ಸಂತೆಯೊಳಗಿನ ಏಕಾಂತ

ಸಂತೆಯೊಳಗಿನ ಏಕಾಂತ

ಪುಸ್ತಕದ ಲೇಖಕ/ಕವಿಯ ಹೆಸರು
ಪೂರ್ಣಿಮಾ ಸುರೇಶ್
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ : ೨೦೨೪

“ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗಳು. ಕವನ ಸಂಕಲನದಲ್ಲಿ ಅರ್ಥಕ್ಕಿಂತ ಅನುಭೂತಿಗೇ ಪ್ರಾಮುಖ್ಯತೆ.

ಇಲ್ಲಿನ ಕಾವ್ಯತಂತ್ರ, ಕೆ. ವಿ. ತಿರುಮಲೇಶ್ ಅವರು ಗಮನಿಸಿದಂತೆ, ಅಪೂರ್ಣ ವಾಕ್ಯಗಳ ಮಾಲೆಗಳು.
ಈ ಮಾರ್ಗ ಪೂರ್ಣಿಮಾ ಅವರ ನ್ಯಾಚುರಲ್ ಮಾರ್ಗ. ನಾಟಕಗಳಲ್ಲಿ ವಾಕ್ಯಗಳ ನಡುವಿನ ಅರ್ಧವಿರಾಮಗಳು ಸೂಚಿಸುವಷ್ಟು, ನಿಟ್ಟುಸಿರುಗಳು ಹೇಳಿದಷ್ಟು, ಬಿಕ್ಕಳಿಕೆಯ ಬಿಂದುಗಳು ಪ್ರತಿಫಲಿಸಿದಷ್ಟು ಅರ್ಥ, ಪೂರ್ಣವಾಕ್ಯಗಳು ಹೇಳಲಾರವು. ಇಲ್ಲಿನ ಕವಿತೆಗಳೂ ಅಷ್ಟೇ, ಸಾಕಷ್ಟು ಸಂಭಾಷಣೆಗಳಂತೆಯೇ, ಅಂತರ್‌ಸಂವಾದದಂತೆಯೇ ಪ್ರವಹಿಸುತ್ತವೆ.

ಈ ಕವಿತೆಗಳಲ್ಲಿ ಒಟ್ಟು ಮೂರು ಅಂಶಗಳನ್ನು ಗಮನಿಸಬಹುದು. ಸಹಜವಾಗಿ ಗಮನಕ್ಕೆ ಬರುವುದು ಬಾಹ್ಯಕ್ಕೆ ಸ್ಪಂದಿಸುವ, ಗ'ಮನ'ವನ್ನು ಗಮನಿಸುವ ಕಣ್ಬಾಗಿಲುಗಳು. ಅದಕ್ಕೆ ಮೀರಿದ್ದು ಭ್ರೂಮಧ್ಯದ ಮೂರನೆಯ ಕಣ್ಣಿನಂತಹಾ 'ಅಟ್ಟದ ಕಿಂಡಿ' ಎಂಬ ಸುಷುಮ್ನನಾಡಿ.  ಹಾಗಿದ್ದರೆ, ಈ ಅಟ್ಟದಕಿಂಡಿ ತೆರೆದುಕೊಳ್ಳುವುದಾದರೂ ಯಾವುದಕ್ಕೆ?.. ಅದೇ ಈ ಕವಿತೆಗಳ ಜೀವಾಳವಾದ ಹೇಳದೇ ಹೇಳುವ ಅರ್ಥಗಳು, ಓದುಗನ ಅರಿವಿನ ಅಥವಾ ಅರಿವಿನಾಚೆಗಿನ‌ ಅನಹತನಾದದ ಅಲೆಗಳು.

