ಶ್ರೀ ಶ್ರೀ ದತ್ತ ಗೋವಿಂದನಿಗೆ ಜಯವಾಗಲಿ!

ಶ್ರೀ ಶ್ರೀ ದತ್ತ ಗೋವಿಂದನಿಗೆ ಜಯವಾಗಲಿ!

ಬರಹ

ನಮ್ಮೂರಲ್ಲಿ ಈಗ ದೊಡ್ಡದೊಂದು ಸಮಾರಾಧನೆ ನಡೀತಿದೆ. ಅದೊಂದು ಸಾಂಸ್ಕೃತಿಕ ಹಬ್ಬ. ಪ್ರತಿ ವರ್ಷ ನಡೆಯುತ್ತೆ, ಈ ವೇಳೆಗೆ. ಸಂಗೀತ ದಿಗ್ಗಜರೆಲ್ಲಾ ಬರ್ತಾರೆ. ಹಾಡ್ತಾರೆ. ಸನ್ಮಾನಿತಗೊಳ್ತಾರೆ. ಈ ವೇದಿಕೆಯನ್ನ ಹೊಗಳ್ತಾರೆ. ಆದರೆ ಮುಂದಿನ ವರ್ಷ ನಡಿಯತ್ತೋ ಇಲ್ಲವೋ, ಅನುಮಾನ.

ನಮ್ಮೂರು ಮೈಸೂರು. ಈ ಸಂಗೀತೋತ್ಸವ ನಮ್ಮೂರಿನ ಶ್ರೀ ದತ್ತಾತ್ರೇಯ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಹುಟ್ಟುಹಬ್ಬದ ಪ್ರಯುಕ್ತ ಆಚರಿಸಲಾಗತ್ತೆ. ಇದು ಅವರ ಆಶ್ರಮದಲ್ಲಿ ದಶಕದ ಹಿಂದೆಯೇ ಸ್ಥಾಪಿಸಲಾದ ನಾದಮಂಟಪದಲ್ಲಿ ನಡೆಯುತ್ತೆ. ಈ ವೇದಿಕೆಯಲ್ಲಿ ಹಲವಾರು ಸಂಗೀತ ಲೋಕದ ಘಟಾನುಘಟಿಗಳು ಬಂದು ಕಚೇರಿ ನಡೆಸಿದ್ದಾರೆ. ಕಲೆಗಳ ಆಗರವಾಗಿದ್ದು ಇತ್ತೀಚೆಗೆ ನೆನೆಗುದಿಗೆ ಬಿದ್ದಿದ್ದ ಕಲಾರಸಿಕತೆಯನ್ನ  ಮೈಸೂರಿನ ಜನರಲ್ಲಿ ಮತ್ತೊಮ್ಮೆ ಎಚ್ಚರಿಸಲು ಈ ನಾದಮಂಟಪ ಹಾಗು ಸಚ್ಚಿದಾನಂದ ಸ್ವಾಮಿಗಳ ಪಾತ್ರ ಅಪ್ರತಿಮವಾದದ್ದು. ದಿನವಿಡೀ ಕೆಲಸ ಮಾಡಿ, ಸಂಜೆ ಆಯಾಸ ತಣಿಯಲು ಹಾಗು ವೇಂಕಟೇಶ್ವರನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನ ಈ ಆಶ್ರಮಕ್ಕೆ ಬರುತ್ತಾರೆ. ಇದಷ್ಟೇ ಅಲ್ಲದೇ ಈ ಸ್ವಾಮಿಗಳು ಗಿಡಮರಗಳನ್ನು ಬೊನ್ಸಾಯ್ ರೂಪದಲ್ಲಿ ಬೆಳೆಸುವಲ್ಲಿ ನಿಷ್ಣಾತರು. ಅವರ ಬೊನ್ಸಾಯ್ ಪಾರ್ಕ್ ಜಗತ್ತಿನ ಈ ಭಾಗದಲ್ಲಿ ಅತ್ಯಂತ ವಿರಳ.

