ್ರೇರಣೆ ನನ್ನ ಮೊದಲ ಹಾರರ್ ಕಥೆ ಶಿರಾಡಿ ಘಾಟ್. ಈ ಕಥೆಯು ಹಿಂದೊಮ್ಮೆ ಯುಗಪುರುಷ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಪ್ರತಿಲಿಪಿಯಲ್ಲೂ ಈ ಕಥೆಗೆ ಓದುಗರನೇಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅದನ್ನು ಓದಿದ ನನ್ನೊಬ್ಬ ಈ-ಸಂಚಿಕೆಯ ಮಿತ್ರರು, "ಶಿರಾಡಿ ಘಾಟಿನಲ್ಲಿ ದೆವ್ವವಿದೆ" ಎಂಬ ಶೀರ್ಷಿಕೆ ಕೊಟ್ಟು ನಿಜಾನುಭವದ ಕಥೆಯೆಂದು ಬಿಂಬಿಸಿ ನನ್ನ ಮೊಬೈಲ್ ಸಂಖ್ಯೆಯ ಸಮೇತ ತಮ್ಮ ವಾಟ್ಸಾಪ್ ಗುಂಪಿನಲ್ಲಿ ಹರಿಬಿಟ್ಟರು. ಅಲ್ಲಿಂದ ಅದು ಲಕ್ಷಾಂತರ ಜನರಿಗೆ ವಾಟ್ಸಾಪ್ ಮೂಲಕ ವೈರಲ್ ಆಯಿತು. ಆ ಕಥೆಯ ನೈಜ ನಿರೂಪಣೆಯಿಂದ ಬಹುತೇಕರು ಅದೊಂದು ನಿಜವಾಗಿಯೂ ಸಂಭವಿಸಿದ ಘಟನೆಯೆಂದು ನಂಬಿದ್ದೇ ಅದಕ್ಕೆ ಕಾರಣ. ಹಾಗಾಗಿ ಸುಮಾರು ಒಂದು ತಿಂಗಳುಗಳ ಕಾಲ ನನಗೆ ನೂರಾರು ಕರೆಗಳು, ಮೆಚ್ಚುಗೆಗಳು, ವಾಟ್ಸಾಪ್ ಮೆಸ್ಸೇಜುಗಳು, ಬೆದರಿಕೆಗಳು, ಪ್ರಶ್ನೆಗಳು, ಆ ಸ್ಟಾಟ್ ಗೆ ಹೋಗಿ ಚೆಕ್ಕಿಂಗ್ಗಳು, ಅವರ ಬೇರೆ ಬೇರೆ ಹಾಂಟೆಡ್ ಅನುಭವಗಳು, ಕಥೆಗಳು ಹೀಗೆ ನನ್ನನ್ನು ವಿವಿಧ ರೀತಿಯಲ್ಲಿ ಕಾಡಿತು. ಜೊತೆಗೆ ನನಗೆ ಹಾರರ್ ಕಂಟೆಂಟ್ ಇರುವ ಕಥೆಗಳನ್ನು ಬರೆಯಲು ಹಲವರು ಉತ್ತೇಜನ ನೀಡಿದರು.
ಅದರ ಫಲಶ್ರುತಿಯೇ ೨೦೧೯ರಲ್ಲಿ ಬಿಡುಗಡೆಗೊಂಡ "ಹಾಂಟೆಡ್ ಹೊಸಮನೆ" ಎಂಬ ರೋಚಕ ಹಾರರ್- ಸಸ್ಪೆನ್ಸ್ ಕಾದಂಬರಿ. ತದನಂತರವೂ ನಾನು ಹಲವು ಹಾರರ್ ಕಥೆಗಳನ್ನು ಬರೆದೆ. ಇವುಗಳಲ್ಲಿ ಆ ಕರಾಳ ರಾತ್ರಿ (ಹಾಂಟೆಡ್ ಕಾಲ್ಸೆಂಟರ್ ಕಥೆ), ಅಕ್ಕತಂಗಿ ಬಂಗಲೆ (ತೆರ್ರಾವೆರ್ರಾ ಬಂಗಲೆ), ಏರ್ ಪೋರ್ಟಿನಲ್ಲಿ ಘೋಸ್ಟ್? ಹಾಗೂ ಈ ಸ್ಮಶಾನ ಮೌನವಲ್ಲ (ಕಲ್ಪಲ್ಲಿ ಸ್ಮಶಾನ) ಕಥೆಗಳು "ಹಾಂಟೆಡ್ ಪ್ಲೇಸಸ್ ಇನ್ ಬೆಂಗಳೂರು" ಎಂಬ ಶೀರ್ಷಿಕೆಯಡಿಯಲ್ಲಿ ಸಿಗುವ ಹಲವು ಇಂಟರ್ನೆಟ್ ಮಾಹಿತಿಗಳಿಂದ ಪ್ರೇರಿತವಾಗಿದೆ. ೧೯೯೦ರ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಜನರನ್ನು ಹೆದರಿಸಿದ "ನಾಳೆ ಬಾ" ಇದನ್ನಾಧರಿಸಿ "ಮತ್ತೆ ಮೋಹಿನಿ" ಕಥೆ ಬರೆದೆ. ನನ್ನ ಸ್ನೇಹಿತ ಹೇಳಿದಂತೆ ಸಿಂಗಾಪುರದಲ್ಲಿಯೂ ಹಾಂಟೆಡ್ ಕಥೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಒಂದನ್ನು ಆಧರಿಸಿ "ಹಾಂಟೆಡ್ ಜಾಕೆಟ್" ಬರೆದಿದ್ದೇನೆ. ವಿಶ್ವದ ಹಾಂಟೆಡ್ ಸ್ಥಳಗಳಲ್ಲಿ ಒಂದಾದ ಝನಾನ್ತುನಿಚ್ ಎಂಬಲ್ಲಿಯ ಮಾಹಿತಿಯನ್ನು ಇಟ್ಟುಕೊಂಡು ಬರೆದ ಕಥೆಯೇ “ಹಾಂಟೆಡ್ ಝನಾನ್ತುನಿಚ್". ಶಿರಾಡಿ ಘಾಟ್ ಕಥೆ ಓದಿ ಪ್ರೇರಣೆಗೊಂಡ ಒಬ್ಬರು ನನಗೆ ಕೊಳ್ಳಿ ದೆವ್ವದ ಕಥೆಯನ್ನು ಹೇಳಿದರು. ಇನ್ನುಳಿದ ಕತೆಗಳು ಹೀಗೆ ಹುಟ್ಟಿಕೊಂಡಿತು. ಇವುಗಳಲ್ಲಿ ಕೆಲವನ್ನು ಪ್ರತಿಲಿಪಿ ಹಾಗೂ ಫೇಸ್ಟುಕ್ ಇಲ್ಲಿ ಪ್ರಕಟಿಸಿದಾಗ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಇಲ್ಲಿರುವ ಹನ್ನೆರಡೂ ಕಥೆಗಳು ದೆವ್ವ-ಘೋಸ್ಟ್-ಹಾಂಟೆಡ್ ಆದರೂ ಅದರಲ್ಲಿ ಕೆಲವು ಕತೆಗಳನ್ನು ಓದಿದ ಕೊನೆಗೆ ನಿಮ್ಮ ಮುಖದಲ್ಲೊಂದು ನಗು ಮೂಡುವ ಸಾಧ್ಯತೆಯಿದೆ.
ಇಲ್ಲಿ ಬರುವ ಎಲ್ಲ ಕಥೆಗಳು ಕೇವಲ ಕಾಲ್ಪನಿಕವಾಗಿದೆ ಹಾಗೂ ಯಾವುದೇ ಸ್ಥಳ, ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಹಾರರ್ ಮೈನರ್ ಇಷ್ಟಪಡುವವರು ಈ ಕಥೆಗಳನ್ನು ಬಹುವಿಧವಾಗಿ ಮೆಚ್ಚಬಹುದೆಂಬ ನಂಬಿಕೆ ನನ್ನದು. ಹಾಗಾಗಿ ತಾವು ಈ ಕಥೆಗಳನ್ನು ಇಷ್ಟಪಡುತ್ತೀರಿ ಎಂದುಕೊಂಡಿದ್ದೇನೆ. ನಿಮ್ಮ ಅಮೂಲ್ಯ ಅನಿಸಿಕೆಗಳ ನಿರೀಕ್ಷೆಯಲ್ಲಿರುತ್ತೇನೆ.” ಎಂದಿದ್ದಾರೆ.
‘ಶಿರಾಡಿ ಘಾಟ್’ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ ‘ಹನೂಕಿಯಾ’ ಹಾಗೂ ‘ನಿಗೂಢ ನಾಣ್ಯ’ ಮೊದಲಾದ ಖ್ಯಾತ ಕಾದಂಬರಿಗಳ ಲೇಖಕ ವಿಠಲ್ ಶೆಣೈ. ಇವರು ತಮ್ಮ ಬೆನ್ನುಡಿಯಲ್ಲಿ “೨೦೧೯ರಲ್ಲಿ "ಶಿರಾಡಿ ಘಾಟ್ " ಎಂಬ ಸಣ್ಣಕಥೆ ಭಯಂಕರ ವೈರಲ್ ಆದಾಗ ನಾನು ಓದಿ ಬೆಚ್ಚಿ ಬೆರಗಾಗಿದ್ದ, ರಾತ್ರಿಯ ಹೊತ್ತು ಬಿಡಿ, ಹಗಲಲ್ಲೇ ಶಿರಾಡಿ ಘಾಟ್ ನಲ್ಲಿ ಪಯಣಿಸಲು ಭಯವಾಗುತಿತ್ತು. ಅದೇ ಧಾಟಿಯಲ್ಲೇ ಬರೆದ "ಅಂಧಕಾರದಲ್ಲೊಂದು ಪಯಣ" ಕಥೆ ನಾನು ಕಾರಿನಲ್ಲಿ ಒಬ್ಬನೇ ಇದ್ದಾಗ ಓದಿ ಆ ಕಥಾನಾಯಕ ನನ್ನ ಮೈಯಲ್ಲೇ ಬಂದ ಹಾಗೆ ಆಯಿತು. ಹೀಗೆ ಹನ್ನೆರಡು ಕಥೆಗಳು ಒಂದಕ್ಕೊಂದು ವಿಭಿನ್ನವಾಗಿ ಭಯಂಕರವಾಗಿದೆ.
