ಸಮರ
ದೇಹಕ್ಕೆ ನಾಟಿದ ಬಾಣಗಳನೆಲ್ಲ, ನೋವಿನ ಮಧ್ಯೆಯೇ ಕಿತ್ತು ಹಾಕ್ಕುತ್ತಿದ್ದೇನೆ, ಒಂದೊಂದು ಬಾಣದ ಹಿಂದೆ ಒಂದೊಂದು ಕಥೆ,
ಬಾಣಗಳ್ಳನ್ನು ಎಣಿಸೋ ಕೆಲಸನೇ ಇಲ್ಲ, ಮತ್ತೆ ಬೀಳದಂತೆ ತಪ್ಪಿಸಿಕೊಳ್ಳಬೇಕು, ಇನ್ನು ಹಂಚಿಕೊಳ್ಳೋದೆಲ್ಲಿ ವ್ಯಥೆ?,
ಸಮಯ ಒಮ್ಮೆ ನಿಮ್ಮ ವಿರುದ್ಧ ಯುದ್ಧ ಸಾರಿದರೆ, ಕರುಣೆ ಇಲ್ಲದ ಕಟುಕನಂತೆ ಬಾಣ, ಹೂಡತಾನೆ ಇರುತ್ತೆ,
ಯಾರ ಹತ್ರ ಸಹಾಯ ಕೇಳೋದು?, ಯಾರ ಹತ್ರ ಶರಣು ಬೇಡೋದು, ಈ ಯುದ್ಧ ಜಗತ್ತಿಗೆ, ನೀವೆಂತಾ ಕ್ಷತ್ರಿಯ ಅಂತ ಸಾರುತ್ತೆ,
ಒಂದೊಂದು ಬಾಣವೂ ಒಂದೊಂದು ಅನುಭವ ಕಲಿಸಿ ಹೋಗುತ್ತೆ, ಕೊನೆಗೆ ಇದು ಯುದ್ದನಾ ಅನ್ನೋದನ್ನ ಮರೆಸುತ್ತೆ,
ವಿಧಿ ಬಾಳಿನ ರಂಗಮಂದಿರದಲ್ಲಿ ಖಳನಾಯಕನ ಪಾತ್ರ ವಹಿಸಿದಂತೆ ತೋರುತ್ತೆ, ಆದರೆ ಅಸಲಿ ಅದು ನಿಮ್ಮ ಪಾತ್ರಕ್ಕೆ ಜೀವ ತುಂಬುತ್ತೆ,
ಹುಷಾರು, ಹೇಡಿಗಳಿಗೆ ಅದು ಸಹಾಯ ಮಾಡಲ್ಲ, ವೀರರನ್ನ ಕಂಡರೆ, ಅದಕ್ಕೆ ಅಕ್ಕರೆ, ಪ್ರೀತಿಯಲ್ಲಿ ಎರಡು ಬಾಣವನ್ನು ಹೆಚ್ಚು ಹೂಡುತ್ತೆ,
ಬಾಣದ ಹೊಡೆತ ತಿಂದ ಎದೆ ಗಟ್ಟಿಯಾಗಿದ್ದರೆ, ಹತ್ತಿರ ಕರೆಯುತ್ತೆ, ತಲೆ ನೇವರಿಸುತ್ತೆ, ನಿಮಗೆ ಬಿಲ್ಲನ್ನೇ ನೀಡಿ ಗೌರವಿಸುತ್ತೆ.
- Log in to post comments