ಆದರೆ ಶ್ರೀ ಗಣಪತಿ ಸಚ್ಚಿದಾನಂದರು ದತ್ತಾತ್ರೇಯನ ಅನುಗ್ರಹದಿಂದ ಇಷ್ಟೆಲ್ಲಾ ಒಳ್ಳೆ ಕಾರ್ಯಗಳನ್ನು ಮಾಡುತ್ತ, ಬದಿಯಲ್ಲಿ ಸರ್ಕಾರಕ್ಕೆ ಸೇರಿದ್ದ ಹಾಗು ಡಾ|| ಅನಿಲ್ ಕುಮಾರ್ ಎಂಬುವವರಿಗೆ ಸೇರಿದ್ದ ಒಂದಷ್ಟು ಜಾಗವನ್ನೂ ಆಶ್ರಮದ ಹೆಸರಲ್ಲಿ ಒತ್ತುವರಿ ಮಾಡಿದ್ದಾರಂತೆ. ಇದೇ ವಿಷಯಕ್ಕೆ ಕಳೆದ ಭಾನುವಾರ ಅವರನ್ನು ಆರಕ್ಷಕರು ಬಂಧಿಸಿ ಜಾಮೀನಿನ ಮೇಲೆ ಬಿಟ್ಟಿದ್ದಾರೆ. ಇದಾದ ಮೇಲೆ ಹೊರಗೆ ಬಂದಿರುವ ಮಾಹಿತಿಗಳ ಪ್ರಕಾರ, ಒತ್ತುವರಿಯಾಗಿರುವುದು ಸಾಬೀತಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ಕಮಿಷನರ್ರು ಆರಕ್ಷರಿಗೆ ಪತ್ರ ಬರೆದು ಈ ವಿಷಯಗಳನ್ನು ತಿಳಿಸಿದ್ದಾರೆ.

ಇಷ್ಟೆಲ್ಲಾ ಪುರಾವೆಗಳು ಹಾಗು ನಮ್ಮೂರಿನಲ್ಲಿ ಈಗಿರುವ ನಿಷ್ಠಾವಂತ ಮತ್ತು ಹುಮ್ಮಸ್ಸಿನ ಅಧಿಕಾರಗಳ ಕೈಚಳಕದಿಂದ ಸ್ವಾಮಿ ಗಣಪತಿ ಸಚ್ಚಿದಾನಂದರು ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿ ಹಲವು ತಿಂಗಳು/ವರ್ಷಗಳನ್ನೇ ಕಳೆದರೆ ಆಶ್ಚರ್ಯ ಪಡಬೇಕಿಲ್ಲ.

ಇದರಿಂದ ಉಂಟಾಗುವ ಒಳ್ಳೆ ಸಂಗತಿಗಳು:
ಯಾರೇ ಆದರು ಕಾನೂನು ಬಾಹಿರ ಕೆಲಸ ಮಾಡಿದರೆ ಶಿಕ್ಷಿಸಲಾಗುವುದು ಅನ್ನೋ ಸಂದೇಶ ತಲುಪಿಸುವುದು, ಸ್ವಾಮಿಗಳನ್ನೇ ಬಿಡದವರು ರಾಜಕಾರಣಿಗಳು, ಅಧಿಕಾರಿಗಳನ್ನು ಬಿಡದಿರುವುದಕ್ಕೆ ಒಳ್ಳೆಯ ಉದಾಹರಣೆಯಾಗುವುದು.

ಇದರಿಂದ ಉಂಟಾಗುವ ನಕಾರಾತ್ಮಕ ಸಂಗತಿಗಳು:
ಇತ್ತೀಚಿನ ದಿನಗಳಲ್ಲಿ ಕರ್ಣಾಟಕ/ಹಿಂದೂಸ್ತಾನಿ ಸಂಗೀತಕ್ಕೆ, ಸಂಗೀತಗಾರರಿಗೆ ಎಲ್ಲೂ ಸಿಗದ ಮನ್ನಣೆ ಇಲ್ಲಿ ಸಿಗುತ್ತಿತ್ತು. ಇದಕ್ಕೆ ಕುತ್ತು ಬರಬಹುದು, ಮೈಸೂರಿನ ಜನತೆಗೆ ಒಂದು ಒಳ್ಳೆ ಜಾಗ ಮರೆಯಾಗುವುದು.

ಹಾಗಾಗಿ, ಮೇಲ್ನೋಟಕ್ಕೆ ಸ್ವಾಮಿಗಳು ಹಾಗು ಆಶ್ರಮದವರು ಅತಿಕ್ರಮಣ ಮಾಡಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು. ಆದರೆ, ಆಶ್ರಮದಲ್ಲಿ ನಡೆಯುತ್ತಿದ್ದ ಒಳ್ಳೆಯ ಕಾರ್ಯಗಳು ಸ್ವಾಮಿಗಳ ಅನುಪಸ್ಥಿತಿಯಲ್ಲೂ ಮುಂದುವರಿಯಬೇಕು.

ನೀವೇನಂತೀರಿ ?