ಶ್ರೀಕೃಷ್ಣ ಜನ್ಮಾಷ್ಟಮಿ- ಎರಡು ಕವನಗಳು
ಕೃಷ್ಣನ ತುಂಟಾಟ
ಅಷ್ಟಮಿ ದಿನದಲಿ ವಾಸುಕಿಯೊಡಲಲಿ
ಭ್ರಷ್ಟವ ದೂಡಲು ಧರೆಗಿಳಿದ
ಶಿಷ್ಟತೆ ಮಾರ್ಗದಿ ನಡೆದನು ಕೃಷ್ಣನು
ಕಷ್ಟವ ಮೆಟ್ಟುತ ಬಂದಿಳಿದ!!!
ಬೆಣ್ಣೆಯ ಕದಿಯುತ ಗೆಳೆಯರ ಕರೆಯುತ
ದೊಣ್ಣೆಲಿ ಮಡಿಕೆಯ ಹೊಡೆಯುತಲಿ
ನುಣ್ಣನೆ ತಿನ್ನುತ ಮಡಿಕೆಯನೊಡೆಯುತ
ಮಣ್ಣಲಿ ಕುಣಿಯುತ ಜಿಗಿಯುತಲಿ..
ನಂದನ ವನದಲಿ ಕಂದನ ಹುಡುಕುತ
ಬಂದಳು ಸಾಕಿದ ಮಾತೆಯೂ
ತಂದಳು ಕೋಲನು ಹಿಡಿಯುತ ನುಗ್ಗುತ
ಚಂದದಿ ಹಾಡಿಸೊ ತಾಯಿಯೂ...
ಬಾಲ್ಯದ ಹಂತವು ಹಠದೊಳು ಕುಣಿಸುವ
ಕಾಲ್ಯದ ಹಣತೆಯು ನೀನಾಗಿ
ಮೌಲ್ಯವ ಬಿತ್ತುತ ಜಡತೆಯ ಸರಿಸುವ
ಲೌಲ್ಯವ ತೊಲಗಿಸೊ ಬಾನಾಗಿ...
ಬೆಳೆಯುತ ಹೊಳೆಯುತ ಪೂತನಿ ಸಾಯಿಸಿ
ಕಳೆಯಲಿ ಮಿಂಚಿದ ಮುರಾರಿ
ಬಳಗದ ಬೆಂಬಲ ಪರ್ವತವೆತ್ತಿದ
ಮಳೆಯಲು ನಲಿಯುವ ಬನವಾರಿ...
ಸೋದರ ಮಾವನ ತಪ್ಪನು ಮನ್ನಿಸಿ
ಬಾಧೆಯ ಕೊಡುತಲಿ ವಧಿಸಿದನು
ಗಧೆಯಲಿ ಬೀಸುತ ಸಿಟ್ಟಲಿ ಸೀಳುತ
ಚದರದೆ ನಿಮಿಷದಿ ಮುಗಿಸಿದನು...
ಹಾವಿನ ತಲೆಯ ಮೇಲೆಯ ನರ್ತಿಸಿ
ಪೂವಿನ ಮಾಲೆಯ ಧರಿಸಿರಲು
ಪಾವನ ಕಾರ್ಯದಿ ಹೆಸರನು ಗಳಿಸುತ
ಧಾವಿಸಿ ದುಷ್ಟರ ಮೆಟ್ಟಿರಲು...
ಕೊಳಲಿನ ಕರೆಯನು ನೀಡುತ ವನದಲಿ
ಬಳಲಿದ ಖಗಮೃಗ ನಲಿಸುತಲಿ
ಜಳಕದಿ ವಂಶಿಯ ಗಾನದಿ ಗೋಪನು
ಫಳಫಳ ಕಂಡನು ಯಮುನೆಯಲಿ...
ಅಭಿಜ್ಞಾ ಪಿ ಎಮ್ ಗೌಡ
*****
ಬಂದ ಕೃಷ್ಣ ಮುದ್ದು ಕೃಷ್ಣ
ಬಂದ ಕೃಷ್ಣ ಮುದ್ದು ಕೃಷ್ಣ
ನಮ್ಮ ಮನೆಗೆ ಬಂದಾನೊ
ಗೋಪಿಯರ ಜೊತೆಗೆ ಸೇರಿ
ಚಂದ ನೋಡುತ ನಿಂದಾನೊ
ಮಧುರೆಯ ತೀರದಲ್ಲಿ
ಕಳ್ಳ ನಿದಿರೆ ಮಾಡುತಲ್ಲಿ
ರಾಧೆಯಾ ಸಂಗದೊಳು
ಸವಿಯನುಂಡು ಬೆಳೆದವನು
ಗೋವುಗಳ ಕಾಯುತ್ತಾ
ಕೊಳಲ ಧ್ವನಿಯ ನುಡಿಸುತ್ತಾ
ರಾಗವನ್ನು ಹೊರಡಿಸುತ್ತಾ
ತನ್ನವರ ಕುಣಿಸುತ್ತಾ
ಮನೆಯ ಒಳಗೆ ಹೋಗುತಲಿ
ಬೆಣ್ಣೆ ಗಡಿಗೆ ಒಡೆಯುತಲಿ
ಬೆಣ್ಣೆಯನ್ನು ಮೆಲ್ಲುತಲಿ
ಮೆತ್ತಿ ತಾನು ನಲಿಯುತಲಿ
ಯಶೋದೆಯಲ್ಲಿ ಬಂದಿಹಳು
ಮಗನ ಮುಖವ ನೋಡಿದಳು
ಸಿಟ್ಟಿನಲ್ಲಿ ಮಗನ ಬಾಯ
ತೆರೆಯೆ ನೋಡಿ ಬೆಚ್ಚಿದಳು
ಮೂರು ಜಗವ ತೋರಿದನು
ತಾಯಿ ಮನದಲಿ ನಮಿಸಿದಳು
ಮಗನು ಅಲ್ಲ ದೇವನಿವನು
ಕೈಯ ಮುಗಿಯುತ ನಿಂತಳು
ಹಾ ಮ ಸತೀಶ
ರಾಧಾ-ಕೃಷ್ಣ ರೂಪದರ್ಶಿಗಳು: ಆದ್ಯಾ ಮತ್ತು ಸಾಕೇತ್ ಎನ್. ಕಿಶೋರ್, ಮೇರಿಹಿಲ್-ಗುರುನಗರ, ಮಂಗಳೂರು
- Log in to post comments