ಶಿವನ ಹನ್ನೆರಡು ಜ್ಯೋತಿರ್ಲಿಂಗವಿರುವ ಸ್ಥಳಗಳು ಎಲ್ಲೆಲ್ಲಿವೆ ?
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%9C%E0%B3%8D%E0%B2%AF%E0%B2%BF%E0%B2%A5%E0%B2%BF.jpg?itok=2kMf1pzv)
ಜ್ಯೋತಿರ್ಲಿಂಗ ಅಥವಾ ಜ್ಯೋತಿರ್ಲಿಂಗಂ, ಇದು ಸರ್ವೋತ್ತಮ ಶಿವನ ಭಕ್ತಿಯ ಪ್ರಾತಿನಿಧ್ಯವಾಗಿದೆ. ಜ್ಯೋತಿ ಎಂದರೆ 'ಕಾಂತಿ' ಮತ್ತು ಲಿಂಗ ಎಂದರೆ ಶಿವನ 'ಚಿತ್ರ ಅಥವಾ ಚಿಹ್ನೆ'. ಜ್ಯೋತಿರ್ ಲಿಂಗಂ ಎಂದರೆ ಸರ್ವಶಕ್ತ ಶಿವನ ಕಾಂತಿಯ ಚಿತ್ರ . ಭಾರತದಲ್ಲಿ ಒಟ್ಟು ಹನ್ನೆರಡು ಸಾಂಪ್ರದಾಯಿಕ ಜ್ಯೋತಿರ್ಲಿಂಗ ದೇವಾಲಯಗಳಿವೆ. ಶಿವನ 12 ಜ್ಯೋತಿರ್ಲಿಂಗಗಳು ದೇಶದ 12 ವಿವಿಧ ಸ್ಥಳಗಳಲ್ಲಿ ಇವೆ. ಈ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡುವುದರಿಂದ ಆ ಪರಮ ಶಿವನ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಹಾಗೂ ನಾವು ನಮ್ಮ ದೇಶವನ್ನು ಸುತ್ತುವ ಒಂದು ಸದಾವಕಾಶ ದೊರತಂತೆಯೂ ಆಗುತ್ತದೆ. ಅಷ್ಟೇ ಆಲ್ಲದೆ, ಹಿಂದೂ ಪುರಾಣ ಹೇಳುವ ಪ್ರಕಾರ ಜ್ಯೋತಿರ್ಲಿಂಗಗಳಿರುವ ಈ 12 ಸ್ಥಳಗಳಲ್ಲಿ ಶಿವನು ತನ್ನ ಭಕ್ತರಿಗೆ ವರವನ್ನು ನೀಡಲು ಅವತಾರವನ್ನು ಎತ್ತಿದ್ದಾನೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಜ್ಯೋತಿರ್ಲಿಂಗಗಳು ಎಲ್ಲೆಲ್ಲಿವೆ ಎನ್ನುವುದನ್ನು ನೋಡೋಣ.