ಮೊದಲೇ ಹೇಳಿದಂತೆ ಇಲ್ಲಿ ಕವಿತೆಗಳು ಆರಂಭದಲ್ಲಿ ಅಂಗಳದಲ್ಲಿ ಅಂಬೆಗಾಲಿಕ್ಕುತ್ತ ಮಗುವಿನಂತೆ ಬೊಚ್ಚುಬಾಯಿ ತೆರೆದು ನಗುತ್ತವೆ. ಹಾಗೆಯೇ ಮುಂದುವರೆದು ಮಧ್ಯಮದ ಮಂದ್ರವಾಗುತ್ತದೆ. ಕೊನೆಯಲ್ಲಿ ಸಂತೆಯೊಳಗಿನ ಏಕಾಂತ ಭಾವವಾಗಿ ಭೂತಭೌತಿಕದ ನೆಲೆಯಿಂದ  ಕಾಣ್ಕೆಯಾಚೆಗಿನ ಅನ್ವೇಷಣೆಯತ್ತ ಹೊರಳಿ ಮಾಗುತ್ತದೆ.” ಇದು ಬೆನ್ನುಡಿ ಬರೆದ ಡಾ ಮಹಾದೇವ ಕಾನತ್ತಿಲ ಅವರ ಮಾತುಗಳು.

ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ನರಹಳ್ಳಿ ಬಾಲಸುಬ್ರಮಣ್ಯ. ಇವರು ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ “ಪೂರ್ಣಿಮಾ ಸುರೇಶ್ ಸಹಜ ಕವಿ, ಅಭಿಜಾತ ಕಲಾವಿದೆ. ಬಹುಮುಖ ಆಸಕ್ತಿಯ ಇವರು ನಾಟಕ, ಕಿರುತೆರೆ, ಚಲನಚಿತ್ರ, ಪತ್ರಿಕೋದ್ಯಮ, ಸಂಘಟನೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ಮೂಲತಃ ಕಾವ್ಯವೇ ಇವರ ಪ್ರಧಾನ ಅಭಿವ್ಯಕ್ತಿ ಮಾಧ್ಯಮ. ಉಡುಪಿ ಜಿಲ್ಲೆಯ ಹಿರಿಯಡ್ಕ ಎಂಬ ಗ್ರಾಮೀಣ ಪ್ರದೇಶದಿಂದ ಬಂದ ಪೂರ್ಣಿಮಾ ಅವರ ವ್ಯಕ್ತಿತ್ವದಲ್ಲಿ ಅಲ್ಲಿನ ಮಣ್ಣಿನ ಸತ್ವ ಸಹಜವಾಗಿ ಸೇರಿದೆ. ಹಿರಿಯಡ್ಕ ಎಂದಾಕ್ಷಣ ನನಗೆ ನಮ್ಮ ತುಳುನಾಡಿನ `ಸಿರಿ’ಯ ನೆನಪಾಗುತ್ತದೆ. ಸಿರಿಗೂ ಹಿರಿಯಡ್ಕಕ್ಕೂ ಅವಿನಾಭಾವ ಸಂಬಂಧವಿದೆ.

