ಸದ್ಗುರು ಜಗ್ಗಿ ವಾಸುದೇವ್ (ಭಾಗ 1)

ಸದ್ಗುರು ಜಗ್ಗಿ ವಾಸುದೇವ್ (ಭಾಗ 1)

ಜಗತ್ತಿನ ಇತಿಹಾಸದಲ್ಲಿ ಭಾರತದ ಆಧ್ಯಾತ್ಮಿಕತೆಗೆ ಸಾಕಷ್ಟು ತೂಕವಿದೆ. ಇಲ್ಲಿ ಬೆಳೆದ ಆಧ್ಯಾತ್ಮಿಕ ಚಿಂತಕರು ಬದುಕಿನ ನೆಮ್ಮದಿಗೆ, ಸಾರ್ಥಕತೆಗೆ ಸಾಕಷ್ಟು ದಾರಿಗಳನ್ನು ತಿಳಿಸಿಕೊಟ್ಟಿದ್ದಾರೆ. ಬುದ್ಧರಿಂದ ಸಿದ್ದೇಶ್ವರ ಸ್ವಾಮಿಗಳವರೆಗೆ, ಹಾಗೆಯೇ ಪೌರಾಣಿಕ ರಾಮ, ಕೃಷ್ಣ ಮುಂತಾದ ಹಲವಾರು ವ್ಯಕ್ತಿಗಳ ಮೂಲಕ ಆಧ್ಯಾತ್ಮಿಕವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು ಮತ್ತು ಸ್ವಾಮಿ ವಿವೇಕಾನಂದರು ಆ ಸಾಲಿನಲ್ಲಿ ಅತಿ ಎತ್ತರದಲ್ಲಿ ಕಾಣುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು ಜಗ್ಗಿ ವಾಸುದೇವ್. ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ ಜನರಿದ್ದಾರೆ. ನಮ್ಮ ನಿಮ್ಮ ನಡುವೆ ದೇವಸ್ಥಾನದ ಪೂಜೆ ಪುನಸ್ಕಾರ ಮಾಡುವ ಪೂಜಾರಿಗಳು, ಮಸೀದಿಗಳ ಮುಲ್ಲಾ ಮೌಲ್ವಿಗಳು, ಚರ್ಚುಗಳ ಫಾದರ್ ಸಿಸ್ಟರುಗಳು, ಬೌದ್ದ ಸನ್ಯಾಸಿಗಳು, ಜೈನ ಮುನಿಗಳು, ಸಿಖ್ ಗುರುಗಳು, ಲಿಂಗಾಯತ ಸ್ವಾಮೀಜಿಗಳು ಮತ್ತು ಇನ್ನೂ ಈ ರೀತಿಯ ಅದಕ್ಕೆ ಸಂಬಂಧಿಸಿದ ಚಿಂತಕರು, ಗುರುಗಳು, ವ್ಯಕ್ತಿಗಳು ಇತ್ಯಾದಿ ಇತ್ಯಾದಿ.

ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು, ಯೋಗ ಧ್ಯಾನ ಶಿಬಿರಗಳು, ಚರ್ಚುಗಳು, ಮಸೀದಿಗಳು, ಪ್ರಾರ್ಥನಾ ಮಂದಿರಗಳು ಇತ್ಯಾದಿಗಳನ್ನು ಸ್ಥಾಪಿಸಿಕೊಂಡು ಜನರಿಗೆ ಅನ್ನ, ವಿದ್ಯೆ, ಆಶ್ರಯ ನೀಡುತ್ತಾ ತನ್ನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಕೇಂದ್ರಗಳು ಅಧ್ಯಾತ್ಮ ತಿಳಿಸಿ ಕೊಡುತ್ತವೆ. ಮಾಧ್ಯಮಗಳ ಜನಪ್ರಿಯತೆಯ ಲಾಭ ಪಡೆದು ಜ್ಯೋತಿಷ್ಯ, ಭವಿಷ್ಯ, ಸಂಖ್ಯಾಶಾಸ್ತ್ರ, ವಾಸ್ತು, ಯಂತ್ರ ಮಂತ್ರ, ಹೋಮ ಹವನಗಳು ಮುಂತಾದ ಆಚರಣೆಗಳ ಮುಖಾಂತರ ಅಧ್ಯಾತ್ಮಿಕ ಚಿಂತನೆಗಳನ್ನು ಹೇಳುವುದು.