1. ಸೋಮನಾಥ ದೇವಸ್ಥಾನ (ಗುಜರಾತ್) : ಮೊದಲ ಜ್ಯೋತಿರ್ಲಿಂಗವಾದ, ಸೋಮನಾಥ ದೇವಸ್ಥಾನವು ಗುಜರಾತ್ (ಸೌರಾಷ್ಟ್ರ) ಪ್ರಾಂತ್ಯದ ಕಥಿಯಾವರ್ ಪ್ರದೇಶದ ಪ್ರಭಾಸ ಪ್ರದೇಶದಲ್ಲಿದೆ. ಇನ್ನು ಇದೇ ಸ್ಥಳದಲ್ಲಿ ಯದುವಂಶಕ್ಕೆ ಕೊನೆಗಾಣಿಸಿದ ನಂತರ ಭಗವಾನ್ ಶ್ರೀ ಕೃಷ್ಣನು ಮೋಕ್ಷವನ್ನು ಪಡೆದಿದ್ದಾನೆ ಎಂದು ಹೇಳಲಾಗುತ್ತದೆ. ‘ಜರಾ’ ಎಂಬ ಬೇಟೆಗಾರ ಕೃಷ್ಣನ ಪಾದಗಳನ್ನು ಬಾಣಗಳಿಂದ ಚುಚ್ಚಿದ್ದು ಇದೇ ಸ್ಥಳದಲ್ಲಿ ಎನ್ನಲಾಗಿದೆ. ವೆರಾವಲ್ನಲ್ಲಿರುವ ಸೋಮನಾಥ ದೇವಾಲಯವನ್ನು ವಿಶ್ವದ ಅತ್ಯಂತ ಪೂಜ್ಯ ಮತ್ತು ಪ್ರಸಿದ್ದ ಶಿವ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಏಕೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದೇ ಮೊದಲನೆಯದು ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವಾರು ದಂತಕಥೆಗಳು ಮತ್ತು ಕಥೆಗಳಿದ್ದು ಅವುಗಳಲ್ಲಿ ಒಂದು ಚಂದ್ರ (ಸೋಮ್) ದೇವನ ಕಥೆ. ಒಮ್ಮೆ ಚಂದ್ರನು ಒಂದು ಶಾಪದಿಂದಾಗಿ ತನ್ನ ಹೊಳಪು ಮತ್ತು ಕಾಂತಿಯನ್ನು ಕಳೆದುಕೊಂಡಿರುತ್ತಾನೆ . ಶಾಪದಿಂದ ಮುಕ್ತಿ ಪಡೆಯಲು, ಚಂದ್ರ ದೇವನು ಇಲ್ಲಿ ಸ್ನಾನ ಮಾಡಿ ತನ್ನ ಹೊಳಪನ್ನು ಮರಳಿ ಪಡೆದನು. ಅಂದಿನಿಂದ, ಇಲ್ಲಿನ ಜ್ಯೋತಿರ್ಲಿಂಗವನ್ನು ಸೋಮನಾಥ ಎಂದು ಕರೆಯಲಾಗುತ್ತದೆ, ಇದರರ್ಥ ‘ಚಂದ್ರನ ಅಧಿಪತಿ’ ಎಂದು.
2. ಮಲ್ಲಿಕಾರ್ಜುನ (ಆಂಧ್ರಪ್ರದೇಶ) : ಆಂಧ್ರಪ್ರದೇಶ ಜಿಲ್ಲೆಯ ಕೃಷ್ಣ ನದಿಯ ದಡದಲ್ಲಿರುವ ಶ್ರೀಶೈಲ ಪರ್ವತದ ತುದಿಯಲ್ಲಿ ನೆಲೆಸಿದ್ದಾರೆ ಶ್ರೀ ಮಲ್ಲಿಕಾರ್ಜುನ. ಇಲ್ಲಿನ ಜನರು ಈ ಸ್ಥಳವನ್ನು ದಕ್ಷಿಣದ ಕೈಲಾಸ ಎಂದೂ ಕರೆಯುತ್ತಾರೆ. ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನ ಈ ಸಾಲಿನಲ್ಲಿ ಎರಡನೆಯ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ಜ್ಯೋತಿರ್ಲಿಂಗಕ್ಕೆ ಮಲ್ಲಿಕಾರ್ಜುನ ಸ್ವಾಮಿಯ ಹೆಸರಿಡಲಾಗಿದೆ. ದಂತಕಥೆಯ ಪ್ರಕಾರ, ಶಿವ ಮತ್ತು ಪಾರ್ವತಿ ತಮ್ಮ ಕೋಪಗೊಂಡ ಹಿರಿಯ ಮಗ ಕಾರ್ತಿಕೇಯನನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಾರೆ. ತನ್ನ ಕಿರಿಯ ಸಹೋದರ ಗಣೇಶನು ಅವನಿಗಿಂತ ಮೊದಲು ಮದುವೆಯಾಗುವುದು ಕಾರ್ತಿಕೇಯನ ಕೋಪಕ್ಕೆ ಕಾರಣವಾಗಿರುತ್ತದೆ. ಇನ್ನು ಬೃಹತ್ ಕೋಟೆಯಂತಿರುವ ದೇವಾಲಯವು ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಬ ದೇವಿಯನ್ನು ಮುಖ್ಯ ದೇವರುಗಳನ್ನಾಗಿ ಹೊಂದಿದೆ. ಮಹಾಭಾರತದಲ್ಲಿ ಉಲ್ಲೇಖಿಸಿರುವ ಪ್ರಕಾರ, ಶ್ರೀಶೈಲ ಪರ್ವತದ ಮೇಲೆ ನೆಲೆಸಿರುವ ಶಿವನನ್ನು ಪೂಜಿಸುವುದರಿಂದ ಅಶ್ವಮೇಧ ಯಾಗವನ್ನು ಮಾಡಿದಷ್ಟು ಫಲ ದೊರೆಯುತ್ತದೆ ಹಾಗೂ ಇಲ್ಲಿಗೆ ಭೇಟಿ ನೀಡುವುದರಿಂದ ಜನರ ಎಲ್ಲಾ ರೀತಿಯ ನೋವುಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
3. ಮಹಾಕಾಳೇಶ್ವರ (ಮಧ್ಯಪ್ರದೇಶ) : ಮೂರನೆಯ ಜ್ಯೋತಿರ್ಲಿಂಗ ಮಹಾಕಾಲ ಅಥವ ಮಹಾಕಾಳೇಶ್ವರ ಎಂದು ಪ್ರಸಿದ್ಧವಾಗಿದೆ. ಈ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದೆ, ಪ್ರಾಚೀನ ಸಾಹಿತ್ಯದಲ್ಲಿ ಇದನ್ನು ಅವಂತಿಕಾ ಪುರಿ ಎಂದು ಕರೆಯಲ್ಪಟ್ಟಿದೆ. ಇಲ್ಲಿ ಭಗವಾನ್ ಮಹಾಕಾಳೇಶ್ವರನ ಭವ್ಯವಾದ ಜ್ಯೋತಿರ್ಲಿಂಗವಿದೆ. ಇಲ್ಲಿರುವ ಲಿಂಗವನ್ನು ಸ್ವಯಂಭು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಲಿಂಗದ ಪ್ರಭಾವ ಅತ್ಯಂತ ಪವಾಡ ಶಕ್ತಿ ಇರುವಂಥದ್ದು ಎಂದು ಹೇಳಲಾಗುತ್ತದೆ. ದೇವಾಲಯದ ಸಂಕೀರ್ಣದೊಳಗೆ ನೂರಕ್ಕೂ ಹೆಚ್ಚು ಪುಟ್ಟ ದೇವಾಲಯಗಳಿದ್ದು ಹೆಚ್ಚಿನ ದಿನಗಳಲ್ಲಿ ಇದು ಜನರಿಂದ ಕಿಕ್ಕಿರಿದಿರುತ್ತದೆ.
4. ರಾಮೇಶ್ವರ ಜ್ಯೋತಿರ್ಲಿಂಗ (ತಮಿಳುನಾಡು) : ಇದು ತಮಿಳುನಾಡಿನ ರಾಮೇಶ್ವರ ದ್ವೀಪದಲ್ಲಿದೆ. ತನ್ನ ವಾಸ್ತುಶಿಲ್ಪಕ್ಕೆ ಜನಪ್ರಿಯವಾಗಿರುವ ರಾಮೇಶ್ವರ ಜ್ಯೋತಿರ್ಲಿಂಗವು ಶ್ರೀ ರಾಮನು ಲಂಕಾಸುರನಾದ ರಾವಣನ ಮೇಲೆ ಜಯ ಸಾಧಿಸಿದ ಹಿನ್ನಲೆಯೂ ಈ ಸ್ಥಳ ಪುರಾಣಕ್ಕಿದೆ. ದಂತಕಥೆಗಳ ಪ್ರಕಾರ, ಭಗವಾನ್ ಶ್ರೀ ರಾಮನು ಸೀತೆಯನ್ನು ಮರಳಿ ಪಡೆಯಲು ಲಂಕೆಗೆ ತೆರಳುವಾಗ, ರಾಮೇಶ್ವರಕ್ಕೆ ಬಂದು ಸಮುದ್ರ ತೀರದಲ್ಲಿ ನೀರು ಕುಡಿದಿದ್ದರಂತೆ. ಅದೆ ಸಮಯಕ್ಕೆ , "ನೀವು ನನ್ನನ್ನು ಪೂಜಿಸದೆ ನೀರನ್ನು ಕುಡಿಯುತ್ತಿದ್ದೀರಿ" ಎಂಬ ಅಶರೀರವಾಣಿ ಕೇಳಿಸಿತಂತೆ.