ನಾಗಬ್ರಹ್ಮನ ವರಪ್ರಸಾದದಿಂದ ಸತ್ಯನಾಪುರದ ಬಿರುಮ ಬಲ್ಲಾಳರ ಕುಟುಂಬದಲ್ಲಿ ಜನಿಸುವ ಸಿರಿ ಎಲ್ಲರ ಕಣ್ಗೊಂಬೆಯಾಗಿ ಬೆಳೆಯುತ್ತಾಳೆ. ಚೆಲುವೆ ಸಿರಿಯನ್ನು ಬಸರೂರು ಬೀಡಿನ ಕಾಂತನ ಪೂಂಜ ಮೋಹಿಸಿ ಮದುವೆಯಾಗುತ್ತಾನೆ. ಆತನಿಗೆ ಸಿದ್ದು ಎಂಬ ಹೆಣ್ಣಿನೊಡನೆ ಸಂಬಂಧವಿರುತ್ತದೆ. ಸಿರಿ ಅದನ್ನು ಪ್ರಶ್ನಿಸಿ, ಪ್ರತಿಭಟಿಸಿ ಅವನಿಂದ ದೂರವಾಗುತ್ತಾಳೆ. ಸತ್ಯನಾಪುರದ ಬೀಡಿನಲ್ಲಿ ಅಜ್ಜನ ಕಾಲಾನಂತರ ಅದರ ಅಧಿಕಾರ ಪಡೆಯುವಲ್ಲಿ ಸಮಾಜದ ವಿರೋಧಕ್ಕೆ ಗುರಿಯಾಗುತ್ತಾಳೆ. ಮುಂದೆ ಮರುವಿವಾಹವಾಗುವುದರ ಮೂಲಕ ಸಿರಿ ಸಮಾಜದ ಸ್ಥಾಪಿತ ಹಿತಾಸಕ್ತಿಗಳಿಗೆ ಸವಾಲಾಗಿ ನಿಲ್ಲುತ್ತಾಳೆ. ತನ್ನ ಬದುಕಿನುದ್ದಕ್ಕೂ ಸವಾಲುಗಳನ್ನೆದುರಿಸುತ್ತಾ ದಿಟ್ಟತನದಿಂದ ಜಡ ವ್ಯವಸ್ಥೆಯಲ್ಲಿ ಚಲನೆಯನ್ನುಂಟು ಮಾಡುವ ಸಿರಿ, ಪುರುಷ ಪ್ರಧಾನ ಸಮಾಜದ ರೂಢಿಗತ ಮೌಲ್ಯಗಳನ್ನು ಸಮರ್ಥ ರೀತಿಯಲ್ಲಿ ಪ್ರಶ್ನಿಸುತ್ತಾಳೆ. ಪಾಡ್ದನದಲ್ಲಿ ಬರುವ ಸಿರಿಯ ಈ ಪ್ರತಿಭಟನೆ ಪುರುಷನ ಅಧಿಕಾರ ನಿರಾಕರಣೆ ಮಾತ್ರವಾಗದೇ ಸ್ತ್ರೀಯರ ಅಂತಃಶಕ್ತಿಯ ಪ್ರತೀಕವೂ ಆಗುವಲ್ಲಿ ಇದರ ಮಹತ್ವವಿದೆ. ಭಾರತೀಯ ಸಾಂಪ್ರದಾಯಿಕ ಸ್ತ್ರೀ ಪರಿಕಲ್ಪನೆಗಿಂತ ಭಿನ್ನವಾದ ಈ ಬಗೆ ದೇಸಿ ಪರಿಸರದ ವಿಶಿಷ್ಟ್ಯತೆ. ಜನಸಾಮಾನ್ಯರ ಬದುಕಿನಲ್ಲಿ ತಾತ್ವಿಕ ಪ್ರತಿರೋಧಕ್ಕೆ ಬದಲಾಗಿ ಅಸ್ತಿತ್ವದ ಪ್ರಶ್ನೆ ಮುಖ್ಯವಾಗುತ್ತದೆ. ಆಗ ಸಹಜವಾಗಿಯೇ ಅವರ ಅಂತಃಶಕ್ತಿ ಜಾಗೃತಗೊಂಡು ಸಿಡಿದೇಳುತ್ತದೆ. ಇಂತಹ ಸಹಜ ಪ್ರತಿಭಟನೆಯ ಸಿಡಿಮದ್ದಿಗೆ ಅಧಿಕಾರ ಜಗತ್ತನ್ನು ಅಲ್ಲೋಲ ಕಲ್ಲೋಲಗೊಳಿಸುವ ಶಕ್ತಿ ಇರುತ್ತದೆ. ಇಲ್ಲಿ ಹೆಣ್ತನ ಶಾರೀರಿಕ ಸತ್ಯ ಮಾತ್ರವಾಗದೇ ಅದೊಂದು ಶಕ್ತಿಯುತ ಮೌಲ್ಯವಾಗುತ್ತದೆ. ಸ್ತ್ರೀ ಶಕ್ತಿಯನ್ನು ಜೈವಿಕ ನೆಲೆಯಲ್ಲಿ ಮಾತ್ರ ಸ್ವೀಕರಿಸದೇ ಅರಿವಿನ ನೆಲೆಯಲ್ಲಿಯೂ ಗ್ರಹಿಸಬೇಕಾದ ಒತ್ತಾಯ ಸಹಜವಾಗಿಯೇ ರೂಪುಗೊಳ್ಳುತ್ತದೆ. ಇಂತಹ ಸಿರಿ ಪೂರ್ಣಿಮಾ ಅವರ ವ್ಯಕ್ತಿತ್ವದ ಮೂಲದ್ರವ್ಯ. ಅವರು `ಸತ್ಯನಾಪುರದ ಸಿರಿ’ ಎಂಬ ಏಕವ್ಯಕ್ತಿ ಪ್ರದರ್ಶನದಲ್ಲಿ ಆಕೆಯನ್ನು ಆವಾಹಿಸಿಕೊಂಡು ಅಭಿನಯಿಸಿದ್ದು ಅವರ ವ್ಯಕ್ತಿತ್ವದ ಸಹಜ ಅಭಿವ್ಯಕ್ತಿ. ಯುರಿಪಿಡೀಸ್‌ನ `ಮೀಡಿಯಾ’, ಇಬ್ಸನ್‌ನ `ನೋರಾ’, ನಮ್ಮ ಶರಣೆ ಅಕ್ಕ, ತುಳುನಾಡಿನ ಸಿರಿ ಇವರೆಲ್ಲ ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹೆಣಗಿದವರು; ಪ್ರತಿಭಟಿಸಿ ಸಿಡಿದು ನಿಂತವರು. ಪೂರ್ಣಿಮಾ ಅವರ ವ್ಯಕ್ತಿತ್ವ ಈ ಹಿನ್ನೆಲೆಯಲ್ಲಿಯೇ ರೂಪುಗೊಂಡಿದೆ.

