ಶ್ಯಾಮನಿಲ್ಲದ ಗೋಕುಲ
ಕವನ
ಅಕೋ ನೋಡೇ ಸಖಿ
ಶ್ಯಾಮ ಬಹನು।
ವಿರಹ ತುಂಬಿದ ಮನಕೆ
ಸಂತಸ ತಂದನು।।
ಮೂರು ದಿನಗಳಾಯ್ತು ಕೇಳಿ
ಶ್ಯಾಮನ ಕೊಳಲ ಆ ದನಿಯ।
ಅವನ ಮುಖವ ಕಾಣದೆ
ಕಂಬನಿ ಸುರಿಸಿದೆ ಈ ಹೃದಯ||
ಏಕೋ?, ಏನೋ?,
ಎಲ್ಲಿ ಹೋದನೋ ಶ್ಯಾಮನ ನೆನೆದೆ ।
ಆತಂಕ ಮೈ ಮನದಲ್ಲಿ
ಮನೆಮಾಡಿ ಶಾಂತಿಯ ಕದಡಿದೆ ।।
ಶ್ಯಾಮನಿಲ್ಲದ ಗೋಕುಲ,
ಏತಕೆ ಹೇಳೇ ಸಖಿ?|
ಮನವೆಲ್ಲಾ ಕತ್ತಲೆ,
ಈ ಬಾಳು ಬೇಕೇ ಸಖಿ?||