ಇದನ್ನು ಕೇಳಿದ ಭಗವಾನ್ ಅಲ್ಲೇ ಶ್ರೀ ರಾಮನು ಮರಳಿನ ಲಿಂಗವೊಂದನ್ನು ಮಾಡಿ, ಅದನ್ನು ಪೂಜಿಸಿ ರಾವಣನನ್ನು ಸೋಲಿಸಲು ಆಶೀರ್ವಾದ ಪಡೆದುಕೊಂಡರಂತೆ. ಶಿವನು ಶ್ರೀ ರಾಮನನ್ನು ಆಶೀರ್ವದಿಸಿದ ನಂತರ ಅದೇ ಸ್ಥಳದಲ್ಲಿ ಜ್ಯೋತಿರ್ಲಿಂಗನಾಗಿ ಮಾರ್ಪಟ್ಟು, ಇದನ್ನು ಈಗ ರಾಮೇಶ್ವರ ಜ್ಯೋತಿರ್ಲಿಂಗ ಎಂದು ಕರೆಯಲಾಗುತ್ತಿದೆ.
5. ಖಾಂಡ್ವಾದ ಓಂಕಾರೇಶ್ವರ (ಮಧ್ಯಪ್ರದೇಶ) : ಐದನೇ ಸಾಲಿನಲ್ಲಿ, ಖಾಂಡ್ವಾದಲ್ಲಿರುವ ಓಂಕಾರೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದ ಭಾರತದ ಅತ್ಯಂತ ಪೂಜ್ಯ ಸ್ಥಳಗಳಲ್ಲಿ ಒಂದಾಗಿದೆ. ನರ್ಮದಾ ನದಿಯಿಂದ ಮಂಧಾತ ಅಥವಾ ಶಿವಪುರಿ ಎಂಬ ದ್ವೀಪದಲ್ಲಿ ಸ್ಥಾಪಿಸಲಾಗಿರುವ ಇಲ್ಲಿನ ಲಿಂಗದ ಆಕಾರವು ‘ಓಂ’ ನಂತೆ ಕಾಣುತ್ತದೆ. ಈ ಸ್ಥಳವು ಎರಡು ಪ್ರಮುಖ ಶಿವ ದೇವಾಲಯಗಳನ್ನು ಹೊಂದಿದೆ, ಒಂದು ಓಂಕಾರೇಶ್ವರ ಮತ್ತು ಇನ್ನೊಂದು ಅಮರೇಶ್ವರ.
6. ರುದ್ರಪ್ರಯಾಗದ ಕೇದಾರನಾಥ (ಉತ್ತರಾಖಂಡ್) : ಭಾರತದ ಮತ್ತೊಂದು ಜ್ಯೋತಿರ್ಲಿಂಗ ದೇವಸ್ಥಾನ ಕೇದಾರನಾಥ ಉತ್ತರಾಖಂಡ್ನ ರುದ್ರಪ್ರಯಾಗದಲ್ಲಿದೆ. ಇದು ಮುಖ್ಯ ಶಿವ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಇಲ್ಲಿನ ಜ್ಯೋತಿರ್ಲಿಂಗವನ್ನು ಪೂಜ್ಯನೀಯವೆಂದು ಪರಿಗಣಿಸಲಾಗಿದೆ. ಶಿವನನ್ನು ಪ್ರಾರ್ಥಿಸಲು ದೇಶಾದ್ಯಂತದಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಪ್ರಯಾಣ ಅತ್ಯಂತ ಕಷ್ಟಕರವಾದ ಪ್ರಯಾಣ ಎಂದು ಹೇಳಲಾಗುತ್ತದೆ. ಇದು ಪ್ರಮುಖವಾದ ಚಾರ್ಧಾಮ್ ಯಾತ್ರಾ ತಾಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ವರ್ಷದ ಆರು ತಿಂಗಳ ಕಾಲ ಈ ಸ್ಥಳವನ್ನು ಮುಚ್ಚಲಾಗುತ್ತದೆ.