ಪೂರ್ಣಿಮಾ ಅವರ ಕಾವ್ಯ ಜಗತ್ತಿನಲ್ಲಿ ಹೆಣ್ಣಿಗೆ ಪುರುಷ ಬೇಕು ನಿಜ, ಆದರೆ ಅವನು ಪತಿಯಾಗಿ ಅಧಿಕಾರಕೇಂದ್ರದಲ್ಲಿರುವ ಬದಲು ಸಖನಾಗಿ ಸಮಾನನೆಲೆಯಲ್ಲಿ ಪ್ರೀತಿಸಬೇಕೆಂಬ ಹಂಬಲವಿದ್ದಂತಿದೆ. ಇದು ಅವರಲ್ಲಿ ಸಮಾಜಸಮ್ಮತ ಮೌಲ್ಯವನ್ನು ಪ್ರಶ್ನಿಸುವ ಒಳದನಿಯಾಗಿ ಕಾಣಿಸಿಕೊಂಡು ಒಂದು ಸಂದಿಗ್ಧ ಸ್ಥಿತಿ ನಿರ್ಮಾಣವಾಗುತ್ತದೆ. ವ್ಯವಸ್ಥೆ ರೂಪಿಸಿರುವ ಮಡದಿಯ ಪಟ್ಟ ನಿಭಾಯಿಸುವುದು ಕಷ್ಟ ಎಂಬ ನೋವಿನ ಭಾವ ಅವರಲ್ಲಿ ತೀವ್ರವಾಗಿಯೇ ಕಾಣಿಸುತ್ತದೆ. ಇದಕ್ಕೆ ಪರಿಹಾರದ ಸಾಧ್ಯತೆಯಾಗಿ ಅವರು ಪತಿಯನ್ನು ಪ್ರಿಯಕರನನ್ನಾಗಿ ಮಾರ್ಪಡಿಸಿಕೊಳ್ಳುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ನಮ್ಮಲ್ಲಿ ಪ್ರಿಯಕರ ಗಂಡನಾಗುವುದು ಸಹಜ; ಆದರೆ ಗಂಡನೇ ಪ್ರಿಯಕರನಾಗಿಬಿಡುವುದು ಸಾಧ್ಯವಾದರೆ ಬದುಕಿನ ಲಯವೇ ಬದಲಾಗಿ ಬಿಡುತ್ತದೆ. ಪೂರ್ಣಿಮಾ ಅವರ ಈ ಚಿಂತನೆ ನನಗೆ ಬೇಂದ್ರೆಯವರನ್ನು ನೆನಪಿಸಿತು. ಬೇಂದ್ರೆ ಪತ್ನಿಯನ್ನು `ಸಖಿ’ ಎಂದು ಸಂಬೋಧಿಸುತ್ತಾ ಹೆಂಡತಿಯನ್ನು ತಮ್ಮ ಕಾವ್ಯದಲ್ಲಿ ಸಖಿಯಾಗಿ ಕಾಣುತ್ತಾರೆ. ಬೇಂದ್ರೆಯವರ ಕಾವ್ಯ `ಸತಿಗೀತ’ವಲ್ಲ. `ಸಖೀಗೀತ’. ಪೂರ್ಣಿಮಾ ಅವರು ತಮ್ಮ ಕಾವ್ಯವನ್ನು `ಪತಿಪುರಾಣ’ವಾಗಿಸದೇ `ಗೆಳೆಯಗೀತ’ವಾಗಿಸಲು ಹಂಬಲಿಸಿದಂತಿದೆ.

ನನ್ನೊಳಗಿನ ಭಾವ, ಶಬ್ದಸೀಮೆಯಾಚೆ, ಅಕ್ಕನಂತೊಬ್ಬಳು ಅನುರಕ್ತೆ ಹಾಗೂ ಮಧ್ಯಮಾವತಿ ಎಂಬ ನಾಲ್ಕು ಕವನ ಸಂಕಲನಗಳನ್ನು ಈಗಾಗಲೇ ಪ್ರಕಟಿಸಿರುವ, ಪೂರ್ಣಿಮಾ ಅವರ ಐದನೆಯ ಸಂಕಲನ `ಸಂತೆಯೊಳಗಿನ ಏಕಾಂತ’. ವೈದೇಹಿ ಅವರು ಹೇಳುವಂತೆ ಸಾಧನೆಯ ಸಫಲತೆಯ ಕಡೆಗೆ ಸಾಗುತ್ತ ಬಂದಿರುವ ಪೂರ್ಣಿಮಾ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮಹತ್ವದ ಮಜಲೆಂಬಂತೆ ಈ ಸಂಕಲನವಿದೆ.

`ಸಂತೆಯೊಳಗಿನ ಏಕಾಂತ’ ಕವಿತೆ ಬದುಕಿನ ವಿರೋಧಾಭಾಸಗಳನ್ನು ಹೇಳುವ ಮಹತ್ವದ ಪ್ರಯತ್ನ. ಸಂಬಂಧ ಗಡಿಯಾರದ ಮುಳ್ಳುಗಳಂತೆ ಒಂದನ್ನೊಂದು ಪರಸ್ಪರ ಕ್ಷಣಮಾತ್ರ ಸಂಧಿಸುತ್ತದೆ. ಸುತ್ತುತ್ತಲೇ ಇರುವ ಮುಳ್ಳುಗಳ ಈ ಭೇಟಿ ಅತ್ಯಂತ ಕ್ಷಣಿಕವಾದುದು. ಆ ಕ್ಷಣ ಶಾಶ್ವತವಾಗಬಾರದೇ ಎಂಬ ಹಂಬಲ ತೀರ ಸಹಜ.

ಎರಡು ಮುಳ್ಳುಗಳೂ
ಒಂದಕ್ಕೊಂದು ಆತುಕೊಂಡು
ಕ್ಷಣ ಒಂದಾದಂತೆ
ಬೆಳಕಿನ ಬಿಂದುಗಳು ಸೇರಿದಂತೆ
ಅದು ಹಾಗೇ ಯಾಕೆ ಇರಬಾರದು?

ಕ್ಷಣಿಕವಾದ ಸಂಬಂಧವನ್ನು ಸ್ಥಿರವಾಗಿಸಿಕೊಳ್ಳುವ ಈ ಪ್ರಯತ್ನ ಒಳ್ಳೆಯದೇ. ಆದರೆ ಚಲಿಸುತ್ತಿರುವ ಮುಳ್ಳುಗಳು ಪರಸ್ಪರ ಸಂಧಿಸಿದಾಗ ಅದು ಶಾಶ್ವತವಾಗಿ ಅಲ್ಲಿಯೇ ನಿಂತರೆ ಏನಾಗುತ್ತದೆ?

ಹಾಗಾಗುವುದು ಕೆಟ್ಟು ಕೂತ
ಸರಕು ಎನುವೆ
ಅಂದರೆ ಅಳಿವಿನ ಸ್ಥಿತಿಯೇ

ಗಡಿಯಾರದ ಮುಳ್ಳುಗಳು ಚಲಿಸದೇ ನಿಂತರೆ ಅದು ಗಡಿಯಾರ ಕೆಟ್ಟು ನಿಂತ ಸ್ಥಿತಿ. ಅಂದರೆ ಅಳಿವಿನ ಸ್ಥಿತಿ. ಹಾಗಾದರೆ ಕ್ಷಣಿಕ ಭೇಟಿ ಸ್ಥಿರವಾಗುವುದು ಬೇಡವೇ? ಹಾಗೆ ಸ್ಥಿರವಾದರೆ ಅದು ಅಳಿವೇ? ಈ ಹಂತದಲ್ಲಿ ಕವಿತೆ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ.

ಕೆಡುವುದೆಂದರೆ ಒಂದಾಗುವುದೇ
ನಾಶವಾಗುವುದೆಂದರೆ ಲೀನವಾಗುವುದೇ

ಇದಕ್ಕಿದ್ದಂತೆ ಕವಿತೆ ಅಧ್ಯಾತ್ಮದ ನೆಲೆಗೆ ಜಿಗಿದುಬಿಡುತ್ತದೆ. ಇಲ್ಲಿ ನಮಗೆ ಅಕ್ಕನಂತೊಬ್ಬಳು ಅನುರಕ್ತೆಯ ದರ್ಶನವಾಗಿಬಿಡುತ್ತದೆ. ಲೀನವಾಗುವುದೆಂದರೆ ಕಳೆದುಹೋಗುವುದಲ್ಲ, ಪಡೆದುಕೊಳ್ಳುವುದು. ಇದೇ ಭಾವ `ಕಶೀರದಲ್ಲಿ ಕಬೀರ’ ಕವಿತೆಯಲ್ಲಿಯೂ ವ್ಯಕ್ತವಾಗುತ್ತದೆ. ಆನಂದಮಯವಾದ ಈ ಜಗ ದೇವರ ದಯೆ ಮಾತ್ರವಲ್ಲ ದೈವ ಸಾಕ್ಷಾತ್ಕಾರಕ್ಕೂ ಹಾದಿಯೆಂಬ ಕುವೆಂಪು ಅವರ ನಿಲವು ಇಲ್ಲಿ ನನಗೆ ನೆನಪಾಗುತ್ತದೆ." ನೂರು ಪುಟಗಳ ಈ ಕವನ ಸಂಕಲನ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.