ಕೆಲವರು ತಮ್ಮ ಅಧ್ಯಯನ, ಜ್ಞಾನ, ಅನುಭವಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅಧ್ಯಾತ್ಮಿಕ ಚಿಂತನೆಗಳನ್ನು ಬೋಧಿಸುವ ಸಂತರು. ಇನ್ನು ಕಾರ್ಪೊರೇಟ್ ಶೈಲಿಯ ಅಧ್ಯಾತ್ಮಿಕ ಚಿಂತಕರುಗಳಾದ ಬಾಬಾ ರಾಮದೇವ್ - ಶ್ರೀ ರವಿಶಂಕರ್ ಗುರೂಜಿ - ಕಲ್ಕಿ ಭಗವಾನ್ - ನಿತ್ಯಾನಂದ ಸ್ವಾಮಿ - ಉತ್ತರ ಭಾರತದ ಸಾಕಷ್ಟು ದೇವಮಾನವರು ಇನ್ನೂ ಹಲವಾರು  ಭಾರತೀಯ ಸಮಾಜದ ಬಹಳಷ್ಟು ಜನರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರುತ್ತಿದ್ದಾರೆ. ಮನುಷ್ಯನ ಬದುಕು ಸಂಕೀರ್ಣ - ಸಂಘರ್ಷ - ಒತ್ತಡಕ್ಕೆ ಒಳಗಾದಂತೆ, ಮಾನಸಿಕ, ದೈಹಿಕ ದುರ್ಬಲತೆ ಉಂಟಾಗುತ್ತಿರುವುದರಿಂದ ಅಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವ ಬರತೊಡಗಿದೆ.

ಅಧ್ಯಾತ್ಮ ವೈಜ್ಞಾನಿಕವಾಗಿರಲಿ, ವೈಚಾರಿಕವಾಗಿರಲಿ, ನಂಬಿಕೆಯಾಗಿರಲಿ, ಧಾರ್ಮಿಕ ಆಚರಣೆಯಾಗಿರಲಿ ಅದನ್ನು ಕಲಿಯುವುದರಿಂದ, ಅರ್ಥಮಾಡಿಕೊಳ್ಳುವುದರಿಂದ, ಅನುಸರಿಸುವುದರಿಂದ ಅಂತಹ ಹೆಚ್ಚಿನ ತೊಂದರೆ ಏನೂ ಇಲ್ಲ. ಬದಲಾಗಿ ಒಂದಷ್ಟು ಲಾಭವೇ ಉಂಟು. ಆದರೆ ತೊಂದರೆ ಇರುವುದು ಅಧ್ಯಾತ್ಮಿಕ ಗುರುಗಳಿಂದ ಮತ್ತು ಅಧ್ಯಾತ್ಮಿಕತೆಯನ್ನು ಆ ಗುರುಗಳು ವ್ಯಾಪಾರಿಕರಣ ಮಾಡಿ, ಶೋಷಣೆಯ ಅಸ್ತ್ರವಾಗಿ ಉಪಯೋಗಿಸಿ, ಅದನ್ನು ತಪ್ಪಾಗಿ ಅರ್ಥೈಸಿ ಜನರನ್ನು ದಾರಿ ತಪ್ಪಿಸಿ, ದೇವ ಮಾನವರೆಂದು ತಮ್ಮನ್ನು ತಾವೇ ಕರೆದುಕೊಂಡು ಸಮಾಜದ ನಿಯಂತ್ರಣ ಸಾಧಿಸಲು ಪ್ರಯತ್ನಿಸುವುದರಲ್ಲಿ...

ಅಧ್ಯಾತ್ಮ ತುಂಬಾ ಸರಳ, ಸಹಜ, ಸಾಮಾನ್ಯವಾಗಿದ್ದಾಗ, ಸರ್ವರ ಒಳಿತಿಗಾಗಿ ಉಪಯೋಗಿಸಿದಾಗ, ನಿರಪೇಕ್ಷ ಸ್ಥಿತಿ ತಲುಪಿದಾಗ ಮತ್ತು ಅದರಲ್ಲಿ ಒಂದಷ್ಟು ನಿಯಂತ್ರಣ ಸಾಧಿಸಿದಾಗ ಅದರ ಲಾಭ ಸಿಗಬಹುದು. ಅದು ತೀರಾ ವೈಯಕ್ತಿಕ. ಆದರೆ ಅಧ್ಯಾತ್ಮ ಇದನ್ನು ಹೊರತುಪಡಿಸಿ ಇತರ ಚಟುವಟಿಕೆಯಾದಾಗ...

ಈ ಹಿನ್ನೆಲೆಯಲ್ಲಿ ಜಗ್ಗಿ ವಾಸುದೇವ್ ಅವರನ್ನು ನೋಡೋಣ. ಆಕರ್ಷಕ ನಿಲುವಿನ, ಕಂಚಿನ ಕಂಠದ, ಉತ್ತಮ ಭಾಷಾ ಹಿಡಿತದ, ನೋಡುವ, ಕೇಳುವ ಭಕ್ತರಿಗೆ ಸಮ್ಮೋಹನ ಗೊಳಿಸುವ ವಾಕ್ಚಾತುರ್ಯದ ವಾಸುದೇವ್ ಈಶಾ ಫೌಂಡೇಶನ್ ಹೆಸರಿನಲ್ಲಿ ಬಹುದೊಡ್ಡ ಆಶ್ರಮ ಸ್ಥಾಪಿಸಿದ್ದಾರೆ. ಅಪಾರ ಜನಪ್ರಿಯತೆ ಗಳಿಸಿದ್ದಾರೆ. ತುಂಬಾ ಸಂತೋಷ ಮತ್ತು ಅವರ ಸ್ವಾತಂತ್ರ್ಯ - ಸಾಧನೆ. ಅದನ್ನು ಗೌರವಿಸುತ್ತಾ...