7. ಭೀಮಾಶಂಕರ (ಮಹಾರಾಷ್ಟ್ರ) : ಮಹಾರಾಷ್ಟ್ರದ ಭೀಮಾಶಂಕರ ಪುಣೆಯಿಂದ 100 ಕಿ.ಮೀ ದೂರದಲ್ಲಿದ್ದು ಇದು ಸಹ್ಯಾದ್ರಿ ಶ್ರೇಣಿಯ ಬೆಟ್ಟಗಳ ಮೇಲೆ ಇದೆ. ಇಲ್ಲಿನ ದೇವಾಲಯವು ಪ್ರಕೃತಿರಮಣೀಯ ಸ್ಥಳವಾಗಿದ್ದು ಇದು ಚಾರಣಿಗರ ಸ್ವರ್ಗವಾಗಿದೆ. ಕೃಷ್ಣ ನದಿಯ ಅತಿದೊಡ್ಡ ಉಪನದಿಗಳಲ್ಲಿ ಒಂದಾದ ಭೀಮಾ ನದಿ ಎಂದು ಕರೆಯಲ್ಪಡುವ ನದಿಯು ಇಲ್ಲೇ ಹುಟ್ಟಿದೆ.ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೌದ್ಧ ಶೈಲಿಯಲ್ಲಿ ಕೆತ್ತಿರುವ ಅಂಬಾ-ಅಂಬಿಕಾ ಅವರ ಶಿಲೆಗಳನ್ನು ಸಹ ಇಲ್ಲಿ ನೋಡಬಹುದು.
8. ವಾರಣಾಸಿಯ ವಿಶ್ವನಾಥ (ಉತ್ತರ ಪ್ರದೇಶ) : ಪವಿತ್ರ ಗಂಗಾ ನದಿಯ ದಡದಲ್ಲಿರುವ ವಿಶ್ವನಾಥ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಇದನ್ನು ಅತ್ಯಂತ ಪವಿತ್ರವಾದ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ವಿಶ್ವೇಶ್ವರ, ಅಂದರೆ ಬ್ರಹ್ಮಾಂಡವನ್ನೇ ಆಳುವವನು ಎಂದರ್ಥ. ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲೂ ಈ ದೇವಾಲಯದ ಉಲ್ಲೇಖವಿದೆ. ಮಹಾದೇವನ ದರ್ಶನಕ್ಕಾಗಿ ಪ್ರಪಂಚದಾದ್ಯಂತ ಜನರು ಇಲ್ಲಿಗೆ ಬರುತ್ತಾರೆ.
9. ನಾಸಿಕ್ನ ತ್ರಯಂಬಕೇಶ್ವರ (ಮಹಾರಾಷ್ಟ್ರ) : ಗೋದಾವರಿ ನದಿಯ ದಡದಲ್ಲಿರುವ, ನಾಸಿಕ್ನ ತ್ರಿಂಬಕೇಶ್ವರ ಅಥವಾ ತ್ರಯಂಬಕೇಶ್ವರ ಶಿವನಿಗೆ ಅರ್ಪಿತವಾದ ಪ್ರಾಚೀನ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಪವಿತ್ರ ಕುಂಭ ಮೇಳ ನಡೆಯುವ ನಾಲ್ಕು ನಗರಗಳಲ್ಲಿ ನಾಸಿಕ್ ಕೂಡ ಒಂದಾಗಿದೆ. ದೇವಾಲಯದ ಒಳಗೆ ಕುಸವರ್ತ, ಪವಿತ್ರ ಕುಂಡ (ಪವಿತ್ರ ಕೊಳ) ಇದೆ, ಇದು ಗೋದಾವರಿ ನದಿಯ ಮೂಲವಾಗಿದ್ದು, ಇದು ಭಾರತದ ಅತಿ ಉದ್ದನೆಯ ನದಿಯೆಂದು ಹೆಸರುವಾಸಿಯಾಗಿದೆ.
10. ಘೃಶ್ನೇಶ್ವರ ಜ್ಯೋತಿರ್ಲಿಂಗ (ಮಹಾರಾಷ್ಟ್ರ) : ಇದು ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ದೌಲತಾಬಾದ್ನಿಂದ 20 ಕಿ.ಮೀ ದೂರದಲ್ಲಿದೆ. ಘೃಶ್ನೇಶ್ವರ ಜ್ಯೋತಿರ್ಲಿಂಗವು ಇಲ್ಲಿನ ಸ್ಥಳ ಪ್ರತೀತಿಯಿಂದಲೂ ಜನಪ್ರಿಯವಾಗಿದೆ, ಏಕೆಂದರೆ ಇದು ಪ್ರಸಿದ್ಧ ಪ್ರವಾಸಿ ತಾಣಗಳಾದ ಅಜಂತಾ ಮತ್ತು ಎಲ್ಲೋರಾ ಗುಹೆಗಳ ಸಮೀಪದಲ್ಲಿದೆ. ದಂತಕಥೆಯ ಪ್ರಕಾರ ಒಂದು ಕಾಲದಲ್ಲಿ ಶಿವನ ಅಪ್ರತಿಮ ಭಕ್ತೆಯಾಗಿದ್ದ ಕುಸುಮಾ ಎಂಬಾಕೆಯು ಇಲ್ಲಿ ವಾಸಿಸುತ್ತಿದ್ದಳು. ತನ್ನ ಪ್ರತಿದಿನದ ಪ್ರಾರ್ಥನೆಯ ಭಾಗವಾಗಿ ಅವಳು ಶಿವನ ಲಿಂಗವನ್ನು ಪ್ರತಿದಿನ ತೊಟ್ಟಿಯಲ್ಲಿ ಮುಳುಗಿಸುತ್ತಿದ್ದಳು. ಕುಸುಮಾಳ ಪತಿಯ ಎರಡನೇ ಹೆಂಡತಿಗೆ ಕುಸುಮಾಳಿಗೆ ಸಮಾಜದಲ್ಲಿ ದೊರಕುತ್ತಿದ್ದ ಗೌರವವನ್ನು ಕಂಡು ಹಾಗು ಆಕೆಗಿದ್ದ ಶಿವನ ಭಕ್ತಿಯನ್ನು ಕಂಡು ಅಸೂಯೆ ಉಂಟಾಯಿತು. ಅದೇ ಅಸೂಯೆ ಮತ್ತು ಕೋಪದಿಂದ, ಅವಳು ಕುಸುಮಾಳ ಮಗನನ್ನು ಕೊಂದಳು. ಇದರಿಂದ ನೊಂದ ಕುಸುಮಾ ಮಗನ ಸಾವಿನಿಂದ ಖಿನ್ನಳಾಗಿದ್ದಳು, ಆದರೂ ಅವಳು ಬಿಡದೆ ಶಿವನನ್ನು ಪೂಜಿಸುತ್ತಲೇ ಇದ್ದಳು. ಮಗನು ಮರಣ ಹೊಂದಿದರೂ ತನ್ನ ದಿನಚರಿಯಂತೆ ಲಿಂಗವನ್ನು ತೊಟ್ಟಿಯಲ್ಲಿ ಮುಳುಗಿಸಿದಾಗ, ಅದ್ಭುತವೆಂಬತೆ ಆಕೆಯ ಮಗನು ಮರಳಿ ಜೀವ ಪಡೆದನು ಎಂದು ನಂಬಲಾಗಿದೆ. ಆ ಸಮಯದಲ್ಲಿ ಕುಸುಮಾ ಮತ್ತು ಹಳ್ಳಿಗರ ಮುಂದೆ ಶಿವನು ಕಾಣಿಸಿಕೊಂಡನು ಎಂದೂ ಹೇಳಲಾಗುತ್ತದೆ. ತನ್ನ ಭಕ್ತೆಯಾದ ಕುಸುಮಾಳ ಕೋರಿಕೆಯ ಮೇರೆಗೆ, ಶಿವನು ಆ ಸ್ಥಳದಲ್ಲಿಯೇ, ಘೃಶ್ನೇಶ್ವರ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಯಾದನು.
