ಸಂವಿಧಾನ ಮತ್ತು ವಚನಗಳು

ಸಂವಿಧಾನ ಮತ್ತು ವಚನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರುನವಕ
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ ೨೦೨೨

ಕರ್ನಾಟಕದಲ್ಲಿ 'ಸಂವಿಧಾನದ ಓದು' ಎಂಬ ಆಂದೋಲನವನ್ನೇ ಪ್ರಾರಂಭಿಸಿ, ವಿವಿಧ ನಗರಗಳಲ್ಲಿ ಸಂಚರಿಸಿ ಭಾರತದ ಸಂವಿಧಾನದ ಆಶಯಗಳನ್ನು ಮನೆ-ಮನಗಳಿಗೆ, ಶಾಲಾ-ಕಾಲೇಜುಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ಮಾಡಿದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಇವರು ಬರೆದ ಕೃತಿಯೇ'ಸಂವಿಧಾನ ಮತ್ತು ವಚನಗಳು'.

ಪುಸ್ತಕದ ಬೆನ್ನುಡಿಯಲ್ಲಿ ಸಾಹಿತಿ ಡಾ. ಸಿದ್ಧನಗೌಡ ಪಾಟೀಲ ಇವರು ಅಭಿಪ್ರಾಯ ಪಡುವಂತೆ "ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿದೆ ಎಂಬ ಆಶಯವನ್ನು ತಮ್ಮ ಆಳವಾದ ಅಧ್ಯಯನ ವಿಶ್ಲೇಷಣೆಯ ಮೂಲಕ ಸಾದರಪಡಿಸಿದ್ದಾರೆ. ವಿಶ್ವದ ಮತ್ತು ಭಾರತೀಯ ಪರಂಪರೆಯಲ್ಲಿ ಜೀವಪರ ಚಿಂತನೆಗಳು, ಜೀವ ವಿರೋಧಿ ಚಿಂತನೆಗಳ ವಿರುದ್ಧ ಸದಾ ಸೆಣೆಸುತ್ತಲೇ ಬಂದಿವೆ. ಅಂಥ ಕೆಲವು ತಾತ್ವಿಕ ಧಾರೆಗಳನ್ನು ಪ್ರಸ್ತಾಪಿಸುತ್ತಾ ೧೨ನೇ ಶತಮಾನದ ಬಸವಣ್ಣ ಮತ್ತು ಎಲ್ಲಾ ಶರಣರ ವಚನಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಆಶಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ವಚನಗಳನ್ನಾಧರಿಸಿ, ತುಲನಾತ್ಮಕವಾಗಿ ಈ ಕೃತಿಯಲ್ಲಿ ಮಂಡಿಸಿದ್ದಾರೆ. ಬುದ್ಧ, ಬಸವ ಇತರ ವಚನಕಾರರು ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರುಗಳು ಸಮಕಾಲೀನರಲ್ಲವಾದರೂ ಅವರೆಲ್ಲರಲ್ಲಿ 'ಜೀವ ಕೇಂದ್ರಿತ', ಮನುಷ್ಯ ಕೇಂದ್ರಿತ ತುಡಿತಗಳು ಮತ್ತು ಭಾರತದ ಸಂವಿಧಾನ ಪ್ರತಿಪಾದಿಸಿದ ಮಾನವೀಯ ಸಮಾಜದ ನಿಯಮಗಳು, ಆದರ್ಶಗಳು, ಹಕ್ಕು ಮತ್ತು ಕರ್ತವ್ಯಗಳು ಇಂದಿನ ಸಂಘರ್ಷಮಯ ಸಮಾಜಕ್ಕೆ ದಿಕ್ಸೂಚಿಗಳಾಗಿವೆ. ಅಂಥ ದಿಕ್ಸೂಚಿಯನ್ನು ಈ ಕೃತಿ ಒಳಗೊಂಡಿದೆ. 

ಸನ್ಮಾನ್ಯ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ನ್ಯಾಯವಾದಿಗಳಾಗಿ ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದವರು. ಈಗ ವಿಶ್ರಾಂತ ಬದುಕನ್ನು ನಡೆಸಬೇಕಾದ ಸಂದರ್ಭದಲ್ಲಿ ಅವಿಶ್ರಾಂತವಾಗಿ ಸಾಮಾಜಿಕ ಜಾಗೃತಿ ಕೆಲಸದಲ್ಲಿ ನಿರತರಾಗಿದ್ದಾರೆ.

ನಮ್ಮ ಸಂವಿಧಾನವೇ ಸ್ವತಂತ್ರ್ಯೋತ್ತರ ಭಾರತದ ವಿಕಾಸಕ್ಕೆ ಕಾರಣ ಎಂದು ಸದಾ ಪ್ರತಿಪಾದಿಸುವ ಶ್ರೀ ನಾಗಮೋಹನದಾಸ್ ಅವರು ಆಡಳಿತ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಂವಿಧಾನದ ಆಶಯಗಳ ಜಾರಿ ಮತ್ತು ಸಂವಿಧಾನದ ರಕ್ಷಣೆಗಾಗಿ ಇಳಿವಯಸ್ಸುನಲ್ಲಿಯೂ ನಿರಂತರ ಶ್ರಮಿಸುತ್ತಿರುವ ಅಪರೂಪದ ನ್ಯಾಯಮೂರ್ತಿ. ಇವರ ಈ ಕೃತಿ 'ಸಂವಿಧಾನ ಮತ್ತು ವಚನಗಳು ನಾಡಿನ ಮನೆ ಮನ ತಲುಪಲಿ" ಎಂದಿದ್ದಾರೆ.