ಸದ್ಗುರುಗಳೇ, ಜಗದ್ಗುರುಗಳೇ, ಶ್ರೀಶ್ರೀಶ್ರೀಗಳೇ, ಮಹರ್ಷಿಗಳೇ, ಸ್ವಾಮೀಜಿಗಳೇ, ಮೋಕ್ಷದ ಮಾರ್ಗದಲ್ಲಿ ಈಗಾಗಲೇ ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ರಾಜ ಯೋಗ ಬಹಳ ಹಿಂದಿನಿಂದಲೇ ಅಸ್ತಿತ್ವದಲ್ಲಿದೆ. ಅದನ್ನು ಅಸಂಖ್ಯಾತ ಚಿಂತಕರು ನಾನಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ವಿವಿಧ ಅರ್ಥಗಳನ್ನು ನೀಡಿದ್ದಾರೆ. ಅರಿಷಡ್ವರ್ಗಗಳ ನಿಯಂತ್ರಣಕ್ಕೆ ಸಾಕಷ್ಟು ಮಾರ್ಗಗಳನ್ನು ತಿಳಿಸಿದ್ದಾರೆ. ಏನೇ ಆಗಲಿ ಅಂತಿಮವಾಗಿ ಅದೊಂದು ಇಡೀ ಬದುಕಿನ ನಿರಂತರ ಕ್ರಿಯೆ. ಅದು ಯಾವುದೇ 24 ಗಂಟೆಗಳ ಅಥವಾ ಒಂದು ವಾರದ ಅಥವಾ ಒಂದು ತಿಂಗಳ ಅಥವಾ ಒಂದು ವರ್ಷದ ಕೋರ್ಸ್ ಆಗಲು ಸಾಧ್ಯವಿಲ್ಲ. ಅದನ್ನು ಸಾವಿರದಿಂದ ಲಕ್ಷಾಂತರ ರೂಪಾಯಿ ಹಣ ನೀಡಿ ಕಲಿಯಲೂ ಆಗುವುದಿಲ್ಲ ಮತ್ತು ಹಣ ಪಡೆದು ಕಲಿಸಲೂ ಆಗುವುದಿಲ್ಲ. ಸಾಮಾನ್ಯ ಜನ ನಿಮ್ಮಂತೆ ಪ್ರಶಾಂತ ಪರಿಸರದಲ್ಲಿ, ಸೇವಕ ಸೇವಕಿಯರ ಸಹಾಯದ ನೆರಳಲ್ಲಿ, ಯಾವುದೇ ಜವಾಬ್ದಾರಿ ನಿರ್ವಹಿಸದೆ ಕಲಿಯಲು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ದೇಶದಲ್ಲಿ ಕೋಟ್ಯಂತರ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ.

ಇಂತಹ ಸನ್ನಿವೇಶದಲ್ಲಿ ಅಧ್ಯಾತ್ಮನ್ನು ಹೈಜಾಕ್ ಮಾಡಿರುವ ನೀವು ಕಾರ್ಪೊರೇಟ್ ಶೈಲಿಯಲ್ಲಿ ವಾಣಿಜ್ಯೀಕರಣ ಮಾಡಿರುವಿರಿ. ಅಧ್ಯಾತ್ಮಿಕತೆಯ ಹೆಸರಿನಲ್ಲಿ ಭಕ್ತರನ್ನು ಸೆಳೆದು ನಂತರ ಆ ಜನಪ್ರಿಯತೆಯನ್ನು ಬೇರೆ ವಿಷಯಗಳಿಗೆ ಉಪಯೋಗಿಸಿಕೊಳ್ಳುತ್ತಿರುವಿರಿ. ನಿಮ್ಮ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಿರುವಿರಿ. ಅದು ನಿಮ್ಮ ಸಂವಿಧಾನಾತ್ಮಕ ಹಕ್ಕು ನಿಜ. ಹಾಗೆಯೇ ನಿಮ್ಮ ಸ್ವಾರ್ಥದ ಹುನ್ನಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಕೂಡ. ಇಡೀ ಜಗತ್ತು ಹಣದ ಹಿಂದೆ ಬಿದ್ದು ಮಾನವೀಯ ಮೌಲ್ಯಗಳು ಅವಸಾನದ ಅಂಚಿನಲ್ಲಿ ಇರುವಾಗ ಅಧ್ಯಾತ್ಮ ಮನುಷ್ಯರನ್ನು ಮಾನವೀಯ ನಡವಳಿಕೆಗೆ ಸೆಳೆಯುವ ಮಾರ್ಗವಾಗಿ ಬಳಸುವ ಬದಲಾಗಿ ನೀವು ಸಹ ಅಧ್ಯಾತ್ಮವನ್ನು ಹಣ ಮಾಡುವ, ಪ್ರಚಾರ ಪಡೆಯುವ ಸಲುವಾಗಿ ಉಪಯೋಗಿಸಿದರೆ ಜಗತ್ತಿನ ಮುಂದಿನ ಗತಿಯೇನು ?

(ಇನ್ನೂ ಇದೆ)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