11. ದಿಯೊಘರ್ನ ವೈದ್ಯನಾಥ ಜ್ಯೋತಿರ್ಲಿಂಗ (ಜಾರ್ಖಂಡ್) : ವೈದ್ಯನಾಥ ಅಥವಾ ಬೈದ್ಯನಾಥ, ಇದು ಭಾರತದಲ್ಲಿನ ಒಂದು ವಿವಾದಿತ ಜ್ಯೋತಿರ್ಲಿಂಗ ದೇವಸ್ಥಾನವಾಗಿದ್ದು, ದೇಶದ ಪ್ರಮುಖ ಮೂರು ರಾಜ್ಯಗಳು ಈ ಬೈದ್ಯನಾಥ ಜ್ಯೋತಿರ್ಲಿಂಗವು ನಮ್ಮ ರಾಜ್ಯದಲ್ಲಿದೆ ಎಂದು ಹೇಳುತ್ತಾ ಬಂದಿವೆ. ಜಾರ್ಖಂಡ್ನ ದಿಯೊಗರದ ವೈದ್ಯನಾಥ್, ಹಿಮಾಚಲ ಪ್ರದೇಶದ ಬೈದ್ಯನಾಥ್ ಮತ್ತು ಮಹಾರಾಷ್ಟ್ರದ ಪಾರ್ಲಿ ವೈಜ್ನಾಥ್ ದೇವಾಲಯ ಜ್ಯೋತಿರ್ಲಿಂಗವಿರುವ ಸ್ಥಳವೆಂದು ಹೇಳಲ್ಪಡುವ ಸ್ಥಳಗಳು. ಬಾಬಾ ಧಾಮ್ ಎಂದೂ ಕರೆಯಲ್ಪಡುವ ಈ ಸ್ಥಳಕ್ಕೆ ಪ್ರತಿವರ್ಷ ಹಿಂದೂಗಳು ಶ್ರಾವಣ ಮಾಸದಲ್ಲಿ ಬಂದು ಶಿವಲಿಂಗಕ್ಕೆ ನೀರು ಎರೆಯುತ್ತಾರೆ. ಈ ದೇವಾಲಯದಲ್ಲಿರುವ ಆತ್ಮಲಿಂಗವನ್ನು ಸ್ಪರ್ಶಿಸಿದರೆ ಎಲ್ಲಾ ಪಾಪಗಳಿಂದಲೂ ಮುಕ್ತಿ ಹೊಂದುವಿರಿ.
12. ದ್ವಾರಕಾದ ನಾಗೇಶ್ವರ (ಗುಜರಾತ್) : ಗುಜರಾತ್ನ ದ್ವಾರಕಾದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ನಾಗೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ಈ ದೇವಾಲಯವು ಶಿವ ಪುರಾಣದಲ್ಲೂ ತನ್ನ ಉಲ್ಲೇಖವನ್ನು ಕಂಡುಕೊಂಡಿದೆ ಮತ್ತು ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ನಾಗೇಶ್ವರ ರೂಪದಲ್ಲಿರುವ ಶಿವ (ಸರ್ಪಗಳಿಂದ ತುಂಬಿದ ದೇಹ ಎಂದರ್ಥ) ಒಮ್ಮೆ ದಾರುಕಾ ಎಂಬ ರಾಕ್ಷಸನನ್ನು ಮತ್ತು ಅವನ ಸೈನ್ಯವನ್ನು ಸೋಲಿಸಿ ತನ್ನ ಭಕ್ತರಲ್ಲಿ ಒಬ್ಬಳಾದ ಸುಪ್ರಿಯಾಳನ್ನು ರಕ್ಷಿಸಿದನು ಎಂಬುದರ ಕುರಿತು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ. ಅಂದಿನಿಂದ ಈ ದೇವಸ್ಥಾನವನ್ನು ನಾಗೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತದೆ.
-ಸತೀಶ್ ಶೆಟ್ಟಿ ಚೇರ್ಕಾಡಿ (ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