ಸಾಮಾನ್ಯವಾಗಿ ಹಾರರ್ ಕಥೆಗಳಲ್ಲಿ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಆದರೆ ಈ ಕಥಾಸಂಕಲನದಲ್ಲಿ ಲೇಖಕರು ವೈವಿಧ್ಯದ ಜೊತೆಗೆ ಕೆಲವೆಡೆ ತಿಳಿಹಾಸ್ಯ ಸಿಂಪಡಿಸಿ, ಇನ್ನು ಕೆಲವು ಕಥೆಗಳಲ್ಲಿ ಹಾಂಟೆಡ್ ಸ್ಥಳಗಳ ಮಾಹಿತಿಗಳನ್ನು ನೀಡಿದ್ದಾರೆ. ಹಾರರ್ ಡಾರ್ಕ್ ಕಾಮಿಡಿ ಎಂಬ ಹೊಸ ಜಾನರ್ ಅನ್ನು ಕನ್ನಡಕ್ಕೆ ನೀಡುವ ಹಲವು ಕಥೆಗಳು ಇಲ್ಲಿವೆ. ಅಪೂರ್ಣ ಸತ್ಯ, ಮದನಿಕೆ, ಹಾಂಟೆಡ್ ಹೊಸಮನೆ ಹಾಗೂ ಎರಡನೇ ದೇವರು ಕೃತಿಗಳ ಮೂಲಕ ಈಗಾಗಲೇ ಕೌತುಕಮಯ ಕಥನ-ಕೃತಿಗಳನ್ನು ನೀಡಿದ ಶ್ರೀ ರಮೇಶ್ ಶೆಟ್ಟಿಗಾರರು "ಶಿರಾಡಿ ಘಾಟ್" ಕಥಾಸಂಕಲನದ ಮೂಲಕವೂ ಓದುಗರನ್ನು ಕಥೆಯೊಳಗೆ ಹಿಡಿದಿಟ್ಟುಕೊಂಡು ರೋಮಾಂಚನಗೊಳಿಸುವಲ್ಲಿ ಸಂದೇಹವಿಲ್ಲ.” ಎಂದು ಶುಭ ಹಾರೈಸಿದ್ದಾರೆ.
೧೨೫ ಪುಟಗಳ ಈ ಕಥಾ ಸಂಕಲನದಲ್ಲಿ ೧೨ ಕಥೆಗಳಿವೆ. ಲೇಖಕರು ಇಲ್ಲಿರುವ ಕಥೆಗಳು ಎಲ್ಲವೂ ಕಾಲ್ಪನಿಕ ಎಂದು ಹೇಳಿರುವುದು ನಿಜವಾದರೂ ಎಲ್ಲೋ ಒಂದು ಕಡೆ ದೆವ್ವ, ಭೂತಗಳ ವಿಷಯದಲ್ಲಿ ಅವರಿಗೆ ಒಂದಿಷ್ಟು ಸ್ವಂತ ಅನುಭವವಾಗಿರಬಹುದು ಎಂಬ ಭಾವನೆ ಮೂಡುತ್ತದೆ. ಏಕೆಂದರೆ ಕೆಲವೊಂದು ಕಥೆಗಳು ಅಷ್ಟೊಂದು ಸಹಜವಾಗಿವೆ. ಅಣ್ಣಚಾಮಿ ದೆವ್ವ, ಮತ್ತೆ ಮೋಹಿನಿ, ಕಿರುದಾರಿಯ ಕೊಳ್ಳಿ ದೆವ್ವ ಮೊದಲಾದ ಕಥೆಗಳು ಆ ಸಾಲಿಗೆ ಸೇರಿಸಬಹುದಾಗಿದೆ. ಕೇವಲ ಕಥೆಗಳನ್ನು ಓದಿಸಿ ಓದುಗನ ಮನದಲ್ಲಿ ದೆವ್ವ, ಭೂತಗಳ ಕಲ್ಪನೆಗಳನ್ನು ಮೂಡಿಸಿ ಹೆದರಿಕೆ ಹುಟ್ಟಿಸಬಹುದು ಎಂದು ರಮೇಶ್ ಶೆಟ್ಟಿಗಾರ್ ಈ ಸಂಕಲನದಲ್ಲಿ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ.