ಸಂಬಂಧಗಳು ಸೂಕ್ಷ್ಮ, ದುಡುಕದಿರಿ,,,!

ಸಂಬಂಧಗಳು ಸೂಕ್ಷ್ಮ, ದುಡುಕದಿರಿ,,,!

ಅಕ್ಕಸಾಲಿಗನೊಬ್ಬನ ಸಾವಿನ ನಂತರ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಯಿತು. ಒಂದು ದಿನ ಅವನ ಹೆಂಡತಿ ತನ್ನ ಮಗನಿಗೆ ಒಂದು ನೆಕ್ಲೇಸ್ (ಹಾರ)ವೊಂದನ್ನು ಕೊಟ್ಟು ಹೇಳಿದಳು - "ಮಗನೇ, ಇದನ್ನು ನಿನ್ನ ಚಿಕ್ಕಪ್ಪನ ಅಂಗಡಿಗೆ ತೆಗೆದುಕೊಂಡು ಹೋಗು, ಈ ಹಾರವನ್ನು ಮಾರಿ ನಿನ್ನ ಚಿಕ್ಕಪ್ಪನಿಗೆ ಸ್ವಲ್ಪ ಹಣ ಕೊಡಲು ಹೇಳು.

ಮಗ ನೆಕ್ಲೇಸ್ ತೆಗೆದುಕೊಂಡು ಚಿಕ್ಕಪ್ಪನ ಅಂಗಡಿ ತಲುಪಿದ. ಚಿಕ್ಕಪ್ಪ ನೆಕ್ಲೇಸ್ ನೋಡಿದರು - "ಈಗ ಮಾರುಕಟ್ಟೆ ತುಂಬಾ ಮಂದವಾಗಿದೆ, ಸ್ವಲ್ಪ ದಿನಗಳ ನಂತರ ಮಾರಿದರೆ ಒಳ್ಳೆಯ ಬೆಲೆ ಸಿಗುತ್ತದೆ" ಎಂದು ಅಮ್ಮನಿಗೆ ಹೇಳು ಎನ್ನುತ್ತಾ ಸ್ವಲ್ಪ ಹಣವನ್ನು ಕೊಟ್ಟನು. ಮತ್ತು ದಿನಾಲೂ ಬಂದು ನನ್ನ ಜೊತೆಯಲ್ಲಿ ಅಂಗಡಿಯಲ್ಲಿ ಬಂದು ಕುಳಿತುಕೋ ಎಂದು ಹೇಳಿ ಕಳುಹಿಸಿದನು.

ಮರುದಿನದಿಂದ ಆ ಹುಡುಗ ಪ್ರತಿದಿನ ಅಂಗಡಿಗೆ ಹೋಗತೊಡಗಿದ, ಅಲ್ಲಿ ವಜ್ರ ಮತ್ತು ರತ್ನಗಳನ್ನು ಪರೀಕ್ಷಿಸುವುದನ್ನು ಕಲಿಯತೊಡಗಿದ. ಬುದ್ಧಿವಂತನಾದ ಅವನು ಬಹುಬೇಗನೆ ವಜ್ರಗಳ ಗುಣಮಟ್ಟವನ್ನು ಪರೀಕ್ಷಿಸುವಲ್ಲಿ ಪರಿಣಿತನಾದನು. ನಂತರದಲ್ಲಿ ಒಂದು ದಿನ ಚಿಕ್ಕಪ್ಪ ಹೇಳಿದರು, "ಈಗ ಅಮ್ಮನ ಹಾರ ತೆಗೆದುಕೊಂಡು ಬಾ... ಈಗ ಮಾರುಕಟ್ಟೆ ಚೆನ್ನಾಗಿದೆ, ಒಳ್ಳೆಯ ಬೆಲೆ ಸಿಗುತ್ತದೆ ಎಂದು ಹೇಳಿದನು. 

ಯುವಕ ತನ್ನ ತಾಯಿಯಿಂದ ಹಾರವನ್ನು ಪಡೆದು ತಾನೆ ಪರೀಕ್ಷೆ ನಡೆಸಿದಾಗ ಅದು ನಕಲಿ ಎಂಬುದು ತಿಳಿಯಿತು.  ಚಿಕ್ಕಪ್ಪ ಅಷ್ಟು ದೊಡ್ಡ ಅನುಭವಿಯಾಗಿದ್ದರೂ ಈ ವಿಷಯವನ್ನು ಮೊದಲೇ ಏಕೆ ನನಗೆ ತಿಳಿಸಲಿಲ್ಲ ಎಂದು ಅವನು ಆಶ್ಚರ್ಯಪಟ್ಟನು.!

ಹಾರವನ್ನು ಮನೆಯಲ್ಲಿಯೇ ಇಟ್ಟು ಮತ್ತೆ ಅಂಗಡಿಗೆ ಬಂದನು.ಆಗ ಚಿಕ್ಕಪ್ಪನು ಹಾರವನ್ನು ತರಲಿಲ್ಲವೇ ಎಂದು ಕೇಳಿದನು ಆಗ ಅವನು  ಆ ಹಾರವು ಅಸಲಿಯದಲ್ಲ, ನಕಲಿಯದ್ದಾಗಿದೆ ಇದು ನಿಮಗೆ ತಿಳಿದಿದ್ದರೂ ಸಹ ನನ್ನಲ್ಲಿ ಹೇಳದೆ ಏಕೆ ಮುಚ್ಚಿಟ್ಟಿದ್ದಿರಿ ಎಂದು ಕೇಳಿದ. ಆಗ ಚಿಕ್ಕಪ್ಪ “ನೀನು ಅಂದು ಹಾರವನ್ನು ತಂದಾಗ ಇದು ಕೃತಕದ್ದು ಎಂದು ಹೇಳಿದ್ದರೆ, ನೀವು ತೊಂದರೆಯಲ್ಲಿದ್ದೀರೆಂದೂ ನಿಮ್ಮ ಆಸಹಾಯಕತೆಯ ದುರುಪಯೋಗ ಮಾಡಿ ಕೊಳ್ಳುತ್ತಿರುವೆನೆಂದು ನೀವು ಭಾವಿಸುತ್ತಿದ್ದಿರಿ". ಆದರೆ ಇಂದು ಆ ಹಾರವು ನಿಜವಾಗಿಯೂ ನಕಲಿಯದು ಎಂದು ನಿನಗೆ ಖಚಿತವಾಗಿ ತಿಳಿದಿದೆ. ಅಂದು ಆ ಸಮಯದಲ್ಲಿ, ಸತ್ಯವನ್ನು ಹೇಳುವುದಕ್ಕಿಂತ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸಿದ್ದೆ ಎಂದು ಹೇಳಿದರು.

***

ನಮ್ಮ ಸಂಬಂಧಗಳು ಒಂದು ಅದೃಶ್ಯ ದಾರದಿಂದ ಜೋಡಿಸಲ್ಪಟ್ಟಿವೆ, ಮತ್ತು ಈ ಬಂಧಗಳು ಪ್ರೀತಿ, ನಂಬಿಕೆ ಮತ್ತು ವಿಶ್ವಾಸದಿಂದ ಸಂರಕ್ಷಿಸಲ್ಪಟ್ಟಿವೆ ಸಣ್ಣ ಒತ್ತಡಕ್ಕೋ ಅಥವಾ ನಿಮಗೆ ತಿಳಿದೋ, ತಿಳಿಯದೆಯೋ  ಉಂಟಾಗುವ ತಪ್ಪು ತಿಳುವಳಿಕೆಯಿಂದ, ನಿಮ್ಮ ಸಂಬಂಧಗಳನ್ನು  ದೂರ ಮಾಡಿಕೊಳ್ಳದಿರಿ. ಕೆಲವೊಮ್ಮೆ ಸಂಭಂಧಗಳ ಬೆಸೆಯುವಲ್ಲಿ ಜೀವಮಾನವೇ ಬೇಕಾಗಬಹುದು, ಆದರೆ ಅವುಗಳು ಹಾಳಾಗಲು ಕ್ಷಣ ಮಾತ್ರವೇ ಸಾಕು.

-ಲತಾ ಎಂ ಸಿ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